ಆಸ್ಕರ್‌ ಲೆವೆಲ್‌ ಆಕ್ಟಿಂಗ್‌ ಗುರು ನಿಂದು, ಚಿಂದಿ! ವೀಕ್ಷಕರು ಈ ಲೆವೆಲ್‌ಗೆ ಹೊಗಳ್ತಿರೋದು ಯಾವ ಕಿರುತೆರೆ ನಟನಿಗೆ?

By Suvarna NewsFirst Published May 2, 2024, 12:26 PM IST
Highlights

ಸಿನಿಮಾ ಸೀರಿಯಲ್‌ಗಳಿಗೆ ಈತ ಹೊಸ ಮುಖವಂತೂ ಅಲ್ಲ. ಆದರೆ ಈಗ ಈತ ಮಾಡ್ತಿರೋ ಒಂದು ಪಾತ್ರದ ಆಕ್ಟಿಂಗ್‌ ಅನ್ನು ಜನ ಯದ್ವಾ ತದ್ವಾ ಹೊಗಳ್ತಾ ಇದ್ದಾರೆ. ಅಷ್ಟಕ್ಕೂ ಯಾರು ಈ ನಟ?

ಸಿನಿಮಾ ಇರಬಹುದು, ಸೀರಿಯಲ್‌ ಇರಬಹುದು, ಒಬ್ಬ ಆಕ್ಟರ್‌ನ ನಿಜವಾದ ಸ್ಕಿಲ್‌ ಹೊರಬರೋದಕ್ಕೆ ಒಂದು ಟೈಮ್‌ ತನಕ ಕಾಯಲೇಬೇಕು. ಎಷ್ಟೋ ಸಲ ನಮ್ಮ ನಡುವೆ ಇಂಥಾ ನೆಕ್ಸ್ಟ್‌ ಲೆವೆಲ್‌ ಆಕ್ಟರ್‌ ಇದ್ದಾರೆ ಅಂತ ಗೊತ್ತೇ ಆಗಲ್ಲ. ಕಾರಣ ಅವರ ನಟನಾ ಕೌಶಲ್ಯವನ್ನು ತೋರಿಸೋ ಥರದ ಪಾತ್ರಗಳು ಸಿಗಲ್ಲ. ಸಿನಿಮಾದಲ್ಲಿ, ಸೀರಿಯಲ್‌ನಲ್ಲಿ ಇಂಥಾ ಸಾಕಷ್ಟು ಕಲಾವಿದರು ಸಿಕ್ತಾರೆ. ಅವರು ಆವರೆಗೆ ಸಾಕಷ್ಟು ಪಾತ್ರಗಳಲ್ಲಿ ನಟಿಸಿದ್ದರೂ, 'ಯಬ್ಬಾ, ಏನ್ ಆಕ್ಟಿಂಗ್‌ ಗುರೂ' ಅಂತ ಜನರ ಕೈಯಲ್ಲಿ ಶಹಭಾಸ್‌ಗಿರಿ ಪಡೆಯಲು ಸಾಕಷ್ಟು ಸಮಯ ಕಾಯಬೇಕು. 

ಈಗ ರಾಜೇಶ್‌ ನಟರಂಗ ಅವರನ್ನೇ ತಗೊಳ್ಳಿ. ಎಷ್ಟೋ ಕಾಲದಿಂದ ಸಿನಿಮಾ, ಸೀರಿಯಲ್‌ ರಂಗದಲ್ಲಿದ್ದಾರೆ. ಎಷ್ಟೋ ಸಿನಿಮಾಗಳಲ್ಲಿ ಅದ್ಭುತ ಅಭಿನಯ ಮೆರೆದಿದ್ದಾರೆ. ಅವರ ಅಭಿನಯಕ್ಕೆ ಸಾಕಷ್ಟು ಮೆಚ್ಚುಗೆಯೂ ಹರಿದುಬಂದಿದೆ. ಆದರೆ ಅವರು ಒಂದು ರೀತಿ ಮನೆಮಾತಾಗುವ ಹಾಗೆ ಮಾಡಿದ್ದು 'ಅಮೃತಧಾರೆ' ಸೀರಿಯಲ್‌. ಇದರಲ್ಲಿನ ಅವರ ಗೌತಮ್‌ ದಿವಾನ್‌ ಪಾತ್ರ ಅವರಿಗೆ ಸಾಕಷ್ಟು ನೇಮ್‌ ಆಂಡ್‌ ಫೇಮ್‌ ತಂದು ಕೊಡ್ತಿದೆ. 

ಆದ್ರೆ ನಾವಿಲ್ಲಿ ಹೇಳಲಿಕ್ಕೆ ಹೊರಟ ನಟ ಅವರಲ್ಲ. ಬದಲಿಗೆ ದೀಪಕ್‌ ಸುಬ್ರಹ್ಮಣ್ಯ ಅನ್ನೋ ಆಕ್ಟರ್‌ ಬಗ್ಗೆ. ಜೀ ಕನ್ನಡದ 'ಲಕ್ಷ್ಮೀ ನಿವಾಸ' ಸೀರಿಯಲ್‌ನಲ್ಲಿ ಜಯಂತ್‌ ಅನ್ನೋ ಪಾತ್ರ ನಿರ್ವಹಿಸುತ್ತಿರುವ ಈತನ ಪಾತ್ರಕ್ಕೆ ಒಂದು ಕಡೆ ಜನ ಯದ್ವಾತದ್ವಾ ಉಗೀತಿದ್ರೆ ಇನ್ನೊಂದು ಕಡೆ, ನಟನಾ ಕೌಶಲ್ಯಕ್ಕೆ 'ಆಸ್ಕರ್‌ ಲೆವೆಲ್‌ ಆಕ್ಟಿಂಗ್‌ ಗುರು ನಿಂದು, ಚಿಂದಿ' ಅಂತ ಆಕ್ಟಿಂಗ್‌ ಅನ್ನು ಕೊಂಡಾಡುತ್ತಿದ್ದಾರೆ. 

ಶ್ರೀಮಂತ ಹುಡುಗನ ಹಂಬಲಿಸೋ ಈ ದಿನಗಳಲ್ಲಿ ನಿಜಕ್ಕೂ ಇಂಥ ಸ್ವಾಭಿಮಾನಿಗಳು ಕಾಣಸಿಗ್ತಾರಾ?

ದೀಪಕ್‌ ಸುಬ್ರಹ್ಮಣ್ಯ ಅನ್ನೋ ಈ ನಟ ಈ ಹಿಂದೆ ಸೀರಿಯಲ್‌ಗಳಲ್ಲಿ ನಾಯಕ ಪಾತ್ರದಲ್ಲೇ ಅಭಿನಯಿಸಿದ್ದಿದೆ. 'ಸಾರಾಂಶ' ಅನ್ನೋ ಸಿನಿಮಾದಲ್ಲೂ ಬಹಳ ಸೊಗಸಾಗಿ ಅಭಿನಯಿಸಿ ಶಹಭಾಸ್‌ ಅನಿಸಿಕೊಂಡಿದ್ರು. ಆದರೆ ಈ ಲೆವೆಲ್‌ನಲ್ಲಿ ಅವರಿಗೆ ಜನಪ್ರಿಯತೆ ತಂದುಕೊಟ್ಟಿದ್ದು ಮಾತ್ರ 'ಲಕ್ಷ್ಮೀ ನಿವಾಸ' ಸೀರಿಯಲ್‌. ಅದರಲ್ಲೂ ಇತ್ತೀಚೆಗೆ ಟೆಲಿಕಾಸ್ಟ್ ಆದ ಒಂದು ಎಪಿಸೋಡ್‌ ನೋಡಿ ಬಹಳ ಮಂದಿ ಭಯಪಟ್ಟುಕೊಂಡರು. 'ಎಂಥಾ ಆಕ್ಟಿಂಗ್‌ ಇದು, ನೋಡಿಲಿಕ್ಕಾಗದಷ್ಟು ಭಯವಾಗುತ್ತೆ' ಅಂತ ತಮ್ಮ ಮನಸ್ಥಿತಿ ಹಂಚಿಕೊಂಡರು. ಅಷ್ಟಕ್ಕೂ ಆ ಪ್ರಸಂಗ ಏನು ಅಂದರೆ, ಮುಗ್ಧ, ಪ್ರತಿಭಾವಂತ ಹುಡುಗಿ ಜಾನ್ವಿ ಈ ಜಯಂತನ ಹೆಂಡತಿ. ಈ ಜಯಂತ ತನ್ನದು ಅಂದಿರೋದರ ಬಗ್ಗೆ ವಿಪರೀತ ಮೋಹ ಬೆಳೆಸಿಕೊಂಡಿರುವ ವ್ಯಕ್ತಿ. ಈತನ ಆಫೀಸ್‌ ಪಾರ್ಟಿಯಲ್ಲಿ ಈತ ಬೇಡ ಅಂದರೂ ಕೇಳದೇ ಆಫೀಸ್‌ನವರು ಒತ್ತಾಯಿಸಿದ್ದಕ್ಕೆ ಗಾಯಕಿ ಆಗಿರೋ ಜಾನ್ವಿ ಹಾಡುತ್ತಾಳೆ. ಇದು ಈತನನ್ನು ಯಾವ ಲೆವೆಲ್‌ಗೆ ಕೆರಳಿಸುತ್ತೆ ಅಂದರೆ ಹೆಂಡತಿಯನ್ನು ಮಾನಸಿಕವಾಗಿ ಹಿಂಸಿಸುವಷ್ಟು. ರಾತ್ರಿ ನಿದ್ದೆ ಹೋದವಳನ್ನು ಎಬ್ಬಿಸಿ ಹಾಡು ಹೇಳಲು ಹೇಳುತ್ತಾನೆ. ಅವಳು ಕಷ್ಟದಲ್ಲಿ ಎದ್ದು ಕೂತು ಹಾಡಿದರೆ ಮತ್ತೆ ಮತ್ತೆ ಹಾಡಲು ಒತ್ತಾಯಿಸುತ್ತಾನೆ. ರಾತ್ರಿಯಿಡೀ ಹಾಡುವ ಶಿಕ್ಷೆಯನ್ನು ಪತ್ನಿಗೆ ಕೊಡುತ್ತಾನೆ. 

 

ಒಮ್ಮೆ ಸಿಟ್ಟಲ್ಲಿ ನಡುಗುತ್ತ, ಮತ್ತೊಮ್ಮೆ ಬಿಕ್ಕಿ ಬಿಕ್ಕಿ ಅಳುತ್ತಾ, ಇನ್ನೊಮ್ಮೆ ಅವಳನ್ನು ಹುಚ್ಚನಂತೆ ಪ್ರೀತಿಸುವುದನ್ನು ಹೇಳಿಕೊಳ್ಳುತ್ತಾ ಇರುವ ಈತನ ಮನಸ್ಥಿತಿ ವೀಕ್ಷಕರನ್ನು ಬೆಚ್ಚಿ ಬೀಳಿಸಿದೆ. ಈತ ಇಂಥಾ ಆಕ್ಟರ್‌ ಅಂತ ಗೊತ್ತಿರಲಿಲ್ಲ ಎಂದೆಲ್ಲ ಜನ ಮಾತನಾಡಿಕೊಳ್ಳುತ್ತಿದ್ದಾರೆ. ಅಂದಹಾಗೆ ಈ ದೀಪಕ್‌ ಸುಬ್ರಹ್ಮಣ್ಯ ರಂಗಭೂಮಿ ಹಿನ್ನೆಲೆಯಿಂದ ಬಂದ ನಟ. ಈವರೆಗೆ 8 ಸಿನಿಮಾಗಳಲ್ಲಿ ನಟಿಸಿದ್ದಾರೆ. ಎಲೆಕ್ಟ್ರಾನಿಕ್‌ ಆಂಡ್‌ ಕಮ್ಯೂನಿಕೇಶನ್‌ನಲ್ಲಿ ಬಿಇ ಮಾಡಿದ್ದಾರೆ. 'ಗ್ರೇ ಶೇಡ್‌ನ ಈ ಪಾತ್ರ ಸಾಮಾನ್ಯ ಮನುಷ್ಯರ ಮುಚ್ಚಿಟ್ಟ ಭಾವನೆಗಳ ಪ್ರತೀಕ' ಅಂತ ತಮ್ಮ ಪಾತ್ರದ ಬಗ್ಗೆ ಹೇಳ್ತಾರೆ ದೀಪಕ್‌.

ನೀಲಿ ರೇಷ್ಮೆ ಸೀರೆಯುಟ್ಟು ನಸು ನಕ್ಕ ನಮ್ರತಾ ಗೌಡ, ನಿಮ್ಮಿಂದಲೇ ಟೆಂಪರೇಚರ್ ಹೆಚ್ಚಾಗ್ತಿದೆ ಎಂದ ಫ್ಯಾನ್ಸ್‌
 

click me!