ದೌರ್ಜನ್ಯದ ವಿರುದ್ಧ ನ್ಯಾಯ ಕೇಳಿದಾಕೆಗೆ ಕಠಿಣ ಶಿಕ್ಷೆ! ಏನು ಹೇಳಹೊರಟಿದೆ ಸೀರಿಯಲ್​? ರೊಚ್ಚಿಗೆದ್ದ ಫ್ಯಾನ್ಸ್​

By Suvarna NewsFirst Published Apr 26, 2024, 11:47 AM IST
Highlights

ಅತ್ತೆ ವಿಷ ಉಣಿಸಿದ್ದಾಳೆ ಎಂದು ಸತ್ಯ ನುಡಿದ ಸಹನಾಗೆ ಸಾಕ್ಷ್ಯಾಧಾರದ ಕೊರತೆಯಿಂದ ಏಳು ವರ್ಷ ಕಠಿಣ ಶಿಕ್ಷೆ ವಿಧಿಸಿದೆ ಕೋರ್ಟ್​. ರೊಚ್ಚಿಗೆದ್ದ ಅಭಿಮಾನಿಗಳು ಹೇಳ್ತಿರೋದೇನು?
 

ಧಾರಾವಾಹಿ, ಸಿನಿಮಾಗಳು ಎಂದರೆ ಜನರಿಗೆ ಬುದ್ಧಿ ಹೇಳಬೇಕು, ದೌರ್ಜನ್ಯದ ವಿರುದ್ಧ ಹೋರಾಡುವವರಿಗೆ ಪ್ರೇರಣೆಯಾಗಬೇಕು, ಜನರನ್ನು ಸರಿದಾರಿಗೆ ತರಲು ಪ್ರೋತ್ಸಾಹಿಸಬೇಕು ಎಂದೆಲ್ಲಾ ಅಂದುಕೊಳ್ಳುವುದು ಸಾಮಾನ್ಯ. ಆದರೆ ಇಂದು ಬಹುತೇಕ ಸಿನಿಮಾ, ಸೀರಿಯಲ್​ಗಳು ಇದಕ್ಕೆ ತದ್ವಿರುದ್ಧವಾಗಿದೆ ಎನ್ನುವುದೂ ಅಷ್ಟೇ ಸತ್ಯ. ಚಿತ್ರದ ಅಥವಾ ಸೀರಿಯಲ್​ನ ಕೊನೆಯಲ್ಲಿ ಒಳ್ಳೆಯವರಿಗೆ ಜಯ ಸಿಗುವುದನ್ನು ತೋರಿಸಲಾಗುತ್ತಿದ್ದರೂ ಅದರ ನಡುವಿನ ಅವಧಿಯಲ್ಲಿ ಸತ್ಯವಂತರು, ಒಳ್ಳೆಯವರು, ಮುಗ್ಧರು ಅನುಭವಿಸುವ ನೋವು, ಜೀವನದಪೂರ್ತಿ ಕೊರಗುವಿಕೆ ಎಲ್ಲವನ್ನೂ ನೋಡಿ ಪ್ರೇಕ್ಷಕರು ರೊಚ್ಚಿಗೇಳುವುದು ಉಂಟು. ಸಿನಿಮಾಗಳ ಮಾತಂತೂ ಬಿಡಿ. ಹೀರೋ ಕೈಯಲ್ಲಿಯೇ ಲಾಂಗು, ಮಚ್ಚು ಕೊಡಿಸಿ ಒಂದಷ್ಟು ಕೊಲೆ, ರಕ್ತಪಾತ ಮಾಡಿಸಿದರೆ ಚಿತ್ರಗಳು ಬ್ಲಾಕ್​ಬಸ್ಟರ್​ ಆಗುತ್ತವೆ ಎನ್ನುವ ಸಿದ್ಧ ಸೂತ್ರಕ್ಕೆ ನೇತುಬೀಳುತ್ತಿರುವುದು ಇಂದಿನ ಬಹುತೇಕ ಚಿತ್ರಗಳಲ್ಲಿ ನೋಡಬಹುದು. ಕೊನೆಯಲ್ಲಿ ಏನಾಗುತ್ತದೆ ಎನ್ನುವದಕ್ಕಿಂತಲೂ ಹೆಚ್ಚಾಗಿ ತಮ್ಮ ನಾಯಕನ ಕೈಯಲ್ಲಿ ಇವೆಲ್ಲವನ್ನೂ ನೋಡಿ ಅಪರಾಧ ಪ್ರಪಂಚಕ್ಕೆ ಇಳಿಯುತ್ತಿರುವ ಯುವ ಮನಸ್ಸುಗಳಿಗೆ ಲೆಕ್ಕವೇ ಇಲ್ಲ. ಅಪರಾಧ ಮಾಡಿ ಸಿಕ್ಕಿಬಿದ್ದ ಹಲವರು ತಾವು ಇಂಥ ನಾಯಕನಿಂದ, ಇಂಥ ಚಿತ್ರಗಳಿಂದ ಪ್ರೇರೇಪಣೆ ಪಡೆದು ರಕ್ತಪಾತ ಮಾಡಿರುವುದಾಗಿ ಹೇಳಿರುವ ಉದಾಹರಣೆಗಳೂ ಇವೆ.

ಅದೇನೇ ಇರಲಿ. ಇದೀಗ ನ್ಯಾಯ ಕೇಳಲು ಹೋದ ಪುಟ್ಟಕ್ಕನ ಮಗಳು ಸಹನಾಗೆ ಕೋರ್ಟ್​ ಏಳು ವರ್ಷಗಳ ಶಿಕ್ಷೆ ನೀಡಿದೆ! ಅದೂ ಡಿವೋರ್ಸ್​ ಕೇಸ್​ನಲ್ಲಿ! ತನ್ನ ಅತ್ತೆ ಕೊಲೆ ಮಾಡಲು ಸಂಚು ಮಾಡಿದ್ದಳು ಎಂದು ಸಹನಾ ಹೇಳಿದರೆ ಅದಕ್ಕೆ ಸಾಕ್ಷಿ ಒದಗಿಸುವಲ್ಲಿ ವಿಫಲವಾದ ಕಾರಣ,   ಕೋರ್ಟ್​ಗೆ ಸುಳ್ಳು ಹೇಳಿದ್ದಕ್ಕಾಗಿ ಶಿಕ್ಷೆ ನೀಡಲು ಹೊರಟಿದೆ ಕೋರ್ಟ್​! ಕೊನೆಗೆ ಕಾಳಿಯೋ, ಮತ್ಯಾರೋ ಸಾಕ್ಷಿ ತಂದು ಸಹನಾ ನಿರಪರಾಧಿ ಎಂದು ಮಾಡುವುದು ಸೀರಿಯಲ್​ಗಳಿಗೇನೂ ಹೊಸತಲ್ಲ. ಆದರೆ ಸದ್ಯ ಜೀ ಕನ್ನಡ ವಾಹಿನಿ ಬಿಡುಗಡೆ ಮಾಡಿರುವ ಪ್ರೊಮೋದಲ್ಲಿ ಸಹನಾಳಿಗೆ ಶಿಕ್ಷೆಯ ಪ್ರಮಾಣವನ್ನು ನ್ಯಾಯಾಧೀಶರು ನೀಡಿದ್ದಾರೆ.

ನಟಿ ಅದಿತಿ ಪ್ರಭುದೇವ ಮೊದಲ ಮಗಳಿಗೆ ಮೊದಲ ವರ್ಷದ ಹುಟ್ಟುಹಬ್ಬ! ಸೆಲಬ್ರೇಷನ್​ ಹೇಗಿದೆ ನೋಡಿ...

ಅಷ್ಟಕ್ಕೂ ಕೋರ್ಟ್​ಗಳಿಗೆ ಬೇಕಿರುವುದು ಸಾಕ್ಷ್ಯಾಧಾರಗಳೇ ಹೊರತು ಅದನ್ನು ಬಿಟ್ಟು ಅಲ್ಲಿ ಯಾವುದೂ ನಡೆಯುವುದಿಲ್ಲ ಎನ್ನುವುದು ಸತ್ಯವೇ. ಖುದ್ದು ಕೊಲೆ ಪಾತಕಿಯೇ ತಾನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡರೂ ಸೂಕ್ತ ಸಾಕ್ಷ್ಯಾಧಾರಗಳು ಕೋರ್ಟ್​ಗೆ ಬೇಕೇ ಬೇಕು. ಕೆಲವೊಂದು ಓಬಿರಾಯನ ಕಾಲದ ಕಾನೂನುಗಳು ಇಂದಿಗೂ ಚಾಲ್ತಿಯಲ್ಲಿರುವ ಕಾರಣ, ಅಪರಾಧಿಗಳು ಸುಲಭದಲ್ಲಿ ತಪ್ಪಿಸಿಕೊಳ್ಳುವ ಉದಾಹರಣೆಗಳೂ ನಿತ್ಯ ಜೀವನದಲ್ಲಿ ನಡೆಯುತ್ತಲೇ ಇರುತ್ತದೆ. ಹತ್ತಾರು ಅಪರಾಧಿಗಳು ತಪ್ಪಿಸಿಕೊಂಡರೂ ಓರ್ವ ನಿರಪರಾಧಿಗೆ ಶಿಕ್ಷೆಯಾಗಬಾರದು ಎನ್ನುತ್ತದೆ ನಮ್ಮ ಕಾನೂನು. ಆದರೆ ನಿಜ ಜೀವನದಲ್ಲಿ ಹಾಗೆ ಆಗುತ್ತಿದೆಯೆ?

ಇದೀಗ ಪುಟ್ಟಕ್ಕನ ಮಕ್ಕಳು ಸೀರಿಯಲ್​ನ ಸದ್ಯದ ಪ್ರೊಮೋ ನೋಡಿದ ಸೀರಿಯಲ್​ ಫ್ಯಾನ್ಸ್​ ರೊಚ್ಚಿಗೆದ್ದಿದ್ದಾರೆ. ಸೀರಿಯಲ್​ಗಳು ಏನು ಹೇಳಲು ಹೊರಟಿವೆ ಎಂದು ಪ್ರಶ್ನಿಸುತ್ತಿದ್ದಾರೆ. ಡಿವೋರ್ಸ್​ ಕೇಳಲು ಹೋದಾಕೆಗೆ ಬೇರೊಂದು ಕೇಸ್​ ಅದೂ ಸುಳ್ಳು ಕೇಸ್​ನಲ್ಲಿ ಶಿಕ್ಷೆ ಕೊಟ್ಟಿರುವುದು ಎಷ್ಟು ಸರಿ ಎಂದು ಫ್ಯಾನ್ಸ್ ಪ್ರಶ್ನಿಸುತ್ತಿದ್ದಾರೆ. ಸೀರಿಯಲ್​ಗಳಿಗೆ ಟ್ವಿಸ್ಟ್​ ತರುವುದಕ್ಕಾಗಿ ಕಪೋಕಲ್ಪಿತ ಕಥೆಗಳನ್ನು ಹೆಣೆದು, ಧಾರಾವಾಹಿಗಳನ್ನೇ ನಿಜ ಎಂದು ನಂಬಿರುವ ಪ್ರೇಕ್ಷಕರ ಮನಸ್ಸಿಗೆ ನೋವು ಮಾಡಬೇಡಿ, ಕೊನೆಗೆ ಯಾವ ಹೆಣ್ಣೂ ನ್ಯಾಯ ಕೇಳುವ ದನಿ ಎತ್ತದಂಥ ಸ್ಥಿತಿಗೆ ತರಬೇಡಿ ಎಂದು ಕಟುವಾಗಿ ಟೀಕೆ ವ್ಯಕ್ತವಾಗಿದೆ. ಈ ಸೀರಿಯಲ್​ನಲ್ಲಿ ಹೇಗೋ ಸಹನಾ ನಿರಪರಾಧಿ, ಆಕೆಯ ಅತ್ತೆಯೇ ತಪ್ಪಿತಸ್ಥೆ ಎಂದು ಕೊನೆಗೆ ತೋರಿಸುವುದು ನಿರ್ದೇಶಕರಿಗೆ ಸುಲಭ, ಆದರೆ ನಿಜ ಜೀವನದಲ್ಲಿ ಓರ್ವ ಹೆಣ್ಣು ದೌರ್ಜನ್ಯದ ವಿರುದ್ಧ ದನಿ ಎತ್ತಿದಾಗ ಅವಳಿಗೆ ಶಿಕ್ಷೆ ಆಗುತ್ತದೆ ಎಂದು ತೋರಿಸುವುದು ಎಷ್ಟು ಸರಿ ಎಂದು ಪ್ರಶ್ನಿಸುತ್ತಿದ್ದಾರೆ. 

ದಾವಣಗೆರೆ ಗರಿಗರಿ ಚುರುಮುರಿ ಹೇಗೆ ಮಾಡೋದು? ಸೀತಾರಾಮ ಪ್ರಿಯಾ ಅಮ್ಮ ಮಾಡಿದ್ರು ಟೇಸ್ಟಿ ಟೇಸ್ಟಿ ರೆಸಿಪಿ

click me!