ಉತ್ತರ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನಂತರಾಜ್, ತಮ್ಮ ಮನೆಯಲ್ಲಿ ಮೇ 12 ರಂದು ಆತ್ಮಹತ್ಯೆಗೆ ಶರಣಾಗಿದ್ದರು. ಆರಂಭದಲ್ಲಿ ಅನಾರೋಗ್ಯದಿಂದ ಬೇಸತ್ತು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿತ್ತು.
ಬೆಂಗಳೂರು (ಮೇ.20): ಉತ್ತರ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನಂತರಾಜ್, ತಮ್ಮ ಮನೆಯಲ್ಲಿ ಮೇ 12 ರಂದು ಆತ್ಮಹತ್ಯೆಗೆ ಶರಣಾಗಿದ್ದರು. ಆರಂಭದಲ್ಲಿ ಅನಾರೋಗ್ಯದಿಂದ ಬೇಸತ್ತು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿತ್ತು. ಆದರೆ ಮೃತರ ಕೋಣೆಯಲ್ಲಿ ಪತ್ತೆಯಾದ ಡೆತ್ನೋಟ್ ಆಧರಿಸಿ ಅನಂತರಾಜ್ ಪತ್ನಿ ಸುಮಾ, ತನ್ನ ಪತಿಗೆ ಕೆ.ರ್.ಪುರದ ರೇಖಾ, ಆಕೆಯ ಪತಿ ವಿನೋದ್ ಹಾಗೂ ಸ್ನೇಹಿತೆ ಸ್ಪಂದನಾ ಕಿರುಕುಳ ಕೊಡುತ್ತಿದ್ದರು ಎಂದು ಆರೋಪಿಸಿದ್ದರು.
ಆರು ವರ್ಷಗಳ ಹಿಂದೆ ಫೇಸ್ಬುಕ್ನಲ್ಲಿ ಅನಂತರಾಜ್ಗೆ ರೇಖಾ ಪರಿಚಯವಾಗಿದ್ದಳು. ಬಳಿಕ ಪರಸ್ಪರ ಒಡನಾಟ ಬೆಳೆದಿತ್ತು. ತಮ್ಮ ಖಾಸಗಿ ಕ್ಷಣದ ಫೋಟೋ ಹಾಗೂ ವಿಡಿಯೋಗಳನ್ನು ಮುಂದಿಟ್ಟು ಅನಂತರಾಜ್ಗೆ ರೇಖಾ ಬ್ಲ್ಯಾಕ್ಮೇಲ್ ಮಾಡುತ್ತಿದ್ದಳು. ಇದರಿಂದ ಮನನೊಂದು ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸುಮಾ ದೂರಿದ್ದರು. ಅದರನ್ವಯ ಎಫ್ಐಆರ್ ದಾಖಲಿಸಿ ತನಿಖೆ ಕೈಗೆತ್ತಿಕೊಂಡ ಪೊಲೀಸರು, ರೇಖಾಳನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆತ್ಮಹತ್ಯೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, ಕೌಟುಂಬಿಕ ಕಲಹದಿಂದ ಅನಂತರಾಜ್ ನೊಂದಿದ್ದರು ಎಂಬ ಆರೋಪ ಕೇಳಿ ಬಂದಿದೆ. ಈ ಪ್ರಕರಣದಲ್ಲಿ ಮೃತನ ಗೆಳತಿ ಬಂಧನವಾದ ಬೆನ್ನಲ್ಲೇ ಅನಂತರಾಜ್ ಪತ್ನಿ ಮತ್ತು ರೇಖಾ ನಡುವೆ ನಡೆದಿದೆ ಎನ್ನಲಾದ ಸಂಭಾಷಣೆಯ ಆಡಿಯೋವೊಂದು ಬಹಿರಂಗವಾಗಿದೆ.