ಆಂಧ್ರಕ್ಕೆ ಸಮರ್ಪಕ ನೀರು ರಾಜ್ಯದ ರೈತರಿಗೆ ಕಣ್ಣೀರು: ಮೆಣಸಿನಕಾಯಿ, ಹತ್ತಿ ಬೆಳೆ ಉಳಿಸಿಕೊಳ್ಳಲು ರೈತರ ಪರದಾಟ

Oct 14, 2023, 11:02 AM IST

ರಾಜ್ಯದಲ್ಲಿ ಈ ವರ್ಷ ಮುಂಗಾರು ಮಳೆ ಕೈ ಕೊಟ್ಟ ಹಿನ್ನೆಲೆ ರೈತರಿಗೆ ಕಣ್ಣಿರು ತರಿಸಿದೆ. ಒಂದ್ಕಡೆ ಮಳೆ ಇಲ್ಲದೆ ಬೆಳೆ ಇಲ್ಲ, ಇನ್ನೊಂದ್ಕಡೆ ಡ್ಯಾಂನಲ್ಲಿ ನೀರಿಲ್ಲ, ಈ ನಡುವೆ ಮೆಣಸಿನಕಾಯಿ ಮತ್ತು ಹತ್ತಿ ಬೆಳೆ ಉಳಿಸಿಕೊಳ್ಳಲು ಬಳ್ಳಾರಿ ರೈತರು ಹರಸಾಹಸ ಪಡುತ್ತಿದ್ದಾರೆ. ತುಂಗಭದ್ರಾ ಜಲಾಶಯದಿಂದ ನವೆಂಬರ್ 10ರವರೆಗೂ ಎಚ್ಎಲ್ಸಿ ಕಾಲುವೆಗೆ ನೀರು ಬಿಡೋದಾಗಿ ಸರ್ಕಾರ ಹೇಳಿದೆ. ಆದ್ರೆ ನವೆಂಬರ್ 10ರ ನಂತರ ಸರ್ಕಾರ ನೀರು ಬಿಡದೇ ಹೋದರೆ ಬೆಳೆ ಹಾಳಾಗುತ್ತದೆ. ನವೆಂಬರ್ 30ರವರೆಗೂ ನೀರು ಬಿಡಿ ಎನ್ನುತ್ತಿದ್ದಾರೆ ರೈತರು. ಸದ್ಯ ಜಲಾಶಯದಲ್ಲಿ ಕೇವಲ 48 ಟಿಎಂಸಿ ನೀರಿದೆ. ಹಿಂಗಾರು ಮಳೆ ಏನಾದ್ರೂ ಚೆನ್ನಾಗಿ ಬಂದ್ರೇ, ಮುಂಬರುವ ಬೇಸಿಗೆಯವರೆಗೂ ಕುಡಿಯುವದಕ್ಕೆ ಮತ್ತು ಬೆಳೆಗೆ ಯಾವುದೇ ಸಮಸ್ಯೆಯಾಗಲ್ಲ. ಹಿಂಗಾರು ಮಳೆ ಕೈಬಿಟ್ಟರೆ ಬೆಳೆಗೆ ನೀರು ಬಿಡೋದಿರಲಿ, ಕುಡಿಯುವ ನೀರಿಗೂ ಸಮಸ್ಯೆಯಾಗುತ್ತದೆ. ರಾಜ್ಯದ ಬಳ್ಳಾರಿ, ಕೊಪ್ಪಳ,ವಿಜಯನಗರ ಮತ್ತು ರಾಯಚೂರು ಸೇರಿದಂತೆ ಕರ್ನೂಲ್, ಅನಂತಪುರ ಸೇರಿದಂತೆ ಹಲವು ಜಿಲ್ಲೆಗಳು ಕುಡಿಯುವ ನೀರಿಗೆ ತುಂಗಭಧ್ರ ಜಲಾಶವೇ ಆಧಾರವಾಗಿದೆ. ಸದ್ಯ ತೆಲಂಗಾಣದ ಕೋಟಾದ ಮೂರುವರೆ ಟಿಎಂಸಿ ಮಾತ್ರ ಇದೆ. ಹೀಗಾಗಿ ಆಂಧ್ರ-ತೆಲಂಗಾಣ ಸಚಿವರ ಜೊತೆ ಮಾತನಾಡಿ ಆ ನೀರು ನಮಗೆ ನೀಡಿ ಎನ್ನುತ್ತಿದ್ದಾರೆ ಬಳ್ಳಾರಿ ರೈತರು. ತೆಲಂಗಾಣ ಕೋಟಾದ ಮೂರುವರೆ ಟಿಎಂಸಿ ನೀರು ಹಂತ ಹಂತವಾಗಿ ಹೆಚ್ಎಲ್ಸಿ ಕಾಲುವೆಗೆ ಬಿಡೋದು ಅನಿವಾರ್ಯವಾಗಿದೆ. ನೀರು ಬಿಟ್ಟರೇ, ಕೇವಲ ಕರ್ನಾಟಕವಷ್ಟೇ ಅಲ್ಲದೇ ಆಂಧ್ರ ಪ್ರದೇಶ ರೈತರ ಬೆಳೆ ಉಳಿಯುತ್ತದೆ. ಈ ಬಗ್ಗೆ ಜನಪ್ರತಿನಿಧಿಗಳು ಮನಸ್ಸು ಮಾಡಬೇಕಿದೆ ಎನ್ನುತ್ತಿದ್ದಾರೆ ರೈತರು.

ಇದನ್ನೂ ವೀಕ್ಷಿಸಿ: ಕೆಇಎ ಬಳಿ ಕಾದು ಕುಳಿತಿದ್ದ ವಿದ್ಯಾರ್ಥಿಗಳಿಗೆ ಸರ್‌ಪ್ರೈಸ್‌: ಸಮಸ್ಯೆ ಆಲಿಸಿದ ಸಚಿವ ಎಂ.ಸಿ. ಸುಧಾಕರ್‌