ಅನ್ನಭಾಗ್ಯದ 6 ಸಾವಿರ ಕ್ವಿಂಟಾಲ್ ಅಕ್ಕಿಯೇ ಮಾಯ..! 6 ತಿಂಗಳಲ್ಲಿ ಎರಡನೇ ಬಾರಿ ನಡೆಯಿತು ಕಳ್ಳತನ..!

Nov 28, 2023, 10:42 AM IST

ಬಡವರು ಹಸಿವು ನೀಗಿಸಬೇಕಿದ್ದ ಅಕ್ಕಿಗೆ ಕನ್ನ ಬಿದ್ದಿದೆ.. ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರ ಸ್ವಕ್ಷೇತ್ರದಲ್ಲಿಯೇ ಎರಡನೇ ಬಾರಿ ಅನ್ನಭಾಗ್ಯದ ಪಡಿತರ ಅಕ್ಕಿಯೇ(Ration rice) ನಾಪತ್ತೆಯಾಗಿವೆ. ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಗೋದಾಮಿನಲ್ಲಿ ಸಂಗ್ರಹಿಸಿದ್ದ ಪಡಿತರ ಅಕ್ಕಿ ವ್ಯತ್ಯಾಸ ಕಂಡು ಬಂದಿದೆ. ಶಹಾಪುರ ಹಾಗೂ ವಡಗೇರಾ ತಾಲೂಕಿನ ಪಡಿತರ ಚೀಟಿದಾರರಿಗೆ ಅನ್ನಭಾಗ್ಯದ(Annabhagya) ಅಕ್ಕಿಯನ್ನು ನೀಡಲು ಸಂಗ್ರಹಿಸಲಾಗಿತ್ತು. ಆದ್ರೆ ಗೋದಾಮಿನಲ್ಲಿ ಇರಬೇಕಿದ್ದ 6,077 ಕ್ಚಿಂಟಾಲ್ ಅಕ್ಕಿ ವ್ಯತ್ಯಾಸವಾಗಿದ್ದು, ಸುಮಾರು 2 ಕೋಟಿ 66 ಲಕ್ಷ ರೂ. ಮೌಲ್ಯದ ಅಕ್ಕಿ ಮಾಯವಾಗಿದೆ. ಜೂನ್ 2- 2023 ರಿಂದ ನವೆಂಬರ್ 23 ರ ಮಧ್ಯದ ಅವಧಿಯಲ್ಲಿ ಪಡಿತರ ಗೋಲ್ಮಾಲ್ ನಡೆದಿದೆ. ಈ ಬಗ್ಗೆ ಅಕ್ಕಿ ಕಳ್ಳತನ ಬಗ್ಗೆ  ಜಿಲ್ಲಾ ಆಹಾರ ನಾಗರಿಕ ಸರಬರಾಜು ವ್ಯವಹಾರಗಳ ಉಪನಿರ್ದೇಶಕ ಭೀಮರಾಯ  ಶಹಾಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಯಾದಗಿರಿ(Yadgir) ನ್ಯಾಯಬೆಲೆ ಅಂಗಡಿಗೆ ಸಾಗಾಟ ಮಾಡಬೇಕಾದ ಅಕ್ಕಿ ಅಧಿಕಾರಿಗಳೇ ಸಾಗಾಟ ಮಾಡಿದ್ರಾ ಎಂಬ ಅನುಮಾನ ಶುರುವಾಗಿದೆ. ಗೋದಾಮಿನ ಈಗಿನ ಮುಖ್ಯ ಕಾರ್ಯನಿರ್ವಾಹಕ ಶಿವಪ್ಪ ಹಾಗೂ ಈ ಹಿಂದಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿವರಾಜ ಅವರು ತಮ್ಮ ಲಾಭಕ್ಕಾಗಿ ಸಾಗಾಟ ಮಾಡಿದ್ರಾ ಎಂಬ ಅನುಮಾನವಿದೆ. ಈ ಬಗ್ಗೆ ಶಹಾಪುರ ಠಾಣೆಯಲ್ಲಿ ಶಿವಪ್ಪ ಹಾಗೂ ಶಿವರಾಜ ಸಂಘದ ಆಡಳಿತ ಮಂಡಳಿ ವಿರುದ್ಧ ದೂರು ದಾಖಲಾಗಿದೆ. ಈ ಪ್ರಕರಣದಲ್ಲಿ ಪ್ರಭಾವಿಗಳ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ.

ಪಡಿತರ ಅಕ್ಕಿ ಸಂಗ್ರಹದ ಗೋದಾಮಿಗೆ ಕಾಂಪೌಡ್ ನಿರ್ಮಿಸಿಲ್ಲ..ಪಡಿತರ ಅಕ್ಕಿ ಸಾಗಾಟ ಮಾಡುವ ಲಾರಿಗಳಿಗೆ ಜಿಪಿಎಸ್ ಸಹ ಅಳವಡಿಕೆಯಾಗಿಲ್ಲ.. ಜತೆಗೆ ಸಿಸಿ ಕ್ಯಾಮರಾ ಅಳವಡಿಕೆ ಮಾಡದಿರುವುದೇ ಕಳ್ಳತನಕ್ಕೆ ದಾರಿ ಮಾಡಿ ಕೊಟ್ಟಂತಾಗಿದೆ. ಉದ್ದೇಶ ಪೂರ್ವಕವಾಗಿಯೇ ಸಿಸಿಟಿವಿ,  ಲಾರಿಗಳಿಗೆ ಜಿಪಿಎಸ್ ಅಳವಡಿಸಿಲ್ವಾ ಎಂಬ ಅನುಮಾನವೂ ದಟ್ಟವಾಗಿದೆ.. ಆದ್ರಿಂದ  ಅಕ್ರಮ ಪತ್ತೆಗೆ ಜಿಲ್ಲಾ ಪಂಚಾಯತ್ ಸಿಇಓ ಗರೀಮಾ ಫನ್ವಾರ್ ನೇತೃತ್ವದಲ್ಲಿ  ತಂಡ ರಚಿಸಲಾಗಿದೆ. ಮೂರು ದಿನದೊಳಗೆ ವರದಿ ನೀಡಲು ಡಿಸಿ ಸುಶೀಲಾ.ಬಿ ಸೂಚನೆ ನೀಡಿದ್ದಾರೆ.

ಇದನ್ನೂ ವೀಕ್ಷಿಸಿ:  ಕೆರೆಗಳ ಒಡಲಿಗೆ ಕನ್ನಹಾಕಿದ ಮಾಫಿಯಾ ಗ್ಯಾಂಗ್..! ಧನದಾಹಿಗಳಿಂದ ರೈತರ ಜೀವನಾಡಿ ಕಗ್ಗೊಲೆ !