
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕನ್ಯಾಕುಮಾರಿ ಧಾರಾವಾಹಿ ವಾರ ವಾರವೂ ವಿಭಿನ್ನ ಟ್ವಿಸ್ಟ್ ನೀಡುವ ಮೂಲಕ ಟಿಆರ್ಪಿಯಲ್ಲಿ ಮೊದಲ ಸ್ಥಾನ ಪಡೆಯುತ್ತಿದೆ. ಪ್ರತಿಯೊಂದು ಪಾತ್ರಕ್ಕೂ ಪ್ರಾಮುಖ್ಯತೆ ನೀಡಿರುವ ಧಾರಾವಾಹಿ ಇದು. ಚರಣ್- ಕನ್ನಿಕಾ ಮಾತ್ರ ಹೈಲೈಟ್ ಮಾಡ್ತಿದ್ದಾರೆ ಅನ್ನೊ ಭಾವನೆ ವೀಕ್ಷಕರಿಗೆ ಬರುವುದಿಲ್ಲ. ಜೋಗಿ ಹಟ್ಟಿ ನಮ್ಮ ಮನೆ ಪಕ್ಕಾನೇ ಇರುವುದು ಎನ್ನುವಂತೆ ಭಾಸವಾಗುತ್ತದೆ. ಒಟ್ಟಿನಲ್ಲಿ ರಾತ್ರಿ ಆದರೆ ಕನ್ಯಾಕುಮಾರಿ ನೋಡಬೇಕಪ್ಪ ಎಂದು ಜನರು ಕಾಯುತ್ತಾರೆ.
ಈ ಧಾರಾವಾಹಿಯಲ್ಲಿ ಚರಣ್ ಹಿರಿಯ ಸಹೋದರಿಯಾಗಿ ಅಭಿನಯಿಸುತ್ತಿರುವ ಭಾಗ್ಯಲಕ್ಷ್ಮಿ ಉರ್ಫ್ ಸಹಾನ ಅಣ್ಣಪ್ಪ ನಾನು ಇನ್ಮುಂದೆ ಈ ತಂಡದ ಜೊತೆ ಅಭಿನಯಿಸುತ್ತಿಲ್ಲ ಎಂದು ಭಾವುಕ ಪೋಸ್ಟ್ ಹಾಕಿದ್ದಾರೆ. ತಮ್ಮ ಜೊತೆ ಕೆಲಸ ಮಾಡಿರುವ ಪ್ರತಿಯೊಬ್ಬರನ್ನು ಟ್ಯಾಗ್ ಮಾಡಿ ಥ್ಯಾಂಕ್ಸ್ ಹೇಳಿದ್ದಾರೆ.
ಸಹಾನ ಮಾತು:
'ಭಾಗ್ಯ ಲಕ್ಷ್ಮಿ ಪಾತ್ರಕ್ಕೆ ಪರದೆ ಎಳೆಯುವ ಸಮಯ ಬಂದಿದೆ. ನಿಮ್ಮಲ್ಲರ ಪ್ರೀತಿ ಮತ್ತು ಪ್ರೋತ್ಸಾಹಕ್ಕೆ ಧನ್ಯವಾದಗಳು. ನಾನು ಮುಂಬರುವ ದಿನಗಳಲ್ಲಿ ಈ ಶೋನಲ್ಲಿ ಇರುವುದಿಲ್ಲ. ಕಾರಣ ಏನೆಂದು ನನ್ನ ತಂಡಕ್ಕೆ ಮತ್ತು ನಿರ್ಮಾಣ ಸಂಸ್ಥೆಗೆ ತಿಳಿಸಿರುವೆ. ನನ್ನ ಪಾತ್ರವನ್ನು ಅದ್ಭುತವಾಗಿ ಬರೆದಿರುವ ರಘು ಚರಣ್ ಅವರಿಗೆ ಧನ್ಯವಾದಗಳು, ನಾನು ಪಾತ್ರಕ್ಕೆ ನ್ಯಾಯ ಕೊಟ್ಟಿಲ್ಲ ಅಂದ್ರೆ ಕ್ಷಮಿಸಿ. ಜೋಸೆಫ್ ನಿಮ್ಮ ಮೇಲೆ ನನಗೆ ಅಪಾರವಾದ ಗೌರವವಿದೆ. ನಾನು ಜೋಗಿ ಹಟ್ಟಿ ಕುಟುಂಬವನ್ನು ಮಿಸ್ ಮಾಡಿಕೊಳ್ಳುತ್ತೀನಿ. ಪ್ರದೀಪ್ ತಿಪಟೂರು ನಿಮ್ಮಿಂದ ನಾನು ಅನೇಕ ವಿಚಾರಗಳನ್ನು ಕಲಿತಿರುವೆ, ನಿಮ್ಮ ಸಂಸ್ಥೆಯಿಂದ ಅನೇಕರಿಗೆ ವಿದ್ಯೆ ಹಂಚುತ್ತಿರುವುದಕ್ಕೆ ಸಂತೋಷವಾಗುತ್ತಿದೆ. ಯಮುನಾ ಶ್ರೀನಿಧಿ ಪ್ರಪಂಚದ ಹಾಟ್ ಅಮ್ಮ ನನಗೆ ಸಿಕ್ಕಿದ್ದರು. ಚಿತ್ರೀಕರಣದ ವೇಳೆ lays ಮತ್ತು Dorritoes ತಿನ್ನುವುದನ್ನು ಮಿಸ್ ಮಾಡಿಕೊಳ್ಳುತ್ತೀನಿ. ನಿಮ್ಮ ಕೆಲಸವನ್ನು ಹೀಗೆ ಮುಂದುವರೆಸಿ ಸಮಾಜಕ್ಕೆ ಒಳ್ಳೆಯದಾಗಲಿ. ಹರ್ಷ ಅರ್ಜುನ್ ನಮ್ಮ ಸುತ್ತಲಿರುವ ಅತಿ ಹೆಚ್ಚು ಪಾಸಿಟಿವ್ ವ್ಯಕ್ತಿ ಅಂದ್ರೆ ನೀವೇ. ನನ್ನ ಸಹೋದರಿ ಐಶುಗೆ ಕಿರಿಕಿರಿ ಕೊಡುವುದು ಮಿಸ್ ಮಾಡ್ತೀನಿ. ನನ್ನ ಮಗಳ ಪಾತ್ರದಲ್ಲಿ ಕಾಣಿಸಿಕೊಂಡ ಸಾನ್ವಿ ನಿನಗೆ ಒಳ್ಳೆ ಪ್ರತಿಭೆ ಇದೆ ಮಗಳೆ. ಈ ಅಮ್ಮನಿಗೆ ಹೆಮ್ಮೆ ಆಗುವಂತೆ ಗುರುತಿಸಿಕೋ. ಪಾತ್ರ ಸೃಷ್ಟಿಸುವಾಗ ನನ್ನನ್ನು ಮೊದಲು ನೆನಪಿಸಿಕೊಂಡ ಪ್ರೀಥಮ್ ಸರ್ಗೆ ಧನ್ಯವಾದಗಳು. ಮುಂಬರುವ ಹೊಸ ಕಲಾವಿದರಿಗೆ ಇದೇ ರೀತಿ ಪ್ರೀತಿ ಹಂಚಿ' ಎಂದು ಸಹಾನ ಅಣ್ಣಪ್ಪ ಬರೆದುಕೊಂಡಿದ್ದಾರೆ.
ಚರಣ್ ತಾಯಿ ಪಾತ್ರದಲ್ಲಿ ನಟಿ ಯುಮುನಾ ಶ್ರೀನಿಧಿ ನಟಿಸಿದ್ದಾರೆ. ಪಾತ್ರದ ಹೆಸರು ಧನಲಕ್ಷ್ಮಿ ಆಗಿದ್ದು, ಬಡತನ ಕುಟುಂಬ ಇವರದ್ದಾಗಿರುತ್ತದೆ. ಎಲ್ಲಾ ಭಾವನೆಗಳನ್ನು ಅದ್ಭುತವಾಗಿ ಅಭಿನಯಿಸುವ ನಟಿ ಯಮುನಾ ಅವರ ಪಾತ್ರಕ್ಕೆ ಪ್ರತಿಯೊಬ್ಬ ಗೃಹಿಣಿಯರೂ ಕನೆಕ್ಟ್ ಆಗುತ್ತಾರೆ. 'ನಾವು ನಿರ್ವಹಿಸುವ ಪಾತ್ರಕ್ಕೆ ವೀಕ್ಷಕರು ತಮ್ಮ ಆಶೀರ್ವಾದ ಮತ್ತು ಪ್ರೀತಿಯನ್ನು ನೀಡಿದಾಗ ಅದು ನಮಗೆ ಪೂರ್ಣತೆಯ ಭಾವನೆಯನ್ನು ನೀಡುತ್ತದೆ. ಕನ್ಯಾಕುಮಾರಿ ಧಾರಾವಾಹಿಯಲ್ಲಿ ನನ್ನ ಧನಲಕ್ಷ್ಮಿ ಪಾತ್ರವನ್ನು ಬೆಂಬಲಿಸಿದ್ದಕ್ಕಾಗಿ ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು. ಧನಲಕ್ಷ್ಮಿ ಪಕ್ಕಾ lower middle class ಮುಗ್ಧ ಮಹಿಳೆ ಆದರೆ ದೊಡ್ಡ ಜವಾಬ್ದಾರಿ ಹೊಂದಿರುತ್ತಾಳೆ. ಅವಳು ಗಂಡ ಮತ್ತು ಕುಟುಂಬ ಆಕೆಯ ಪ್ರಪಂಚ.ಆಕೆ ಗಂಡನಿಗೆ ಜವಾಬ್ದಾರಿ ಇಲ್ಲದ ಕಾರಣ ಇಡೀ ಮನೆ ಅವಳ ಬೆನ್ನು ಮೇಲಿರುತ್ತದೆ. ಎಲ್ಲಾ ಕಷ್ಟಗಳನ್ನು ಎದುರಿಸಿ ಮನೆ ಸಾಗಿಸುವ ಮಹಿಳೆ ಈಕೆ' ಎಂದು ಯಮುನಾ ಶ್ರೀನಿಧಿ ಬರೆದುಕೊಂಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.