
ವರದಿ: ನಂದನ್ ರಾಮಕೃಷ್ಣ, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಡ್ಯ
ಮಂಡ್ಯ (ಜು.26): ವಿಶ್ವವಿಖ್ಯಾತ ಕೆಆರ್ಎಸ್ ಅಣೆಕಟ್ಟೆಗೆ (KRS DAM) ಬೇಬಿ ಬೆಟ್ಟದಲ್ಲಿ ನಡೆಯುವ ಕಲ್ಲು ಗಣಿಗಾರಿಕೆಯಿಂದಾಗಿ ಅಪಾಯ ಇದೆಯೋ ಇಲ್ಲವೋ ತಿಳಿದುಕೊಳ್ಳಲು ಜುಲೈ 25ರಿಂದ ಆರಂಭವಾದ ಟ್ರಯಲ್ ಬ್ಲಾಸ್ಟ್ ಒಂದೇ ದಿನಕ್ಕೆ ಅಂತ್ಯಕಂಡಿದೆ. ತೀವ್ರ ವಿರೋಧದ ನಡುವೆಯೂ ಪರೀಕ್ಷಾರ್ಥ ಸ್ಪೋಟ ನಡೆಸಲು ಮುಂದಾಗಿದ್ದ ಜಿಲ್ಲಾಡಳಿತ ಕಡೆಗೂ ರಾಜಮಾತೆ ಬರೆದ ಆಕ್ಷೇಪ ಪತ್ರ ಹಾಗೂ ರೈತರ ಒತ್ತಡಕ್ಕೆ ಮಣಿದು ತಾತ್ಕಾಲಿಕವಾಗಿ ಟ್ರಯಲ್ ಬ್ಲಾಸ್ಟ್ ಪ್ರಕ್ರಿಯೆ ಮುಂದೂಡಿದೆ.
ಜಿಲ್ಲಾಧಿಕಾರಿ ಭರವಸೆ ಬಳಿಕ ಪ್ರತಿಭಟನೆ ಕೈಬಿಟ್ಟ ರೈತರು: ಮಂಡ್ಯದ ಡಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ 25ಜನ ರೈತ ಮುಖಂಡರು ಭಾಗವಹಿಸಿದ್ದರು. ಜಿಲ್ಲಾಧಿಕಾರಿ, ಗಣಿ ಅಧಿಕಾರಿಗಳು, ಎಸ್.ಪಿ, ಡಿಸಿಎಫ್ ಸೇರಿದಂತೆ ಹಲವು ಅಧಿಕಾರಿಗಳ ಸಮ್ಮುಖದಲ್ಲಿ ಟ್ರಯಲ್ ಬ್ಲಾಸ್ಟ್ ಅನುಕೂಲ ಮತ್ತು ಅನಾನುಕೂಲಗಳ ಬಗ್ಗೆ ಚರ್ಚಿಸಲಾಯಿತು. ಒಂದು ವಾರ ಮುಂದೂಡುವಂತೆ ರೈತರಿಂದ ಒತ್ತಾಯ ಕೇಳಿಬಂತು. ಆದರೆ ತಾಂತ್ರಿಕ ಕಾರಣ ನೀಡಿ ಟ್ರಯಲ್ ಬ್ಲಾಸ್ಟ್ ಅನಿವಾರ್ಯ ಎಂದ ಜಿಲ್ಲಾಧಿಕಾರಿ ಅಶ್ವಥಿ ಸರ್ಕಾರ ಮಟ್ಟದಲ್ಲಿ ಚರ್ಚಿಸಿ ನಿರ್ಧಾರ ತಿಳಿಸುವುದಾಗಿ ತೆರಳಿದರು. ಡಿಸಿ ನಿರ್ಧಾರಕ್ಕಾಗಿ ಗಂಟೆಗಟ್ಟಲೇ ಕಾದ ರೈತರು ಯಾವುದೇ ಸ್ಪಷ್ಟನೆ ಬರದ ಕಾರಣ ಜಿಲ್ಲಾಧಿಕಾರಿ ಕಚೇರಿಯಲ್ಲೇ ವಾಸ್ತವ್ಯದ ನಿರ್ಧಾರ ಮಾಡಿದರು. ಕಡೆಗೆ ರೈತರ ಒತ್ತಡಕ್ಕೆ ಮಣಿದ ಡಿಸಿ ತಾತ್ಕಾಲಿಕವಾಗಿ ಟ್ರಯಲ್ ಬ್ಲಾಸ್ಟ್ ಮುಂದೂಡುವುದಾಗಿ ತಿಳಿಸಿದ್ದಾರೆ.
Mandya: ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್ಗೆ ಡೇಟ್ ಫಿಕ್ಸ್: ರೈತರು, ಭೂ ವಿಜ್ಞಾನಿಗಳ ವಿರೋಧ
ಟ್ರಯಲ್ ಬ್ಲಾಸ್ಟ್ ಪರಿಶೀಲನೆ ವೇಳೆ ಹೈಡ್ರಾಮ: ಜಾರ್ಖಂಡ್ನ ಧನಬಾದ್ನಲ್ಲಿರುವ CSIR ಸಂಸ್ಥೆಯ ನಾಲ್ವರು ಭೂ ವಿಜ್ಞಾನಿಗಳ ತಂಡ ಬೇಬಿಬೆಟ್ಟ ಸುತ್ತಮುತ್ತ 5 ಕಡೆಗಳಲ್ಲಿ ಪರೀಕ್ಷಾರ್ಥ ಸ್ಪೋಟ ನಡೆಸಲು ಆಗಮಿಸಿದ್ದರು. ಜುಲೈ 31 ರವರೆಗೂ ನಡೆಯಬೇಕಿದ್ದ ಟ್ರಯಲ್ ಬ್ಲಾಸ್ಟ್ಗೆ ಆರಂಭದಲ್ಲೇ ತೀವ್ರ ವಿರೋಧ ವ್ಯಕ್ತವಾಯಿತು. ವಿಜ್ಞಾನಿಗಳ ವಿರುದ್ಧ ಗೋ ಬ್ಯಾಕ್ ಚಳುವಳಿ ಆರಂಭಿಸಿದ ರೈತರು KRS ಜಲಾಶಯದ ಮುಖ್ಯದ್ವಾರ ಬಳಿಯಿಂದ ಬೇಬಿಬೆಟ್ಟದ ವರೆಗೆ ಬೈಕ್ ಜಾಥ ಹೊರಟರು. ಬೇಬಿಬೆಟ್ಟ ಸಮೀಪದ ಕಾವೇರಿಪುರ ಬಳಿ ಬೈಕ್ ಬರುತ್ತಿದ್ದಂತೆ ಪೊಲೀಸರು ತಡೆಹಿಡಿದರು. ಈ ವೇಳೆ ಸ್ಥಳಕ್ಕೆ ಜಮಾಯಿಸಿದ ಕಾವೇರಿಪುರ, ಬನ್ನಂಗಾಡಿ, ಬೇಬಿ ಸೇರಿದಂತೆ ಹಲವು ಗ್ರಾಮಗಳ ಗ್ರಾಮಸ್ಥರು ಟ್ರಯಲ್ ಬ್ಲಾಸ್ಟ್ಗೆ ಒತ್ತಾಯಿಸಿ ರೈತರ ಜೊತೆ ವಾಗ್ವಾದಕ್ಕಿಳಿದರು.
ವಿವಾದಕ್ಕೆ ರಾಜಮನೆತನ ಎಂಟ್ರಿ-ಬೇಬಿಬೆಟ್ಟ ನಮ್ಮ ಸ್ವತ್ತು ಎಂದ ರಾಜಮಾತೆ: ಟ್ರಯಲ್ ಬ್ಲಾಸ್ಟ್ ಕುರಿತು ಪರ ವಿರೋಧಗಳು ವ್ಯಕ್ತವಾದ ಬೆನ್ನಲ್ಲೇ ವಿವಾದದಲ್ಲಿ ಮೈಸೂರು ರಾಜಮನೆತನ ಮಧ್ಯಪ್ರವೇಶಿಸಿದೆ. ಟ್ರಯಲ್ ಬ್ಲಾಸ್ಟ್ ವಿಚಾರವಾಗಿ ಮಂಡ್ಯ ಡಿಸಿಗೆ ಆಕ್ಷೇಪ ಪತ್ರ ಬರೆದಿರುವ ಮೈಸೂರು ಸಂಸ್ಥಾನದ ರಾಜಮಾತೆ ಪ್ರಮೋದಾ ದೇವಿ ಒಡೆಯರ್. ತಮ್ಮ ವಕೀಲರಾದ ನರೇಂದ್ರ.ಡಿ.ವಿ.ಗೌಡ ಮೂಲಕ ಡಿಸಿಗೆ ಆಕ್ಷೇಪ ಪತ್ರ ಕಳುಹಿಸಿದ್ದಾರೆ. ಜು.22ರಂದು ಇ-ಮೇಲ್ ಮೂಲಕ ಆಕ್ಷೇಪಿಸಿದ್ದ ಒಡೆಯರ್. ಯಾವುದೇ ಪ್ರತಿಕ್ರಿಯೆ ಬರದಿದ್ದಾಗ ಖುದ್ದು ಡಿಸಿ ಆಪ್ತ ಶಾಖೆಗೆ ಪತ್ರ ರವಾನಿಸಿದ್ದಾರೆ. ಬೇಬಿಬೆಟ್ಟ ಸರ್ವೇ ನಂಬರ್ 1 ಅಮೃತ್ ಮಹಲ್ ಕಾವಲು. ಒಟ್ಟು 1,623 ಎಕರೆ ಜಮೀನು ರಾಜಮನೆತನಕ್ಕೆ ಸೇರಿದ ಆಸ್ತಿ ಎಂದು ಪತ್ರದಲ್ಲಿ ಉಲ್ಲೇಖಿಸಿರುವ ಅವರು, ಖಾಸಗಿ ಆಸ್ತಿಯಲ್ಲಿ ಟ್ರಯಲ್ ಬ್ಲಾಸ್ಟ್ ಮತ್ತು ಗಣಿಗಾರಿಕೆಗೆ ಅನುಮತಿ ಕೊಟ್ಟ ಬಗ್ಗೆ ಪ್ರಶ್ನಿಸಿದ್ದಾರೆ.
ಕಾವೇರಿಗೆ ಸಿಎಂ ಬೊಮ್ಮಾಯಿ ಬಾಗಿನ, 8 ತಿಂಗ್ಳಲ್ಲಿ 2ನೇ ಬಾರಿ ಅರ್ಪಿಸಿರುವುದು ವಿಶೇಷ
2018-19ರಲ್ಲಿ 2 ಬಾರಿ ಬೇಬಿಬೆಟ್ಟದಲ್ಲಿ ಸರ್ವೆ ನಂಬರ್ ಒಂದನ್ನು ತಮ್ಮ ಹೆಸರಿಗೆ ಖಾತೆ ಮಾಡಿಕೊಡುವಂತೆ ಅರ್ಜಿ ಸಲ್ಲಿಸಿದ್ದ ರಾಜಮಾತೆ. 1950ರ ಗೆಜೆಟ್ ನೋಟಿಫಿಕೇಷನ್ ಪ್ರಕಾರ ಅದು ನಮ್ಮ ಖಾಸಗಿ ಆಸ್ತಿ. ನಮ್ಮ ಅನುಮತಿ ಪಡೆಯದೆ ಟ್ರಯಲ್ ಬ್ಲಾಸ್ಟ್ ಮಾಡೋದು ಕಾನೂನು ಬಾಹಿರ. ನಮ್ಮ ಒಪ್ಪಿಗೆ ಪಡೆಯದೆ ಅನುಮತಿ ಕೊಟ್ಟಿರೋದಕ್ಕೆ ಆಕ್ಷೇಪ ಇದೆ. ಕೂಡಲೇ ಅನುಮತಿ ಆದೇಶ ಹಿಂಪಡೆಯಬೇಕು. ತಪ್ಪಿದಲ್ಲಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ. ಒಟ್ಟಾರೆ ರಾಜಮಾತೆ ಪತ್ರ ಹಾಗೂ ರೈತರ ಒತ್ತಡಕ್ಕೆ ಮಣಿದ ಜಿಲ್ಲಾಡಳಿತ ಟ್ರಯಲ್ ಬ್ಲಾಸ್ಟ್ಗೆ ತಾತ್ಕಾಲಿಕ ಬ್ರೇಕ್ ನೀಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ