Religious Conversion: ನಮ್ಮ ಧರ್ಮದವರು ಅನ್ಯಧರ್ಮಕ್ಕೆ ಹೋಗಲು ಬಿಡಬಾರದು: ನಿರ್ಮಲಾನಂದ ಶ್ರೀ

By Kannadaprabha NewsFirst Published Jan 6, 2022, 5:25 AM IST
Highlights

*ಏನೆಲ್ಲಾ ಪ್ರೀತಿ, ಆಮಿಷ ತೋರಿ ಸೆಳೆಯುತ್ತಿರುವ ಅನ್ಯಧರ್ಮೀಯರು
*ಸಂಪ್ರದಾಯಗಳು ಮತಾಂತರಕ್ಕೆ ಪ್ರೇರಣೆಯಾಗದಂತೆ ನೋಡಿಕೊಳ್ಳಬೇಕು
*ರಾಜ್ಯಮಟ್ಟದ ಅರ್ಚಕರ ವೃತ್ತಿ ಶಿಕ್ಷಣ ತರಬೇತಿ ಸಮಾರೋಪ ಸಮಾರಂಭದ
 

ಮಂಡ್ಯ (ಜ. 6): ಮತಾಂತರ ನಾವು ಮಾಡುವುದು ಬೇಡ. ಆದರೆ ನಮ್ಮ ಧರ್ಮದವರು ಅನ್ಯಧರ್ಮಕ್ಕೆ ಹೋಗುವುದಕ್ಕೆ ಬಿಡಬಾರದು ಎಂದು ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ (Nirmalanandanatha Swamiji), ನೇರವಾಗಿ ಕರೆ ನೀಡಿದ್ದಾರೆ. ರಾಜ್ಯ ಸರ್ಕಾರ ಮತಾಂತರ ನಿಷೇಧ ಕಾಯ್ದೆ (Anti Conversion Bill) ಜಾರಿಗೊಳಿಸಲು ಹೊರಟಿರುವ ಹೊತ್ತಲ್ಲೇ ಈ ಬಗ್ಗೆ ಪ್ರಸ್ತಾಪವೆತ್ತಿರುವ ಶ್ರೀಗಳು, ಮತಾಂತರವಾಗದಂತೆ ನೋಡಿಕೊಂಡಾಗ ಮಾತ್ರ ನಮ್ಮ ಧರ್ಮ ಉಳಿಯಲು ಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.

ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಮಠದಲ್ಲಿ ಬುಧವಾರ ಆಯೋಜಿಸಿದ್ದ 14 ನೇ ರಾಜ್ಯಮಟ್ಟದ ಅರ್ಚಕರ ವೃತ್ತಿ ಶಿಕ್ಷಣ ತರಬೇತಿ ಶಿಬಿರದ ಸಮಾರೋಪ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಅನ್ಯ ಧರ್ಮದವರು ಏನೆಲ್ಲಾ ಪ್ರೀತಿ, ಆಮಿಷ ತೋರಿಸಿ ನಮ್ಮ ಧರ್ಮದವರನ್ನು ಸೆಳೆಯುತ್ತಿದ್ದಾರೆ. ಅದಕ್ಕೆ ನಮ್ಮ ಧರ್ಮದವರು ಆಕರ್ಷಣೆಗೆ ಒಳಗಾಗಬಾರದು. ಮತಾಂತರವಾಗದಂತೆ ನೋಡಿಕೊಂಡಾಗ ನಮ್ಮ ಧರ್ಮಗಳು ಉಳಿಯಲು ಸಾಧ್ಯ ಎಂದರು.

ಇದನ್ನೂ ಓದಿ: ಯಡಿಯೂರಪ್ಪರನ್ನ "ಮ್ಯಾನ್ ಅಟ್ ದಿ ಟಾಪ್ ಆಲ್ವೇಸ್ ಲೋನ್ಲಿ" ಎಂದ ನಿರ್ಮಲಾನಂದ ಶ್ರೀ

ನಮ್ಮಲ್ಲಿನ ಕೆಲವು ಸಂಪ್ರದಾಯಗಳಿಂದ ಬೇಸರಗೊಂಡು ಕೆಲವರು ಅನ್ಯಧರ್ಮದತ್ತ ಮುಖ ಮಾಡುತ್ತಿದ್ದಾರೆ. ಸಂಪ್ರದಾಯಗಳು ಮತಾಂತರಕ್ಕೆ ಪ್ರೇರಣೆಯಾಗದಂತೆ ತಡೆಯಬೇಕು. ಆಗ ನಮ್ಮವರು ನಮ್ಮಲ್ಲೇ ಉಳಿಯುತ್ತಾರೆ. ಇದರಿಂದ ಮತಾಂತರ ಅನ್ಯಧರ್ಮದವರಿಗೆ ಸುಲಭವೂ ಆಗುವುದಿಲ್ಲ ಎಂದು ಪ್ರತಿಪಾದಿಸಿದರು.

ಪ್ರತಿಯೊಂದು ಕೆಲಸಕ್ಕೂ ತರಬೇತಿ ಎನ್ನುವುದಿರುತ್ತದೆ. ಯಾರು ಎಷ್ಟೇ ಕಲಿತಿದ್ದರೂ ತರಬೇತಿ ಎನ್ನುವುದು ಸಾಮಾನ್ಯ. ಅರ್ಚಕ ವೃತ್ತಿಯನ್ನು ಮತ್ತೊಬ್ಬರೊಂದಿಗೆ ಹೋಲಿಕೆ ಮಾಡಬಾರದು. ನಿತ್ಯ ನಾವು ನಮ್ಮ ಒಳಗಿರುವ ಶಕ್ತಿಯನ್ನು ಹರಿತಗೊಳಿಸಿಕೊಳ್ಳಬೇಕು ಎಂದರು.ದೇವರ ಬಗ್ಗೆ ಜನರಲ್ಲಿ ಭಕ್ತಿ ಮೂಡಬೇಕಾದರೆ ಕೇಶ-ವಿನ್ಯಾಸ, ವಸ್ತ್ರವಿನ್ಯಾಸವೆಲ್ಲವೂ ಅರ್ಚಕರ ರೀತಿಯಲ್ಲೇ ಇರಬೇಕು. ಆಗ ಭಕ್ತರಿಗೆ ಗೌರವ ಭಾವನೆ ಹುಟ್ಟುತ್ತದೆ. ದೇಹಕ್ಕೆ ಕಾಯಿಲೆ ಬಂದರೆ ಆಸ್ಪತ್ರೆಗಳಿವೆ. ಆದರೆ, ಅದಕ್ಕಿಂತಲೂ ಮಿಗಿಲಾದ ಅಂತಃಕರಣಕ್ಕೆ ರೋಗ ಬಂದರೆ ಯಾವ ವೈದ್ಯರಿಂದಲೂ ಗುಣಪಡಿಸಲು ಸಾಧ್ಯವಿಲ್ಲ ಎಂದರು.

ಮತಾಂತರ ನಿಷೇಧ ಮಸೂದೆ ಜಾರಿಗೆ ಸುಗ್ರೀವಾಜ್ಞೆ: ಕೋಟ

ವಿಧಾನ ಪರಿಷತ್‌ನಲ್ಲಿ(Vidhan Parishat) ಬಹುಮತದ ಕೊರತೆಯಿರುವ ಕಾರಣ ಮತಾಂತರ ನಿಷೇಧ ಮಸೂದೆಯನ್ನು ಸುಗ್ರೀವಾಜ್ಞೆ ರೂಪದಲ್ಲಿ ಜಾರಿಗೊಳಿಸಲಾಗುವುದು. ಈ ಕುರಿತು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ(Kota Shrinivas Poojari) ತಿಳಿಸಿದ್ದಾರೆ. ಮಂಗಳೂರಿನಲ್ಲಿ(Mangaluru) ಸುದ್ದಿಗಾರರ ಜತೆ ಮಾತನಾಡಿದ ಅವರು, ಮತಾಂತರ ನಿಷೇಧ ಕಾಯ್ದೆಯನ್ನು(Anti Conversion Bill) ವಿಧಾನಸಭೆಯಲ್ಲಿ(Assembly) ರಾಜ್ಯದ ಮತ್ತು ದೇಶದ ಜನ ಸಹಮತ ನೀಡುವಂತೆ ವ್ಯವಸ್ಥಿತವಾಗಿ ಮಂಡಿಸಿದ್ದೇವೆ. ಪ್ರಸ್ತುತ ಮೇಲ್ಮನೆಯಲ್ಲಿ ಬಹುಮತವಿಲ್ಲದ ಕಾರಣ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಸುಗ್ರೀವಾಜ್ಞೆ ಹೊರಡಿಸುವ ಮೂಲಕ ಕಾಯ್ದೆ ಅನುಷ್ಠಾನ ಮಾಡಲಾಗುವುದು. ನೂತನ ವಿಧಾನ ಪರಿಷತ್‌ ಸದಸ್ಯರು ಪ್ರತಿಜ್ಞೆ ಸ್ವೀಕರಿಸಿದ ಬಳಿಕ ಮೇಲ್ಮನೆಯಲ್ಲಿ ಬಹುಮತ ಬರಲಿದ್ದು, ಆಗ ಮೇಲ್ಮನೆಯಲ್ಲಿ ಮಂಡನೆ ಮಾಡುತ್ತೇವೆ ಎಂದರು.

ಇದನ್ನೂ ಓದಿ: Free Hindu Temple: ಮುಸ್ಲಿಂ ಅಥವಾ ಕ್ರಿಶ್ಚಿಯನ್ ಧರ್ಮಕ್ಕೆ ಡಿಕೆಶಿ ಮತಾಂತರ ಆಗ್ಲಿ!

ಮತಾಂತರ ಕಾಯಿದೆಯನ್ನು ಎಲ್ಲ ಧರ್ಮ, ಜಾತಿಯವರು ಹೆಮ್ಮೆಯಿಂದ ಸ್ವಾಗತಿಸಬೇಕು. ಯಾಕೆಂದರೆ ಇದು ಯಾವುದೇ ಜಾತಿ, ಧರ್ಮಕ್ಕೆ ಸೀಮಿತವಾದ ಸಮಸ್ಯೆಗಳಲ್ಲ. ಯಾವುದೇ ಪ್ರದೇಶದಲ್ಲಿ ಸಣ್ಣ ಸಮುದಾಯವೊಂದಿದ್ದರೆ ಆ ಧರ್ಮಕ್ಕೆ ಅನ್ಯಾಯವಾಗಬಾರದು ಎಂಬುದೂ ಸೇರಿ ವಂಚನೆ, ಬಲಾತ್ಕಾರ, ಮೋಸದ ಮೂಲಕ ವಿವಾಹ ಮಾಡಿಕೊಳ್ಳುವುದಾಗಿ ನಂಬಿಸುವ ಕೃತ್ಯಕ್ಕೆ ಕಡಿವಾಣ ಹಾಕಲು ಈ ಕಾಯ್ದೆ ಜಾರಿ ಮಾಡಲಾಗುವುದು ಎಂದರು.

click me!