ಕೊರಗಜ್ಜನಿಂದಲೇ ಬಿಗ್ ಬಾಸ್‌ ಗೆದ್ದದ್ದು; ರೂಪೇಶ್ ಶೆಟ್ಟಿ ಗೆಲುವಿನ ಹಿಂದಿರುವ ಸೀಕ್ರೆಟ್

By Suvarna NewsFirst Published Jan 9, 2023, 12:12 PM IST
Highlights

ಕಾಂತಾರ ಸಿನಿಮಾ ಬಳಿಕ ತುಳುನಾಡ ಜನಪದ ಸಂಸ್ಕೃತಿ, ದೈವಾರಾಧನೆ ರಾಷ್ಟ್ರಮಟ್ಟದಲ್ಲಿ ಜನಪ್ರಿಯತೆ ಪಡೆಯುತ್ತಿದೆ. ಇದೀಗ ಸುದ್ದಿಯಲ್ಲಿರೋದು ತುಳುನಾಡ ಕಾರಣಿಕ ದೈವ ಕೊರಗಜ್ಜ. ಬಿಗ್‌ ಬಾಸ್ ಸೀಸನ್ ೯ ವಿನ್ನರ್ ರೂಪೇಶ್‌ ಶೆಟ್ಟಿ ಗೆಲುವಿನ ಹಿಂದೆ ಈ ಕೊರಗಜ್ಜನ ಪವಾಡ ಇದೆಯಾ?

ತುಳುನಾಡ ದೈವ ಕೊರಗಜ್ಜನ ಪವಾಡ ಅಪಾರ. ಕೊರಗಜ್ಜನ ಮಹಿಮೆಯ ಬಗ್ಗೆ ತುಳುನಾಡ ಜನರಿಗೆ ಬಹಳ ನಂಬಿಕೆ ಇದೆ. ಅದಕ್ಕೆ ತಕ್ಕಂತೆ ಅನೇಕ ಪವಾಡಗಳು ನಡೆದಿವೆ. ಈ ದೈವದ ಬಗ್ಗೆ ಹಗುರವಾಗಿ ಮಾತನಾಡಿದವರಿಗೆ, ನಡೆದುಕೊಂಡವರಿಗೆ ಕೊರಗಜ್ಜ ಶಿಕ್ಷಿಸಿದ್ದೂ ಇದೆ. ಹಾಗೇ ನಂಬಿದವರನ್ನು ಕೈ ಹಿಡಿದು ಮೇಲೆತ್ತಿದ ಅನೇಕ ಉದಾಹರಣೆಗಳನ್ನೂ ತುಳುನಾಡ ಜನ ಭಕ್ತಿಯಿಂದ ಹೇಳುತ್ತಾರೆ. ತುಳುನಾಡ ದೈವ ಕೊರಗಜ್ಜನನ್ನು ಅನೇಕ ಸೆಲೆಬ್ರಿಟಿಗಳು ನಂಬಿದ್ದೂ ಇದೆ. ಇತ್ತೀಚೆಗೆ ಹ್ಯಾಟ್ರಿಕ್ ಹೀರೋ ಶಿವರಾಜ್‌ ಕುಮಾರ್ ಕೊರಗಜ್ಜ ಕ್ಷೇತ್ರಕ್ಕೆ ಭೇಟಿ ಮಾಡಿ ಭಕ್ತಿಯಿಂದ ಪೂಜೆ ಸಲ್ಲಿಸಿ ಬಂದಿದ್ದರು. ಇಂತಿಪ್ಪ ಕೊರಗಜ್ಜನ ಮಹಿಮೆಗೆ ಇನ್ನೊಂದು ಉದಾಹರಣೆ ಸಿಕ್ಕಿದೆ. ಈ ಬಾರಿಯ ಬಿಗ್‌ಬಾಸ್ ವಿನ್ನರ್ ರೂಪೇಶ್‌ ಶೆಟ್ಟಿಯ ಗೆಲುವಿನ ಹಿಂದೆ ಕೊರಗಜ್ಜನ ಪವಾಡ ಇದೆಯಾ ಅನ್ನುವುದು ಸದ್ಯದ ಪ್ರಶ್ನೆ.

ಇದಕ್ಕೆ ಹೌದು ಅನ್ನುವ ಉತ್ತರವನ್ನು ಸ್ವತಃ ರೂಪೇಶ್‌ ಶೆಟ್ಟಿ ಅವರೇ ನೀಡಿದ್ದಾರೆ. 'ಮಂಗಳೂರಿಗೆ ಬಂದಾಗ ಮೊದಲು ಹೋಗುವುದು ಕುತ್ತಾರಿ ಎಂಬ ಪ್ರದೇಶಕ್ಕೆ. ಇದು ನಾನು ನಂಬುವ ದೈವ ಕೊರಗಜ್ಜ ಕ್ಷೇತ್ರ. ಸೋ ಅವರು ಗೆಲ್ಲಿಸಿದ್ದಾರೆ, ಕೊರಗಜ್ಜ ಕಾಪಾಡಿದ್ದಾರೆ. ಅವರ ಕೃಪೆಯಿಂದಲೇ ನಾನು ಬಿಗ್ ಬಾಸ್ ಗೆದ್ದೆ' ಎಂದು ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿ ಹೇಳಿದ್ದಾರೆ.

ಬಿಗ್‌ಬಾಸ್ ಓಟಿಟಿ ಬಳಿಕ, ಬಿಗ್‌ಬಾಸ್ ಸೀಸನ್‌ ೯ನಲ್ಲಿ ರೂಪೇಶ್ ಶೆಟ್ಟಿ ಅವರ ಆಟ ಗಮನಸೆಳೆದಿತ್ತು. ಟಾಸ್ಕ್‌ನಲ್ಲಿ ವಿಜಯ ಸಾಧಿಸೋದ್ರಿಂದ ಹಿಡಿದು ಮಾನವೀಯತೆಯಿಂದ ವರ್ತಿಸೋ ಮೂಲಕವೂ ಇವರು ಗಮನ ಸೆಳೆದಿದ್ದರು. ಆದರೆ ಇವರು ಪ್ರತೀ ಟಾಸ್ಕ್ ಆಡುವ ಹೊತ್ತಲ್ಲೂ ತಾನು ನಂಬುವ ಕೊರಗಜ್ಜನನ್ನು ಸ್ಮರಿಸಿಯೇ ಟಾಸ್ಕ್ ಆಡಲು ಹೋಗುತ್ತಿದ್ದರಂತೆ. ಈ ಸ್ಪರ್ಧೆಯ ಪ್ರತಿ ಟಾಸ್ಕ್‌ ಆಡುವಾಗಲೂ ಕೊರಗಜ್ಜನಲ್ಲಿ ಪ್ರಾರ್ಥಿಸುತ್ತಿದ್ದೆ. ಅಲ್ಲಿ ಟಾಪ್‌ 5ಕ್ಕೇರಲು ಭಾರಿ ಪೈಪೋಟಿ ಇತ್ತು. ಆ ಸಂದರ್ಭ ಕೊರಗಜ್ಜನಲ್ಲಿ ಪ್ರಾರ್ಥಿಸಿ ಬೇಡಿಕೆ ಈಡೇರುವಂತೆ ಪ್ರಾರ್ಥನೆ ಮಾಡಿದ್ದೆ’ ಎನ್ನುತ್ತಾ ಕೊರಗಜ್ಜನನ್ನು ಭಕ್ತಿಯಿಂದ ಸ್ಮರಿಸಿದ್ದಾರೆ ರೂಪಿ.

60 ಲಕ್ಷದಲ್ಲಿ ಕೈಗೆ ಸಿಗೋದು 40 ಲಕ್ಷ ಮಾತ್ರ: ಮೊದಲು ನನ್ನ ಜೀವನ ನೋಡಿಕೊಳ್ಳಬೇಕು ಎಂದ ರೂಪೇಶ್ ಶೆಟ್ಟಿ

'ಕೊರಗಜ್ಜ ನನ್ನ ಆರಾಧ್ಯ ಮೂರ್ತಿ ಹಾಗೂ ಯಶಸ್ಸಿನ ಹಿಂದಿರುವ ಶಕ್ತಿ. ರಿಯಾಲಿಟಿ ಶೋ ಸ್ಪರ್ಧೆಯಲ್ಲಿ ಗೆಲ್ಲುವುದಕ್ಕಿಂತ ಮುಖ್ಯವಾಗಿ ಟಾಪ್‌ 5ಕ್ಕೆ ಬಂದರೆ ಮಂಗಳೂರಿಗೆ ತೆರಳಿದ ನಂತರ ಮೊದಲು ಭೇಟಿ ನೀಡುವುದೇ ಕೊರಗಜ್ಜ ಕ್ಷೇತ್ರಕ್ಕೆ ಎಂದು ಹರಕೆ ಹೊತ್ತಿದ್ದೆ, ಕೊರಗಜ್ಜ ನನ್ನನ್ನು ಗೆಲ್ಲಿಸಿದ್ದಾರೆ, ಈಗ ಆ ಕ್ಷೇತ್ರಕ್ಕೆ ಹೋಗುತ್ತಿದ್ದೇನೆ...' ಎಂಬ ರೂಪೇಶ್ ಮಾತುಗಳು ಇದೀಗ ವೈರಲ್ ಆಗುತ್ತಿವೆ.

'ಕೊರಗಜ್ಜ ಕ್ಷೇತ್ರಕ್ಕೆ ಹೋಗುವುದು ನನ್ನ ಬಯಕೆಯಾಗಿತ್ತು. ಇದನ್ನು ತಿಳಿದ ನನ್ನ ಗೆಳೆಯರು, ಅಭಿಮಾನಿಗಳು, ಬೆಂಬಲಿಗರು ವಿಜಯಯಾತ್ರೆ ಕಾರ್ಯಕ್ರಮ ಆಯೋಜಿಸಿ ನನ್ನನ್ನು ಆಹ್ವಾನಿಸಿದ್ದರು. ನಿಜಕ್ಕೂ ನನ್ನ ಅಭಿಮಾನಿಗಳ ಪ್ರತಿಕ್ರಿಯೆ ನೋಡಿ ತುಂಬಾ ಖುಷಿಯಾಗುತ್ತಿದೆ ಮತ್ತು ಮನತುಂಬಿ ಬರುತ್ತಿದೆ. ನನ್ನ ಗೆಲುವಿನಲ್ಲಿ ಕನ್ನಡಿಗರು, ತುಳುವರ ಪಾತ್ರ ದೊಡ್ಡದಿದೆ. ಅದರಲ್ಲೂ ನನ್ನ ತುಳುನಾಡಿನ ಬಂಧುಗಳು ದೊಡ್ಡ ರೀತಿಯಲ್ಲಿ ಬೆಂಬಲಿಸಿದ್ದಾರೆ. ಅವರಿಗೆ ಎಷ್ಟು ಥ್ಯಾಂಕ್ಸ್‌ ಹೇಳಿದರೂ ಸಾಲದು. ಮಂಗಳೂರಿಗೆ ಸಾಮಾನ್ಯವಾಗಿ ಸೆಲೆಬ್ರಿಟಿಗಳು(Celebrities) ಬಂದಾಗ ದೂರದಲ್ಲೇ ನಿಂತು ಅಭಿಮಾನ ತೋರಿಸುತ್ತಾರೆ. ಆದರೆ ಈ ವಿಜಯಯಾತ್ರೆಯಲ್ಲಿ ಅಭಿಮಾನಿಗಳ ಸ್ಪಂದನೆ ನೋಡುವಾಗ ಏನು ಹೇಳುವುದೆಂದೇ ತೋಚುತ್ತಿಲ್ಲ. ನಮ್ಮೂರಿನ ಜನರ ಪ್ರೀತಿ ಪ್ರಶಸ್ತಿ ಗೆದ್ದಿರುವುದಕ್ಕಿಂತಲೂ ಮಿಗಿಲು. ಇಡೀ ಕರ್ನಾಟಕದ ಜನರು ನನ್ನನ್ನು ಬೆಂಬಲಿಸಿದ್ದಾರೆ. ಅವರಿಗೆ ಎಷ್ಟು ಥ್ಯಾಂಕ್ಸ್‌ (Thanks) ಹೇಳಿದ್ರು ಕಡಿಮೆಯೇ ಎಂದು ರೂಪೇಶ್‌ ಶೆಟ್ಟಿ ಹೇಳಿದ್ದಾರೆ.

ಇದರ ಜೊತೆಗೆ ನಟ ರೂಪೇಶ್‌ ಶೆಟ್ಟಿ ತಾವು ರಿಯಾಲಿಟಿ ಶೋನಲ್ಲಿ ಗೆದ್ದ ಮೊತ್ತದಲ್ಲಿ ಶೇ.50ರಷ್ಟು ಸಮಾಜ ಸೇವೆಗೆ ವಿನಿಯೋಗಿಸುವುದಾಗಿ ಹೇಳಿದ್ದಾರೆ. ‘ ಪ್ರಶಸ್ತಿ ಗೆದ್ದ ಹಣದಲ್ಲಿಶೇ. 50ರಷ್ಟು ನನ್ನ ವೈಯಕ್ತಿಕ ಖರ್ಚಿಗೆ ತೆಗೆದುಕೊಳ್ಳುವೆ. ಉಳಿದ ಶೇ.50ರಲ್ಲಿ ಮೂರು ಬಡ ಕುಟುಂಬಗಳಿಗೆ ಮನೆ ಕಟ್ಟಿಕೊಡಲು ಹಾಗೂ ತುಳು-ಕನ್ನಡ ನಾಟಕ(Drama) ಕಲಾವಿದರಲ್ಲಿ ಕಷ್ಟದಲ್ಲಿದ್ದವರಿಗೆ ನೆರವು ನೀಡುತ್ತೇನೆ’ ಎನ್ನುವ ರೂಪೇಶ್ ಅವರ ಮಾತಿಗೆ ಅವರ ಫ್ಯಾನ್ಸ್(Fans) ಶಹಭಾಸ್ ಅನ್ನುತ್ತಿದ್ದಾರೆ. ಜೊತೆಗೆ ತನ್ನ ಗೆಲುವಿಗೆ ಕೊರಗಜ್ಜನ ದಯೆಯೇ ಕಾರಣ ಎಂಬ ರೂಪೇಶ್ ಮಾತುಗಳೂ ಇದೀಗ ವೈರಲ್ ಆಗುತ್ತಿವೆ.

ಕೊರಗಜ್ಜನ ಆದಿಕ್ಷೇತ್ರಕ್ಕೆ ಶಿವ ರಾಜ್ ಕುಮಾರ್ ಭೇಟಿ; ಯಾರು ಈ ಕೊರಗಜ್ಜ?

click me!