ಆರೆಸ್ಸೆಸ್‌ ಕಚೇರಿಯಲ್ಲೂ ರಾಷ್ಟ್ರಧ್ವಜ ಹಾರಿಸುತ್ತೇವೆ: ಸಚಿವ ಸುನಿಲ್‌ ಕುಮಾರ್‌

By Govindaraj SFirst Published Aug 12, 2022, 5:10 AM IST
Highlights

ಆರೆಸ್ಸೆಸ್‌ ಕಾರ್ಯಾಲಯದಲ್ಲಿ ರಾಷ್ಟ್ರಧ್ವಜ ಹಾರಿಸೋಲ್ಲ ಅನ್ನೋದು ಕೇವಲ ಅಪಪ್ರಚಾರ, ಕಚೇರಿ ಹಾಗೂ ಶಾಖೆಯಲ್ಲೂ ಕೂಡ ರಾಷ್ಟ್ರಧ್ವಜ ಹಾರಿಸುತ್ತೇವೆ ಎಂದು ಇಂಧನ ಖಾತೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್‌ ಕುಮಾರ್‌ ಹೇಳಿದರು.

ಯಾದಗಿರಿ (ಆ.12): ಆರೆಸ್ಸೆಸ್‌ ಕಾರ್ಯಾಲಯದಲ್ಲಿ ರಾಷ್ಟ್ರಧ್ವಜ ಹಾರಿಸೋಲ್ಲ ಅನ್ನೋದು ಕೇವಲ ಅಪಪ್ರಚಾರ, ಕಚೇರಿ ಹಾಗೂ ಶಾಖೆಯಲ್ಲೂ ಕೂಡ ರಾಷ್ಟ್ರಧ್ವಜ ಹಾರಿಸುತ್ತೇವೆ ಎಂದು ಇಂಧನ ಖಾತೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್‌ ಕುಮಾರ್‌ ಹೇಳಿದರು. ಜಿಲ್ಲೆಯ ಶಹಾಪುರ ತಾಲೂಕಿನ ಕೊಳ್ಳೂರು (ಎಂ) ಗ್ರಾಮದಲ್ಲಿ 110 ಕೆವಿ ವಿದ್ಯುತ್‌ ಉಪಕೇಂದ್ರ ಉದ್ಘಾಟಿಸಲು ಗುರುವಾರ ಆಗಮಿಸಿದ್ದ ಅವರು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮಗೆ ರಾಷ್ಟ್ರೀಯತೆ ಹಾಗೂ ರಾಷ್ಟ್ರಧ್ವಜ ಬಗ್ಗೆ ಗೌರವ ಕಲಿಸಿಕೊಟ್ಟಿದ್ದೇ ಆರೆಸ್ಸೆಸ್‌. 

ರಾಷ್ಟ್ರೀಯತೆಯನ್ನು ಅತ್ಯಂತ ಉತ್ತುಂಗ ಶಿಖರಕ್ಕೇರಿಸಲು ಕಲಿಸಿದ್ದೇ ಸಂಘ. ಭಗವಾಧ್ವಜ ಮೇಲೆ ಕೆಲಸ ಮಾಡುತ್ತಿದೆ. ರಾಷ್ಟ್ರಧ್ವಜದ ಬಗ್ಗೆ ಅಪಪ್ರಚಾರ ಮಾಡಲು ಕೆಲವರು ಯತ್ನಿಸುತ್ತಿದ್ದಾರೆ. ರಾಷ್ಟ್ರಧ್ವಜಕ್ಕೆ ಅದರದ್ದೇ ಆದ ನೀತಿ ಸಂಹಿತೆಗಳಿವೆ. ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ರಾತ್ರಿವೇಳೆಯೂ ಹಾರಿಸುವ ಬಗ್ಗೆ ಸಂಹಿತೆಯಲ್ಲಿ ತಿದ್ದುಪಡಿ ತರಲಾಗಿದೆ. ಇಲ್ಲಿವರೆಗೆ ರಾತ್ರಿ ಧ್ವಜಾರೋಹಣ ಮಾಡುತ್ತಿರಲಿಲ್ಲ ಎಂದು ಘರ್‌ ಘರ್‌ ತಿರಂಗಾ ಅಭಿಯಾನ ಸಮರ್ಥಿಸಿಕೊಂಡರು.

ಸರ್ಕಾರ ಬೇಕೋ, ಹಿಂದುತ್ವ ಬೇಕೋ ಕೇಳಿದರೆ ಹಿಂದುತ್ವ ಎನ್ನುವೆ: ಸಚಿವ ಸುನಿಲ್‌

ಬೊಮ್ಮಾಯಿ ನೇತೃತ್ವದಲ್ಲೇ ಮತ್ತೊಂದು ಚುನಾವಣೆ: ಸಿಎಂ ಬದಲಾವಣೆ ಕುರಿತ ಮಾತುಗಳಿಗೆ ಪ್ರತಿಕ್ರಿಯಿಸಿದ ಸಚಿವ ಸುನಿಲ್‌ ಕುಮಾರ್‌, ಇದೊಂದು ಕಾಂಗ್ರೆಸ್‌ ಸೃಷ್ಟಿ. ಯಾರಿಗೆ ಅಭದ್ರತೆ ಇರುತ್ತದೆಯೋ ಅವರು ಅಪಪ್ರಚಾರಗಳನ್ನು ಹಾಗೂ ಉಹಾಪೋಹಗಳನ್ನು ಸೃಷ್ಟಿಮಾಡುತ್ತಾರೆ. ಕಾಂಗ್ರೆಸ್‌ ನಾಯಕತ್ವದಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಅಭದ್ರತೆ ಕಾಡುತ್ತಿದೆ. ಯಾರು ಮುಂದಿನ ಸಿಎಂ ಎಂಬುದರ ಬಗ್ಗೆ ಅವರವರಲ್ಲಿ ಚರ್ಚೆ ನಡೆದಿದೆ. ಇದೊಂದು ಕಾಂಗ್ರೆಸ್‌ ಮನೆಯೊಳಗಿನ ಸೃಷ್ಟಿಯಾಗಿರುವ ಉಹಾಪೋಹ. ತನ್ನ ಮನೆ ಕೆಡಿಸಿಕೊಂಡ ಕಾಂಗ್ರೆಸ್‌ ಉಳಿದವರ ಮನೆ ಕೆಡಿಸುವ ಆಲೋಚನೆ ಹೊಂದಿದಂತಿದೆ. ಹೀಗಾಗಿ, ಬಿಜೆಪಿ ಮನೆಯನ್ನು ಹೇಗೆ ಕೆಡಿಸುವುದು ಎಂದು ಕಾಂಗ್ರೆಸ್ಸಿಗರು ಆಲೋಚನೆ ಮಾಡುತ್ತಿದ್ದಾರೆ. ನಾವು ಬೊಮ್ಮಾಯಿ ನೇತೃತ್ವದಲ್ಲಿ ಮತ್ತೊಮ್ಮೆ ಚುನಾವಣೆ ಎದುರಿಸುತ್ತೇವೆ ಎಂದರು.

ಗಣೇಶೋತ್ಸವ, ಜಮೀರ್‌ ಅಹ್ಮದ್‌ ವಿವಾದ: ಗಣೇಶೋತ್ಸವ ಬಗ್ಗೆ ಜಮೀರ್‌ ಅಹ್ಮದ್‌ ಹೇಳಿಕೆ ಕುರಿತು ಮಾತನಾಡಿದ ಸಚಿವ ಸುನಿಲ್‌ ಕುಮಾರ್‌, ಜಮೀರ್‌ ಅಹ್ಮದ್‌ ಪದೇ ಪದೇ ವಿವಾದಗಳನ್ನು ಸೃಷ್ಟಿಸುತ್ತಾರೆ. ಚಾಮರಾಜಪೇಟೆಯ ಆ ಜಾಗ ಕಂದಾಯ ಇಲಾಖೆಗೆ ಸೇರಿದೆ. ಬಿಬಿಎಂಪಿ ದಾಖಲೆಗಳೂ ಇವೆ. ಹೀಗಿರುವಾಗ, ಅಲ್ಲಿ ಸರ್ಕಾರವೇ ರಾಷ್ಟ್ರಧ್ವಜ ಹಾರಿಸುತ್ತದೆ ಯಾವುದೇ ವಿವಾದಗಳಿಗೆ ಕಿವಿಗೊಡಬೇಕಿಲ್ಲ ಎಂದರು.

5 ಲಕ್ಷವರೆಗಿನ ವಿದ್ಯುತ್‌ ಗುತ್ತಿಗೆ ಸ್ಥಳೀಯರಿಗೆ ಮೀಸಲು: ಸಚಿವ ಸುನಿಲ್‌

ನೆಟ್ಟಾರು ಹಂತಕರ ಬಂಧನ: ಪ್ರವೀಣ್‌ ಹಂತಕರನ್ನು ಪೊಲೀಸರು ಬಂದಿ​ಸಿರುವುದು ಶ್ಲಾಘನೀಯ ಎಂದ ಸಚಿವ ಸುನಿಲ್‌ ಕುಮಾರ್‌, ನಮ್ಮ ಪೊಲೀಸರು ಅತ್ಯಂತ ವೇಗವಾಗಿ ಕಾರ್ಯಾಚರಣೆ ನಡೆಸಿದ್ದಾರೆ. ಕೊಲೆ ಮಾಡಿ ಅವರೆಲ್ಲ ಕೇರಳಕ್ಕೆ ಓಡಿ ಹೋಗಿದ್ದರು. ಅವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದರು.

click me!