Sathish Kumar KH | Published: Jan 29, 2025, 7:45 PM IST
ಪವಿತ್ರ ಗಂಗಾ ಸ್ನಾನದ ಬಗ್ಗೆ ಮಲ್ಲಿಕಾರ್ಜುನ ಖರ್ಗೆಯವರ ಬಾಯಲ್ಲಿ ಬಂದ ಮಾತು ಇಡೀ ದೇಶದ ಹಿಂದೂಗಳಲ್ಲಿ ಬೆಂಕಿ ಹೊತ್ತಿಸುವಂತಾಗಿತ್ತು. ಗಂಗಾ ಸ್ನಾನದಿಂದ ದೇಶದ ಬಡತನ ದೂರವಾಗುತ್ತಾ, ಬಡವರ ಹೊಟ್ಟೆ ತುಂಬುತ್ತಾ ಎಂದು ಟೀಕೆ ಮಾಡಿದ್ದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಟೀಕಿಸುವ ಭರದಲ್ಲಿ ಖರ್ಗೆ ಬಾಯಲ್ಲಿ ಅಳತೆ ಮೀರಿತ ಮಾತು ಹೊರಗೆ ಬಂದಿತ್ತು. ಆದರೆ, ಇದೀಗ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಆ ಒಂದು ಮಾತು ಕಾಂಗ್ರೆಸ್ ಪಕ್ಷಕ್ಕೆ ಆಪತ್ತು ಆಗುವ ಸನ್ನಿವೇಶನ ನಿರ್ಮಾಣ ಆಗಲಿದೆ. ಖರ್ಗೆ ಹೊತ್ತಿಸಿದ ಕುಂಭ ಕಿಚ್ಚಿನಲ್ಲಿ ರಾಜಕೀಯ ಜ್ವಾಲೆ ಧಗ ಧಗ ಉರಿಯುತ್ತಿದೆ. ಇದೇ ಸಂದರ್ಭದಲ್ಲಿ ಕುಂಭ ಮೇಳದಿಂದ ಸಾವಿರ ಕೋಟಿಗಳ ಲೆಕ್ಕದಲ್ಲಿ ಖರ್ಚು, ಲಕ್ಷ ಕೋಟಿಗಳ ಲೆಕ್ಕದಲ್ಲಿ ಆದಾಯ ಬರುತ್ತಿದೆ ಎನ್ನುವುದು ಇದಕ್ಕೆ ಕಾರಣವಾಗಿದೆ.
ಉತ್ತರ ಪ್ರದೇಶದ ಪ್ರಯಾಗ್'ರಾಜ್'ನಲ್ಲಿ ನಡೀತಾ ಇರೋ ಮಹಾಕುಂಭ ಮೇಳದ ಒಟ್ಟು ಬಜೆಟ್ 7,500 ಕೋಟಿ ರೂಪಾಯಿ. ಅದರಲ್ಲಿ ಉಫತ್ತರ ಪ್ರದೇಶ ಸರ್ಕಾರದ ಪಾಲು 5,400 ಕೋಟಿ ರೂಪಾಯಿ, ಕೇಂದ್ರ ಸರ್ಕಾರದ ಪಾಲು 2,100 ಕೋಟಿ ರೂಪಾಯಿ ಇದೆ. ಮಹಾಕುಂಭ ಮೇಳದಿಂದ ಬರಲಿರುವ ಅಂದಾಜು ಆದಾಯ 2ರಿಂದ 4 ಲಕ್ಷ ಕೋಟಿ ರೂಪಾಯಿ ಆಗಿದೆ. ಒಟ್ಟು 45 ದಿನಗಳ ಮಹಾಕುಂಭಮೇಳಕ್ಕೆ ಸರಿ ಸುಮಾರು 40 ಕೋಟಿ ಪ್ರವಾಸಿಗರು ಭೇಟಿ ನೀಡುವ ನಿರೀಕ್ಷೆಯಿದೆ. CAIT ಅಂದ್ರೆ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟದ ದತ್ತಾಂಶದ ಪ್ರಕಾರ ಶೇ.80ರಷ್ಟು ಪ್ರವಾಸಿಗರು ತಲಾ ₹5,000 ಖರ್ಚು ಮಾಡಲಿದ್ದಾರೆ ಎಂದು ಅಂದಾಜಿಸಿದೆ. ಈ ಲೆಕ್ಕದ ಪ್ರಕಾರ ಮಹಾಕುಂಭ ಮೇಳದಲ್ಲಿ ನಡೆಯಲಿರುವ ಒಟ್ಟು ವ್ಯವಹಾರ ಮತ್ತು ಆದಾಯ ₹ 2 ಲಕ್ಷ ಕೋಟಿ ದಾಟಲಿದೆ. ಒಬ್ಬ ಪ್ರವಾಸಿಗ ₹10 ಸಾವಿರದಂತೆ ಖರ್ಚು ಮಾಡಿದರೆ ಸುಮಾರು 4 ಲಕ್ಷ ಕೋಟಿ ಆದಾಯದ ನಿರೀಕ್ಷೆಯಿದೆ ಎನ್ನುತ್ತದೆ ಅಂದ್ರೆ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟದ ದತ್ತಾಂಶ ವರದಿ.