
ಕಳೆದ ವಾರವಷ್ಟೇ 'ಬಿಗ್ ಬಾಸ್ ಸೀಸನ್ 12ರ' ಮನೆಯಿಂದ ಹೊರಬಂದಿರುವ ನಿರೂಪಕಿ ಜಾಹ್ನವಿ ಅವರು, ಸಂಪ್ರದಾಯದಂತೆ ತಮ್ಮ 'ಬಿಗ್ ಬಾಸ್' ಅನುಭವ ಹಂಚಿಕೊಳ್ಳುವುದಕ್ಕಿಂತ ಹೆಚ್ಚಾಗಿ, ತಮ್ಮ ವೈಯಕ್ತಿಕ ಜೀವನದ ಸೂಕ್ಷ್ಮ ವಿಚಾರಗಳನ್ನೇ ಮಾಧ್ಯಮಗಳಲ್ಲಿ ಮುಕ್ತವಾಗಿ ಮಾತನಾಡುತ್ತಿದ್ದಾರೆ. ಇದೇ ವೇಳೆ ನ್ಯೂಸ್ ಆಂಕರಿಂಗ್ ಅವಕಾಶಕ್ಕೂ ಮುನ್ನ ಧಾರಾವಾಹಿ ನಟನೆಗೆ ಬಂದಿದ್ದ ಅವಕಾಶವನ್ನು, ಗಂಡ ಹಾಗೂ ಅವರ ಕುಟುಂಬಕ್ಕಾಗಿ ಎಡಗಾಲಿನಿಂದ ಒದ್ದಿದ್ದಾಗಿ ಹೇಳಿಕೊಂಡಿದ್ದಾರೆ.
'ಪ್ರಜಾ ಮಾರ್ಗ ನ್ಯೂಸ್' ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ, ತಾವು ತಮ್ಮ ಮಾಜಿ ಪತಿ ಮತ್ತು ಅವರ ಕುಟುಂಬಕ್ಕಾಗಿ ಮಾಡಿದ 12 ವರ್ಷಗಳ ತ್ಯಾಗದ ಕುರಿತು ಭಾವುಕರಾಗಿ ತಮ್ಮ ನೋವನ್ನು ಹೊರಹಾಕಿದ್ದಾರೆ. ಜಾಹ್ನವಿ ಅವರ ವಿಚ್ಛೇದನಕ್ಕೆ 'ಗಿಚ್ಚಿ ಗಿಲಿ ಗಿಲಿ' ಕಾರ್ಯಕ್ರಮವೇ ಕಾರಣ ಎಂಬ ಮಾತುಗಳನ್ನು ನಿರಾಕರಿಸಿದ್ದಾರೆ. 'ಅದಕ್ಕೂ ಮೊದಲೇ ಒಂದು ಘಟನೆಯಿಂದ ನಮ್ಮ ಸಂಬಂಧದಲ್ಲಿ ಬಿರುಕು ಮೂಡಿತ್ತು. 'ಗಿಚ್ಚಿ ಗಿಲಿ ಗಿಲಿ'ಗೆ ಹೋದ ನಂತರ ನಮ್ಮ ಸಂಬಂಧ ಹಾಳಾಯ್ತು ಎನ್ನುವುದೆಲ್ಲಾ ಸುಳ್ಳು' ಎಂದು ಸ್ಪಷ್ಟಪಡಿಸಿದ್ದಾರೆ.
'ನಾನು ನನ್ನ ಆಸೆ-ಆಕಾಂಕ್ಷೆಗಳೆಲ್ಲವನ್ನೂ ನನ್ನ ಫ್ಯಾಮಿಲಿಗೋಸ್ಕರ ತ್ಯಾಗ ಮಾಡಿದ್ದೆ. ಸಿನಿಮಾ ಬೇಡ, ಸೀರಿಯಲ್ ಬೇಡ ಎಂದು ಗಂಡನ ಮನೆಯವರು ಹೇಳಿದಾಗಲೂ ಕೂಡ ನಾನು ಕುಟುಂಬಕ್ಕೋಸ್ಕರ 'ಓಕೆ' ಎಂದು ಸುಮ್ಮನಾದೆ. ಆ ನಂತರ ತುಂಬಾ ಕಷ್ಟಪಟ್ಟೆ. 'ಒಂದು ಅವಕಾಶ ಸಿಕ್ಕರೆ ಸಾಕು ಎಂದು ಹಲವಾರು ಜನ ಕಾಯುವ ಈ ಸಮಯದಲ್ಲಿ, 'ಕಿಚ್ಚ ಕ್ರಿಯೇಷನ್ಸ್' ಅಡಿ ನಿರ್ಮಾಣವಾದ 'ವಾರಸ್ಧಾರ' ಧಾರಾವಾಹಿಗೆ ನನ್ನನ್ನೇ ಕರೆದಿದ್ದರು. ಆಗ ನನ್ನ ಫ್ಯಾಮಿಲಿಗೋಸ್ಕರ ಬಂದಿದ್ದ ಈ ಅವಕಾಶವನ್ನು ಕೂಡ ನಾನು ಎಡಗಾಲಿನಲ್ಲಿ ಒದ್ದಿದ್ದೆ ಎಂದು ಹೇಳಿಕೊಂಡಿದ್ದಾರೆ.
ತಾವು ನ್ಯೂಸ್ ಫಸ್ಟ್ನಲ್ಲಿ ಕೆಲಸ ಮಾಡುವಾಗಲೇ ವೈಯಕ್ತಿಕ ಬದುಕಿನಲ್ಲಿ ಬಿರುಗಾಳಿ ಎದ್ದಿತ್ತು. ಈ ವಿಚಾರವನ್ನು ಯಾರ ಬಳಿಯೂ ಹೇಳಿಕೊಂಡಿರಲಿಲ್ಲ. 12 ವರ್ಷ ಎಲ್ಲವನ್ನೂ ಸಹಿಸಿಕೊಂಡು ಬಂದ ನಂತರ, ಇಷ್ಟೇನಾ? ಇವರಿಗೋಸ್ಕರಾನಾ ಹನ್ನೆರಡು ವರ್ಷ ತ್ಯಾಗ ಮಾಡಿದ್ದು? ಎಂಬ ಪ್ರಶ್ನೆಗಳು ತಮ್ಮನ್ನು ಕಾಡಲಾರಂಭಿಸಿವೆ. 'ನನ್ನ ಕನಸುಗಳನ್ನೆಲ್ಲಾ ಈಗಲಾದರೂ ನನಸು ಮಾಡಿಕೊಳ್ಳೋಣ ಎನ್ನುವ ತೀರ್ಮಾನಕ್ಕೆ ನಾನು ಆಗಲೇ ಬಂದೆ. ಆದರೆ, 'ಚಿತ್ರರಂಗಕ್ಕೆ ಬರಬೇಕು, ನಟಿಯಾಗಿ ಗುರುತಿಸಿಕೊಳ್ಳಬೇಕು ಎನ್ನುವ ಆಸೆಯಲ್ಲಿ ನಾನು ಮನೆ ಮತ್ತು ಕುಟುಂಬ ಬಿಟ್ಟು ಬಂದೆ ಎನ್ನುವುದೆಲ್ಲಾ ಸುಳ್ಳು. ಹಾಗೇನಾದರೂ ಬಿಡಬೇಕು ಎಂದಿದ್ದರೆ ಅದಕ್ಕೂ ಮೊದಲೇ ನಾನು ಬಿಡಬಹುದಿತ್ತಲ್ವಾ? ಎಂದು ನಿರೂಪಕರನ್ನೇ ಪ್ರಶ್ನಿಸಿದ್ದಾರೆ.
ನಾನು 'ಗಿಚ್ಚಿ ಗಿಲಿ ಗಿಲಿ' ಶೋಗೆ ಹೋಗಿ ಬಂದ ನಂತರವೇ ಅವಕಾಶಗಳ ಬಾಗಿಲು ತೆರೆಯಿತು. ಸಿನಿಮಾದಲ್ಲಿಯೂ ನಟಿಸಿದೆ. ನಮ್ಮ ಆಸೆ-ಕನಸುಗಳು ನಮ್ಮೊಳಗೆ ಜೀವಂತವಾಗಿದ್ದರೆ, ಅದಕ್ಕೆ ನಾವು ಕಷ್ಟಪಡುತ್ತಿದ್ದರೆ, ಆ ಭಗವಂತ ಯಾವಾಗಲಾದರೂ ನೀರೆರೆಯುತ್ತಾನೆ ಎನ್ನುವುದಕ್ಕೆ ನಾನೇ ಉದಾಹರಣೆ ಎಂದು ಹೇಳುವ ಮೂಲಕ ತಮ್ಮ ಹೋರಾಟಕ್ಕೆ ತಾರ್ಕಿಕ ಅಂತ್ಯ ನೀಡಲು ಹೊರಟಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.