Karnataka Politics : ಜನರ ಸಹನೆಯ ಕಟ್ಟೆ ಒಡೆದಿದೆ : ಪ್ರಾಮಾಣಿಕವಾಗಿ ಇದ್ದರೆ ಮಾತ್ರ ಬೆಂಬಲ‌ ಸಿಗುತ್ತದೆ

By Suvarna NewsFirst Published Dec 25, 2021, 3:07 PM IST
Highlights
  • ನಾವು ಮಾಡುವ ರಾಜಕಾರಣ ಅಧಿಕಾರದ ರಾಜಕಾರಣವೋ ಅಥವಾ ಜನರಿಗೋಸ್ಕರ ರಾಜಕಾರಣವೋ ಎಂಬ ಆಯ್ಕೆಗಳಿವೆ
  • ನಾವು ಯಾವ ರಾಜಕಾರಣ ಮಾಡಬೇಕು ಎಂಬುದು ಎಲ್ಲರೂ ಸೇರಿ ತೀರ್ಮಾನಿಸಬೇಕಿದೆ - ಸಿಎಂ

ವಿಜಯಪುರ (ಡಿ.25): ನಾವು ಮಾಡುವ ರಾಜಕಾರಣ (Politics) ಅಧಿಕಾರದ ರಾಜಕಾರಣವೋ ಅಥವಾ ಜನರಿಗೋಸ್ಕರ ರಾಜಕಾರಣವೋ ಎಂಬ ಆಯ್ಕೆಗಳಿವೆ. ನಾವು ಯಾವ ರಾಜಕಾರಣ ಮಾಡಬೇಕು ಎಂಬುದು ಎಲ್ಲರೂ ಸೇರಿ ತೀರ್ಮಾನಿಸಬೇಕಿದೆ. ಜನರ ಸಹನೆಯ ಕಟ್ಟೆ ಒಡೆದಿದೆ, ನಾವು ಜನರ ಎದುರಿಗೆ ಪ್ರಾಮಾಣಿಕವಾಗಿ ಇದ್ದರೆ ಮಾತ್ರ ಜನ ಬೆಂಬಲ‌ ಕೊಡುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಹೇಳಿದರು. 
 
ವಿಜಯಪುರ
ದಲ್ಲಿಂದು (Vijayapura) ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ ಸಿಎಂ ಜಿಲ್ಲೆಯ ಭೇಟಿ ಬಗ್ಗೆ  ಹರ್ಷ ವ್ಯಕ್ತಪಡಿಸಿದ್ದಾರೆ.  ವಿಜಯಪುರ ಜಿಲ್ಲೆಗೆ ಬಂದು, ನಿಮ್ಮನ್ನೆಲ್ಲ ನೋಡಿ ಸಂತಸ ಇಮ್ಮಡಿಯಾಗಿದೆ. ಗಂಡು ಮೆಟ್ಟಿನ ಸ್ಥಳ ವಿಜಯಪುರ ಜಿಲ್ಲೆಯಲ್ಲಿ 5 ವರ್ಷದಲ್ಲಿ 59 ತಿಂಗಳು ಸೇರಿ ಅಭಿವೃದ್ಧಿಗಾಗಿ ಕೆಲಸ ಮಾಡೋಣ.  1 ತಿಂಗಳು ರಾಜಕೀಯ ಮಾಡೋಣ. 60 ತಿಂಗಳು ರಾಜಕಾರಣವಾಗಬಾರದು. ಪವರ್ ಪಾಲಿಟಿಕ್ಸ್,  People Politics  ಮಾಡಬೇಕು ಎನ್ನುವ ತಿರ್ಮಾನ ಕೈಗೊಳ್ಳುವ ಸಮಯ ಬಂದಿದೆ  ಎಂದರು. 

ಇನ್ನು ಬರಗಾಲದ (Drought)  ಜಿಲ್ಲೆ ಎನ್ನುವ ಹಣೆ ಪಟ್ಟಿಯನ್ನು ವಿಜಯಪುರ ಜಿಲ್ಲೆ ಹೊತ್ತುಕೊಳ್ಳಬಾರದು. ನೆಲ, ಜಲ ಅಭಿವೃದ್ಧಿಗಾಗಿ ನಾವು ಒಗ್ಗಟ್ಟಾಗಿ ಕೆಲಸ‌ ಮಾಡಬೇಕು, ಒಗ್ಗಟ್ಟಿನ ಕೊರತೆಯಿಂದ ಅಭಿವೃದ್ಧಿ ಆಗಿಲ್ಲ.  ನಾವೆಲ್ಲರೂ 59 ತಿಂಗಳು ಒಗ್ಗಟ್ಟಾಗಿ ಕೆಲಸ ಮಾಡೋಣ,  ಆಗ ಆಡಳಿತ ತಾನೆ ಸುಧಾರಣೆ ಆಗುತ್ತದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು. 

ಇದೀಗ ಹಲವು ಅಭಿವೃದ್ಧಿ ಯೋಜನೆಗಳಿಗೆ (Development Project)  ಚಾಲನೆ ಸಿಕ್ಕಿದೆ.  ಈ ಎಲ್ಲ ಯೋಜನೆಗಳನ್ನು ಒಂದು ವರ್ಷದಲ್ಲಿ ಮುಗಿಸುವಂತೆ ಅಧಿಕಾರಿಗಳು ಮುತುವರ್ಜಿ ವಹಿಸಬೇಕು.  ವಿಜಯಪುರ ವಿಮಾನ ನಿಲ್ದಾಣದ ಕಾಮಗಾರಿ ನಡೆಯುತ್ತಿದೆ.  ವಿಮಾನ ನಿಲ್ದಾಣಕ್ಕೆ 120 ಕೋಟಿ ಹೆಚ್ಚುವರಿಯಾಗಿ ಕೊಟ್ಟು ಅದನ್ನು ವಿಸೃತವಾಗಿ ಮಾಡಲಾಗುವುದು.  ವಿಜಯಪುರ ಜಿಲ್ಲೆಗೆ 24×7 ಕುಡಿಯುವ ನೀರಿಗಾಗಿ ಎಷ್ಟು ದುಡ್ಡು ಬೇಕು ಕೊಡುತ್ತೇನೆ, ಆರು ತಿಂಗಳಲ್ಲಿ ಮುಗಿಸಿ ಎಂದು ಅಧಿಕಾರಿಗಳಿಗೆ ಸಿಎಂ ಬೊಮ್ಮಾಯಿ ಸೂಚನೆ ನೀಡಿದರು. 

ಬೆಳೆ ಹಾನಿ ಪರಿಹಾರ : ಇನ್ನು ರಾಜ್ಯದಲ್ಲಿ ಭಾರೀ ಮಳೆಯಿಂದ (Heavy Rain) ಅತ್ಯಧಿಕ ಪ್ರಮಾಣದಲ್ಲಿ  ಬೆಳೆ ಹಾನಿಯಾಗಿದ್ದು, ಒಂದು ಹೆಕ್ಟೇರ್ ಹಾನಿಯಾದರೆ 6800 ಈಗಾಗಲೇ ಕೇಂದ್ರ ಬೆಳೆಹಾನಿ ಪರಿಹಾರ ಕೊಡುತ್ತದೆ. ಅದಕ್ಕೆ ರಾಜ್ಯ ಕೂಡ 6800 ಸೇರಿಸಿ ಕೊಡಲಾಗುವುದು ಎಂದರು.

ವಸತಿ ಯೋಜನೆ :   ಏನೇ ಮಾಡಿದರೂ ನಮ್ಮ ಸರ್ಕಾರವೇ ಮಾಡುತ್ತದೆ.  ಯೋಜನೆ ಒಬ್ಬರ ಹೆಸರಲ್ಲಿ ಆಗಬಾರದು. ನಮ್ಮ ಅವಧಿಯಲ್ಲೆ ಎಲ್ಲಾ  ಕೆಲಸಗಳು ಆಗಬೇಕು ಎಂದು ಸೂಚನೆ ಕೊಟ್ಟಿದ್ದೇನೆ.  ಎಲ್ಲ ವಸತಿ ಯೋಜನೆಗಳು ಒಂದೂವರೆ ವರ್ಷದಲ್ಲಿ ಪೂರ್ಣಗೊಳ್ಳಬೇಕು ಎಂದು ಸೂಚಿಸಿದರು.

ಐದು ಲಕ್ಷ ಮನೆಗಳನ್ನು ಬಡವರಿಗೆ ಕೊಡುವ ಕೆಲಸ ನಮ್ಮ ಕಾಲದಲ್ಲೇ ಆಗಬೇಕು.  ಒಂದು ವರ್ಷ ಎರಡು ತಿಂಗಳಲ್ಲಿ ಈ ಮನೆಗಳ ನಿರ್ಮಾಣ ಆಗಬೇಕಿದೆ.  ದೇತು, ದಿಲಾತು, ದೇನೆ ವಾಲೋಕೊ ದಿಕಾತು ಎಂಬ ಮಾತು ನಮಗೆ ಬೇಡ. ನಮ್ಮದೆ ಅಡಿಗಲ್ಲು, ನಮ್ಮದೇ ಉದ್ಘಾಟನೆ ಆಗಬೇಕು ಹಾಗೆ ನಮ್ಮ ಸರ್ಕಾರ ಕೆಲಸ ಮಾಡುತ್ತದೆ.  ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಉತ್ತರ ಕರ್ನಾಟಕದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತೇನೆ ಎಂದರು.  

ಯತ್ನಾಳ್  ಹೊಗಳಿದ ಸಿಎಂ :  ಶಾಸಕ ಯತ್ನಾಳರನ್ನ (Basanagowda Patil Yatnal)  ಹುಲಿ ಎಂದಿರುವ ಸಿಎಂ ಬೊಮ್ಮಾಯಿ ಅವರು ಡಬಲ್ ಎಂಜಿನ್ ಹೊಂದಿರುವ  ವ್ಯಕ್ತಿಯಾಗಿದ್ದಾರೆ ಎಂದರು.  ಬಸನಗೌಡ ಪಾಟೀಲ ನೇರನುಡಿಯ ಮನುಷ್ಯ, ಅವರ ಬಗ್ಗೆ ನಮಗೆ ಗೌರವ ಇದೆ ಎಂದರು.  

ಬಿಜಾಪುರ ಧೂಳಾಪುರ ಅಲ್ಲ,‌ ಅದನ್ನು ಬಿಜಾಪುರ ಬಂಗಾರದಪುರ ಮಾಡುತ್ತೇವೆ ಎಂದು ಹೇಳಿದ ಸಿಎಂ, ಬೀಜ ಮತ್ತು ಸಾವಯವ ಪ್ರಮಾಣ ಸಂಸ್ಥೆಯ ಅಧ್ಯಕ್ಷ  ವಿಜುಗೌಡ ಗಧೆ ಕೊಟ್ಟಿದ್ದಾರೆ, ನನಗೆ ಕತ್ತಿ, ಗಧೆ ಕೊಟ್ಟರೆ ಅದನ್ನು ನಾನು ಅಲ್ಲೇ ವಾಪಸ್ ಕೊಡುತ್ತೇನೆ. ಹಾಗಾಗಿ ಈ ಗಧೆಯನ್ನು ವಿಜಯಪುರದ ಹನುಮಾನ ದೇವರಿಗೆ ಕೊಟ್ಟು ಹೋಗುತ್ತೇನೆ.  ವಿಜಯಪುರಕ್ಕೆ ಮುಂದಿನ ದಿನಗಳಲ್ಲಿ ಆಡಳಿತದಲ್ಲೂ, ಅಭಿವೃದ್ಧಿಯಲ್ಲೂ, ರಾಜಕಾರಣದಲ್ಲೂ ಒಳ್ಳೆಯ ಭವಿಷ್ಯವಿದೆ ಎಂದರು.  

ನಾನು ವಿಜಯಪುರವನ್ನು ಮಾದರಿಯಾಗಿಸುತ್ತೇನೆ :  ಜಿಲ್ಲಾಡಳಿತ ಸಂಕೀರ್ಣ ಬಿ ಎಸ್ ವೈ ಭೂಮಿ ಪೂಜೆ ಮಾಡಲು ಬರಬೇಕಿತ್ತು, ಆದರೆ ಕೊನೆ ಕ್ಷಣದಲ್ಲಿ ಅದು ಕ್ಯಾನ್ಸಲ್ ಆಗಿತ್ತು. ಈ ಕಾರ್ಯ ಬೊಮ್ಮಾಯಿ ಅಮೃತ ಹಸ್ತದಿಂದ ಆಗಬೇಕು ಎಂದಿತ್ತು, ಹಾಗಾಗಿ ಅದು ಈಗ ಆಗಿದೆ.  ಬೊಮ್ಮಾಯಿ ಸಿಎಂ ಆಗಿ ಬಂದ ಮೇಲೆ ಉಸಿರಾಡಲು ಕಷ್ಟ ಆಗಿತ್ತು.  ಐಸಿಯು ನಿಂದ ಜನರಲ್ ವಾರ್ಡ್ ಗೆ ಸರ್ಕಾರ ಬಂದಿದೆ. ಇನ್ಮುಂದೆ ಕೆಲಸಗಳು ವೇಗವಾಗಿ ಆಗಲಿವೆ ಎಂದು  ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿದರು.

ವಿಜಯಪುರಕ್ಕೆ ಒಂದು ಸರ್ಕಾರಿ ಮೆಡಿಕಲ್ ಕಾಲೇಜ್ ಮಂಜೂರು ಮಾಡುವಂತೆ ಸಿಎಂ ಗೆ ಮನವಿ ಮಾಡಿದ್ದೇನೆ. ನನಗೆ ಅಭಿವೃದ್ಧಿಗೆ ಎಷ್ಟುಬೇಕು ಅಷ್ಟು ಹಣ ಕೊಡಿ, ನಾನು ಏನೂ ಕೇಳೋದಿಲ್ಲ ಎಂದು ಹೇಳಿದ್ದೇನೆ.  ಎಷ್ಟು ಹಣ (Money) ತಿಂದು, ದುಬೈನಲ್ಲಿ ಮನೆ ಮಾಡಿ, ರೆಸಾರ್ಟ್ ಮಾಡಿ ಏನು ಮಾಡೋದಿದೆ. ಎಷ್ಟು ಇದ್ದರೆ ಏನು? ಕೊರೋನಾ ಬಂದರೆ ಹೆಣ ಕೂಡ ಎತ್ತಿ ಬಿಸಾಕುತ್ತಾರೆ. ಇಷ್ಟೆ ಜೀವನ.  ನಾನು ಎಲ್ಲರಿಗೂ ಬೈದು ಬೈದು ಚುನಾಯಿತನಾಗಿದ್ದೇನೆ. ಈ ಜಿಲ್ಲೆಯನ್ನು ಮಾದರಿಯಾಗಿ ಮಾಡುತ್ತೇನೆ ಎಂದು ಯತ್ನಾಳ್ ಹೇಳಿದರು. 

click me!