ಡೈರೆಕ್ಟರ್​ಗೇ ಚಾಲೆಂಜ್​! ಪೂರ್ಣಿಗೆ ಮಕ್ಕಳಾಗದಿದ್ರೆ ಸೀರಿಯಲ್​ ನೋಡೋದೆ ಬಿಡ್ತೇವೆ ಅಂತಿದ್ದಾರೆ ಫ್ಯಾನ್ಸ್​...

By Suvarna NewsFirst Published Apr 25, 2024, 6:02 PM IST
Highlights

ಶ್ರೀರಸ್ತು ಶುಭಮಸ್ತು ಸೀರಿಯಲ್​ ಪೂರ್ಣಿಗೆ ತನಗೆ ಮಕ್ಕಳಾಗುವುದಿಲ್ಲ ಎನ್ನುವ ಸತ್ಯ ತಿಳಿದು ಆಕಾಶವೇ ಕಳಚಿ ಬಿದ್ದ ಅನುಭವವಾಗಿದೆ. ಮುಂದೆ?
 

ಕೆಲವೊಮ್ಮೆ ಸೀರಿಯಲ್​ ಪ್ರೇಮಿಗಳು ತಾವು ನೋಡುತ್ತಿರುವುದು ಸೀರಿಯಲ್​ಗಳಷ್ಟೇ. ಅಲ್ಲಿ ಏನು ಬೇಕಾದರೂ ಸಾಧ್ಯವಾಗುತ್ತದೆ. ಅಲ್ಲಿರುವುದು ನಟ-ನಟಿಯರಷ್ಟೇ ಎನ್ನುವುದನ್ನೂ ಮರೆತು ಅದರಲ್ಲಿಯೇ ಲೀನವಾಗಿ ಬಿಡುತ್ತಾರೆ. ಇದು ತಮ್ಮದೇ ಮನೆ ಕಥೆ ಎನ್ನುವಷ್ಟು ಅದರ ಒಳಗೆ ಹೋಗುತ್ತಾರೆ. ನಿಜ ಜೀವನದಲ್ಲಿ ಒಳ್ಳೆಯದವರಿಗೆ ಕೆಡುಕಾದರೆ ಮರುಗುತ್ತಾರೋ ಇಲ್ಲವೋ ಗೊತ್ತಿಲ್ಲ, ಆದರೆ ಸೀರಿಯಲ್​ಗಳಲ್ಲಿ ಮಾತ್ರ ಮುಗ್ಧರು ಎನಿಸಿಕೊಂಡವರಿಗೆ ಕೆಟ್ಟದ್ದಾದರೆ ನೋಡಲು ಆಗುವುದಿಲ್ಲ. ಅದರಲ್ಲಿರುವ ವಿಲನ್​ ಪಾತ್ರಧಾರಿಗಳು ಕೇವಲ ಪಾತ್ರಧಾರಿಗಳು ಎನ್ನುವುದನ್ನು ಮರೆತು ಅವರಿಗೆ ಹಿಡಿಶಾಪ ಹಾಕುತ್ತಾರೆ. ಎಷ್ಟೋ ಸಂದರ್ಭಗಳಲ್ಲಿ ವಿಲನ್​ ಪಾತ್ರಧಾರಿಗಳು ಮನೆಯಿಂದ ಹೊರಕ್ಕೆ ಹೋಗುವುದೇ ಕಷ್ಟ ಎನ್ನಿಸುವಷ್ಟರ ಮಟ್ಟಿಗೆ ಪ್ರೇಕ್ಷಕರ ಮನಸ್ಸಿನಲ್ಲಿ ಹಾಸುಹೊಕ್ಕಾಗಿ ಬಿಟ್ಟಿರುತ್ತವೆ ಈ ಪಾತ್ರಗಳು.

ಇದೀಗ ಶ್ರೀರಸ್ತು ಶುಭಮಸ್ತು ಸೀರಿಯಲ್​ನಲ್ಲಿಯೂ ಆಗಿದ್ದು, ನಿರ್ದೇಶಕರ ವಿರುದ್ಧ ಸೀರಿಯಲ್​ ಪ್ರಿಯರು ಗರಂ ಆಗಿದ್ದಾರೆ. ಅಷ್ಟಕ್ಕೂ ಈ ಸೀರಿಯಲ್​ನಲ್ಲಿ ಪೂರ್ಣಿ ಸಹನೆ, ಒಳ್ಳೆತನದ ಪ್ರತೀಕ. ಎಲ್ಲವನ್ನೂ ಸಹಿಸಿಕೊಳ್ಳುವ ಗುಣ. ಅದೇ ಇನ್ನೊಂದೆಡೆ ಮತ್ತೋರ್ವ ಸೊಸೆ ದೀಪಿಕಾ ತದ್ವಿರುದ್ಧ. ಅಪ್ಪನ ಬುದ್ಧಿಯೇ ಅವಳಿಗೆ ಬಂದಿದೆ. ಪೂರ್ಣಿ ಅನಾಥೆಯೆನ್ನುವ ಕಾರಣಕ್ಕೆ ಆಕೆಯನ್ನು ಕಂಡರೆ ದೀಪಿಕಾಗೆ ಆಗುವುದಿಲ್ಲ. ಸದಾ ಒಂದಿಲ್ಲೊಂದು ಮಸಲತ್ತು ಮಾಡುತ್ತಲೇ ಇರುತ್ತಾಳೆ. ಸಾಲದು ಎನ್ನುವುದಕ್ಕೆ ಅತ್ತೆ ಶಾರ್ವರಿ ಸಾಥ್​ ಬೇರೆ. ಶಾರ್ವರಿ ಮತ್ತು ದೀಪಿಕಾರ ಕುತಂತ್ರದಿಂದಾಗಿ ಪೂರ್ಣಿ ಗರ್ಭ ಧರಿಸಲು ಸಾಧ್ಯವಾಗುತ್ತಿಲ್ಲ. ವೈದ್ಯರು ಆಕೆಗೆ ಮಗು ಹುಟ್ಟಲು ಸಾಧ್ಯವೇ ಇಲ್ಲ ಎಂದಿದ್ದಾರೆ. ಆದರೆ ಈ ವಿಷಯ ಪೂರ್ಣಿಗೆ ತಿಳಿದಿರಲಿಲ್ಲ. ದೀಪಿಕಾಗೆ ವಿಷಯ ಗೊತ್ತಾಗಿತ್ತು. ಅವಳು ಇದನ್ನೇ ಪರೋಕ್ಷವಾಗಿ ಪೂರ್ಣಿ ಎದುರು ತಿವಿಯುತ್ತಲೇ ಇದ್ದಳು. 

ಅಕ್ರಮ ಸಂಬಂಧದ ಬಾಯಿ ಬಿಡು ಪೂಜಾ ಎನ್ನುವಷ್ಟು ರಿಯಲ್​ ಲೈಫ್​ನಲ್ಲೂ ಸುಲಭನಾ?

ಇದೀಗ ಸತ್ಯ ಪೂರ್ಣಿಗೆ ತಿಳಿದಿದೆ. ಸತ್ಯವನ್ನು ಮುಚ್ಚಿಟ್ಟ ಗಂಡನ ಬಗ್ಗೆ ಪೂರ್ಣಿಗೆ ಸಿಕ್ಕಾಪಟ್ಟೆ ಕೋಪ ಬಂದಿದೆ. ಅನಾಥೆಯಾಗಿರುವ ತನಗೆ ಅಪ್ಪ-ಅಮ್ಮನ ಪ್ರೀತಿಯೇ ಗೊತ್ತಿಲ್ಲ, ಇದೀಗ ಮಗುವಿನ ಭಾಗ್ಯವೂ ಇಲ್ಲ ಎಂದು ಆಕೆ ಕಣ್ಣೀರು ಹಾಕುತ್ತಿದ್ದರೆ, ಪ್ರೊಮೋ ನೋಡಿರುವ ಅಭಿಮಾನಿಗಳು ಭಾವುಕರಾದಂತಿದೆ. ಶಾರ್ವರಿ ಮತ್ತು ದೀಪಿಕಾ ಮಾಡಿರುವ ಮಸಲತ್ತಿನಿಂದ ತನಗೆ ಮಕ್ಕಳಾಗುತ್ತಿಲ್ಲ ಎನ್ನುವ ವಿಷಯ ಅವಳಿಗೆ ತಿಳಿದಿಲ್ಲ.  ಆದರೆ ವಿಷಯ ಮಾತ್ರ ಬಹಿರಂಗಗೊಂಡು ಈಗ ಕಣ್ಣೀರು ಹಾಕುತ್ತಿದ್ದಾಳೆ. ತಾನು ಬದುಕಿದ್ದು ಏನು ಪ್ರಯೋಜನ ಎನ್ನುತ್ತಿದ್ದಾಳೆ. ಅವಳನ್ನು ಹೇಗೆ ಸಮಾಧಾನ ಪಡಿಸಬೇಕು ಎಂದು ಅವಿಗೆ ತಿಳಿಯುತ್ತಿಲ್ಲ.

ಇದರ ಪ್ರೊಮೋ ನೋಡಿ ನೆಟ್ಟಿಗರು ರೊಚ್ಚಿಗೆದ್ದಿದ್ದಾರೆ. ಹೇಗಾದರೂ ಮಾಡಿ ಪೂರ್ಣಿಗೆ ಮಕ್ಕಳಾಗುವಂತೆ ಮಾಡಿ, ಆಕೆ ಒಳ್ಳೆಯವಳು. ಪದೇ ಪದೇ ಒಳ್ಳೆಯವರಿಗೆ ಕೆಟ್ಟದಾಗುವುದನ್ನೇ ತೋರಿಸಿದರೆ ಸಮಾಜಕ್ಕೆ ಏನು ಸಂದೇಶ ಕೊಟ್ಟ ಹಾಗಾಗುತ್ತದೆ ಎನ್ನುವುದು ಅಭಿಮಾನಿಗಳ ಪ್ರಶ್ನೆ. ಒಂದು ವೇಳೆ ಪೂರ್ಣಿಗೆ ಮಕ್ಕಳಾಗುವುದಿಲ್ಲ ಎಂದು ತೋರಿಸಿದರೆ ತಾವು ಸೀರಿಯಲ್​ ನೋಡುವುದನ್ನೇ ಬಿಡುತ್ತೇವೆ ಎಂದು ನಿರ್ದೇಶಕರಿಗೇ ಸವಾಲು ಹಾಕಿದ್ದಾರೆ ಅಭಿಮಾನಿಗಳು. ತುಳಸಿ ಈ ಹಿಂದೆ ಕರೆದುಕೊಂಡು ಬಂದಿರುವ ಪಂಡಿತರನ್ನು ಮತ್ತೊಮ್ಮೆ ಕರೆಸಿ, ವೈದ್ಯಲೋಕವನ್ನೂ ಮೀರಿಸುವ ಅದೆಷ್ಟೋ ಶಕ್ತಿಗಳಿವೆ, ಅಚ್ಚರಿ ಎನಿಸುವ ಘಟನೆಗಳೂ ಸಂಭವಿಸುತ್ತವೆ. ಇದನ್ನೇ ಸೀರಿಯಲ್​ನಲ್ಲಿ ತೋರಿಸಿ ಮಕ್ಕಳಾಗುವ ಬೇರೆ ದಾರಿಗಳೂ ಇವೆ ಎನ್ನುವುದನ್ನು ತೋರಿಸಿ ಎನ್ನುತ್ತಿದ್ದಾರೆ ಸೀರಿಯಲ್​ ಪ್ರೇಮಿಗಳು. ಮುಂದೆ ಏನಾಗುತ್ತದೆಯೋ ಕಾದು ನೋಡಬೇಕಿದೆ. 

ಹೊಟ್ಟೆ ಬೊಜ್ಜು ಕರಗಿಸೋದು ಇಷ್ಟು ಸುಲಭನಾ? ಡಯಟೀಷಿಯನ್​ ಕುಸುಮಾ ಈಸಿ ಟಿಪ್ಸ್​


click me!