ತೃಣಮೂಲ ಕಾಂಗ್ರೆಸ್ ಪಕ್ಷದ ಆಡಳಿತವಿರುವ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನಾಯಕರು, ಕಾರ್ಯಕರ್ತರ ಮೇಲಿನ ಹಿಂಸಾಚಾರಗಳು ಮುಂದುವರೆದಿದೆ.
ನವದೆಹಲಿ (ಡಿ. 12): ತೃಣಮೂಲ ಕಾಂಗ್ರೆಸ್ ಪಕ್ಷದ ಆಡಳಿತವಿರುವ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನಾಯಕರು, ಕಾರ್ಯಕರ್ತರ ಮೇಲಿನ ಹಿಂಸಾಚಾರಗಳು ಮುಂದುವರೆದಿದೆ. ಇದಕ್ಕೆ ಇನ್ನಷ್ಟು ಸಾಕ್ಷಿ ಎಂಬಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಬೆಂಗಾವಲು ವಾಹನ ಸೇರಿದಂತೆ ಬಿಜೆಪಿ ನಾಯಕರ ಹಲವು ವಾಹನಗಳ ಮೇಲೆ ಭಾರೀ ಪ್ರಮಾಣದ ಕಲ್ಲು ತೂರಾಟ ನಡೆದಿದೆ. ಇಲ್ಲಿ ಬಿಜೆಪಿಯವರು ಟಿಎಂಸಿ ಮೇಲೆ ಆರೋಪ ಮಾಡಿದರೆ, ಟಿಎಂಸಿಯವರು ಬಿಜೆಪಿ ಮೇಲೆ ಆರೋಪಿಸುತ್ತಿದ್ದಾರೆ. ಈ ಘಟನೆ ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ.
‘ನಾನು ಬಚಾವಾಗಿ ಬಂದಿದ್ದು ದುರ್ಗೆಯ ದಯೆ. ಇಂದಿನ ಘಟನೆ ಆಘಾತಕಾರಿ ಹಾಗೂ ಕಂಡು ಕೇಳರಿಯದ್ದು. ನನ್ನದ್ದೇ ಈ ಕತೆಯಾದರೆ ಇನ್ನು ರಾಜ್ಯದ ಜನಸಾಮಾನ್ಯರ ಪಾಡು ಹೇಳತೀರದು. ಈ ಗೂಂಡಾ ರಾಜ್ಯಕ್ಕೆ ಅಂತ್ಯ ಹಾಡಲೇಬೇಕು. ರಾಜ್ಯದಲ್ಲಿ ಟಿಎಂಸಿ ದುರಾಡಳಿತವಿದೆ. ಅಸಹಿಷ್ಣುತೆ ನೆಲೆಸಿದೆ’ನಡ್ಡಾ ಹೇಳಿದ್ದಾರೆ. ಹಾಗಾದರೆ ದೀದಿ ಸಾಮ್ರಾಜ್ಯದಲ್ಲಿ ಏನು ನಡೆಯುತ್ತಿದೆ? ಗೂಂಡಾರಾಜ್ಯವಾಗಿದ್ಯಾ ಪಶ್ಚಿಮ ಬಂಗಾಳ? ಏನಿದು ಕಲ್ಲು ತೂರಾಟ, ಕಿತ್ತಾಟ? ಇನ್ಸೈಡ್ ಪಾಲಿಟಿಕ್ಸ್..!