Latest Videos

500ರ ಸಂಭ್ರಮದಲ್ಲಿರೋ ಭಾಗ್ಯಳ ಕೈಗೆ ಬಂತು ಒಂದು ಲಕ್ಷ ರೂ. ಚೆಕ್​! ಗೃಹಿಣಿಯ ತಾಕತ್ತಿಗೆ ಶ್ಲಾಘನೆಗಳ ಮಹಾಪೂರ

By Suchethana DFirst Published Jun 13, 2024, 2:55 PM IST
Highlights

 500ರ ಸಂಭ್ರಮದಲ್ಲಿರೋ ಭಾಗ್ಯಳ ಕೈಗೆ ಬಂತು ಒಂದು ಲಕ್ಷ ರೂ. ಚೆಕ್​! ಒತ್ತು ಶ್ಯಾವಿಗೆಯಿಂದ ಖುಲಾಯಿಸಿದ ಭಾಗ್ಯ. ಏನಿದರ ಮಸಲತ್ತು?
 

ಅಳುಮುಂಜಿ ಭಾಗ್ಯ ಇನ್ನು ಹಸನ್ಮುಖಿ ಭಾಗ್ಯ. ಇದಕ್ಕೆ ಕಾರಣ ಅವಳ ಕೈಗೆ ಒಂದು ಲಕ್ಷ ರೂಪಾಯಿ ಚೆಕ್​ ಬಂದಿದೆ. ಹೌದು. ಭಾಗ್ಯಲಕ್ಷ್ಮಿ ಸೀರಿಯಲ್​ 500ನೇ ಸಂಚಿಕೆಗೆ ಭಾಗ್ಯಳ ಕೈಗೆ ಸ್ಟಾರ್​ ಹೋಟೆಲ್​ ಸಿಬ್ಬಂದಿ ಒಂದು ಲಕ್ಷ ರೂಪಾಯಿ ಚೆಕ್​ ಕೊಟ್ಟಿದ್ದಾರೆ. ಇದು ಅವಳ ಮೊದಲ ಸಂಬಳದ ಮುಂಗಡ ಹಣ. ಸಾಮಾನ್ಯವಾಗಿ ಸ್ಟಾರ್​ ಹೋಟೆಲ್​ಗಳಲ್ಲಿ ಶೆಫ್​ಗಳಿಗೆ ಲಕ್ಷಗಳಲ್ಲಿ ಸಂಬಳ ಇರುವುದು ಮಾಮೂಲು. ಕೆಲವೊಮ್ಮೆ ಶೆಫ್​ಗಳು ಬೇರೆ ಹೋಟೆಲ್​ಗಳಲ್ಲಿ ಕೆಲಸ ಮಾಡುತ್ತಿದ್ದರೆ, 2-3 ತಿಂಗಳ ಮುಂಗಡ ಹಣವನ್ನು ಕೊಟ್ಟು ದೊಡ್ಡ ಹೋಟೆಲ್​ಗಳಲ್ಲಿ ಅವರನ್ನು ಕರೆದುಕೊಳ್ಳುವ ವಾಡಿಕೆಯೂ ಇದೆ. ಅದರಲ್ಲಿಯೂ ವಿಶೇಷವಾದ ಖಾದ್ಯಗಳಲ್ಲಿ ಅವರು ಫೇಮಸ್​ ಆಗಿದ್ದರೆ, ಸಾಫ್ಟ್​ವೇರ್​ ಎಂಜಿನಿಯರ್​ಗಿಂತಲೂ 2-3 ಪಟ್ಟು ಸಂಬಳವನ್ನು ಬಾಣಸಿಗರು ಪಡೆಯುವುದು ಉಂಟು. ಅದೇ ರೀತಿಯಲ್ಲಿ ಭಾಗ್ಯಳ ಭಾಗ್ಯ ಖುಲಾಯಿಸಿದೆ. ಒತ್ತುಶ್ಯಾವಿಗೆಯ ಸ್ಪೆಷಲಿಸ್ಟ್​ ಆದ ಭಾಗ್ಯಳ ಕೈಗೆ ಒಂದು ಲಕ್ಷ ರೂಪಾಯಿ ಚೆಕ್​ ನೀಡಲಾಗಿದೆ.

ಅಷ್ಟೇ ಅಲ್ಲದೇ ಭಾಗ್ಯಳಿಗೆ ಇಂಗ್ಲಿಷ್​ ಬರುವುದಿಲ್ಲ ಎಂದು ಹೀಯಾಳಿಸುತ್ತಿದ್ದ ಸಿಬ್ಬಂದಿಯೇ ಅವಳ ಅಡುಗೆಯನ್ನು ಹಾಡಿ ಕೊಂಡಾಡುತ್ತಿದ್ದಾರೆ. ಅಂತೂ ಭಾಗ್ಯ ಗೃಹಿಣಿಯೊಬ್ಬಳು ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಿ ತೋರಿಸಿಯಾಳು ಎಂದು ಸಾಬೀತು ಮಾಡಿದ್ದಾರೆ. ಅಡುಗೆಯಲ್ಲಿ ಎಕ್ಸ್​ಪರ್ಟ್​ ಆದರೆ ಸಾಕು, ಎಲ್ಲಿಯಾದರೂ ಕೆಲಸ ಸಿಗುವುದು ಎಂಬುದನ್ನೂ ಭಾಗ್ಯ ತೋರಿಸಿಕೊಟ್ಟಿದ್ದಾಳೆ. ಒಂದು ಪೈಸೆಯನ್ನೂ ತನ್ನಿಂದ ದುಡಿಯಲು ಸಾಧ್ಯವಿಲ್ಲ ಎಂದುಕೊಂಡಿದ್ದ ಭಾಗ್ಯ ಈಗ ಲಕ್ಷಲಕ್ಷಗಳಲ್ಲಿ ದುಡಿಯುತ್ತಿದ್ದಾಳೆ. ಇನ್ನಾದರೂ ಈ ಅಳುಮುಂಜಿ ಪಾತ್ರಕ್ಕೆ ಫುಲ್​ಸ್ಟಾಪ್​ ಹಾಕಿ ಎನ್ನುತ್ತಿದ್ದಾರೆ ಅಭಿಮಾನಿಗಳು. ಕಳೆದ ಹಲವು ಹಂತುಗಳಲ್ಲಿ ಭಾಗ್ಯಳ ಗೋಳು ನೋಡಲಾಗುತ್ತಿರಲಿಲ್ಲ ಎಂದು ಶಪಿಸಿದವರೇ ಹೆಚ್ಚು. ಇನ್ನು ಈ ಸೀರಿಯಲ್​ ನೋಡುವುದನ್ನೇ ನಿಲ್ಲಿಸುವುದಾಗಿ ಹೇಳಿದವರೂ ಹಲವರು. ಈಗ ಭಾಗ್ಯಳ ಭಾಗ್ಯ ಖುಲಾಯಿಸಿದೆ. ಒತ್ತು ಶ್ಯಾವಿಗೆ ಹೇಗೆ ಮಾಡುವುದು ಎಂದು ನೆಟ್ಟಿಗರು ಸರ್ಚ್​ ಮಾಡಲು ಶುರುವಿಟ್ಟುಕೊಂಡಿದ್ದಾರೆ. 

ಅಷ್ಟಕ್ಕೂ, ಭಾಗ್ಯ ಸ್ಟಾರ್​ ಹೋಟೆಲ್​ನಲ್ಲಿ ಯಾರದ್ದೋ ಹೆಸರಿನಲ್ಲಿ ಸೇರಿಕೊಂಡುಬಿಟ್ಟಿದ್ದಳು. ಖುದ್ದು ಅವಳಿಗೂ ವಿಷಯ ಗೊತ್ತಿರಲಿಲ್ಲ. ಆದರೆ ಅಸಲಿಯತ್ತು ಗೊತ್ತಾಗುತ್ತಿದ್ದಂತೆಯೇ ಅವಳನ್ನು ಕೆಲಸದಿಂದ ಹೊರಹಾಕುವ ಪ್ರಯತ್ನ ನಡೆದಿತ್ತು. ಯಾವ ಕೆಲಸ ಕೊಟ್ಟರೂ ಸರಿ ಮಾಡುತ್ತೇನೆ, ಅಡುಗೆ ಕೆಲಸ ಕೊಡಿ ಎಂದರೂ ಯಾರೂ ಕೇಳುವ ಸ್ಥಿತಿಯಲ್ಲಿ ಇಲ್ಲ. ಇದಕ್ಕೆ ಕಾರಣ, ಅವಳಿಗೆ ಇಂಗ್ಲಿಷ್​ ಬರಲ್ಲ, ಸೀರೆಯುಡುವ ಅಪ್ಪಟ ಗೃಹಿಣಿ ಎನ್ನುವ ತಾತ್ಸಾರ. ಭಾಗ್ಯ ಹೋಟೆಲ್​ನವರಿಗೆ ಕಾಡಿ ಬೇಡಿದರೂ ಅವರಿಗೆ ಕರುಣೆ ಬರುವ ರೀತಿಯಲ್ಲಿ ಕಾಣಿಸುತ್ತಿರಲಿಲ್ಲ. ಭಾಗ್ಯಳ ಗೋಳು ನೋಡಿ ವೀಕ್ಷಕರಿಗೆ ತಲೆ ಚಿಟ್ಟು ಹಿಡಿದು ಹೋಗಿ ಸೋಷಿಯಲ್​ ಮೀಡಿಯಾದಲ್ಲಿ ಭಾರಿ ಟೀಕೆ ವ್ಯಕ್ತವಾಗಿತ್ತು.

ಒತ್ತು ಶ್ಯಾವಿಗೆಗಾಗಿ ಬಸ್​ ಹಿಂದೆ ಓಡಿದ ಸ್ಟಾರ್​ ಹೋಟೆಲ್​ ನೌಕರರು! ಇಂಗ್ಲಿಷ್​ ಹೋಗಿ ಕನ್ನಡವೂ ಬಂತು

 ಸ್ಟಾರ್​ ಹೋಟೆಲ್​ನ ಮೇನ್​ ಶೆಫ್​ ಅವಳನ್ನು ಇನ್ನೇನು ನೂಕಿ ಹೊರಹಾಕುವುದೊಂದೇ ಬಾಕಿ. ಅಷ್ಟರಲ್ಲಿಯೇ ಖ್ಯಾತ ಪತ್ರಕರ್ತರಾಗಿರುವ ಜೊತೆಗೆ ಬಿಗ್​ಬಾಸ್ ಸ್ಪರ್ಧಿಯೂ ಆಗಿದ್ದ ಗೌರೀಶ್​ ಅಕ್ಕಿ ಅವರ ಎಂಟ್ರಿಯಾಗಿತ್ತು. ಅವರಿಗೆ ಒತ್ತು ಶ್ಯಾವಿಗೆ ಬೇಕಾಗಿರುತ್ತದೆ. ಇದನ್ನು ಕೇಳಿದವರಿಗೆ ಪಕ್ಕದ ಚಿಕ್ಕ ಹೋಟೆಲ್​ನಿಂದ ಖರೀದಿ ಮಾಡುವ ಪಾಡು ಈ ಸ್ಟಾರ್​ ಹೋಟೆಲ್​ನವರದ್ದು. ಆದರೆ ಅಲ್ಲಿ ಅವರಿಗೆ ಸಿಗುವುದಿಲ್ಲ. ಅಷ್ಟರಲ್ಲಿಯೇ  ಮಧ್ಯೆ ಪ್ರವೇಶಿಸುವ ಭಾಗ್ಯ ತನಗೆ ಇದು ಚೆನ್ನಾಗಿ ಮಾಡುವುದು ಗೊತ್ತು. ನಾನು ಮಾಡುತ್ತೇನೆ ಎಂದರೂ ಮುಖ್ಯಸ್ಥ ಆಕೆಯನ್ನು ಹೀಯಾಳಿಸುತ್ತಾನೆ. ಒತ್ತು ಶ್ಯಾವಿಗೆ ಮಾಡಿಕೊಟ್ಟು ಹೋಟೆಲ್​ನವರ ಭಯದಿಂದ ಅಲ್ಲಿಂದ ಕಾಲ್ಕೀಳುತ್ತಾಳೆ ಭಾಗ್ಯ. ಪತ್ರಕರ್ತರಿಗೆ ಭಾಗ್ಯಳ ಒತ್ತುಶ್ಯಾವಿಗೆ ಇಷ್ಟವಾಗುತ್ತದೆ. ಆದರೆ ಇಲ್ಲೇ ಇದ್ದರೆ ಪೊಲೀಸರಿಗೆ ಕರೆಸುತ್ತೇನೆ ಎಂದು ಮುಖ್ಯಸ್ಥ ಹೆದರಿಸಿದ್ದರಿಂದ ಭಾಗ್ಯ ಅಲ್ಲಿಂದ ತಪ್ಪಿಸಿಕೊಂಡು ಹೋಗಿರುತ್ತಾಳೆ. ನಂತರ ಆಕೆಯನ್ನು ಹುಡುಕಿ ತಂದು 500ರ ಸಂಚಿಕೆಯಲ್ಲಿ ಒಂದು ಲಕ್ಷ ರೂಪಾಯಿ ನೀಡಲಾಗಿದೆ. 

ಪತ್ರಕರ್ತ ಶ್ಯಾವಿಗೆಯನ್ನು ಹೊಗಳಿ ಕೊಂಡಾಡಿದ ಬಳಿಕ, ಭಾಗ್ಯ ಎಲ್ಲಿ ಎಂದು ಕೇಳಿದಾಗ ಹಿತಾ ಭಾಗ್ಯ ಬಸ್​ ಹತ್ತಿಕೊಂಡು ಹೋದರು ಎನ್ನುತ್ತಾಳೆ. ಆಗ ಹೋಟೆಲ್​ ಸಿಬ್ಬಂದಿ ಭಾಗ್ಯ ಹತ್ತಿಕೊಂಡು ಹೋಗಿದ್ದ ಬಸ್​ ಹಿಂದೆ ಓಡುತ್ತಾರೆ. ಈ ಸನ್ನಿವೇಶ ಸಕತ್​ ಟ್ರೋಲ್​ ಆಗುತ್ತಿದೆ. ಅಂತೂ ಭಾಗ್ಯ ಸಿಗುತ್ತಾಳೆ.  ಆಕೆಯನ್ನು ಕರೆದುಕೊಂಡು ಬಂದಾಗ ಪತ್ರಕರ್ತ ಭಾಗ್ಯಳನ್ನು ಹೊಗಳುತ್ತಾರೆ. ಕೊನೆಗೆ ಭಾಗ್ಯಳಿಗೆ ಸ್ಟಾರ್​ ಹೋಟೆಲ್​ನಲ್ಲಿ ಕೆಲಸ ಸಿಗುತ್ತದೆ. ಅವಳಿಗಾಗಿ ರೂಲ್ಸ್​ ಕೂಡ ಚೇಂಜ್​ ಮಾಡಲಾಗುತ್ತದೆ. ಇನ್ನು ಮುಂದೆ ಕನ್ನಡದಲ್ಲಿಯೇ ಆರ್ಡರ್​ ಪಡೆದುಕೊಳ್ಳಬೇಕು ಎಂದು ಹೇಳಲಾಗುತ್ತದೆ. ಒಟ್ಟಿನಲ್ಲಿ ಭಾಗ್ಯಳ ಭಾಗ್ಯ ಖುಲಾಯಿಸಿದ್ದಕ್ಕೆ ಪ್ರೇಕ್ಷಕರಿಗೆ ಖುಷಿಯಾಗಿರುವುದು ಒಂದೆಡೆಯಾದರೆ, ಇದಕ್ಕಾಗಿ ಕೆಲವೊಂದು ಅಸಹಜ ಎನ್ನುವ ಘಟನೆಗಳನ್ನು ಸೇರಿಸಿದ್ದಕ್ಕೆ ಸಕತ್​ ಟೀಕೆಗಳೂ ವ್ಯಕ್ತವಾಗುತ್ತಿದೆ. 

ಪುಷ್ಪಾ-2 ಹಾಡಿಗೆ ಸೀತಾ-ರಾಮ ಭರ್ಜರಿ ರೀಲ್ಸ್: ಜೋಡಿಯ ನೋಡಿ ಪುನಃ ಮದ್ವೆ ವಿಷಯ ಕೆದಕಿದ ಫ್ಯಾನ್ಸ್​!


click me!