ಪುಟ್ಟಗೌರಿ ಅಜ್ಜಮ್ಮ ಈಗ ಮಂಜಮ್ಮ: ಹೊಸ ಸೀರಿಯಲ್‌ನಲ್ಲಿ ಚಂದ್ರಕಲಾ ಮೋಹನ್‌

By Suvarna NewsFirst Published Jan 17, 2023, 2:55 PM IST
Highlights

ಪುಟ್ಟಗೌರಿ ಮದುವೆಯ ಅಜ್ಜಮ್ಮ ಪಾತ್ರದಲ್ಲಿ ಮಿಂಚಿ ಮನೆ ಮಾತಾದ ನಟಿ ಚಂದ್ರಕಲಾ ಮೋಹನ್‌. ಅವರೀಗ ಮಂಜಮ್ಮನಾಗಿದ್ದಾರೆ. ಹೊಸ ಸೀರಿಯಲ್‌ನಲ್ಲಿ ಮಂಜಮ್ಮ ಪಾತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ.

ಚಂದ್ರಕಲಾ ಮೋಹನ್‌ ಕನ್ನಡ ಕಿರುತೆರೆಯ ಪ್ರತಿಭಾನ್ವಿತ ನಟಿ. 'ಪುಟ್ಟಗೌರಿ' ಮದುವೆ ಸೀರಿಯಲ್‌ ಅಜ್ಜಮ್ಮನಾಗಿ ಮನೆಮಾತಾದ ನಟಿ ಇವರು. ಈ ಸೀರಿಯಲ್ ಪ್ರಸಾರವಾಗಿ ಮುಕ್ತಾಯವಾಗಿ ಸಾಕಷ್ಟು ಕಾಲವಾಗಿದೆ. ಆದರೆ ಈ ಸೀರಿಯಲ್‌ ಮುಗಿದು ಇಷ್ಟು ವರ್ಷವಾದರೂ ಜನ ಅಜ್ಜಮ್ಮನಾಗಿಯೇ ಅವರನ್ನಿನ್ನೂ ಜನ ಗುರುತಿಸುತ್ತಿದ್ದಾರೆ. ಈ ಸೀರಿಯಲ್‌ ಬಳಿಕ ಅವರು ಸಿನಿಮಾಗಳಲ್ಲಿ ನಟಿಸಿದರು. ಆದರೆ ಅವರಿಗೆ ಮತ್ತೊಮ್ಮೆ ಪ್ರಸಿದ್ಧಿ ತಂದುಕೊಟ್ಟದ್ದು ಬಿಗ್‌ಬಾಸ್. ಇದೀಗ ಸೂಪರ್‌ ಕ್ವೀನ್ಸ್‌ ರಿಯಾಲಿಟಿ ಶೋ ಮೂಲಕ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಬಹಳ ಕಷ್ಟದಿಂದ ಮೇಲೆ ಬಂದ ಚಂದ್ರಕಲಾ ಇಂದಿಗೂ ಆ ದಿನಗಳು ನೆನಪಾದರೆ ಕಣ್ಣೀರಾಗುತ್ತಾರೆ. ಬಿಗ್‌ಬಾಸ್ ಶೋ ಅವರ ಕಣ್ಣೀರ ಕಥೆಗೂ ಸಾಕ್ಷಿಯಾಗಿತ್ತು. ಆದರೆ ನಟನೆ ವಿಷಯಕ್ಕೆ ಬಂದರೆ ಮಾತ್ರ ಇವರನ್ನು ಮೀರಿಸೋರಿಲ್ಲ. ಕುಡುಕ, ಗಯ್ಯಾಳಿ, ಭಾವುಕ ಹೀಗೆ ಎಂಥ ಪಾತ್ರವಾದರೂ ಕ್ಷಣಮಾತ್ರದಲ್ಲಿ ಪರಕಾಯ ಪ್ರವೇಶ ಮಾಡಿಬಿಡುತ್ತಾರೆ.

ಇದೀಗ ಈ ಪ್ರತಿಭಾನ್ವಿತ ನಟಿ ಹೊಸ ಸೀರಿಯಲ್‌ ಒಂದರಲ್ಲಿ ನಟಿಸುತ್ತಿದ್ದಾರೆ. ಅದು ಪೌರಾಣಿಕ ಸೀರಿಯಲ್‌ ಅನ್ನೋದು ವಿಶೇಷ. ಹಾಗೆ ನೋಡಿದರೆ ಚಂದ್ರಕಲಾ ಮೋಹನ್‌ ಅವರಿಗೆ ಪೌರಾಣಿಕ ಸೀರಿಯಲ್‌ಗಳ ನಟನೆ ಹೊಸತಲ್ಲ. ಅವರು ರಂಗಭೂಮಿಯಲ್ಲಿದ್ದಾಗಲೂ ಪೌರಾಣಿಕ ಪಾತ್ರಗಳಲ್ಲಿ ನಟಿಸುತ್ತಿದ್ದರು. ರೀಸೆಂಟಾಗಿ 'ದಾಸ ಪುರಂದರ' ಸೀರಿಯಲ್‌ನಲ್ಲಿ(Serial) ಅತ್ತೆ ಪಾತ್ರದ ಮೂಲಕ ಪ್ರತಿಭೆ ಮೆರೆದಿದ್ದರು. ಕಳೆದ ಒಂದು ವರ್ಷದಿಂದ 'ದಾಸ ಪುರಂದರ' ಧಾರಾವಾಹಿಯಲ್ಲಿ ಅತ್ತೆಯ ಪಾತ್ರವನ್ನು ಇವರು ಲೀಲಾಜಾಲವಾಗಿ ನಟಿಸಿದ್ದು ಪ್ರೇಕ್ಷಕರ ಮೆಚ್ಚುಗೆಗೆ ಕಾರಣವಾಗಿತ್ತು. ಆದರೆ ಮಧ್ಯದಲ್ಲೇ ಈ ಸೀರಿಯಲ್‌ನಿಂದ ಹೊರಬರಬೇಕಾಯ್ತು. ಈ ಧಾರಾವಾಹಿಯಿಂದ ಅರ್ಧಕ್ಕೆ ಹೊರ ನಡೆದು ನಂತರ ಜೀ ಕನ್ನಡದಲ್ಲಿ ಮೂಡಿ ಬಂದ 'ಸೂಪರ್ ಕ್ವೀನ್ಸ್' ಎಂಬ ರಿಯಾಲಿಟಿ ಶೋ(Reality show)ನಲ್ಲಿ ಭಾಗವಹಿಸಿದ್ದಾರೆ. ಚಂದ್ರಕಲಾ ನಟನೆಯ ಪೌರಾಣಿಕ ಧಾರಾವಾಹಿ ಇದೇ ತಿಂಗಳ 23ರಿಂದ ರಾತಿ 8.30ಗೆ ಪ್ರಸಾರವಾಗಲಿದೆ. 'ಉಧೋ ಉಧೋ ರೇಣುಕಾದೇವಿ ಯಲ್ಲಮ್ಮ' ಧಾರಾವಾಹಿಯಲ್ಲಿ ಮಂಜಮ್ಮ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಧಾರಾವಾಹಿಯಲ್ಲಿ ನಟಿಸಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಚಂದ್ರಕಲಾ ಅವರು ಎಲ್ಲರನ್ನು ಧನ್ಯವಾದ ಹೇಳಿದ್ದಾರೆ. ಈ ಸೀರಿಯಲ್‌ ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಮೂಡಿ ಬರಲಿದೆ.

ರಿಯಲ್ ಲೈಫಲ್ಲಿ ಸಖತ್ ಗ್ಲಾಮರಸ್ ಆಗಿದ್ದಾರೆ ಈ ಆನ್ ಸ್ಕ್ರೀನ್ ಅಮ್ಮಂದಿರು

ಚಂದ್ರಕಲಾ ಸಿನಿಮಾಗಳಲ್ಲೂ ನಟಿಸಿದ್ದಾರೆ. 'ಋಣಾನುಬಂಧ' ಚಿತ್ರದ ಸೌಮ್ಯ ಸ್ವಭಾವದ ಪಾತ್ರಕ್ಕೆ ಶ್ರೇಷ್ಠ ಪೋಷಕ ನಟಿ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ. ಆದರೆ ಕಿರುತೆರೆಯಲ್ಲಿ ಇವರು ಕಿರುಚಾಡುವ ಗಯ್ಯಾಳಿ ಪಾತ್ರಗಳಲ್ಲೇ ಹೆಚ್ಚು ಪರಿಚಿತ. ಮಂಡ್ಯದ ಹೊಸಹಳ್ಳಿಯವರಾದ ಚಂದ್ರಕಲಾ ತಮ್ಮ ಹತ್ತನೇ ವಯಸ್ಸಿನಲ್ಲಿಯೇ ಬಣ್ಣ ಹಚ್ಚಿದವರು. ರಂಗಭೂಮಿಯಲ್ಲಿ ಸಕ್ರಿಯರಾಗಿದ್ದವರು. ಕುರುಕ್ಷೇತ್ರ, ದಕ್ಷಯಜ್ಞ, ಶ್ರೀ ಕೃಷ್ಣ ಸಂಧಾನ, ರ್ತನ ಮಾಂಗಲ್ಯ, ಬಸ್ ಕಂಡಕ್ಡರ್, ಸತಿ ಸಂಸಾರದ ಜ್ಯೋತಿ, ಗೌಡ್ರ ಗದ್ಲ, ಹೀಗೆ ಬಹಳಷ್ಟು ನಾಟಕಗಳಲ್ಲಿ ನಟಿಸಿದ್ದಾರೆ. ನಟಿ ಶ್ರುತಿ ಅವರಿಗೆ ಸಂಬಂಧದಲ್ಲಿ ಇವರು ಚಿಕ್ಕಮ್ಮನಾಗಬೇಕು. ಮದುವೆಯಾದ ನಂತರ ದೂರದರ್ಶನದಲ್ಲಿ ಪ್ರಸಾರವಾದ 'ಮರೀಚಿಕೆ' ಧಾರಾವಾಹಿಯ ಮೂಲಕ ಕಿರುತೆರೆ ಪ್ರವೇಶ ಮಾಡಿದ ಇವರು ನಂತರ ಜೀವನ, ಕುಸುಮಾಂಜಲಿ, ರಂಗೋಲಿ, ಗೋಧೂಳಿ, ಎಸ್ಸೆಸ್ಸೆಲ್ಸಿ ನನ್ಮಕ್ಳು, ಮೂಡಲ ಮನೆ ಮುಂತಾದ ಧಾರಾವಾಹಿಗಳಲ್ಲೂ ನಟಿಸಿದ್ದಾರೆ. ಜೊತೆಗೆ ರಾಜಧಾನಿ, ಭದ್ರ ಮುಂತಾದ ಸಿನಿಮಾಗಳಲ್ಲಿಯೂ ನಟಿಸಿ ಎಲ್ಲಾ ಕಡೆ ಸಲ್ಲಬಲ್ಲವರು ಎನಿಸಿಕೊಂಡಿದ್ದಾರೆ. ಇನ್ನು ಕೃಷ್ಣ-ರುಕ್ಮಿಣಿ ಧಾರಾವಾಹಿಯ ಗೌಡ್ತಿಯಾಗಿ, ಬೆಂಕಿಯಲ್ಲಿ ಅರಳಿದ ಹೂವು ಧಾರಾವಾಹಿಯಲ್ಲಿ ಖಳನಾಯಕಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. 'ಪುಟ್ಟ ಗೌರಿ ಮದುವೆ' ಧಾರಾವಾಹಿಯಲ್ಲಿ ಅಜ್ಜಿ ಪಾತ್ರ ಮಾಡಿ ಮನೆ ಮನೆ ಮಾತಾದರು. ಬಹುತೇಕ ಧಾರಾವಾಹಿಯಲ್ಲಿ ವಿಲನ್‌ ಪಾತ್ರಗಳಿಗೇ ಬಣ್ಣ ಹಚ್ಚಿದ್ದಾರೆ.

ಇದೀಗ ಇವರ ಹೊಸ ಪಾತ್ರ ಮಂಜಮ್ಮನಿಗೆ ಜನ ಎದುರು ನೋಡುತ್ತಿದ್ದಾರೆ.

ಅಸಲಿ ಬಿಗ್ ಬಾಸ್ ವಿನ್ನರ್ ಅನುಪಮಾ ಗೌಡ; ಹೊರ ಬರುತ್ತಿದ್ದಂತೆ ಸಿಗ್ತು ಭರ್ಜರಿ ಗಿಫ್ಟ್‌

click me!