kannadathi serial: ಹರ್ಷ ಭುವಿ ಫಸ್ಟ್‌ನೈಟಲ್ಲಿ ಮತ್ತೆ ಅಡ್ಡ ಬಂತು ತುರಿಮಣೆ!

By Suvarna NewsFirst Published Aug 18, 2022, 6:47 PM IST
Highlights

ಕನ್ನಡತಿ ಸೀರಿಯಲ್‌ನಲ್ಲಿ ಭುವಿ ಫಸ್ಟ್‌ ನೈಟ್ ಇನ್ನೇನು ಶುರುವಾಗ್ಬೇಕು ಅನ್ನುವಾಗ ತುರಿಮಣೆಯೊಂದು ಅಡ್ಡಬಂದಿದೆ. ಇವರಿಬ್ಬರ ಮದುವೆಯನ್ನು ನಿಲ್ಲಿಸೋದರಲ್ಲಿ ತುರಿಮಣೆ ಪಾತ್ರ ದೊಡ್ಡದಿತ್ತು. ಇದೀಗ ಫಸ್ಟ್‌ನೈಟ್‌ನಲ್ಲೂ ಇವರ ನೆಮ್ಮದಿ ಕೆಡಿಸಲು ತುರಿಮಣೆ ಅಡ್ಡಬಂದಿದೆ.

ಕನ್ನಡತಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗ್ತಿರೋ ಸೀರಿಯಲ್. ಇದೀಗ ಮುಖ್ಯಘಟ್ಟಕ್ಕೆ ಬಂದು ನಿಂತಿದೆ. ಹರ್ಷ ಭುವಿ ಇಲ್ಲೀವರೆಗೆ ಕಾದಿದ್ದ ಬದುಕಿನ ಮುಹತ್ವ ಗಳಿಗೆ ಈಗ ಬಂದಿದೆ. ಅದು ಅವರಿಬ್ಬರ ಮೊದಲ ರಾತ್ರಿ. ಫಸ್ಟ್ ನೈಟ್‌ ಬಗ್ಗೆ ಕನಸು, ಭಯ, ನಾಚಿಕೆ ಸಹಜವಾಗಿ ಎಲ್ಲರಿಗೂ ಇರುತ್ತೆ. ಅದರಲ್ಲೂ ಎಷ್ಟೋ ಸಮಯದಿಂದ ಪರಸ್ಪರ ಪ್ರೀತಿಸಿ ಮದುವೆಯಾದವರತೂ ಆ ಕ್ಷಣಕ್ಕಾಗಿ ಕಾಯುತ್ತಿರುತ್ತಾರೆ. ಹರ್ಷ ಭುವಿ ಬಹಳ ಕಾಲ ಪ್ರೇಮಿಸಿದವರು. ಎಲ್ಲರನ್ನೂ ಒಪ್ಪಿಸಿ ಮದುವೆ ಆದವರು. ಅವರ ಪ್ರೀತಿಯ ನಡುವೆ ಏನೇ ಸಮಸ್ಯೆ ಬಂದರೂ ಅದನ್ನು ನಿವಾರಿಸಿಕೊಂಡು ಮುನ್ನಡೆದವರು. ಅವರ ಮದುವೆ ತಡೆಗೆ ರತ್ನಮ್ಮ ಅನಾರೋಗ್ಯ ಒಂದು ಕಾರಣವಾದರೆ ವರೂಧಿನಿ, ಸಾನಿಯಾ ಕುತಂತ್ರ ಇನ್ನೊಂದು ಕಾರಣ. ಇದು ಮದುವೆ ಆದ ಮೇಲೂ ಮುಂದುವರಿದಿದೆ. ಮದುವೆ ಆದರೂ ಅವರಿಬ್ಬರೂ ಒಂದಾಗಬಾರದು ಅಂತ ವರೂ, ಸಾನಿಯಾ ಹೊಂಚು ಹಾಕುತ್ತಿದ್ದಾರೆ. ಆದರೆ ಇವತ್ತು ಅಮ್ಮಮ್ಮನೇ ಶುಭ ಮುಹೂರ್ತ ಇಡಿಸಿ ಇವರಿಬ್ಬರ ಫಸ್ಟ್ ನೈಟ್‌ಗೆ ಪ್ಲಾನ್ ಮಾಡಿದ್ದಾರೆ. ಆದರೆ ಇವರ ಫಸ್ಟ್ ನೈಟ್‌ಗೆ ತುರಿಮಣೆಯೊಂದು ಅಡ್ಡ ಬಂದಿದೆ. ಇದರ ಹಿನ್ನೆಲೆ ಏನು, ಮುಂದೆ ಏನಾಗ್ಬಹುದು? ಅನ್ನೋ ಪ್ರಶ್ನೆಗೆ ಉತ್ತರ ಇಲ್ಲಿದೆ.

ಕನ್ನಡತಿ ಸೀರಿಯಲ್ ನೋಡುವವರಿಗೆ ಈ ತುರಿಮಣೆಯ ಪರಿಚಯ ಇದ್ದೇ ಇದೆ. ಏಕೆಂದರೆ ಹರ್ಷ ಭುವಿ ಮದುವೆಯಲ್ಲಿ ಪ್ರಧಾನ ಪಾತ್ರ ವಹಿಸಿದ್ದೇ ಈ ತುರಿಮಣೆ. ಹರ್ಷ ಭುವಿ ಮದುವೆಯ ಕ್ಷಣಗಳನ್ನು ನೆನಪಿಸಿಕೊಂಡರೆ ಶಾಸ್ತ್ರೋಕ್ತವಾಗಿ ಸಂಪ್ರದಾಯ ಬದ್ಧವಾಗಿ ಜೊತೆಗೆ ಅರ್ಥಪೂರ್ಣವಾಗಿ ಮದುವೆ ಆಗಬೇಕು ಅನ್ನೋದು ಭುವಿ ಕನಸಾಗಿತ್ತು. ಹರ್ಷ ಅದನ್ನು ನೆರವೇರಿಸುತ್ತಾನೆ. ಮದುವೆಯ ಉಸ್ತುವಾರಿಯನ್ನು ವರೂಧಿನಿ ನೇತೃತ್ವದ ಸಪ್ತಪದಿ ಕಂಪನಿ ವಹಿಸಿಕೊಳ್ಳುತ್ತೆ. ಆದರೆ ಆರಂಭದಿಂದಲೂ ವರೂ ಇದಕ್ಕೆ ಅಡ್ಡಗಾಲು ಹಾಕಿಕೊಂಡೇ ಇರುತ್ತಾಳೆ. ತಾನೂ ಮದುಮಗಳಂತೆ ಸಿಂಗರಿಸಿಕೊಂಡು ರೆಡಿ ಆಗ್ತಾಳೆ. ಅವಳ ಅವತಾರ ಹಲವರ ಅನುಮಾನಕ್ಕೆ ಎಡೆ ಮಾಡುತ್ತೆ. ಕೊನೆಯಲ್ಲಿ ಹರ್ಷನನ್ನು ನನಗೆ ಬಿಟ್ಟುಕೊಡು ಅಂತ ಭುವಿಯನ್ನು ಕೇಳುವ ವರೂ, ಭುವಿ ಅದಕ್ಕೆ ಬಗ್ಗದೇ ಅವಳನ್ನು ಕನ್ವಿನ್ಸ್ ಮಾಡಲು ನೋಡುತ್ತಿದ್ದಾಗ ಆತ್ಮಹತ್ಯೆಯ ಪ್ರಯತ್ನ ಮಾಡ್ತಾಳೆ. ಆಕೆ ಆತ್ಮಹತ್ಯೆ ಮಾಡ್ಕೊಳ್ಳೋದು ತುರಿಮಣೆಯಿಂದ ಕೈ ಕುಯ್ದುಕೊಳ್ಳುವ ಮೂಲಕ. 

ಇದನ್ನೂ ಓದಿ: ಹಿಟ್ಲರ್ ಕಲ್ಯಾಣ: ಪವಿತ್ರಾಗೆ ಮಾತು ಬಂತು, ಆಮೇಲೆ ನಡೆದದ್ದು ಶಾಕಿಂಗ್ ಘಟನೆ!

ಕೊನೆಗೂ ಅವಳ ಸಮ್ಮುಖದಲ್ಲೇ ಆಸ್ಪತ್ರೆಯಲ್ಲೇ ಹರ್ಷ ಭುವಿ ಮದುವೆ ನಡೆದಾಗ ವರೂ ಕುಸಿದುಹೋಗ್ತಾಳೆ. ಆದರೆ ಆಗ ಅವಳೇನೂ ಮಾಡಲಾಗದ ಅಸಹಾಯಕತೆಯಲ್ಲಿರುತ್ತಾಳೆ. ಮದುವೆ ಆದರೇನಂತೆ ಅವರ ಮದುವೆಯನ್ನು ಮುರಿಯೋದೇ ನನ್ನ ಗುರಿ ಅಂತ ವರೂ ಮೊದಲೇ ಹೇಳಿದ್ದಾಳೆ. ಪ್ಲಾನ್ ಮಾಡಿ ಕೊನೆಯಲ್ಲಿ ಶತ್ರುವಿನ ಬಲಹೀನ ಗಳಿಗೆಯಲ್ಲಿ ನುಗ್ಗಿ ಅಟ್ಯಾಕ್ ಮಾಡೋದು ವರೂ ಕ್ರಮ. ಹಿಂದಿನ ದಿನ ಮನೆಗೆ ಬಂದ ಅವಳು ನಾಳೆ ಹರ್ಷ ಭುವಿ ಫಸ್ಟ್ ನೈಟ್ ಅಲ್ವಾ ಅಂತ ತನಗೆ ತಾನೇ ಹೇಳ್ಕೊಂಡು ಹೋಗಿದ್ದಾಳೆ. ಆಗಲೇ ಇವಳೇನೋ ಮಾಡ್ತಾಳೆ ಅನ್ನೋ ಅನುಮಾನ ವೀಕ್ಷಕರಿಗೆ ಬಂದಿತ್ತು. ಅವಳ ನಡೆ ಸುನಾಮಿ ಬರೋ ಮೊದಲಿನ ಸಮುದ್ರದ ಹಾಗಿತ್ತು. 

ಹರ್ಷ ಭುವಿ ಫಸ್ಟ್‌ ನೈಟ್‌ನಲ್ಲಿ ಏನಾದ್ರೂ ವಿಘ್ನ ಆಗುತ್ತೆ ಅಂತ ವೀಕ್ಷಕರು ಮಾತಾಡಿಕೊಳ್ಳುತ್ತಿರಬೇಕಾದ್ರೇ ಒಂದು ವಿಘ್ನ ಆಯ್ತು. ತನ್ನ ಸೀಕ್ರೆಟ್ ಗಳಿದ್ದ ರತ್ನಮಾಲಾ ಫೋನನ್ನು ಸಾನಿಯಾ ತೆಗೆಯಲು ಪ್ರಯತ್ನಿಸುತ್ತಿರುವಾಗಲೇ ಅವರು ಬಂದಿದ್ದಾರೆ. ಸಾನಿಯಾ ಇನ್ನೊಂದು ಬದಿಯಿಂದ ಎಸ್ಕೇಪ್ ಆಗಿದ್ದಾಳೆ. ಆ ನಡುವೆ ಇವರ ಫಸ್ಟ್ ನೈಟ್‌ಗೆ ಎಲ್ಲ ರೆಡಿ ಆಗಿದೆ. ಇವರ ರೂಮನ್ನು ಸುಂದರವಾಗಿ ಅಲಂಕರಿಸಲಾಗಿದೆ. ಹೆಣ್ಣು ಮಗು ಬೇಕಾ, ಗಂಡು ಮಗು ಬೇಕಾ ಅಂತ ಹರ್ಷ ಭುವಿಯನ್ನು ಮನೆಯವರು ಗೋಳಾಡಿಸಿದ್ದಾರೆ. ಆಗ ಹರ್ಷ ಜ್ಯೂ.ಅಮ್ಮಮ್ಮನೇ ಬೇಕು ಅಂತ ಹೇಳಿ ರೂಮಿಗೆ ಹೋಗಿದ್ದಾನೆ. 

ಹರ್ಷ ಭುವಿಯ ನಡುವೆ ರೊಮ್ಯಾಂಟಿಕ್ ಕ್ಷಣ ಶುರುವಾಗಬೇಕು ಅನ್ನುವಾಗ ತುರಿಮಣೆ ಅಡ್ಡ ಬಂದಿದೆ. ಅವರಿಬ್ಬರ ಹಿಂದೆ ವರೂಧಿನಿ ತುರಿಮಣೆ ಹಿಡಿದು ಹಲ್ಲು ಕಡಿಯುತ್ತಾ ರಾಕ್ಷಸಿ ಥರ ನಿಂತಿದ್ದಾಳೆ. ಮುಂದೇನಾಗಬಹುದು ಅನ್ನೋದು ಸಸ್ಪೆನ್ಸ್. ಇವರ ಮದುವೆ ಎಪಿಸೋಡ್‌ನಂತೆ ಫಸ್ಟ್ ನೈಟ್ ಎಪಿಸೋಡ್ ಕೂಡ ಕುತೂಹಲ ಗರಿಗೆದರಿಸುತ್ತಿದೆ. 

ಇದನ್ನೂ ಓದಿ: ಹರ್ಷ ಭುವಿ ಫಸ್ಟ್ ನೈಟ್‌, ಜೋಡಿ ಹಕ್ಕಿ ಒಂದಾಗ್ತಾರಾ, ಇದಕ್ಕೂ ವಿಘ್ನ ಬರುತ್ತಾ?

click me!