Latest Videos

Hitler Kalyana: ಅಂಗೈಯಲ್ಲಿ ಕರ್ಪೂರ ಇಟ್ಟು ಆರತಿ ಮಾಡಿದ ಲೀಲಾ! ಇವಳು ಎಜೆ ಪ್ರಾಣವನ್ನೂ ಕಾಪಾಡಿದ್ದು ಹೇಗೆ?

By Suvarna NewsFirst Published Jul 11, 2022, 5:54 PM IST
Highlights

ಹಿಟ್ಲರ್‌ ಕಲ್ಯಾಣ ರೋಚಕ ತಿರುವು ಪಡೆಯುತ್ತಾ ಸಾಗುತ್ತಿದೆ. ತಾನು ಎಡವಟ್ಟು ಮಾಡೋದರ ಮುಖಾಂತರ ಪರೋಕ್ಷವಾಗಿ ಒಳ್ಳೆಯದನ್ನೇ ಮಾಡ್ತಿದ್ದಾಳೆ ಲೀಲಾ. ಅವಳು ಮಾಡಿರೋ ಒಂದು ಎಡವಟ್ಟಂತೂ ಎಜೆಯ ಜೀವವನ್ನೇ ಕಾಪಾಡಿದೆ.

ಹಿಟ್ಲರ್ ಕಲ್ಯಾಣದ ನಾಯಕಿ ಲೀಲಾ ಎಡವಟ್ಟು ಲೀಲಾ ಅಂತಲೇ ಫೇಮಸ್. ಅವಳು ಮದುವೆ ಆದದ್ದು ತನಗಿಂತ ದುಪ್ಪಟ್ಟು ವಯಸ್ಸಿನ ಏಜೆಯನ್ನು. ಆರಂಭದಿಂದಲೂ ಅವರಿಬ್ಬರೂ ದೂರ ದೂರವೇ ಇದ್ದಾರೆ. ಆದರೆ ವಿಧಿ ಅವರನ್ನೀಗ ಹತ್ತಿರಕ್ಕೆ ತರುತ್ತಿದೆ. ಲೀಲಾ ಏನೇ ಎಡವಟ್ಟು ಮಾಡಿದರೂ ಅವಳ ಒಳ್ಳೆತನವನ್ನು ಮುಕ್ತ ಮನಸ್ಸಿಂದ ಸ್ವೀಕರಿಸಿರೋದು ಆ ಮನೆಯ ಹಿರಿ ಜೀವ ಎಜೆಯ ಅಮ್ಮ ಸರೋಜಿನಿ. ಅವಳ ಸುತ್ತ ಅಜ್ಜೀ ಅಂತ ಪುಟ್ಟ ಮಗುವಿನಂತೆ ಓಡಾಡುವ ಲೀಲಾ ಕಂಡರೆ ಅವರಿಗೆ ಬಹಳ ಅಕ್ಕರೆ. ತನ್ನ ಮಗ ಏಜೆ ಹಾಗೂ ಲೀಲಾ ಸಂಬಂಧ ಉತ್ತಮವಾಗಬೇಕು ಅಂತ ಅಜ್ಜಿ ಮಾಡದ ಸಾಹಸಗಳಿಲ್ಲ. ಮೊನ್ನೆ ಮೊನ್ನೆವರೆಗೂ ಎಜೆ ಲೀಲಾ ಒಂದಾಗದೇ ಮನೆಯೊಳಗೆ ಕಾಲಿಡಲ್ಲ ಅಂತ ಗಾರ್ಡನಲ್ಲೇ ಟೆಂಟ್ ಹಾಕಿ ಕೂತಿದ್ದ ಅವರು ಇದೀಗ ಅನಿವಾರ್ಯವಾಗಿ ಮನೆಯೊಳಗೆ ಬಂದಿದ್ದಾರೆ.

ಇದನ್ನೂ ಓದಿ: Hitler Kalyana: ಮನೆಬಿಟ್ಟು ಟೆಂಟ್ ಸೇರಿದ ಅಜ್ಜಿ, ಈಗಲಾದ್ರೂ ಎಜೆ ಲೀಲಾ ಒಂದಾಗದೇ ವಿಧಿಯಿಲ್ಲ

ಇದೀಗ ಕುತೂಹಲ ಮೂಡಿಸಿರೋದು ಸೊಸೆ ಲಕ್ಷ್ಮಿಯ ಹುನ್ನಾರಕ್ಕೆ ಲೀಲಾ ಬಲಿಯಾಗಿ ತನ್ನ ಅಂಗೈಯನ್ನೇ ಸುಟ್ಟುಕೊಂಡಿರೋದು. ತೀರ್ಥಕ್ಷೇತ್ರದಿಂದ ಗುರುಗಳು ಕಳಿಸಿರುವ ತೆಂಗಿನ ಕಾಯಿಯಿಂದ ನೀನೇ ನಿನ್ನ ಕೈಯಾರೆ ಮನೆದೃಷ್ಟಿ ತೆಗೀಬೇಕು ಅಂತ ಅಜ್ಜಿ ಹೇಳಿದ್ದೇ ಲೀಲಾ ಅದಕ್ಕೆ ರೆಡಿ ಆಗ್ತಾಳೆ. ಆದರೆ ಏಜೆ ಸೊಸೆ ಲಕ್ಷ್ಮಿ ಇದರಲ್ಲೊಂದು ಹುನ್ನಾರ ಮಾಡುತ್ತಾಳೆ. ನಾವೆಲ್ಲ ಕೈಯಲ್ಲಿ ಕರ್ಪೂರ ಹಿಡಿದು ಆರತಿ ಮಾಡಿ ಕಾಯಿ ಒಡೆಯುತ್ತೇವೆ ಎಂದು ಹೇಳಿ, ನೀನೂ ನಾಳೆ ಅಂಗೈ ಮೇಲೆ ಕರ್ಪೂರ ಉರಿಸಿ ಅದರಿಂದ ಆರತಿ ಮಾಡಿ ದೃಷ್ಟಿ ತೆಗೀತೀವಿ ಅಂದುಬಿಡ್ತಾಳೆ. ಲೀಲಾಗೆ ಈ ಬಗ್ಗೆ ಅನುಮಾನ ಬಂತಾದರೂ ಲಕ್ಷ್ಮಿ ಅವರ ಮುಗ್ಧತೆಯನ್ನೇ ಲೇವಡಿ ಮಾಡಿದ ಕಾರಣ ಅವಳ ಮಾತು ನಿಜವಾಗಿರಬಹುದು ಅಂತ ನಂಬುತ್ತಾಳೆ. 

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

 

ಮರುದಿನ ಲಕ್ಷ್ಮೀ ಎದ್ದು ಕದ್ದು ನೋಡುತ್ತಿರುವಾಗಲೇ ಅಜ್ಜಿ, 'ಮನೆಯ ದೃಷ್ಟಿ ಪರಿಹಾರ ಆಗಲಿ ಎಂದು ಬೇಡಿಕೊಂಡು ಕರ್ಪೂರ ಹಚ್ಚಿ ಕಾಯಿ ಒಡೆದು ಹಾಕು' ಎನ್ನುತ್ತಾರೆ ಅಜ್ಜಿ. 'ಅಯ್ಯೋ ಕೈಯಲ್ಲಿ ಕರ್ಪೂರ ಹಚ್ಚಿ ಕೈ ಸುಟ್ಟು ಹೋಗುತ್ತದೆ ಅಲ್ವ ಅಂತ ಲೀಲಾಗೆ ಭಯವಾದರೂ, ಈ ಅಜ್ಜಿ ಎಷ್ಟು ಪ್ರೀತಿ ಮಾಡುತ್ತಾರೆ, ಏಜೆ ನನಗೋಸ್ಕರ ಏನೆಲ್ಲ ಕೆಲಸ ಮಾಡಿದ್ದಾರೆ. ಅವರಿಗೆ ಒಳ್ಳೆದಾಗುತ್ತೆ ಅಂದ್ರೆ ನಾನೇನಾದರೂ ಮಾಡಲೇ ಬೇಕು ಎಂದು ಯೋಚನೆ ಮಾಡುತ್ತಾಳೆ.

ಇದನ್ನೂ ಓದಿ: Hitler Kalyana: ಕಣ್ಣೀರಿಡುತ್ತಿರುವ ಏಜೆಗೆ ಆಸರೆ ಆಗ್ತಾಳಾ ಯಡವಟ್ಟು ಲೀಲಾ?

ಅಜ್ಜಿ ಕಣ್ಣು ಮುಚ್ಚಿ ಪ್ರಾರ್ಥಿಸುತ್ತಿರುವಾಗಲೇ ಲೀಲಾ ಅಂಗೈ ಮೇಲೇ ಕರ್ಪೂರ ಹಚ್ಚಿ ಆರತಿ ಮಾಡುತ್ತಾಳೆ. ಒಂದು ಹೊತ್ತಲ್ಲಿ ಕೈಯೆಲ್ಲ ಸುಟ್ಟು ಜೋರು ಚೀರುತ್ತಾ ಅದನ್ನು ಪಕ್ಕಕ್ಕೆಸೆಯುತ್ತಾಳೆ. ಅಜ್ಜಿಗೆ ಲೀಲಾ ಮಾಡಿದ ಕೆಲಸ ನೋಡಿ ನಗಬೇಕೋ ಅಳಬೇಕೋ ಗೊತ್ತಾಗದ ಸ್ಥಿತಿ. ಏಜೆ ಬಳಿ ಕಾಯಿ ಒಡೆಯಲು ಹೇಳಿ ಅಜ್ಜಿ ಲೀಲಾಳನ್ನು ಒಳಗೆ ಕರೆದುಕೊಂಡು ಹೋಗುತ್ತಾರೆ. ಏಜೆನೇ ಲೀಲಾ ಕೈಗೆ ಬ್ಯಾಂಡೇಜ್ ಮಾಡಿ ಚಿಕ್ಕ ಮಗುವಿಗೆ ಬೈಯ್ಯುವಂತೆ ಒಂದೇ ಸವನೆ ಬೈಯ್ಯುತ್ತಾನೆ.

ಇನ್ನೊಂದೆಡೆ ಏಜೆ ತಂಗಿ ಪವಿತ್ರಾ ಮಲಗಿರುವಲ್ಲಿಗೇ ಹೋಗಿ ಮಹಾ ವಿಷವನ್ನು ಆವಳಿಗೆ ಕುಡಿಸಲು ಅವಳ ಗಂಡ ದೇವ್ ಪ್ರಯತ್ನಿಸುತ್ತಿರುವಾಗಲೇ ಏಕೆ ಒಳ ಬಂದು ದೇವ್‌ನನ್ನು ತರಾಟೆಗೆ ತೆಗೆದುಕೊಳ್ಳುತ್ತಾನೆ. ಏಜೆ ಪರ್ಮೀಶನ್ ಇಲ್ಲದೇ ಪವಿತ್ರಾಗೆ ಯಾರು ಏನನ್ನೂ ಕೊಡಬಾರದು ಅನ್ನೋದು ಆ ಮನೆಯ ರೂಲ್. ದೇವ್ ಆ ವಿಷವನ್ನು ತೀರ್ಥ ಎಂದು ಏಜೆಯನ್ನು ಯಾಮಾರಿಸಲು ನೋಡುತ್ತಾನೆ. ಇದಕ್ಕೆಲ್ಲ ಬಗ್ಗದ ಏಜೆ ಅದನ್ನು ಮೊದಲು ನೀನೇ ಕುಡಿ ಅಂದಾಗ ದೇವ್‌ಗೆ ಕೈಕಾಲು ನಡುಗುತ್ತದೆ. ಆ ದ್ರವದ ಒಂದು ತೊಟ್ಟು ಬಾಯಿಗೆ ತಾಗಿದರೂ ಆತ ಬದುಕೋ ಚಾನ್ಸೇ ಇಲ್ಲ ಅನ್ನೋದು ದೇವ್‌ಗೆ ಗೊತ್ತು. ಆತ ಏನೇನೋ ಸಬೂಬು ಹೇಳಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಅದು ವರ್ಕೌಟ್ ಆಗೋದಿಲ್ಲ. ಕೊನೆಗೆ ತನಗೇ ಅದನ್ನು ಕುಡಿಯಲು ಕೊಡುವಂತೆ ಏಜೆ ಹೇಳುತ್ತಾನೆ. ತನ್ನ ಪ್ರಾಣ ಉಳಿದರೆ ಸಾಕು ಅಂದುಕೊಂಡು ದೇವ್ ಅದನ್ನು ಏಜೆ ಗೆ ಕೊಡುತ್ತಾನೆ. ಇನ್ನೇನು ಏಜೆ ಕುಡೀಬೇಕು ಅನ್ನುವಷ್ಟರಲ್ಲಿ ನುಗ್ಗಿ ಬಂದ ಲೀಲಾ ಎಜೆಗೆ ಡ್ಯಾಶ್(Dash) ಹೊಡೆಯುತ್ತಾಳೆ. ಏಜೆ ಕೈಯಲ್ಲಿದ್ದ ವಿಷ ನೆಲಕ್ಕೆ ಬೀಳುತ್ತದೆ. ಏಜೆ ಅವಳಿಗೆ ಬೈದುಕೊಂಡು ಅಲ್ಲಿಂದಾಚೆ ಹೋದರೂ ಅವಳ ಎಡವಟ್ಟೇ ಏಜೆ ಪ್ರಾಣ ಉಳಿಸಿದ್ದು ಈ ಸೀರಿಯಲ್ ನೋಡುವ ಪ್ರೇಕ್ಷಕರು ನಿಟ್ಟುಸಿರುವ ಬಿಡುವ ಹಾಗೆ ಮಾಡುತ್ತದೆ.

ಇದನ್ನೂ ಓದಿ: ಎಲ್ಲ ಸೀರಿಯಲ್ ಕಥೆಗಳಲ್ಲೂ ಫಸ್ಟ್ ನೈಟ್ ಪೋಸ್ಟ್ ಪೋನ್! ವೀಕ್ಷಕರ ಮೂಗಿನ ತುದಿಗೆ ತುಪ್ಪ

ಏಜೆ ಪಾತ್ರದಲ್ಲಿ ದಿಲೀಪ್ ರಾಜ್(Dileep Raj), ಲೀಲಾ ಪಾತ್ರದಲ್ಲಿ ಮಲೈಕಾ ವಸುಪಾಲ್(Malaika Vasupal), ಸರೋಜಿನಿ ಅಜ್ಜಿಯಾಗಿ ವಿದ್ಯಾಮೂರ್ತಿ(Vidya Murthy) ಸಖತ್ತಾಗಿ ಅಭಿನಯಿಸಿದ್ದಾರೆ. ತ್ರಿಶೂಲ್(Trishool) ಇದರ ನಿರ್ದೇಶಕರು(Director). ಜೀ ಕನ್ನಡಕ್ಕೆ ಈ ಸೀರಿಯಲ್ ಅನ್ನು ನಿರ್ಮಿಸಿದವರು ದಿಲೀಪ್ ರಾಜ್. ಸೋಮವಾರದಿಂದ ಶುಕ್ರವಾರ ರಾತ್ರಿ 7 ಗಂಟೆಗೆ ಈ ಸೀರಿಯಲ್ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತದೆ. 

click me!