Udupi Paryaya: ಸಂಪ್ರದಾಯ ಉಂಟು, ಸಂಭ್ರಮ ಇಲ್ಲದ ಸರಳ ಉಡುಪಿ ಪರ್ಯಾಯೋತ್ಸವ..!

Jan 12, 2022, 10:31 AM IST

ಉಡುಪಿ (ಜ. 12): ಪರ್ಯಾಯೋತ್ಸವದ ಸಂಭ್ರಮವನ್ನು ಕೋವಿಡ್ ನುಂಗಿಹಾಕಿದೆ. ಪುರಪ್ರವೇಶ ದೊಂದಿಗೆ ಆರಂಭವಾಗಿರುವ ಕೃಷ್ಣಾಪುರ ಮಠದ ಪರ್ಯಾಯ ಮಹೋತ್ಸವ ಸಾಂಪ್ರದಾಯಿಕ ಮತ್ತು ಸಾಂಕೇತಿಕ ಆಚರಣೆಗಳಿಗೆ ಸೀಮಿತವಾಗಿದೆ. ಸಾವಿರಾರು ಜನರು ಸೇರಿ ನಡೆಯುತ್ತಿದ್ದ ಪುರಪ್ರವೇಶಕ್ಕೆ,  ಕೇವಲ ನೂರೆಂಟು ಮಂದಿ ಸಾಕ್ಷಿಯಾದರು.

ಮೈಸೂರು ದಸರಾ ಮಾದರಿಯಲ್ಲಿ, ನಾಡಹಬ್ಬದ ರೀತಿಯಲ್ಲಿ ನಡೆಯುತ್ತಿದ್ದ ಉಡುಪಿ ಪರ್ಯಾಯೋತ್ಸವ, ಈ ಬಾರಿ ಕೋವಿಡ್ ರೂಲ್ಸ್ ಗಳಿಂದಾಗಿ ಕಳೆಗುಂದಿದೆ. ಕೇವಲ ಸಾಂಪ್ರದಾಯಿಕ ಆಚರಣೆಗಳಿಗೆ ಸೀಮಿತವಾಗಿ, ಮಹೋತ್ಸವ ಆಚರಿಸಲು ಸ್ವಾಮೀಜಿ ನಿರ್ಧರಿಸಿದ್ದು, ಅತ್ಯಂತ ಸರಳವಾಗಿ ಪುರಪ್ರವೇಶ ನಡೆದಿದೆ. ದೇಶದ ನಾನಾ ಪುಣ್ಯಕ್ಷೇತ್ರಗಳ ಸಂದರ್ಶನ ಪೂರೈಸಿ ಬಂದಿರುವ, ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಯವರನ್ನು, ನಗರದ ಜೋಡುಕಟ್ಟೆಯಲ್ಲಿ ಬರಮಾಡಿಕೊಳ್ಳಲಾಯಿತು. ಜನಪ್ರತಿನಿಧಿಗಳು,  ಜಿಲ್ಲಾಧಿಕಾರಿಗಳು ಹಿರಿಯ ಯತಿಯನ್ನು ಗೌರವಿಸಿದರು.

Dakshina Kannada: ತುಳುನಾಡಿನ ದೈವಾರಾಧನೆ, ಭೂತಾರಾಧನೆ ಚಿತ್ರೀಕರಣ ನಡೆಸದಂತೆ ನಿಯಮ ಜಾರಿಗೆ?

ಬಳಿಕ ಜೋಡುಕಟ್ಟೆಯಿಂದ ಕೃಷ್ಣ ಮಠದವರಿಗೆ ಶ್ರೀಪಾದರ ಪುರಪ್ರವೇಶ ಮೆರವಣಿಗೆ ನಡೆಯಿತು. ಈ ಹಿಂದೆಲ್ಲಾ ಪುರಪ್ರವೇಶ ಅಂದರೆ ಅಲ್ಲಿ ಹಬ್ಬದ ವಾತಾವರಣ ಇರುತ್ತಿತ್ತು. ಸಾವಿರಾರು ಜನ ಸೇರುವ ಈ ಮಹೋತ್ಸವದ ವೇಳೆ, ನೂರಾರು ಕಲಾತಂಡಗಳು ಟ್ಯಾಬ್ಲೋಗಳು, ಬಾವಿ ಪರ್ಯಾಯ ಮಠಾಧೀಶರನ್ನು ಸ್ವಾಗತಿಸಲು ವ್ಯವಸ್ಥೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಕೇವಲ ಸಾಂಪ್ರದಾಯಿಕ ಆಚರಣೆ ನಡೆದಿದೆ. ಮಠದ ಸಾಂಪ್ರದಾಯಿಕ ವಾಲಗ,ಚಂಡೆ, ಕೊಂಬು ಕಹಳೆಗಳ ನಾದ ಹೊರತುಪಡಿಸಿದರೆ ಯಾವುದೇ ಅಬ್ಬರ ಇರಲಿಲ್ಲ.

 ಮೆರವಣಿಗೆಯಲ್ಲಿ ಬಂದ ವಿದ್ಯಾಸಾಗರತೀರ್ಥರು ಕೃಷ್ಣ ಮುಖ್ಯಪ್ರಾಣ ದೇವರ ದರ್ಶನ ಕೈಗೊಂಡರು. ಬಳಿಕ ರಥಬೀದಿಯಲ್ಲಿರುವ ಅನಂತೇಶ್ವರ ಚಂದ್ರಮೌಳೀಶ್ವರ ದೇವರಿಗೆ ಪೂಜೆ ಸಲ್ಲಿಸಿ ತಮ್ಮ ಕೃಷ್ಣಾಪುರ ಮಠವನ್ನು ಪ್ರವೇಶಿಸಿದರು. ಜನವರಿ 18ರಂದು ನಡೆಯಬೇಕಾಗಿರುವ ಪರ್ಯಾಯ ಮಹೋತ್ಸವದ ವೇಳೆಯಲ್ಲೂ ನೈಟ್ ಕರ್ಪ್ಯೂ ಸಹಿತ, ಕೋವಿಡ್ ನಿಯಮಾವಳಿಗಳು ಜಾರಿಯಲ್ಲಿರುತ್ತವೆ. ಅಂದು ಮುಂಜಾನೆ 2 ಗಂಟೆಗೆ ಮೆರವಣಿಗೆ ಆರಂಭವಾಗಬೇಕಾಗಿದೆ, ಸೀಮಿತ ಭಕ್ತರೊಂದಿಗೆ ಪರ್ಯಾಯ ಮೆರವಣಿಗೆ ನಡೆಸಲು ಸರ್ಕಾರದ ಅನುಮತಿ ಕೋರಲಾಗಿದೆ. ರಾತ್ರಿ ಯಾವುದೇ ಕಾರ್ಯಕ್ರಮ ಆಯೋಜನೆಗೆ ಅವಕಾಶವಿಲ್ಲ ಎಂದು ಈಗಾಗಲೇ ಜಿಲ್ಲಾಡಳಿತ ಹೇಳಿದೆ. ಸ್ವತಹ ಪರ್ಯಾಯ ಮಠಾಧೀಶರಾದ ಕೃಷ್ಣಾಪುರ ಶ್ರೀಗಳೇ ಬಯಸಿದಂತೆ, ಕೇವಲ ಸಾಂಪ್ರದಾಯಿಕ ಆಚರಣೆಗಳ ಈ ಬಾರಿಯ ಪರ್ಯಾಯ ಸೀಮಿತವಾಗಲಿದೆ.