
ಬಿಗ್ ಬಾಸ್ ಕನ್ನಡ ಸೀನಸ್ 12 (Bigg Boss Kannada Season 12) ರ ಶೋ ಗೊಂದಲದ ಗೂಡಾಗಿತ್ತು. ಬಿಗ್ ಬಾಸ್ ಶೋ ನಡೆಯುತ್ತಿದ್ದ ಜಾಲಿವುಡ್ (Jollywood) ಗೆ ಬೀಗ ಬೀಳ್ತಿದ್ದಂತೆ ಎಲ್ಲರು ಶಾಕ್ ಆಗಿದ್ರು. ಮುಂದೇನು ಎನ್ನುವ ಪ್ರಶ್ನೆ ಎದ್ದು ನಿಂತಿತ್ತು. ಇದಕ್ಕೆಲ್ಲ ಕಿಚ್ಚ ಸುದೀಪ್ (Kiccha Sudeep) ಪರಿಹಾರ ನೀಡಿದ್ದಾಗಿದೆ. ಜನರ ಬೆಂಬಲಕ್ಕೆ ಸದಾ ಕಿಚ್ಚ ಸುದೀಪ್ ನಿಲ್ತಾರೆ ಅನ್ನೋದನ್ನು ಇನ್ನೊಮ್ಮೆ ಸಾಭೀತುಪಡಿಸಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ 12 ಮತ್ತೆ ಶುರುವಾಗಲು ಕಾರಣವಾಗಿರುವ ಸುದೀಪ್ ತಮ್ಮ ಕರ್ತವ್ಯ ಮರೆತಿಲ್ಲ. ಶೋ ಪುನರಾರಂಭಕ್ಕೆ ಕಾರಣವಾದ ಪ್ರತಿಯೊಬ್ಬರಿಗೂ ಸುದೀಪ್ ಧನ್ಯವಾದ ಹೇಳಿದ್ದಾರೆ.
ಪರಿಸರ ಮಾಲಿನ್ಯ ನಿಯಮ ಉಲ್ಲಂಘನೆ ಹೆಸರಿನಲ್ಲಿ ಜಾಲಿವುಡ್ ಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಬೀಗ ಹಾಕಿದ್ದರು. ಅಲ್ಲಿಯೇ ಬಿಗ್ ಬಾಸ್ ಶೋ ನಡೆಯುತ್ತಿದ್ದರಿಂದ ಸ್ಪರ್ಧಿಗಳನ್ನು ಮನೆಯಿಂದ ಹೊರಗೆ ಹಾಕಲಾಗಿತ್ತು. ಸ್ಪರ್ಧಿಗಳು ರೆಸಾರ್ಟ್ ಸೇರಿದ್ದರು. ಬಿಗ್ ಬಾಸ್ ಶೋ ಅರ್ಧದಲ್ಲೇ ನಿಲ್ಲುತ್ತೆ ಎನ್ನುವ ಸುದ್ದಿ ವೀಕ್ಷಕರಿಗೆ ನೋವು ನೀಡಿತ್ತು. ಬಿಗ್ ಬಾಸ್ ಶೋ ನಿಲ್ಲಲು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕಿಚ್ಚ ಸುದೀಪ್ ಮಧ್ಯೆ ಹಿಂದೆ ನಡೆದಿದ್ದ ಮಾತೊಂದು ಕಾರಣ ಎನ್ನುವ ಚರ್ಚೆ ನಡೆದಿತ್ತು. ಆದ್ರೆ ಈಗ ಎಲ್ಲದಕ್ಕೂ ತೆರೆ ಬಿದ್ದಿದೆ. ಕಿಚ್ಚ ಸುದೀಪ್ ಮುಂದಾಳತ್ವದಲ್ಲಿ ಶೋ ಆರಂಭಗೊಂಡಿದೆ. ಇದಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೂಡ ಕಾರಣರಾಗಿದ್ದಾರೆ.
ಬಿಗ್ ಬಾಸ್ ಈಸ್ ಬ್ಯಾಕ್, ಎಂದಿನಂತೆ ಅದೇ ಸಮಯಕ್ಕೆ ಪ್ರಸಾರವಾಗಲಿದೆ ಶೋ
ಸುದೀಪ್ ತಮ್ಮ ಎಕ್ಸ್ ಖಾತೆಯಲ್ಲಿ ಡಿಕೆಶಿ, ಅಧಿಕಾರಿಗಳು ಹಾಗೂ ನಲಪಾಡ್ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ. ಸಮಯೋಚಿತ ಬೆಂಬಲ ನೀಡಿದ ಡಿಕೆಶಿ ಅವರಿಗೆ ನಾನು ಹೃತ್ಪೂರ್ವಕವಾಗಿ ಧನ್ಯವಾದ ಹೇಳುತ್ತೇನೆ. ಇತ್ತೀಚಿನ ಅವ್ಯವಸ್ಥೆ ಅಥವಾ ಗೊಂದಲಗಳಲ್ಲಿ ಬಿಗ್ ಬಾಸ್ ಕಾರಣವಲ್ಲ. ಬಿಗ್ ಬಾಸ್ ನಿಂದ ಯಾವುದೇ ತಪ್ಪಾಗಿಲ್ಲ ಎಂಬುದನ್ನು ಒಪ್ಪಿಕೊಂಡಿರುವ ಸಂಬಂಧಪಟ್ಟ ಅಧಿಕಾರಿಗಳಿಗೆ ನಾನು ಧನ್ಯವಾದ ಹೇಳುತ್ತೇನೆ ಎಂದು ಸುದೀಪ್ ಪೋಸ್ಟ್ ಮಾಡಿದ್ದಾರೆ. ಅಷ್ಟೇ ಅಲ್ಲ, ನನ್ನ ಕರೆಗೆ ತಕ್ಷಣ ಸ್ಪಂದಿಸಿದ್ದಕ್ಕಾಗಿ ಡಿಸಿಎಂ ಅವರಿಗೆ ನಾನು ಕೃತಜ್ಞನಾಗಿದ್ದೇನೆ. ನಲಪಾಡ್ ಅವರ ಸಮರ್ಪಿತ ಪ್ರಯತ್ನಗಳಿಗೆ ಧನ್ಯವಾದಗಳು ಎಂದು ಸುದೀಪ್ ಪೋಸ್ಟ್ ಹಂಚಿಕೊಂಡಿದ್ದಾರೆ. ಬಿಗ್ ಬಾಸ್ 12 ಇರುತ್ತೆ ಎನ್ನುವ ಭರವಸೆಯನ್ನು ಸುದೀಪ್ ನೀಡಿದ್ದಾರೆ.
ಮಂಗಳವಾರ ರಾತ್ರಿ ಜಾಲಿವುಡ್ ಗೆ ಬಾಗಿಲು ಹಾಕಲಾಗಿತ್ತು. ಬುಧವಾರ ರಾತ್ರಿ ಡಿ.ಕೆ. ಶಿವಕುಮಾರ್ ಎಕ್ಸ್ ಖಾತೆಯಲ್ಲಿ ಬಿಗ್ ಬಾಸ್ ಮತ್ತೆ ಶುರುವಾಗುವ ಬಗ್ಗೆ ಸ್ಪಷ್ಟನೆ ನೀಡಿದ್ದರು. ಜಾಲಿವುಡ್ ನಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ನಿಯಮಗಳನ್ನು ಉಲ್ಲಂಘಿಸಲಾಗಿದೆ. ಪರಿಸರ ನೈರ್ಮಲ್ಯ ಕಾಪಾಡಿಕೊಳ್ಳುವುದು ಮುಖ್ಯ ಆದ್ರೆ ಕನ್ನಡ ಮನರಂಜನೆಗೂ ಬೆಂಬಲ ನೀಡ್ಬೇಕು. ಹಾಗಾಗಿ ಜಾಲಿವುಡ್ ತೆರವು ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಪೋಸ್ಟ್ ಹಾಕುವ ಮೂಲಕ ಬಿಗ್ ಬಾಸ್ ಮತ್ತೆ ಶುರುವಾಗಲಿದೆ ಎನ್ನುವ ಸೂಚನೆ ನೀಡಿದ್ದರು. ಡಿ.ಕೆ. ಶಿವಕುಮಾರ್ ಈ ಪೋಸ್ಟನ್ನು ಸುದೀಪ್ ಹಂಚಿಕೊಳ್ಳುವ ಮೂಲಕ ಧನ್ಯವಾದ ಹೇಳಿದ್ದಾರೆ.
ಒಂಟಿ ಮನೆಯ ನೂರೆಂಟು ರಹಸ್ಯ! ಬಿಗ್ ಬಾಸ್ ಹುಟ್ಟಿ ಬೆಳೆದಿದ್ದೆಲ್ಲಿ, ಕನ್ನಡಕ್ಕೂ ಬಂದಿದ್ದು ಹೇಗೆ?
ಸುದೀಪ್ ಹೊಗಳಿದ ಫ್ಯಾನ್ಸ್ :
ಸುದೀಪ್ ಒಂದು ಫೋನ್ ಕಾಲ್ ನಿಂದ ಎಲ್ಲ ಸಮಸ್ಯೆಗೆ ಪರಿಹಾರ ಸಿಕ್ಕಿದೆ. ಕಿಚ್ಚನಿಂದ ಮಾತ್ರ ಇದು ಸಾಧ್ಯ ಅಂತ ಫ್ಯಾನ್ಸ್ ಕಮೆಂಟ್ ಮಾಡಿದ್ದಾರೆ. ಮಗು ಚಿವುಟಿದ್ದೂ ಇವರು, ತೊಟ್ಟಿಲು ತೂಗಿದ್ದೂ ಇವರು, ಇವರನ್ನು ಹೆಚ್ಚು ನಂಬಬೇಡಿ ಅಂದಿದ್ದಾರೆ ಫ್ಯಾನ್ಸ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.