ನವಿರಾದ ಪ್ರೇಮಕ್ಕೆ ವರ್ಷದ ಸಂಭ್ರಮ: ತುಳಸಿ- ಮಾಧವ್​ಗೆ​ ಮತ್ತೆ ಮದುವೆ! ಏನಿದು ಸೀರಿಯಲ್​ ಟ್ವಿಸ್ಟ್​?

By Suchethana DFirst Published Jul 24, 2024, 4:25 PM IST
Highlights

ಮಾಧವ್​ ಮತ್ತು ತುಳಸಿಯ ವಿವಾಹ ವಾರ್ಷಿಕೋತ್ಸವದ ಅಂಗವಾಗಿ ಮನೆಯವರೆಲ್ಲರೂ ಸೇರಿ ಮತ್ತೊಮ್ಮೆ ಮದುವೆ ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ.
 

ಮಾಧವ ಮತ್ತು ತುಳಸಿಯ ಜೋಡಿಯೆಂದರೆ ಅದು ಎಲ್ಲರಿಗೂ ಏನೋ ಒಂದು ರೀತಿಯಲ್ಲಿ ಇಷ್ಟ. ಇವರಿಬ್ಬರ ನವಿರಾದ ಪ್ರೇಮಕಥೆಗೆ ಮನಸೋತವರೇ ಸೀರಿಯಲ್​ ಪ್ರೇಮಿಗಳು. ಮಕ್ಕಳ ಮದುವೆಯಾದ ಮೇಲೆ ತಾವು ಮದುವೆಯಾಗಿರುವ ಈ ಜೋಡಿಯ ಬಗ್ಗೆ ಆರಂಭದಲ್ಲಿ ಟೀಕಿಸಿದವರೂ ಇದೀಗ ಈ ಜೋಡಿಯನ್ನು ಒಪ್ಪಿಕೊಂಡಿದ್ದಾರೆ. ಈ ವಯಸ್ಸಿನಲ್ಲಿ ಮದ್ವೆಯಾಕೆ ಎಂದು ಟೀಕಿಸಿದವರಿಗೂ ಜೋಡಿ ಎಂದರೆ ಅಚ್ಚುಮೆಚ್ಚು. ಇವರಿಬ್ಬರ ಪ್ರೇಮಕ್ಕೆ ಸಾಟಿ ಯಾವುದೂ ಇಲ್ಲ. ಪ್ರೀತಿ ಎಂಬುದು ಕೇವಲ ದೈಹಿಕ ಕಾಮನೆಯಲ್ಲ, ಅದು ಮನಸ್ಸಿನ ಭಾವನೆ ಎನ್ನುವುದನ್ನು ತೋರಿಸಿಕೊಡುತ್ತಿದೆ ಈ ಜೋಡಿ. ಈಚೆಗಷ್ಟೇ ಈ ಜೋಡಿ ಗ್ರಾಮೀಣ ಸೊಗಡನ್ನು ತೋರಿಸಿಕೊಟ್ಟಿತು.  ತುಳಸಿ ಮತ್ತು ಮಾಧವ್​ ಟೂರ್​ಗೆ ಎಂದು ಹಳ್ಳಿಗೆ ಹೋಗಿದ್ದರು. ಅಲ್ಲಿ ಒರಳು ಕಲ್ಲಿನಿಂದ ಅಡುಗೆ ಮಾಡಿದ್ದಳು ತುಳಸಿ, ಬಾವಿಯಿಂದ ನೀರು ಸೇದುವುದು, ಬುತ್ತಿ ತೆಗೆದುಕೊಂಡು ಹೋಗುವುದು... ಇವೆಲ್ಲಾ ಹಲವು ಆಸೆಗಳನ್ನು ಹೊತ್ತಿರೋ ತುಳಸಿಯ ಆಸೆಗಳನ್ನು ಪೂರೈಸಿದ್ದ ಮಾಧವ್​. 

ಹೀಗೆ ಇವರಿಬ್ಬರ ಲವ್​ಸ್ಟೋರಿ ನೋಡುವುದಕ್ಕೇ ಅಂದ. ಮಾಧವ್​ಗಾಗಿ ತುಳಸಿ, ತುಳಸಿಗಾಗಿ ಮಾಧವ್​ ಎಂಬಂತೆ ಹೇಳಿಮಾಡಿಸಿದ ಈ ಜೋಡಿ ಈಗಷ್ಟೇ ಹಳ್ಳಿಯಲ್ಲಿ ಒಂದು ರೀತಿಯ ಹನಿಮೂನ್​ ಮುಗಿಸಿ ಬಂದಿರುವ ಜೋಡಿ ಮದುವೆಯಾಗಿ ಒಂದು ವರ್ಷವಾಗಿದೆ. ಸಾಮಾನ್ಯವಾಗಿ ಸೀರಿಯಲ್​  ಒಂದು ವರ್ಷ ಮುಗಿದರೂ, ಸೀರಿಯಲ್​ನಲ್ಲಿ ನಿನ್ನೆ-ಮೊನ್ನೆಯಷ್ಟೇ ಮದುವೆಯಾದಂತೆ ತೋರಿಸಲಾಗುತ್ತದೆ. ಆದರೆ ಅಪರೂಪಕ್ಕೆ ಶ್ರೀರಸ್ತು ಶುಭಮಸ್ತುವಿನಲ್ಲಿ ಶೀಘ್ರದಲ್ಲಿಯೇ ಮದುವೆಯಾಗಿ ಒಂದು ವರ್ಷವಾಗಿದೆ. ಇದೇ ಕಾರಣಕ್ಕೆ ಮದುವೆ ವಾರ್ಷಿಕೋತ್ಸವವನ್ನು ವಿಭಿನ್ನ ರೀತಿಯಲ್ಲಿ ಆಚರಿಸಲು ಮನೆಯವರೆಲ್ಲರೂ ಪ್ಲ್ಯಾನ್​ ಮಾಡಿದ್ದಾರೆ.

Latest Videos

ಚಂದನ್​ ಶೆಟ್ಟಿ ವಿರುದ್ಧ ಅಂದು ಹಾಗೆ ಮಾತಾಡಿದ್ದೇ ನನಗೆ ದೊಡ್ಡ ಬ್ರೇಕ್​ ಕೊಟ್ಟಿತು! Rapper ರಾಹುಲ್​ ಓಪನ್​ ಮಾತು

ಮಾಧವ್​ ಮತ್ತು ತುಳಸಿಯ ಮದುವೆಯಾದದ್ದೇ ವಿಚಿತ್ರ ಸನ್ನಿವೇಶದಲ್ಲಿ. ತುಳಸಿಯ ಮಾವ ದತ್ತ ಖುದ್ದು ಇಬ್ಬರನ್ನೂ ನಿಲ್ಲಿಸಿ ಮದುವೆ ಮಾಡಿಸಿದ್ದ. ಈ ಮದುವೆಯನ್ನು ದತ್ತ ಬಿಟ್ಟರೆ ಬೇರಾರೂ ನೋಡಿರಲಿಲ್ಲ. ಇದೇ ಕಾರಣಕ್ಕೆ ಇದೀಗ ಮನೆಯವರೆಲ್ಲರೂ ಸೇರಿ ಮತ್ತೊಮ್ಮೆ ಮದುವೆಯನ್ನು ಮಾಡಿಸುವ ಪ್ಲ್ಯಾನ್​ ಮಾಡಿದ್ದಾರೆ. ಒಂದು ವರ್ಷದ ಹಿಂದೆ ಮನೆಯವರಿಗೆ ಯಾರಿಗೂ ಬೇಡವಾಗಿದ್ದ ಈ ಜೋಡಿ ಶಾರ್ವರಿ, ಅಭಿಯನ್ನು ಹೊರತುಪಡಿಸಿ ಎಲ್ಲರ ಮನಸ್ಸನ್ನು ಕದ್ದಿದ್ದಾರೆ. ತುಳಸಿ ಎಂದರೆ ತಿರಸ್ಕಾರ ಮಾಡುತ್ತಿದ್ದ ಅವಿ ಕೂಡ ಅಮ್ಮ ಎಂದು ಒಪ್ಪಿಕೊಂಡಿದ್ದಾನೆ. ಅಪ್ಪನನ್ನು ಎಷ್ಟೋ ವರ್ಷಗಳ ಬಳಿಕ ಅಪ್ಪ ಎಂದು ಹೇಳಿದ್ದಾನೆ. ಇದೇ ವೇಳೆ ಅಮ್ಮನ ಮೇಲೆ ಪ್ರೀತಿ ತೋರುತ್ತಲೇ ಮುನಿಸೂ ತೋರುವ ಸಮರ್ಥ್​ ಕೂಡ ಇವರಿಬ್ಬರ ಮದುವೆಗೆ ಒಪ್ಪಿಗೆ ಸೂಚಿಸಿದ್ದಾನೆ. ಆದರೆ ಈಗ ಏನಿದ್ದರೂ ಕೋಪ ಇರುವುದು ಶಾರ್ವರಿ, ಅಭಿ ಮತ್ತು ದೀಪಿಕಾಗೆ. ಇವರೆಲ್ಲರೂ ಒಳಗೊಳಗೆ ಉರಿದುಕೊಳ್ಳುತ್ತಿದ್ದಾರೆ. ಆದರೆ ಮನೆಯವರ ಉಳಿದ ಸದಸ್ಯರ ಮುಂದೆ ಇವರ ಆಟ ನಡೆಯುತ್ತಿಲ್ಲ. ಆದ್ದರಿಂದ ಮುಂದೆ ಏನಾಗುತ್ತದೆ ಎನ್ನುವ ಕುತೂಹಲ ವೀಕ್ಷಕರಿಗೆ ಇದೆ. 

ಅಷ್ಟಕ್ಕೂ, ಅಪ್ಪ ಮತ್ತು ಮಗನನ್ನು ಒಂದು ಮಾಡಲು ತುಳಸಿ ಪಟ್ಟ ಪ್ರಯತ್ನ ಅಷ್ಟಿಷ್ಟಲ್ಲ.  ತಮಾಷೆ ಮಾಡುತ್ತಿದ್ದ ಸಂದರ್ಭದಲ್ಲಿ ತುಳಸಿಯನ್ನು ಅವಿ ತಳ್ಳಿಬಿಡುತ್ತಾನೆ. ಆಕೆ ಮೆಟ್ಟಿಲ ಮೇಲಿನಿಂದ ಬೀಳುತ್ತಾಳೆ. ಅವಳ ತಲೆಗೆ ಪೆಟ್ಟಾಗುತ್ತದೆ. ತನ್ನ ಈ ಗಾಯಕ್ಕೆ ಅವಿಯೇ ಕಾರಣ ಎಂದು ಆರೋಪ ಮಾಡುತ್ತಾಳೆ. ಅವಿ ಅವಳನ್ನು ಸಂತೈಸಲು ಎಷ್ಟೇ ಪ್ರಯತ್ನ ಪಟ್ಟರೂ ಅದು ಸಾಧ್ಯವಾಗುವುದಿಲ್ಲ. ಕೊನೆಗೆ ಅವನು ಇದರಲ್ಲಿ ನನ್ನ ತಪ್ಪು ಇಲ್ಲ, ಅಕಸ್ಮಾತ್ತಾಗಿದ್ದು ಎಂದು ತುಳಸಿಗೆ ಮನವರಿಕೆ ಮಾಡಿಕೊಡುತ್ತಾನೆ. ತಾನು ಅವನ ಬಳಿ ಮಾತನಾಡದಿದ್ದ ಕಾರಣ ನೊಂದುಕೊಂಡಿದ್ದ ಅವಿಯನ್ನು ಉದ್ದೇಶಿಸಿ ತುಳಸಿ, ನನಗೆ ಹೀಗೆ ಆಗುವುದರಲ್ಲಿ ನಿನ್ನ ತಪ್ಪಿಲ್ಲ ಎನ್ನುವುದು ನನಗೆ ಗೊತ್ತು. ನಿನಗೆ ಇದರ ಅರಿವು ಆಗಲಿ ಎಂದೇ ನಾನು ನಿನ್ನ ಬಳಿ ಮಾತು ಬಿಟ್ಟಿದ್ದು. ಒಂದೆರಡು ದಿನ ಮಾತನಾಡದೇ ಇದ್ದುದಕ್ಕೆ ಇಷ್ಟು ನೋವು ಪಟ್ಟುಕೊಂಡಿಯಲ್ಲ. 15 ವರ್ಷಗಳಿಂದ ನೀನು ಅಪ್ಪನ ಬಳಿ ಅವರದ್ದಲ್ಲದ ತಪ್ಪಿಗೆ  ಮಾತನಾಡುತ್ತಿಲ್ಲ. ಅವರಿಗೆ ಹೇಗೆ ಅನ್ನಿಸಬೇಡ ಎಂದಾಗ ಅವಿಗೆ ಅವನ ತಪ್ಪು ಅರ್ಥವಾಗುತ್ತದೆ. ಅಪ್ಪನನ್ನು ಅಪ್ಪಾ ಎನ್ನುತ್ತಲೇ ತನ್ನ ತಪ್ಪನ್ನು ಕ್ಷಮಿಸುವಂತೆ ಕೇಳಿಕೊಳ್ಳುತ್ತಾನೆ. 
 

ಕುಂಕುಮ, ಅರಿಶಿಣ, ಮೆಹಂದಿ, ಶಾದಿ... ಎಂದು ರೀಲ್ಸ್​ ಮಾಡಿ ಫ್ಯಾನ್ಸ್​ ತಲೆಗೆ ಹುಳುಬಿಟ್ಟ ಸೀತಾರಾಮ ಅಶೋಕ!

click me!