ಅಣ್ಣಯ್ಯ ಸೀರಿಯಲ್ನಲ್ಲಿ ರಶ್ಮಿ ಪಾತ್ರ ಮಾಡುತ್ತಿರುವ ನಟಿ ಪ್ರತೀಕ್ಷಾ ಶ್ರೀನಾಥ್ ದಪ್ಪ ಎನ್ನುವ ಕಾರಣಕ್ಕೆ ಬಾಡಿಶೇಮಿಂಗ್ ಮಾಡುವವರಿಗೆ ತಿರುಗೇಟು ನೀಡಿದ್ದಾರೆ. ಅವರು ಹೇಳಿದ್ದೇನು?
ಗುಂಡಮ್ಮ ಎಂದರೆ ಸಾಕು, ಸೀರಿಯಲ್ ಪ್ರೇಮಿಗಳಿಗೆ ಅಣ್ಣಯ್ಯ ಸೀರಿಯಲ್ ನಟಿ ರಶ್ಮಿ ನೆನಪಾಗ್ತಾಳೆ. ಯಾರೋ ಕಟ್ಟಬೇಕಿದ್ದ ತಾಳಿಯನ್ನು ಇನ್ನಾರದ್ದೋ ಕೈಯಲ್ಲಿ ಕಟ್ಟಿಸಿಕೊಂಡಿದ್ದಾಳೆ ಗುಂಡಮ್ಮ. ಅಣ್ಣ ಶಿವಣ್ಣನ ಮೇಲೆ ಪ್ರಾಣವನ್ನೇ ಇಟ್ಟುಕೊಂಡಿರುವ ಗುಂಡುಗೆ ಅಣ್ಣಯ್ಯನೇ ಎಲ್ಲಾ. ಅವನು ಹೇಳಿದ್ದಂತೆಯೇ ಕೇಳುವವಳು ಈಕೆ. ಮದುವೆಯ ದಿನ ವರದಕ್ಷಿಣೆಯ ಹಣ ಕಳುವಾದ ಕಾರಣ, ಮದುವೆ ಅಲ್ಲಿಗೇ ನಿಂತು ಹೋಗುವ ಸಮಯದಲ್ಲಿ, ಜಿಮ್ ಸೀನ ಅವಳಿಗೆ ತಾಳಿ ಕಟ್ಟುವ ಅನಿವಾರ್ಯತೆ ಎದುರಾಗುತ್ತದೆ. ಆದರೆ ಸೀನ ಇದಾಗಲೇ ಒಬ್ಬಳನ್ನು ಪ್ರೀತಿ ಮಾಡ್ತಿರುತ್ತಾನೆ. ಆದರೆ, ಈ ಸನ್ನಿವೇಶದಲ್ಲಿ ಹಣ ಕಳುವಿಗೆ ಅವನೇ ಕಾರಣ ಎನ್ನುವ ಆರೋಪ ಬಂದ ಕಾರಣದಿಂದ ಅನಿವಾರ್ಯವಾಗಿ ಮದುವೆಯಾಗಬೇಕಾಗುತ್ತದೆ.
ಇದು ಅಣ್ಣಯ್ಯ ಸೀರಿಯಲ್ ಕಥೆಯಾದರೆ, ಗುಂಡಮ್ಮ ಪಾತ್ರ ಮಾಡ್ತಿರೋರುವ ಗುಂಡುಗುಂಡಗೆ ಇರುವ ನಟಿ ಪ್ರತೀಕ್ಷಾ ಶ್ರೀನಾಥ್. ಇವರು ದಪ್ಪ ಇದ್ದ ಕಾರಣಕ್ಕೇನೇ ಈ ಸೀರಿಯಲ್ನಲ್ಲಿಯೂ ಗುಂಡಮ್ಮ ಎಂದೇ ಹೆಸರು. ಆದರೆ ನಟನೆ, ಟ್ಯಾಲೆಂಟ್ ಇವೆಲ್ಲವುಗಳಿಗೆ ತೂಕ ಕಾರಣವಾಗಲ್ಲ. ಅಭಿನಯದ ಚತುರತೆ ಇದ್ದರೆ ಆ ತೂಕದಲ್ಲಿಯೇ ನಟನೆಯಲ್ಲಿಯೂ ಸೈ ಎನ್ನಿಸಿಕೊಳ್ಳಬಹುದು ಎನ್ನುವುದನ್ನು ತೋರಿಸುತ್ತಿರುವ ಕೆಲವು ನಟಿಯರ ಪೈಕಿ ಪ್ರತೀಕ್ಷಾ ಕೂಡ ಒಬ್ಬರು. ಸೌಂದರ್ಯ ಎಂದರೆ ತೆಳ್ಳಗೆ, ಬೆಳ್ಳಗೆ ಎನ್ನುವ ಒಂದು ಕಾನ್ಸೆಪ್ಟ್ ಬಹುತೇಕ ಮಂದಿಯ ತಲೆಯಲ್ಲಿ ಬಂದುಬಿಟ್ಟಿದೆ. ಇದೇ ಕಾರಣಕ್ಕೆ ತೆಳ್ಳಗಾಗಲು ಹೋಗಿ ಜೀವ ಕಳೆದುಕೊಂಡವರೂ ಇದ್ದಾರೆ, ತೀರಾ ರೋಗಿಷ್ಟರು ಎನ್ನಿಸುವ ರೀತಿಯಲ್ಲಿ ತೆಳ್ಳಗೆ ಕಾಣಿಸುವವರೂ ಇದ್ದಾರೆ. ಆದರೆ, ಇವೆಲ್ಲವುಗಳ ನಡುವೆಯೂ ಸೌಂದರ್ಯದ ಪರಿಕಲ್ಪನೆಯನ್ನೇ ಬದಲು ಮಾಡುತ್ತಿರುವ ಕೆಲವು ನಟಿಯರೂ ಇದ್ದಾರೆ.
ಮೊದಲ ರಾತ್ರಿಯಂದೇ ಮಂಚ ಮುರಿದ ಗುಂಡಮ್ಮನ ರಿಯಲ್ ಪತಿ ಹೇಗಿರಬೇಕು? ಅಣ್ಣಯ್ಯ ನಟಿಯ ಕನಸು ಕೇಳಿ...
ಅಂಥ ನಟಿಯರಲ್ಲಿ ಒಬ್ಬರಾಗಿರುವ ಗುಂಡಮ್ಮ ಅರ್ಥಾತ್ ಪ್ರತೀಕ್ಷಾ ಅವರು, ದಪ್ಪಗೆ ಇರುವ ಕಾರಣದಿಂದ ತಾವು ಈ ಹಿಂದೆ ಅನುಭವಿಸಿದ ಬಾಡಿ ಶೇಮಿಂಗ್ ಬಗ್ಗೆ ಮಾತನಾಡುತ್ತಲೇ ದಪ್ಪ ದಪ್ಪ ಎನ್ನುವವರಿಗೆ ತಿರುಗೇಟನ್ನೂ ನೀಡಿದ್ದಾರೆ. ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಪ್ರತೀಕ್ಷಾ ಅವರು, ಈ ಹಿಂದೆ ಹಲವು ಬಾರಿ ದಪ್ಪ ಇರೋ ಕಾರಣದಿಂದ ಹಿಂಸೆ ಅನುಭವಿಸಿದ್ದು ಇದೆ. ಪಕ್ಕದ ಮನೆಯಾಕೆಯೊಬ್ಬರು ನಾನು ಹೋದಲ್ಲಿ ಬಂದಲ್ಲಿ ಪಾಪ ಪಾಂಡು ಪಾಚು ಎಂದೇ ಕರೆಯುತ್ತಿದ್ದರು. ಆಮೇಲೆ ಗೊತ್ತಾಯ್ತು ನನ್ನನ್ನು ನಟಿ ಶಾಲಿನಿ ಅವರಿಗೆ ಕಂಪೇರ್ ಮಾಡುತ್ತಿದ್ದಾರೆ ಎಂದು. ಆದರೆ ಶಾಲಿನಿ ಅವರಂಥ ನಟಿ, ಅವರ ನಟನೆಗೆ ಫಿದಾ ಆಗಿರುವವರಲ್ಲಿ ನಾನೂ ಒಬ್ಬಳು. ಅವರ ನಟನೆಯ ಕೌಶಲ ನೋಡಿದರೆ, ಅವರ ದೇಹದ ತೂಕ ಅಲ್ಲಿ ಗಣನೆಗೆ ಬರುವುದೇ ಇಲ್ಲ. ಆದರೆ, ದೇಹದ ತೂಕವನ್ನೇ ಇಟ್ಟುಕೊಂಡು ಮಾತನಾಡುತ್ತಾರೆ. ಅಂಥವರಿಗೆ ನಾನು ಉತ್ತರಿಸಲು ಹೋಗುವುದೇ ಇಲ್ಲ ಎಂದಿದ್ದಾರೆ.
ತಮ್ಮ ಅಜ್ಜಿ ಮೊದಲಿನಿಂದಲೂ ನನಗೆ ಆಟವಾಡಲು, ಸೈಕ್ಲಿಂಗ್ಗೆ ಒತ್ತಾಯ ಮಾಡುತ್ತಿದ್ದರು. ಅಂದ ಮಾತ್ರಕ್ಕೆ ನಾನು ಸಣ್ಣ ಆಗಲಿ ಎಂದೇನಲ್ಲ. ಆದರೆ ಆರೋಗ್ಯವಂತೆ ಆಗಿರಬೇಕು, ಹಾಸಿಗೆ ಹಿಡಿಯಬಾರದು ಎನ್ನುವ ಕಾರಣಕ್ಕೆ. ಅದನ್ನೇ ನಾನು ಈಗ ಹೇಳುವುದು. ದಪ್ಪ ದಪ್ಪ ಎಂದಲ್ಲ, ದಪ್ಪ ಇದ್ದು ಎಷ್ಟು ಫಿಟ್ ಆಗಿದ್ದೇವೆ ಎನ್ನುವುದು ಮುಖ್ಯ. ಸಣ್ಣಗೆ ಇದ್ದು ಅನಾರೋಗ್ಯ ಪೀಡಿತರಾಗುವುದಕ್ಕಿಂತಲೂ ದಪ್ಪ ಇದು ಆರೋಗ್ಯವಂತರಾಗಿರುವುದು ಮುಖ್ಯವಾಗುತ್ತದೆ. ಈಗ ನನ್ನ ಬಾಡಿ ಶೇಮಿಂಗ್ ಮಾಡಲು ಬರುವವರಿಗೆ ಹೇಗೆ ಉತ್ತರಿಸಬೇಕು ಎನ್ನುವುದು ನನಗೆ ಚೆನ್ನಾಗಿ ಗೊತ್ತಿದೆ ಎನ್ನುತ್ತಲೇ ಕೇವಲ ದೇಹದ ತೂಕದ ಮೇಲೆ ಸೌಂದರ್ಯವನ್ನು ಅಳೆಯುವವರಿಗೆ ತಿರುಗೇಟು ನೀಡಿದ್ದಾರೆ ಪ್ರತೀಕ್ಷಾ.
ನೆಟ್ಟಿಗರ ಕಮೆಂಟ್ಸ್ ನೋಡಿ ಸ್ಟೋರಿ ಬರೆದ್ರು: ಅಣ್ಣಯ್ಯ ಸೀರಿಯಲ್ನ ಕುತೂಹಲದ ಮಾಹಿತಿ ಹೇಳಿದ ಗುಂಡಮ್ಮಾ