ನಾಲ್ವರಿಗೆ ಬೆಳಕು ನೀಡಿದ ಪುನೀತ್ ರಾಜ್: ಅಂದು ನಡೆದ ಘಟನೆ ವಿವರಿಸಿದ ಡಾ.ರೋಹಿತ್​ ಶೆಟ್ಟಿ

By Suchethana DFirst Published Aug 31, 2024, 12:19 PM IST
Highlights

ಸಾವಿನಲ್ಲಿಯೂ ಸಾರ್ಥಕತೆ ಮೆರೆದು ನಾಲ್ವರಿಗೆ ದೃಷ್ಟಿ ನೀಡಿದ ಪುನೀತ್​ ರಾಜ್​ಕುಮಾರ್​ ಅವರ ನೇತ್ರದಾನದ ಕುರಿತು ಡಾ.ರೋಹಿತ್​ ಶೆಟ್ಟಿ ವಿವರಿಸಿದ್ದಾರೆ. 
 

ಪುನೀತ್‌ ರಾಜ್‌ಕುಮಾರ್‌ ಅವರು ಎಲ್ಲರನ್ನೂ ಅಗಲಿ ಮೂರು ವರ್ಷಗಳಾಗುತ್ತಾ ಬಂದರೂ ಅವರ ನೆನಪು ಸದಾ ಹಸಿರು. ಹಲವಾರು ನಟರು ಮಾತ್ರವಲ್ಲದೇ ಗಾಯಕರು, ನಿರ್ದೇಶಕರು ಸೇರಿದಂತೆ ಸಾಮಾನ್ಯ ಜನರನ್ನೂ ಅವರು ಹುರಿದುಂಬಿಸುತ್ತಿದ್ದ ರೀತಿಯೇ ಚೆಂದ. ಇದೇ ಕಾರಣಕ್ಕೆ ಅವರು ಎಲ್ಲರನ್ನೂ ಅಗಲಿದರೂ ಅವರ ನೆನಪನ್ನು ಸಿನಿ ಕ್ಷೇತ್ರದವರು ಸೇರಿದಂತೆ ಎಲ್ಲರೂ ಮಾಡುತ್ತಲೇ ಇರುತ್ತಾರೆ. ಬದುಕಿದ್ದಾಗ ಹಲವರ ಪಾಲಿಗೆ ಬೆಳಕಾಗಿದ್ದ ಅಪ್ಪು, ಸಾವಿನಲ್ಲಿಯೂ ನಾಲ್ವರು ಅಂಧರ ಬಾಳಿಗೆ ಬೆಳಕಾಗಿ ಹೋದರು. ಅವರ ನೇತ್ರದಾನದ ಕುರಿತು ನಾರಾಯಣ ನೇತ್ರಾಲಯದ ಚೇರ್ಮನ್​ ಡಾ.ರೋಹಿತ್​ ಶೆಟ್ಟಿ ಮಾಹಿತಿ ನೀಡಿದ್ದಾರೆ. ಅಂದಹಾಗೆ, ಪುನೀತ್​ ಅವರ ಎರಡು ಕಣ್ಣುಗಳು ನಾಲ್ವರಿಗೆ ದೃಷ್ಟಿ ನೀಡಿವೆ. ಈ ಮೂಲಕ ಸಾವಿನಲ್ಲೂ ದಾಖಲೆ ಬರೆದಿದ್ದಾರೆ ಅಪ್ಪು. ಎರಡು ಕಣ್ಣುಗಳನ್ನು ನಾಲ್ವರಿಗೆ ಅಳವಡಿಕೆ ಮಾಡಿರುವುದು ರಾಜ್ಯದಲ್ಲಿ ಇದೇ ಪ್ರಥಮ ಬಾರಿಗೆ. ಡಾ. ರಾಜ್ ಕುಮಾರ್ ಇಡೀ ಕುಟುಂಬ ನೇತ್ರದಾನ ಮಾಡುವ ಮೂಲಕ ಸಾರ್ಥಕತೆ ಮೆರೆದಿದೆ. 2006 ರಲ್ಲಿ ಡಾ. ರಾಜ್ ಕುಮಾರ್ ಅವರು ಎರಡು ಕಣ್ಣು ದಾನ ಮಾಡಿದ್ದರು. 2017 ರಲ್ಲಿ ಪಾರ್ವತಮ್ಮ ರಾಜ್ ಕುಮಾರ್ ತಮ್ಮ ನೇತ್ರ ದಾನ ಮಾಡಿದ್ದರು.  

ಇದೀಗ, ನಿರೂಪಕಿ ರ‍್ಯಾಪಿಡ್ ರಶ್ಮಿ ಷೋನಲ್ಲಿ ಅವರು ನೇತ್ರದಾನದ ಕುರಿತು ಕೆಲವೊಂದು ಮಾಹಿತಿಗಳನ್ನು ಹಂಚಿಕೊಂಡಿದ್ದು, ಪುನೀತ್​ ಅವರ ಬಗ್ಗೆಯೂ ಮಾತನಾಡಿದ್ದಾರೆ. ಪುನೀತ್​ ರಾಜ್​ಕುಮಾರ್​ ಅವರ ಕುಟುಂಬಕ್ಕೆ ದೊಡ್ಡ ನಮಸ್ಕಾರ ಹೇಳಲೇಬೇಕು. ಇಂಥದ್ದೊಂದು ಕಾರ್ಯಕ್ಕೆ ಅವರು ಮುಂದಾಗಿದ್ದು ನಿಜಕ್ಕೂ ಶ್ಲಾಘನಾರ್ಹ ಎಂದಿರುವ ಡಾ.ರೋಹಿತ್​ ಅವರು, ಡಾ.ರಾಜ್​ಕುಮಾರ್​ ಅವರನ್ನೂ ಈ ಸಂದರ್ಭದಲ್ಲಿ ಸ್ಮರಿಸಿಕೊಂಡರು. ರಾಜ್​ಕುಮಾರ್​ ಅವರು ಸಡನ್​ ಆಗಿ ನಿಧನರಾದರೂ ಅವರ ಕುಟುಂಬದವರು ನೇತ್ರವನ್ನು ದಾನ ಮಾಡಲು ಮುಂದಾದರು. ರಾಜ್​ಕುಮಾರ್​ ಅವರ ಆಸೆಯೂ ಇದೇ ಆಗಿತ್ತು. ಆದ್ದರಿಂದ ಅವರು ಕಣ್ಣುಗಳನ್ನು ನೀಡಿ ಉಪಕಾರ ಮೆರೆದಿದ್ದಾರೆ. ಅವರ ಹಾದಿಯನ್ನೇ ಪುನೀತ್​ ಅವರೂ ಹಿಡಿದರು. ಪುನೀತ್​ ಅವರ ಕಣ್ಣುಗಳನ್ನು ತಂದಾಗ ಅದು ತುಂಬಾ ಉತ್ತಮ ಗುಣಮಟ್ಟದಿಂದ ಕೂಡಿತ್ತು. ಅವರು ಯುವಕರಾಗಿದ್ದರಿಂದ ಕಣ್ಣುಗಳು ಕೂಡ ತುಂಬಾ ಚೆನ್ನಾಗಿದ್ದವು ಎನ್ನುತ್ತಲೇ ಅಂದು ನಡೆದ ಘಟನೆಯನ್ನು ವೈದ್ಯರು ಹೇಳಿದ್ದಾರೆ.

Latest Videos

ಅಪ್ಪು ಸರ್​ ಸಾಯೋ ಎರಡು ದಿನ ಮುಂಚೆ ನನಗೆ ಮೆಸೇಜ್​ ಕಳಿಸಿದ್ರು... ನಟ ಪ್ರಥಮ್ ಹೇಳಿದ್ದೇನು?

ಈಗ ನೇತ್ರದಾನದಲ್ಲಿ ಹಲವು ಹೊಸ ಟೆಕ್ನಿಕ್​ಗಳು ಬಂದಿವೆ. ಕಣ್ಣಿನ ಕಾರ್ನಿಯಾವನ್ನು ಲೇಯರ್​ ಬೈ ಲೇಯರ್​ ಕಸಿ ಮಾಡಬಹುದು. ಇದೇ ತಂತ್ರಜ್ಞಾನ ಬಳಕೆ ಮಾಡಿ ಪುನೀತ್​ ಅವರನ್ನು ಕಣ್ಣನ್ನು ಸ್ಲೈಸ್ ಮಾಡಿದೆವು. ಕಣ್ಣಿನ ಹಿಂಬದಿಯನ್ನು ಅದರ ಅಗತ್ಯ ಇರುವರಿಗೆ ಬಳಸಲಾಯಿತು. ಕಣ್ಣಿನ ಕಾರ್ನಿಯಾ ಭಾಗ ಮತ್ತೊಬ್ಬರಿಗೆ ನೀಡಲಾಯಿತು.  ಹೀಗೆ ನಾಲ್ವರು ಅಂಧರಿಗೆ ಅಪ್ಪು ದೃಷ್ಟಿ ನೀಡಿದ್ದಾರೆ ಎಂದು ತಿಳಿಸಿದರು. ಅಂದಹಾಗೆ, ಪುನೀತ್​ ಅವರ ಕಣ್ಣುಗಳನ್ನು  ಒಬ್ಬರು ಮಹಿಳೆ ಮತ್ತು ಮೂವರು ಯುವಕರಿಗೆ ನೀಡಲಾಗಿದೆ. ಇಂಥ ವಿಷಯಗಳಲ್ಲಿ ನೆರವು ಪಡೆದವರ ಹೆಸರುಗಳನ್ನು ಗೌಪ್ಯವಾಗಿ ಇಡಲಾಗುತ್ತದೆ ಮಾತ್ರವಲ್ಲದೇ ಇಂಥವರಿಂದಲೇ ತಾವು ದೃಷ್ಟಿ ಪಡೆದಿರುವುದು ಎಂದು ಖುದ್ದು ದೃಷ್ಟಿ ಪಡೆದವರಿಗೂ ತಿಳಿದಿರುವುದಿಲ್ಲ. 

ಪುನೀತ್​ ಅವರು 2021ರ ಅಕ್ಟೋಬರ್​ 29ರಂದು ನಿಧನ ಹೊಂದಿದ್ದರು. ಅದು ಶುಕ್ರವಾರ. ಅಂದು  ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ  ಅವರ ಎರಡು ಕಣ್ಣುಗಳನ್ನು ಸಂಗ್ರಹ ಮಾಡಲಾಗಿತ್ತು. ಕಣ್ಣು ಸಂಗ್ರಹದ ಬಳಿಕ ಪರೀಕ್ಷೆ ಮಾಡಿದಾಗ ಎರಡೂ ಕಣ್ಣು ತುಂಬಾ ಉತ್ತಮ ಸ್ಥಿತಿಯಲ್ಲಿದ್ದವು. ಮರು ದಿನವೇ ಅಂದರೆ ಶನಿವಾರ  ನಾಲ್ವರು ರೋಗಿಗಳನ್ನು ಕರೆಸಿಕೊಂಡು ಟ್ರಾನ್ಸ್ ಪ್ಲೆಂಟ್ ಮಾಡಲಾಗಿದೆ.  ಡಾ. ಯತೀಶ್, ಶರಣ್, ಹರ್ಷಾ ನೇತೃತ್ವದ ತಂಡ ಸರ್ಜರಿ ಮಾಡಲಾಗಿದೆ.  'ಈ ಕಣ್ಣುಗಳನ್ನು ನಾಲ್ವರಿಗೆ ಬಳಕೆ ಮಾಡುವ ಹಿಂದೆ ನಾರಾಯಣ ನೇತ್ರಾಲಯ ಸಾಕಷ್ಟು ಶ್ರಮ ವಹಿಸಿದೆ. ಒಂದೇ ದಿನದಲ್ಲಿ ನಾಲ್ವರು ರೋಗಿಗಳನ್ನು ಹುಡುಕಬೇಕಿತ್ತು. ಈ ವೇಳೆ ಮಿಂಟೋ ಆಸ್ಪತ್ರೆಯ ಡಾ. ಸುಜಾತಾ ರಾಥೋಡ್ ಸಹಾಯದೊಂದಿಗೆ ನಮ್ಮ ವೈದ್ಯರು ದಿನಪೂರ್ತಿ ಶ್ರಮ ವಹಿಸಿ  ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿದೆ ಎಂದು  ಡಾ. ಭುಜಂಗಶೆಟ್ಟಿ ಅವರು ಈ ಹಿಂದೆಯೇ ತಿಳಿಸಿದ್ದರು. 

‍ಅಪ್ಪುನೇ ದೇವ್ರು ಅನ್ನೋದು ಯಾಕೆ ಅಂತ ಅವತ್ತೇ ಗೊತ್ತಾಗೋಯ್ತು.. ಪವಾಡ ಬಿಚ್ಚಿಟ್ಟ ಫುಡ್‌ ವ್ಲಾಗರ್‌

click me!