Big 3: ಯಾದಗಿರಿಯ ಹೋತಪೇಟೆ ಜನರಿಗೆ ಕುಡಿಯುವ ನೀರೇ ವಿಷ!

Nov 2, 2022, 10:33 PM IST

ಯಾದಗಿರಿ (ನ.02): ಆ ಹಳ್ಳಿಯ ಜನ ಅದನ್ನ ಮುಟ್ಟೋಕೆ ಭಯ ಪಡ್ತಿದ್ದಾರೆ. ಕೈಗೆ ಎತ್ಕೊಳ್ಳಕ್ಕೇ ಗಢಗಢ ನಡುಗ್ತಿದ್ದಾರೆ. ಮನೆಲಿದ್ದ ಅದನ್ನ ಹೊರ ಹಾಕಿದ್ದಾರೆ. ಎಲ್ಲಾದ್ರೂ ಅದನ್ನ ಉಪಯೋಗಿಸಿದ್ರೆ ಒಂದೋ ಢಮಾರ್ ಇಲ್ಲಂದ್ರೆ ಅಲ್ಲೋಗಿ ಸೇರಬೇಕು. ಏನಪ್ಪ ಇವ್ರು ಈ ರೇಂಜಲ್ಲಿ ಹೆದರಿಸ್ತಿದ್ದಾರೆ ಅಂದ್ಕೊಂಡ್ರ ಈ ಸ್ಟೋರಿ ನೋಡಿ. ಎಲ್ಲಿದ್ದೀರಾ ಜನಪ್ರತಿನಿಧಿಗಳೇ, ಎಲ್ಲಿದ್ದೀರಾ ಅಧಿಕಾರಿಗಳೇ, ಎಲ್ಲಿದ್ದೀರಾ ಲೋಕಲ್ ಲೀಡರ್ಸ್, ಇಲ್ನೋಡಿ 1, 2 , 3  ಸಾವು ಆಗಿದೆ. ಆದ್ರೆ, ಇನ್ನೂ ಯಾರು ಎಚ್ಚೆತ್ತುಕೊಂಡಿಲ್ಲ. ಇಲ್ನೋಡಿ, ಸಾಲು.. ಸಾಲಾಗಿ.. ಜನ ಆಸ್ಪತ್ರೆ ಬೆಡ್ ಮೇಲೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದ್ರಲ್ಲೂ ಈ ಪುಟ್ಟ ಮಕ್ಕಳ ನೋವು ಕಂಡ್ರೆ ನೋವಾಗುತ್ತೆ. ಒಬ್ಬರಲ್ಲ, ಇಬ್ಬರಲ್ಲ, ಬರೋಬ್ಬರಿ 38 ಜನ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯತ್ತಿದ್ದಾರೆ. ಅಷ್ಟಕ್ಕೂ ಈ ದೃಶ್ಯ ಕಂಡು ಬಂದಿದ್ದು ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಹೋತಪೇಟ ಗ್ರಾಮದಲ್ಲಿ. 

ಅಷ್ಟಕ್ಕೂ, ಈ ಸಮಸ್ಯೆಗೆ  ಕಾರಣ ಏನು ಗೊತ್ತಾ.? ಗ್ರಾಮದಲ್ಲಿ ಸರಬರಾಜು ಆಗ್ತಿರೋ ಕಲುಷಿತ ನೀರು. ಈ ನೀರು ಸೇವಿಸಿ ಮೂವರು ಸಾವನ್ನಪ್ಪಿದ್ರೆ ಬರೊಬ್ಬರಿ 38 ಜನ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಜೊತೆಗೆ ಮೂವರು ಸಾವಿಗೀಡಾಗಿದ್ದಾರೆ. ಸಾವಿಗೀಡಾದವರು ಯಾರು ಅನ್ನೋದನ್ನ ನೋಡಿದ್ರೆ  ಹೋತಪೇಟ ಗ್ರಾಮದ ಈರಮ್ಮ ಹಿರೇಮಠ, ಹೊನ್ನಪ್ಪಗೌಡ, ಸಿದ್ದಮ್ಮ ಹಿರೇಮಠ ಎಂಬ ಮೂರು ಜನ ಕಲುಷಿತ ನೀರು ಸೇವಿಸಿ ವಾಂತಿ ಬೇಧಿಯಿಂದ ಬಳಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಹೋತಪೇಟ  ಗ್ರಾಮದಲ್ಲಿ  ಒಂದು ಬಾವಿಯಿದ್ದು,ಆ ಬಾವಿಯ ನೀರು ನೇರವಾಗಿ ಟ್ಯಾಂಕ್ಗೆ ಸರಬರಾಜು ಆಗುತ್ತದೆ. ಅಲ್ಲಿಂದ ಪೈಪ್ ಲೈನ್ ಮೂಲಕ ಜನರ ಮನೆಗಳಿಗೆ ನೀರು ಹೋಗುತ್ತದೆ.ಇನ್ನೊಂದು ಗಾಬರಿ ಆಗೋ ವಿಷಯ ಅಂದ್ರೆ ನೀರು ಸಪ್ಲೈ ಆಗೋ ಪೈಪ್ಲೈನ್ ಚರಂಡಿಯ ಮೇಲೆ ಹೋಗಿದೆ ನೋಡಿ. ಹೊತಪೇಟ ಜನರು ಜೀವನ ಜೊತೆ ಗ್ರಾಮ ಪಂಚಾಯತ್ ಅಧಿಕಾರಿಗಳು ಚೆಲ್ಲಾಟ ಆಡುವುದು ಇನ್ನು ನಿಲ್ಲಿಸಿಲ್ಲ. 

ದೈವಾರಾಧನೆ: ತಾಯಿ ಮತ್ತು ಕರುಳ ಬಳ್ಳಿಯ ಸಂಬಂಧ

ಗ್ರಾಮದಲ್ಲಿ ಹಲವು ಜನ ವಾಂತಿ, ಬೇಧಿಯಿಂದ ಬಳಲುತ್ತಿದ್ದು ಅವರಿಗೆ ಕುಡಿಯಲು ಶುದ್ಧವಾದ ನೀರನ್ನು ವ್ಯವಸ್ಥೆ ಮಾಡಬೇಕಾಗಿತ್ತು, ಮಾಡಿದೆ ಅದು ಮಾತ್ರ ಸಂಪೂರ್ಣ ಕಲುಷಿತ ನೀರು. ಈಗಾಗಲೇ ಬಳಲಿ, ನೊಂದಿರುವ ಜನರಿಗೆ ಮತ್ತೊಂದು ಶಾಕ್ ಕೊಡಲು ಗ್ರಾಮ ಪಂಚಾಯತ್ ಅಧಿಕಾರಿಗಳು ನಿರ್ಧರಿಸಿದಂತಿದೆ. ಹೋತಪೇಟ ಗ್ರಾಮದಲ್ಲಿ ಹಲವು ಬಾರಿ ಕಲುಷಿತ ನೀರು ಸೇವಿಸಿ ಖಾಯಿಲೆಗೆ ತುತ್ತಾದ್ರು ಕೂಡ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮಾತ್ರ ಜನರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿಲ್ಲ.. ಹೋತಪೇಟ ಗ್ರಾಮದಲ್ಲಿ ಒಂದು ಶುದ್ಧ ಕುಡಿಯುವ ನೀರಿನ ಘಟಕವಿದ್ದು, ಅದು ಮುಳ್ಳು-ಕಂಟೆಗಳ ಬೇಲಿ ಬೆಳೆದು ಅದು ಲಗಾಡೆದ್ದು ಹೋಗಿದೆ. ಒಟ್ಟಿನಲ್ಲಿ ಸರಣಿ  ಸಾವು, ಹಲವು  ಜನ ಅಸ್ವಸ್ಥದಿಂದ ಆಸ್ಪತ್ರೆಗೆ ದಾಖಲು, ಹೋತಪೇಟ ಗ್ರಾಮದಲ್ಲಿ ಈಗ ಸ್ಮಶಾನ ಮೌನ ಆವರಿಸಿದೆ, ಬೆಳಕಿನ ಹಬ್ಬ ದೀಪಾವಳಿ ಈ ಗ್ರಾಮದ ಜನರಿಗೆ ಸಂಪೂರ್ಣ ಕತ್ತಲಿನಂತೆ ಆಗಿತ್ತು. ನೋಡೋಣ ಇವತ್ತು ಬಿಗ್-3 ಯಲ್ಲಿ ಈ ವರದಿ ಪ್ರಸಾರ ಆದ್ಮೆಲಾದ್ರು ಈ ಜನರಿಗೆ ಶುದ್ಧ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸ್ತಾರ ಅಂತ. ಈ ಸಮಸ್ಯೆ ಬಗೆಹರಸಿ ಇಲ್ಲ ನಡೆಯಿರಿ.