Jothe jotheyali: ರಾಜನಂದಿನಿಗೆ ಹೊಸ ಆರ್ಯವರ್ಧನ್! ಒಪ್ಪಿಕೊಳ್ಳದ ವೀಕ್ಷಕರು..

By Suvarna NewsFirst Published Sep 23, 2022, 3:51 PM IST
Highlights

ರಾಜನಂದಿನಿಯಲ್ಲಿ ಆರ್ಯವರ್ಧನ್ ಇಲ್ಲದಿರೋ ಸೂತಕದ ಛಾಯೆ ಮಡುಗಟ್ಟಿರುವಾಗಲೇ ಹೊಸ ಆರ್ಯವರ್ಧನ್ ಎಂಟ್ರಿ ಆಗಿದೆ. ಅನುಮಾನ, ಅಚ್ಚರಿಯಲ್ಲಿ ರಾಜನಂದಿನಿಯಲ್ಲಿ ಆರ್ಯವರ್ಧನ ಓಡಾಡುತ್ತಿದ್ದಾನೆ. ಅನು ಬಗ್ಗೆ ಆತನೊಳಗೊಂದು ರೊಮ್ಯಾಂಟಿಕ್ ಫೀಲ್ ಹರಿದಾಡುತ್ತಿರುವ ಹಾಗಿದೆ. ಆದರೆ ವೀಕ್ಷಕರು ಮಾತ್ರ ಹೊಸ ಆರ್ಯವರ್ಧನ್ ಒಪ್ಪಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಜೊತೆ ಜೊತೆಯಲಿ' ಸೀರಿಯಲ್ ಹೊಸ ಟ್ವಿಸ್ಟ್, ಹೊಸ ಕಥೆಯೊಂದಿಗೆ ಮುಂದುವರಿಯುತ್ತಿದೆ. ಆದರೆ ಇನ್ನೂ ಅನಿರುದ್ಧ ನಿರ್ವಹಿಸುತ್ತಿದ್ದ ಆರ್ಯವರ್ಧನ್ ಪಾತ್ರವನ್ನೇ ನೆನಪಿಸಿಕೊಳ್ಳುತ್ತಿರುವ ವೀಕ್ಷಕರು ಹೊಸ ಆರ್ಯವರ್ಧನ್‌ನನ್ನು ಒಪ್ಪಿಕೊಂಡ ಹಾಗಿಲ್ಲ. ಆರ್ಯವರ್ಧನ್ ಅಂದುಕೊಂಡು ಅನಿರುದ್ಧ ಫೋಟೋಗೆ ಮಾಲೆ ಹಾಕಿರೋದಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಅನಿರುದ್ಧ ಅವರನ್ನು ಸೀರಿಯಲ್‌ನಿಂದ ಆಚೆ ಹಾಕಿರುವಾಗ ಅವರ ಫೋಟೋಗೆ ಮಾಲೆ ಹಾಕಿ ಬಳಸುತ್ತಿರೋದು ತಪ್ಪು ಅನ್ನೋ ಥರದ ಮಾತುಗಳನ್ನು ವೀಕ್ಷಕರು ಹೇಳುತ್ತಿದ್ದಾರೆ. ಅಸಾಮಾಧಾನದ ಮಾತುಗಳೂ ಕೇಳಿಬರುತ್ತಿವೆ. ಇನ್ನೊಂದೆಡೆ ಜೊತೆ ಜೊತೆಯಲಿ ಸೀರಿಯಲ್‌ನಲ್ಲಿ ದೊಡ್ಡ ಬದಲಾವಣೆಯಾಗಿದೆ. ಮೂಲದಲ್ಲಿ ಸುಭಾಷ್ ದೇಸಾಯಿ ಆಗಿರುವ ಆರ್ಯವರ್ಧನ್ ನ ಮುಖ ಆಕ್ಸಿಡೆಂಟ್ ಬಳಿಕ ಸಂಪೂರ್ಣ ಬದಲಾಯಿಸಲಾಗಿದೆ. ನೀರಿಗೆ ಬಿದ್ದು ಮೃತಪಟ್ಟ ಸಹೋದರ ವಿಶ್ವಾಸ್ ದೇಸಾಯಿ ಮುಖವನ್ನೇ ಆರ್ಯವರ್ಧನ್‌ಗೆ ಜೋಡಿಸಲಾಗಿದೆ. ಆದರೆ ಆರ್ಯವರ್ಧನ್‌ಗೆ ಪೂರ್ತಿ ಹಿಂದಿನ ನೆನಪಿಲ್ಲ. ಆ ನೆನಪನ್ನು ಮರಳಿ ತರುವುದಕ್ಕೋಸ್ಕರ ಅವನ ತಾಯಿ ಪ್ರಿಯದರ್ಶಿನಿ ಆತನನ್ನು ರಾಜನಂದಿನಿಗೆ ಕರೆತಂದಿದ್ದಾಳೆ. ಇಲ್ಲಿ ಮುಂದೇನಾಗುತ್ತೆ ಅನ್ನೋದೇ ಕುತೂಹಲಕರ ಘಟ್ಟ.

ಹಾಗೆ ನೋಡಿದರೆ ರಾಜನಂದಿನಿಯಲ್ಲಿ ಇರುವ ಎಲ್ಲರೂ ಆರ್ಯವರ್ಧನ್ ಸತ್ತಿದ್ದಾನೆ ಎಂದೇ ಭಾವಿಸಿದ್ದಾರೆ. ಆತನ ಅಂತ್ಯಸಂಸ್ಕಾರ ಕೂಡ ಮಾಡಲಾಗಿದೆ. ಈ ಕಾರಣದಿಂದ ರಾಜನಂದಿನಿ ವಿಲಾಸದಲ್ಲಿ ಸೂತಕದ ಛಾಯೆ ಮನೆ ಮಾಡಿದೆ. ಆರ್ಯವರ್ಧನ್ ಮೃತಪಟ್ಟಿದ್ದಾನೆ ಎಂಬುದನ್ನು ಅನು ಬಳಿ ಒಪ್ಪಿಕೊಳ್ಳೋಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ, ಮನೆಯಲ್ಲಿ ಆರ್ಯವರ್ಧನ್ ಫೋಟೋಗೆ ಹಾಕಿದ್ದ ಹಾರವನ್ನು ಅನು ತೆಗೆದಿದ್ದಾಳೆ. ದೇವರಿಗೆ ದೀಪ ಹಚ್ಚಿದ್ದಾಳೆ. ಆಕೆಯ ತಾಯಿ ಸೂತಕದ ಮನೆಯಲ್ಲಿ ಈ ರೀತಿ ಎಲ್ಲ ಮಾಡಬಾರದು ಅಂದರೂ ತನ್ನ ಮನಃಸಮಾಧಾನಕ್ಕಾಗಿ ತಾನು ಈ ರೀತಿ ಮಾಡುತ್ತಿರುವುದಾಗಿ ಅನು ಹೇಳಿದ್ದಾಳೆ.

Bigg Boss Kannada 9; ಮನೆಯ ಫೋಟೋ ರಿವೀಲ್, ಏನೂ ಬದಲಾಗಿಲ್ಲ ಎಂದ ವೀಕ್ಷಕರು

ಜೊತೆಗೆ ಹಿಂದಿನ ನವರಾತ್ರಿ (Navratri) ಹಬ್ಬದಲ್ಲಿ ಆರ್ಯನ ಜೊತೆ ಕಳೆದ ಕ್ಷಣಗಳನ್ನು ನೆನಪು ಮಾಡಿಕೊಳ್ಳುತ್ತಾಳೆ. ಆತನ ನೆನಪುಗಳೇ ಆಕೆಯನ್ನು ನಿರಂತರವಾಗಿ ಕಾಡುತ್ತಿದೆ. ಆದರೆ ಆಕೆ ಜೀವ ಕಳೆದುಕೊಳ್ಳುವ ಯೋಚನೆ ಮಾಡಿಲ್ಲ. ಬದಲಿಗೆ ರಾಜನಂದಿನಿ ಇಲ್ಲದೆ ಆರ್ಯ ಸರ್ 20 ವರ್ಷ ಇದ್ದರು. ಬಹುಶಃ ನಾನು ಆ ರೀತಿಯೇ ಬದುಕಬೇಕು ಎಂದು ದೇವರು ಬಯಸಿದಂತಿದೆ. ನಾನು ಬದುಕಿ ತೋರಿಸುತ್ತೇನೆ. ಆರ್ಯ ಸರ್ ಹೇಗೆ ಬದುಕಬೇಕು ಎಂಬುದು ಹೇಳಿಕೊಟ್ಟು ಹೋಗಿದ್ದಾರೆ. ನಾನು ಹುಟ್ಟುವ ಮಗುವಿಗೋಸ್ಕರ ಬದುಕುತ್ತೇನೆ ಎನ್ನುತ್ತಿದ್ದಾಳೆ.

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

 

ಆ್ಯಂಕರ್ ಸುಷ್ಮಾ ರಾವ್ ಸೀರಿಯಲ್‌ಗೆ ರೀ ಎಂಟ್ರಿ! ಶೀಘ್ರದಲ್ಲಿ ಭಾಗ್ಯಲಕ್ಷ್ಮಿ ಆರಂಭ

ಇದರ ನಡುವೆಯೇ ರಾಜನಂದಿನಿಗೆ ಹೊಸ ಆರ್ಯವರ್ಧನನ ಆಗಮನವಾಗಿದೆ. ಆ ಮನೆಯ ಎದುರು ಕಾರಿಂದಿಳಿಯುತ್ತಿದ್ದ ಹಾಗೇ ಅವನ ಮನಸ್ಸಲ್ಲಿ ಅನು ಜೊತೆಗೆ ಕಳೆದ ಪ್ರೇಮದ ದಿನಗಳು ಹಾದುಹೋಗುತ್ತವೆ. ಮನೆಯೊಳಗೆ ಬರುತ್ತಿರುವ ಹಾಗೆ ಆರತಿ ತಟ್ಟೆ ಕೈಯಲ್ಲಿ ಹಿಡಿದು ನಿಂತಿರುವ ಅನುವೇ ಎದುರು ನಿಂತಿದ್ದಾಳೆ. ತಾಯಿ ಪ್ರಿಯದರ್ಶಿನಿಗೆ ಶಾರದಾ ದೇವಿಯ ಸಮಾಧಾನ ಸಿಗುತ್ತೆ. ಅವರು ಮನಸ್ಸಿಗೆ ಬಂದಷ್ಟು ದಿನ ಈ ಮನೆಯಲ್ಲಿ ಅವರದೇ ಮನೆ ಅನ್ನೋ ಥರ ಇರಬಹುದು ಅನ್ನುವ ಅನುಮತಿಯೂ ಸಿಗುತ್ತದೆ. ಮನೆಯೊಳಗೆ ಬರುವ ಆರ್ಯವರ್ಧನ ಅಭ್ಯಾಸ ಬಲದಿಂದ ನೇರ ತನ್ನ ಕೋಣೆಗೆ ಹೋಗುತ್ತಾನೆ. ಕೆಲಸದಾಕೆ ಆತನನ್ನು 'ಸರ್' ಅಂತ ಕರೆದಾಗ ಸರಕ್ಕನೆ ತಿರುಗಿ ನೋಡುವ ಆತನನ್ನು ಕೆಲಸದವಳು ಬೇರೆ ಕೋಣೆಗೆ ಕರೆದೊಯ್ಯುತ್ತಾಳೆ. ತಾಯಿ ಪ್ರಿಯದರ್ಶಿನಿ ಸಂಜೂ ಅಂತ ಕರೆದಾಗ ಅನುಗೆ ಆಘಾತವಾಗುತ್ತೆ. ಆದರೆ ತಾನು ಈ ಮಗನನ್ನೂ ಸಂಜೂ ಅಂತಲೇ ಕರೆಯುತ್ತಿರುವುದಾಗಿ ಆಕೆ ಹೇಳ್ತಾಳೆ. ಆದರೂ ಅನು ಮನಸ್ಸಲ್ಲಿ ಸಣ್ಣ ಅನುಮಾನ ಮೂಡಿದ ಹಾಗಿದೆ.

ಹೊಸ ಆರ್ಯವರ್ಧನ್ ಪಾತ್ರದಲ್ಲಿ ಹರೀಶ್ ರಾಜ್, ಅನು ಪಾತ್ರದಲ್ಲಿ ಮೇಘಾ ಶೆಟ್ಟಿ ನಟಿಸಿದ್ದಾರೆ.

 

click me!