ಇತಿಹಾಸ ಸೃಷ್ಟಿಸಿದ ʻಉಘೇ ಉಘೇ ಮಾದೇಶ್ವರʼನಿಗೆ 150ರ ಸಂಭ್ರಮ

Published : Mar 04, 2020, 04:24 PM ISTUpdated : Mar 04, 2020, 04:29 PM IST
ಇತಿಹಾಸ ಸೃಷ್ಟಿಸಿದ ʻಉಘೇ ಉಘೇ ಮಾದೇಶ್ವರʼನಿಗೆ 150ರ ಸಂಭ್ರಮ

ಸಾರಾಂಶ

ಉಘೇ ಉಘೇ ಮಾದೇಶ್ವರ- 150/ ಶ್ರವಣ ಸಂಹಾರ ಮಾಡಲು ಮಾದಾರಿಯಾಗುವ ಮಾದಪ್ಪ/ ಜೀ ಕನ್ನಡದ ಕಿರುತೆರೆ ಧಾರಾವಾಹಿಯಿಂದ ಇತಿಹಾಸ ನಿರ್ಮಾಣ/ ವಾರಂತ್ಯದ ಧಾರಾವಾಹಿಯೊಂದರಿಂದ ದಾಖಲೆ

ಬೆಂಗಳೂರು[ ಮಾ. 04]   ದಾಖಲೆಯತ್ತ ಮುನ್ನುಗ್ಗುತ್ತಿದೆ ಜೀ ಕನ್ನಡ ವಾಹಿನಿಯ ವಾರಾಂತ್ಯ ಧಾರಾವಾಹಿ ʻಉಘೇ ಉಘೇ ಮಾದೇಶ್ವರʼ. ಸೆಪ್ಟೆಂಬರ್‌ 8, 2018 ರಂದು ಪ್ರಸಾರ ಆರಂಭಗೊಂಡ ಧಾರಾವಾಹಿ  ಈ ವಾರ 150 ನೇ ಕಂತಿನೊಂದಿಗೆ ಒಂದೂವರೆ ವರ್ಷ ಪೂರೈಸುತ್ತಿದೆ.

ಕನ್ನಡದ ಜಾನಪದ ಸಂಪತ್ತು ʻಮಾದೇಶ್ವರ ಮಹಾಕಾವ್ಯʼವನ್ನು ಜಗತ್ತಿನ ಅತಿದೊಡ್ಡ ಮೌಖಿಕ ಮಹಾಕಾವ್ಯವೆಂದು ವಿದ್ವಾಂಸರೇ ಒಪ್ಪಿಕೊಂಡಿದ್ದಾರೆ. ಈ ಕಾವ್ಯ ಚಾಮರಾಜನಗರ ಜಿಲ್ಲೆ ಮಲೆ ಮಾದೇಶ್ವರ ಬೆಟ್ಟದಲ್ಲಿ ದೇವರಾಗಿ ನೆಲೆಸಿರುವ ಮಾದೇಶ್ವರರ ಕಥೆಯನ್ನು ಹೇಳುತ್ತದೆ. ಇವರು 15 ನೇ ಶತಮಾನದ ಪವಾಡ ಪುರುಷರು. ಗುಡ್ಡಗಾಡು ಜನರಿಗೆ ಅಹಿಂಸೆಯ ಮಾರ್ಗದಲ್ಲಿ ಬದುಕುವ ದಾರಿ ತೋರಿಸಿದವರು. ಪ್ರಜೆಗಳಿಗೆ ಹಿಂಸೆ ನೀಡುತ್ತಿದ್ದ ರಾಜನನ್ನೇ ಉಪಾಯದಿಂದ ನಿವಾರಿಸಿದವರು. ಮಹಿಳೆಯರ ಆತ್ಮಗೌರವ ಹೆಚ್ಚುವಂತೆ ಮಾಡಿದರು. ಪ್ರಾಣಿಹಿಂಸೆ ನಿಲ್ಲಿಸಿದರು. ಬುಡಕಟ್ಟು ಜನರನ್ನು ಸಸ್ಯಾಹಾರಿಗಳನ್ನಾಗಿ ಮಾಡಿದರು. ಅವರಿಗೆ ಕೃಷಿ ಕಲಿಸಿದರು. ಎಲ್ಲರೂ ಸಮಾನ ಎಂದು ನಿದರ್ಶನಗಳ ಮೂಲಕ ತೋರಿಸಿಕೊಟ್ಟರು. ದೀರ್ಘ ಸಂಚಾರ ಕೈಗೊಂಡು ಸಮಾಜೋದ್ಧಾರ ಮಾಡಿದರು.

ಜನರು ಅವರನ್ನು ಶಿವನ ಅಂಶವೆಂದೇ ಪರಿಗಣಿಸಿ ಪೂಜಿಸುತ್ತಾರೆ. ಹಾಡುಗಳ ಮೂಲಕ ಅವರ ವೃತ್ತಾಂತ ಬಿತ್ತರಿಸುತ್ತಾರೆ. ಈ ಮಹಾಕಾವ್ಯದಲ್ಲಿ ಹತ್ತಾರು ಕವಲುಗಳಿದ್ದು ʻಸಾಲುಗಳುʼ ಎಂದು ಕರೆಯಲಾಗಿದೆ. ಉಘೇ ಉಘೇ ಎನ್ನುವುದು ಮಾದೇಶ್ವರರಿಗೆ ಭಕ್ತರು ಹಾಕುವ ವಿಶಿಷ್ಟ ಜೈಕಾರ.

ಕಾಮಿಡಿ ಕಿಲಾಡಿಗಳು ಟ್ರೋಫಿ ಯಾರ ಪಾಲಾಯಿತು?

ʻಉಘೇ ಉಘೇ ಮಾದೇಶ್ವರʼ 150ನೇ ಸಂಚಿಕೆಯಿಂದ ಕಥೆ ಹೊಸ ತಿರುವು ಪಡೆದುಕೊಳ್ಳುತ್ತದೆ. ಮಾದೇಶ್ವರರ ಅವತರಣದ ಮೂಲ ಗುರಿ ಶ್ರವಣ ಸಂಹಾರಕ್ಕೆ ವೇದಿಕೆ ಸಜ್ಜಾಗುತ್ತದೆ. ಚರ್ಮದ ಪಾದರಕ್ಷೆಗಳನ್ನು ಮಾಡುವ ಮಹಾಶರಣ ಹರಳಯ್ಯನ ಸಾಲು ಆರಂಭವಾಗುತ್ತದೆ. ರಕ್ಕಸ ಶ್ರವಣನ ಸಂಹಾರ ಅವನ ಪಾದಗಳ ಮೂಲಕ ಆಗಬೇಕೆಂಬ ಅಭಿಶಾಪವಿದೆ. ಇದನ್ನು ಪೂರೈಸಲು ಮಾದಪ್ಪ ಹರಳಯ್ಯನ ನೆರವು ಪಡೆಯುತ್ತಾರೆ. ಮಾದಾರಿಯ ರೂಪದಲ್ಲಿ ಶ್ರವಣನ ಆಸ್ಥಾನ ಪ್ರವೇಶಿಸುತ್ತಾರೆ. ಇಲ್ಲಿಂದ ಮುಂದೆ ಶ್ರವಣನ ಸಂಹಾರದ ತನಕ ಪಯಣ ರೋಚಕ. ಶ್ರವಣ ಸಂಹಾರದ ನಂತರವೂ ಮಾದೇಶ್ವರರ ಕಥೆ ಸಾಕಷ್ಟಿದೆ.  

ಅನಿವಾರ್ಯ ಕಾರಣಗಳಿಂದ ಪ್ರಸಾರ ಸಮಯ ಬದಲಾವಣೆಗೊಂಡಾಗಲೂ ವೀಕ್ಷಕರು ಅದೇ ಭಕ್ತಿ-ನಿಷ್ಠೆಯಿಂದ ಧಾರಾವಾಹಿ ವೀಕ್ಷಿಸುತ್ತಿದ್ದಾರೆ. ʻಉಘೇ ಉಘೇ ಮಾದೇಶ್ವರʼದ ಯಶಸ್ಸು ಇನ್ನೂ ಇಂಥ ಅಚ್ಚಕನ್ನಡ ಕಥೆಗಳನ್ನು ತೆರೆಗೆ ತರಲು ಸ್ಫೂರ್ತಿಯಾಗಿದೆ ಎನ್ನುತ್ತಾರೆ ಜೀ ಕನ್ನಡ ವಾಹಿನಿಯ ಬ್ಯುಸಿನೆಸ್‌ ಹೆಡ್‌ ರಾಘವೇಂದ್ರ ಹುಣಸೂರು.

ಉತ್ತರ ಕರ್ನಾಟಕ ಹಾಗೂ ಕರಾವಳಿ ಭಾಗದಲ್ಲೂ ವೀಕ್ಷಕರು ಹೆಚ್ಚಿದ್ದಾರೆ. ಕೌಟುಂಬಿಕ ಹಾಗೂ ನೈತಿಕ ಸ್ವಾಸ್ಥ್ಯ ಉಳಿಸುವಲ್ಲಿ ಧಾರಾವಾಹಿ ಸ್ಫೂರ್ತಿಯಾಗಿರುವ ನಿದರ್ಶನಗಳನ್ನು ಕಂಡಾಗ ಸಾರ್ಥಕವೆನ್ನಿಸುತ್ತದೆ ಎನ್ನುತ್ತಾರೆ ನಿರ್ಮಾಪಕ-ಪ್ರಧಾನ ನಿರ್ದೇಶಕ ಕೆ. ಮಹೇಶ್‌ ಸುಖಧರೆ.

ಬುಕ್ಕಾಪಟ್ಣ ವಾಸು ನಿರ್ದೇಶನ, ಚಂದ್ರು ಛಾಯಾಗ್ರಹಣ, ಬಿ.ಎ.ಮಧು-ನಾಗಮಂಗಲ ಕೃಷ್ಣಮೂರ್ತಿಯವರ ಜಾನಪದ ನುಡಿಗಟ್ಟುಗಳ ಸಂಭಾಷಣೆ ಧಾರಾವಾಹಿಯ ಶ್ರೀಮಂತಿಕೆ ಹೆಚ್ಚಿಸಿವೆ.

ತಾರಾಗಣದಲ್ಲಿ ಮಾದೇಶ್ವರರಾಗಿ ಆರ್ಯನ್‌ ರಾಜ್‌, ಶ್ರವಣದೊರೆಯಾಗಿ ವಿನಯ್‌ ಗೌಡ, ಸಂಕವ್ವನಾಗಿ ಹರ್ಷಿಲಾ, ನೀಲೇಗೌಡನಾಗಿ ಪ್ರಸನ್ನ, ಬೇಡರ ಕನ್ನಯ್ಯನಾಗಿ ನಾಗರಾಜ್‌ ಶಿರಸಿ, ಶಿವನಾಗಿ ಶರತ್‌ ಕ್ಷತ್ರಿಯ, ದುಂಡೇಗೌಡರಾಗಿ ಶಂಖನಾದ ಆಂಜನಪ್ಪ, ಕಿರುತೆರೆ-ರಂಗಭೂಮಿಯ ನೂರಾರು ಕಲಾವಿದರು ಧಾರಾವಾಹಿಯಲ್ಲಿ ವಿವಿಧ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಶಿವಶರಣ ಹರಳಯ್ಯನಾಗಿ ಖ್ಯಾತ ಜಾನಪದ ಹಾಡುಗಾರ ಮೈಸೂರು ಗುರುರಾಜ್‌, ಪತ್ನಿ ಕಲ್ಯಾಣಿ ಪಾತ್ರದಲ್ಲಿ ನೀನಾಸಂ ಕಲಾವಿದೆ ಬಿಂದು ಕಾಣಿಸಿಕೊಳ್ಳಲಿದ್ದಾರೆ.

ಪ್ರಸ್ತುತ ಜೀ ಕನ್ನಡ ವಾಹಿನಿಯಲ್ಲಿ ಪ್ರತಿ ಶನಿ-ಭಾನುವಾರ ಸಂಜೆ 5.30 ಕ್ಕೆ ʻಉಘೇ ಉಘೇ ಮಾದೇಶ್ವರʼ ಪ್ರಸಾರವಾಗುತ್ತಿದೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12: ಏನ್ರೀ ಇದು ತೆವಲು? ರಜತ್‌, ಅಶ್ವಿನಿ ಗೌಡ, ರಘು ಯಾಕೆ ಹೀಗೆಲ್ಲ ಮಾಡಿದ್ರು?
Aadi Lakshmi Purana Serial: ವಿರುದ್ಧ ದಿಕ್ಕಿನಲ್ಲಿ ಸಾಗುವ, ಒಬ್ಬರನ್ನೊಬ್ಬರು ಕಂಡರೆ ಆಗದವ್ರು ಮದುವೆಯಾಗುವ ಕಥೆ