ರಾಮಾಯಣದ 'ರಾಮ' ಅರುಣ್‌ ಗೋವಿಲ್‌, ಕಂಡೊಡನೆ ಭಾವುಕಳಾಗಿ ಕಾಲಿಗೆ ಬಿದ್ದ ಮಹಿಳೆ, ವಿಡಿಯೋ ವೈರಲ್‌!

By Santosh NaikFirst Published Oct 1, 2022, 4:09 PM IST
Highlights

ದೇಶದಲ್ಲಿ ಪ್ರಖ್ಯಾತಿ ಪಡೆದಿದ್ದ ರಾಮಾಯಣ ಧಾರವಾಹಿಯಲ್ಲಿ ಅರುಣ್‌ ಹೋವಿಲ್‌, ಕೇವಲ ರಾಮ ಪಾತ್ರವನ್ನು ಮಾಡಿದ್ದಲ್ಲದೆ, ಪಾತ್ರವನ್ನೇ ಜೀವಿಸಿದ್ದರು. ರಾಮಾಯಣದಲ್ಲಿ ಇವರ ಭಗವಾನ್‌ ರಾಮನ ಪಾತ್ರವನ್ನು ನೋಡಿದವರು, ಇವರನ್ನು ದೇವರ ರೀತಿಯಲ್ಲೇ ಕಾಣುತ್ತಿದ್ದಾರೆ ಎನ್ನುವುದಕ್ಕೆ ಸಾಕ್ಷ್ಯವಾಗಿ ಒಂದು ವಿಡಿಯೋ ವೈರಲ್‌ ಆಗಿದೆ. ಇಂದಿಗೂ ಅರುಣ್‌ ಗೋವಿಲ್‌ ಅವರ ಪಾತ್ರ ಅಭಿಮಾನಿಗಳ ಮನದಲ್ಲಿ ಅಚ್ಚಳಿಯದೇ ಉಳಿದುಕೊಂಡಿದೆ. ಇತ್ತೀಚೆಗೆ ಅವರನ್ನು ವಿಮಾನನಿಲ್ದಾಣದಲ್ಲಿ ಕಂಡ ಮಹಿಳೆಯೊಬ್ಬರು ಅವರ ಕಾಲಿಗೆ ಬಿದ್ದು ನಮಸ್ಕರಿಸಿದ್ದಾರೆ. ಈ ವಿಡಿಯೋ ದೊಡ್ಡ ಮಟ್ಟದಲ್ಲಿ ವೈರಲ್‌ ಆಗಿದೆ.

ನವದೆಹಲಿ (ಅ.1): ಅದೊಂದು ಕಾಲವಿತ್ತು. ಟಿವಿಯಲ್ಲಿ ರಾಮಾಯಣವನ್ನು ನೋಡಲು ಜನ ಇಡೀ ದಿನ ಕಾಯುತ್ತಿದ್ದರು. ಇಡೀ ದಿನದಲ್ಲಿ ಪ್ರೇಕ್ಷಕರು ತಮ್ಮ ಯಾವುದೇ ಕೆಲಸ ಬಿಟ್ಟರೂ, ರಾಮಾಯಣವನ್ನು ಟಿವಿಯಲ್ಲಿ ವೀಕ್ಷಿಸೋದಂತೂ ಮರೆಯುತ್ತಿರಲಿಲ್ಲ. ರಮಾನಂದ್‌ ಸಾಗರ್‌ ನಿರ್ದೇಶನ ಮಾಡಿದ್ದ ರಾಮಾಯಣ ಧಾರವಾಹಿ 1987ರಲ್ಲಿ ಅಂದಾಜು ಒಂದೂವರೆ ವರ್ಷಗಳ ಕಾಲ ಪ್ರಸಾರವಾಗಿತ್ತು. ಈ ಧಾರವಾಹಿಯಲ್ಲಿ ಅರುಣ್‌ ಗೋವಿಲ್‌, ರಾಮನ ಪಾತ್ರವನ್ನು ನಿರ್ವಹಿಸಿದ್ದರೆ, ದೀಪಿಕಾ ಚಿಖಾಲಿಯಾ ಸೀತೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ರಾಮಾಯಣ ಧಾರವಾಹಿ ಇವರಿಬ್ಬರಿಗೂ ದೊಡ್ಡ ಪ್ರಮಾಣದ ಜನಪ್ರಿಯತೆಯನ್ನು ನೀಡಿತು. ಇಂದಿಗೂ ಅವರಿಬ್ಬರೂ ಜನ ರಾಮ, ಸೀತೆ ಎಂದೇ ಗುರುತುಹಿಡಿಯುತ್ತಾರೆ. ಇತ್ತೀಚೆಗೆ ರಾಮನ ಪಾತ್ರಧಾರಿಯಾಗಿದ್ದ ಅರುಣ್‌ ಗೋವಿಲ್‌ ಅವರನ್ನು ವಿಮಾನನಿಲ್ದಾಣದಲ್ಲಿ ನೋಡಿದ್ದ ಮಧ್ಯವಯಸ್ಕ ಮಹಿಳೆಯೊಬ್ಬಳು ಅವರ ಕಾಲಿಗೆ ಬಿದ್ದು ನಮಸ್ಕಾರ ಪಡೆದಿದ್ದಾರೆ. ಈ ವೇಳೆ ಅರುಣ್‌ ಗೋವಿಲ್‌ ಬೇಡ ಬೇಡ ಎಂದು ನಿರಾಕರಿಸಿದರೂ, ಕಾಲಿಗೆ ಬಿದ್ದ ಆಕೆಯನ್ನು ಸಂತೈಸಿದ ವಿಡಿಯೋ ವೈರಲ್ ಆಗಿದೆ. ಭಾವುಕಳಾಗಿದ್ದ ಆಕೆ, ಅರುಣ್‌ ಗೋವಿಲ್‌ ಅವರಿಗೆ ಕೈ ಮುಗಿಯುತ್ತಲೇ ಫೋಟೋಗೆ ಪೋಸ್‌ ನೀಡಿದ್ದಾರೆ.

Heart touching video … pic.twitter.com/uk21dK0DLv

— Siddharth Bakaria Himachal 🇮🇳 (@Sidbakaria)


ರಾಮಾಯಣದಲ್ಲಿ ಅರುಣ್ ಗೋವಿಲ್ ರಾಮನ ಪಾತ್ರವನ್ನು ನಿರ್ವಹಿಸಿದ್ದು ಮಾತ್ರವಲ್ಲದೆ ಆ ಪಾತ್ರವನ್ನೇ ಜೀವಿಸಿದ್ದರು. ಧಾರವಾಹಿಯಲ್ಲಿ ರಾಮನ ಪಾತ್ರವನ್ನು ನೋಡಿದ ಜನರು ಅವರನ್ನು ದೇವರು ಎಂದೇ ಭಾವಿಸಿ ನೋಡಿದ್ದಾರೆ. ವರ್ಷಗಳೇ ಕಳೆದರೂ ಅರುಣ್ ಗೋವಿಲ್ ಮೇಲಿನ ಪ್ರೇಕ್ಷಕರ ಪ್ರೀತಿ ಕಡಿಮೆಯಾಗಿಲ್ಲ. ಇದಕ್ಕೆ ಸಾಕ್ಷಿ ವೈರಲ್ ಆಗಿರುವ ವಿಡಿಯೋ. ರಾಮಾಯಣ ಖ್ಯಾತಿಯ ಅರುಣ್ ಗೋವಿಲ್ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ವೈರಲ್ ವಿಡಿಯೋದಲ್ಲಿ ಅರುಣ್ ಗೋವಿಲ್ ಅವರ ಕಾಲಿಗೆ ಮಹಿಳೆಯೊಬ್ಬರು ನಮಸ್ಕರಿಸುತ್ತಿರುವ ವಿಡಿಯೋ ಆಗಿದೆ. ಆಕೆ ನಮಸ್ಕರಿಸಿದ್ದು ನನಗಲ್ಲ, ರಾಮನಿಗೆ ಎಂದುಕೊಂಡೇ ಆಕೆಯನ್ನು ಸಂತೈಸಿದ್ದಾರೆ.

ವಿಮಾನ ನಿಲ್ದಾಣದಲ್ಲಿ ಅರುಣ್ ಗೋವಿಲ್ ಅವರನ್ನು ನೋಡಿದ ಮಹಿಳೆ ಭಾವುಕರಾದರು. ಶ್ರೀರಾಮನು ತನಗೆ ದರ್ಶನ ನೀಡಲು ಬಂದಿದ್ದಾನೆ ಎಂದು ಮಹಿಳೆಗೆ ಅನಿಸಿದೆ. ತಡಮಾಡದೆ, ಅರುಣ್‌ ಗೋವಿಲ್‌ ಅವರ ಕಾಲಿಗೆ ಬಿದ್ದು ಕಣ್ಣೀರಿಡುತ್ತಲೇ ನಮಸ್ಕಾರ ಮಾಡಿದರು. ಆರಂಭದಲ್ಲಿ ಏನೆಲ್ಲಾ ಇದು, ಹೀಗೆಲ್ಲಾ ಮಾಡಬೇಡಿ ಎಂದ ಅರುಣ್‌ ಗೋವಿಲ್‌, ಕೊನೆಗೆ ಆಕೆಯ ಮನಸ್ಸಿನಲ್ಲಿ ರಾಮನಲ್ಲಿರುವ ಭಕ್ತಿಯನ್ನು ಕಂಡು, ಆಕೆಗೆ ಅಪ್ಪುಗೆ ನೀಡಿದರು. ಈ ನೋಟ ನಿಜವಾಗಿಯೂ ಅದ್ಭುತವಾಗಿ ಕಂಡಿತು. ರಾಮಲೀಲಾ (Ramlila) ಕಾರ್ಯಕ್ರಮಕ್ಕಾಗಿ ಅರುಣ್‌ ಗೋವಿಲ್‌ (Arun Govil), ಮಹಾರಾಷ್ಟ್ರದ ಸಂಭಾಜಿನಗರಕ್ಕೆ ಆಗಮಿಸಿದ್ದರು ಈ ವೇಳೆ ಈ ಘಟನೆ ನಡೆದಿದೆ. ಏರ್‌ಪೋರ್ಟ್‌ನಲ್ಲಿ ಸಾಗುತ್ತಿದ್ದ ವೇಳೆ, ಅವರ ಅಭಿಮಾನಿಯೊಬ್ಬರು ಈ ರೀತಿ ಮಾಡಿದ್ದಾರೆ.

ಸೀತೆ, ಹನುಮಂತ, ಕೃಷ್ಣ, ದ್ರೌಪದಿ ನಂತರ ರಾಮನೂ ಬಿಜೆಪಿಗೆ!

ರಾಮನ ಪಾತ್ರಧಾರಿ ಅರುಣ್‌ ಗೋವಿಲ್‌ಗೆ ಮಹಿಳೆ ತೋರಿಸಿದ ಭಕ್ತಿ ಎಲ್ಲರ ಹೃದಯವನ್ನು ಆರ್ದ್ರ ಮಾಡಿದೆ. ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ (Social Media) ಶೇರ್‌ ಆದ ಬಳಿಕ ದೊಡ್ಡ ಮಟ್ಟದಲ್ಲಿ ವೈರಲ್‌ ಆಗಿದೆ. ಅರುಣ್‌ ಗೋವಿಲ್‌ ಅವರನ್ನು ನಿಜವಾಗಿಯೇ ರಾಮ (Rama) ಎಂದುಕೊಂಡಿದ್ದು ಇದೇ ಮೊದಲೇನಲ್ಲ. ಹಿಂದೆಯೂ ಅನೇಕ ಬಾರಿ ಈ ಘಟನೆಗಳಾಗಿದ್ದವು. ಇದನ್ನು ಅರುಣ್‌ ಗೋವಿಲ್‌, ಸಾಕಷ್ಟು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಅದರಲ್ಲೂ ರಾಮಾಯಣ ಧಾರವಾಹಿಯ ಸಮಯದಲ್ಲಿ ಜನರಿಂದ ಇಂಥ ಸಾಕಷ್ಟು ಭಕ್ತಿಪೂರ್ವಕ ಘಟನೆಗಳನ್ನು ಎದುರಿಸಿದ್ದೆ ಎಂದಿದ್ದಾರೆ.

ಶ್ರೀರಾಮನನ್ನು ಮನೆ ಮನೆಗೆ ತಲುಪಿಸಿದ ನಟರು ಇವರು!

ರಾಮಾಯಣದ ನಂತರ, ಜನರು ತಮ್ಮಲ್ಲಿ ಶ್ರೀರಾಮನನ್ನು ಕಂಡಿದ್ದಾರೆ. ಹಿಂದೊಮ್ಮೆ ಅರುಣ್‌ ಗೋವಿಲ್‌, ಸಿಗರೇಟು ಸೇದುತ್ತಿದ್ದನ್ನು ಯಾರೋ ಒಬ್ಬರು ನೋಡಿದ್ದರು. ಆ ಬಳಿಕ ಅರುಣ್‌ ಗೋವಿಲ್‌ ಬಗ್ಗೆ ಇಲ್ಲಸಲ್ಲದನ್ನು ಈ ವ್ಯಕ್ತಿ ಹೇಳಲು ಆರಂಭಿಸಿದ ಬಳಿಕ ಅರುಣ್‌ ಗೋವಿಲ್‌, ಜನರ ಪ್ರೀತಿಯನ್ನು ಕಂಡು ಸಿಗರೇಟ್‌ ಸೇದೋದನ್ನೇ ಬಿಟ್ಟಿದ್ದರು.

click me!