ಪರಿಸ್ಥಿತಿ ಕೈ ಮೀರಿದೆ, ದೇಶ ಕಾಪಾಡಲು ಏಮ್ಸ್‌ ನಿರ್ದೇಶಕರ ಎಚ್ಚರಿಕೆ!

Apr 25, 2021, 2:55 PM IST

ನವದೆಹಲಿ(ಏ.25): ದೇಶದಲ್ಲಿ ಕೊರೋನಾ ಮಹಾಮಾರಿ ನಿಯಂತ್ರಣ ಮೀರಿ ಹರಡುತ್ತಿದೆ. ಮಾರ್ಚ್ ಎರಡನೇ ವಾರ ಇಪ್ಪತ್ತೈದು ಸಾವಿರ ಪ್ರಕರಣಗಳು ದಾಖಲಾಗುತ್ತಿದ್ದವು. ಆದರೀಗ ಇದು ಏರಿಕೆಯಾಗಿ ಪ್ರತಿ ದಿನ ಮೂರೂವರೆ ಲಕ್ಷ ಪ್ರಕರಣಗಳು ವರದಿಯಾಗುತ್ತಿವೆ. ಹೀಗಿರುವಾಗ ಏಮ್ಸ್‌ ನಿರ್ದೇಶಕ ಡಾ. ರಣ್ದೀಪ್ ಗುಲೇರಿಯಾ ಎಚ್ಚರಿಕೆಯೊಂದನ್ನು ರವಾನಿಸಿದ್ದಾರೆ.

ಹೌದು ಪರಿಸ್ಥಿತಿ ಕೈ ಮೀರಿರುವ ಬಗ್ಗೆ ಎಚ್ಚರಿಕೆ ಕೊಟ್ಟಿರುವ ಗುಲೇರಿಯಾ, ಹತ್ತಕ್ಕಿಂತ ಹೆಚ್ಚಿನ ಸೋಂಕಿತರಿರುವ ಪ್ರದೇಶವನ್ನು ಲಾಕ್‌ಡೌನ್ ಮಾಡಿ ಎಂದು ಹೇಳಿದ್ದಾರೆ. ಈ ಮೂಲಕ ಸೋಂಕಿನ ಸರಪಳಿ ಬ್ರೇಕ್ ಮಾಡಿದರಷ್ಟೇ ದೇಶವನ್ನು ಈ ಮಹಾಮಾಆರಿಯಿಂದ ಕಾಪಾಡಲು ಸಾಧ್ಯ ಎಂದಿದ್ದಾರೆ. 

ಅಲ್ಲದೇ ಏರುತ್ತಿರುವ ಪ್ರಕರಣಗಳನ್ನು ತಗ್ಗಿಸಲು ಮೊದಲು ಯತ್ನಿಸಿ ಎಂದೂ ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ಸದ್ಯ ಎರಡು ಮಹತ್ವದ ಕ್ರಮ ಕೈಗೊಳ್ಳುವ ಅಗತ್ಯವಿದೆ. ಮೊದಲನೆಯದಾಗಿ ಸರ್ಕಾರ ದೇಶಾದ್ಯಂತ ಆರೋಗ್ಯ ಸುಧಾರಣೆಗೆ ಆಕ್ಸಿಜನ್, ಬೆಡ್‌ಗಳ ಸೂಕ್ತ ವ್ಯವಸ್ಥೆ ಹಾಗೂ ಎರಡನೆಯದ್ದಾಗಿ ಕೊರೋನಾ ಸೋಂಕಿನ ಸಂಖ್ಯೆ ಇಳಿಮುಖಗೊಳಿಸುವುದು. ಹೀಗಾದರಷ್ಟೇ ಕೊರೋನಾ ನಿಯಂತ್ರಿಸಲು ಸಾಧ್ಯವಾಗುತ್ತದೆ.