
ಬೆಂಗಳೂರು (ಮಾ.3): ಇಂದಿನ ಜಾಗತಿಕ ರಾಜಕೀಯ ವಿದ್ಯಮಾನಗಳನ್ನು ಗಮನಿಸಿದರೆ, ಜಗತ್ತು ಅತ್ಯಂತ ಅಪಾಯಕಾರಿ ದಿಕ್ಕಿನತ್ತ ಸಾಗುತ್ತಿದೆ ಎಂಬುದು ಸ್ಪಷ್ಟವಾಗುತ್ತಿದೆ ಎಂದು ನಟ ಹಾಗೂ ಸಾಮಾಜಿಕ ಕಾರ್ಯಕರ್ತ ಕಿಶೋರ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇರಾನ್ ಮೇಲೆ ಅಮೆರಿಕ ಹಾಗೂ ಇಸ್ರೇಲ್ ನಡೆಸಿರುವ ಜಂಟಿ ದಾಳಿಯನ್ನು ಭಾರತ ಖಂಡಿಸದೇ ಇರೋದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಕಿಶೋರ್, ಜಗತ್ತು ನಮ್ಮನ್ನು ಹೇಡಿ, ಅವಕಾಶವಾದಿಗಳ ದೇಶ ಎಂದು ಕೀಳಾಗಿ ನೋಡುವಂತೆ ಮೋದಿ ಮಾಡಿದ್ದಾರೆ ಎಂದಿದ್ದಾರೆ. ಇತಿಹಾಸದ ಕ್ರೂರಿ ಹಿಟ್ಲರ್ನ ಅಗ್ಗದ ನಕಲಿಗಳಂತಿರುವ ಇಂದಿನ ಕೆಲವು ನಾಯಕರು ತಮ್ಮ ಅಧಿಕಾರದ ಹಪಹಪಿಯಿಂದಾಗಿ ಇಡೀ ಜಗತ್ತನ್ನು ವಿನಾಶದ ಅಂಚಿಗೆ ತಳ್ಳುತ್ತಿದ್ದಾರೆ. ದುರದೃಷ್ಟವಶಾತ್, ಈ ಯುದ್ಧಕೋರ ಮೂರ್ಖರ ಹಾವಳಿಯಿಂದಾಗಿ ಜಗತ್ತಿನ ಶಾಂತಿ ಮತ್ತು ಸುವ್ಯವಸ್ಥೆ ಹದಗೆಡುತ್ತಿದೆ ಎಂದು ಸೋಶಿಉಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಭಾರತವು ಮೊದಲಿನಿಂದಲೂ ತನ್ನದೇ ಆದ ನೈತಿಕ ಮೌಲ್ಯಗಳು ಮತ್ತು ಅಲಿಪ್ತ ನೀತಿಗೆ ಹೆಸರಾಗಿತ್ತು. ಆದರೆ, ಇಂದಿನ ನಾಯಕತ್ವವು ಆ ಮೌಲ್ಯಗಳನ್ನು ಗಾಳಿಗೆ ತೂರಿದಂತಿದೆ. ನಮ್ಮ ಮಿತ್ರ ರಾಷ್ಟ್ರಗಳ ಮೇಲೆ ಅನೈತಿಕ ದಾಳಿಗಳು ನಡೆಯುತ್ತಿದ್ದರೂ, ನಮ್ಮ ನಾಯಕತ್ವವು ಗಟ್ಟಿಯಾದ ನಿಲುವನ್ನು ತೆಗೆದುಕೊಳ್ಳುವಲ್ಲಿ ವಿಫಲವಾಗಿದೆ. ಇರಾನ್ನಂತಹ ಮಿತ್ರ ರಾಷ್ಟ್ರದ ಆಂತರಿಕ ಸಮಸ್ಯೆಗಳು (ಖಮೇನಿ ವಿರುದ್ಧದ ಪ್ರತಿಭಟನೆಗಳು) ಅವರಿಗೆ ಬಿಟ್ಟ ವಿಚಾರವಾದರೂ, ಬಾಹ್ಯ ದಾಳಿಯ ಸಂದರ್ಭದಲ್ಲಿ ಭಾರತವು ಶಾಂತಿಯ ಪರವಾಗಿ ನಿಲ್ಲಬೇಕಿತ್ತು.
ಆದರೆ, ಈಗಿರುವ 'ನಾನ್-ಬಯೋಲಾಜಿಕಲ್' (ಅಲೌಕಿಕ) ಎಂಬ ಭ್ರಮೆಯಲ್ಲಿರುವ ನಾಯಕತ್ವವು ತನ್ನ ವೈಯಕ್ತಿಕ ಲಾಭ ಮತ್ತು ದೌರ್ಬಲ್ಯಗಳಿಗಾಗಿ ಜಾಗತಿಕ ಶಕ್ತಿಗಳ ಮುಂದೆ 'ಜೀ ಹುಜೂರ್' ಎಂದು ಕುಣಿಯುತ್ತಿದೆ. ಇದು ಕೇವಲ ಹೇಡಿತನವಲ್ಲದೆ, ದೇಶದ ಸಾರ್ವಭೌಮತ್ವಕ್ಕೆ ಬಗೆಯುವ ದ್ರೋಹದಂತೆ ಭಾಸವಾಗುತ್ತಿದೆ.
ಪ್ರಚಾರ ತಜ್ಞರು (Propaganda specialists) ಹಗಲಿರುಳು ಕಷ್ಟಪಟ್ಟು ಭಾರತಕ್ಕೆ 'ವಿಶ್ವಗುರು' ಎಂಬ ಪಟ್ಟ ಕಟ್ಟಲು ಯತ್ನಿಸುತ್ತಿದ್ದಾರೆ. ಆದರೆ ವಾಸ್ತವದಲ್ಲಿ ಭಾರತದ ಇಮೇಜ್ ಜಾಗತಿಕ ಮಟ್ಟದಲ್ಲಿ ಕುಸಿಯುತ್ತಿದೆ. ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಭಾರತವನ್ನು ಇಂದು 'ಹೇಡಿ', 'ಅವಕಾಶವಾದಿಗಳ ಗುಂಪು' ಎಂದು ಕೀಳಾಗಿ ನೋಡುವ ಪರಿಸ್ಥಿತಿ ಬಂದೊದಗಿದೆ. ಯಾವುದೇ ಸ್ಪಷ್ಟ ರಾಜಕೀಯ ನಿಲುವು ಅಥವಾ ಆದರ್ಶಗಳಿಲ್ಲದ ನಾಯಕತ್ವದಿಂದಾಗಿ ನಾವು ವಿಶ್ವಗುರು ಆಗುವ ಹಾದಿಯಿಂದ ಮೈಲುಗಳಷ್ಟು ದೂರವಿದ್ದೇವೆ.
ಅಮೆರಿಕ ಮತ್ತು ಭಾರತದಂತಹ ದೊಡ್ಡ ಪ್ರಜಾಪ್ರಭುತ್ವ ದೇಶಗಳ ಜನತೆ ದೂರದೃಷ್ಟಿಯಿಲ್ಲದ ನಾಯಕರನ್ನು ಅಧಿಕಾರಕ್ಕೆ ತಂದಿರುವುದು ಚರಿತ್ರೆಯ ಒಂದು ಕಪ್ಪು ಚುಕ್ಕೆ. ಈ ನಾಯಕರು ಇತಿಹಾಸದಲ್ಲಿ ಹೇಗೆ ನೆನಪಿನಲ್ಲಿ ಉಳಿಯುತ್ತಾರೆ ಎಂಬುದು ಈಗಿನ ಪ್ರಶ್ನೆಯಲ್ಲ; ಬದಲಾಗಿ, ಈ ಅಪಾಯಕಾರಿ ಸಂದರ್ಭದಲ್ಲಿ ಅಮೆರಿಕದ ಕಾಂಗ್ರೆಸ್, ನ್ಯಾಯಾಲಯಗಳು ಮತ್ತು ಅಲ್ಲಿನ ಜನತೆ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದು ಮುಖ್ಯವಾಗಿದೆ.
ಇದೇ ಜವಾಬ್ದಾರಿ ಭಾರತೀಯರ ಮೇಲೂ ಇದೆ. ನಾವು ಯಾವ ರೀತಿಯ ನಾಯಕತ್ವವನ್ನು ಬಯಸುತ್ತೇವೆ ಮತ್ತು ನಮ್ಮ ದೇಶದ ಘನತೆಯನ್ನು ಹೇಗೆ ಕಾಪಾಡಿಕೊಳ್ಳುತ್ತೇವೆ ಎಂಬ ಬಗ್ಗೆ ಗಂಭೀರವಾಗಿ ಚಿಂತಿಸಬೇಕಾದ ಕಾಲವಿದು ಎಂದು ಬರೆದುಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.