Tomato Flu ಕೋವಿಡ್‌ಗೂ ಟೊಮೆಟೋ ಜ್ವರಕ್ಕೂ ಸಂಬಂಧವಿಲ್ಲ, ಸುಧಾಕರ್‌!

By Kannadaprabha NewsFirst Published May 13, 2022, 4:55 AM IST
Highlights

- ಇದು ಕೊರೋನಾ ರೂಪಾಂತರಿ ಅಲ್ಲ
- ರಾಜ್ಯದಲ್ಲಿ ಒಂದೂ ಕೇಸ್‌ ಪತ್ತೆ ಇಲ್ಲ
- ಟೊಮೆಟೋ ಜ್ವರದ ಯಾವುದೇ ಪ್ರಕರಣಗಳು ದಾಖಲಾಗಿಲ್ಲ
 

ಬೆಂಗಳೂರು(ಮೇ.13): ಕೊರೋನಾ ಸೋಂಕಿಗೂ, ಟೊಮೆಟೋ ಜ್ವರಕ್ಕೂ ಯಾವುದೇ ಸಂಬಂಧವಿಲ್ಲ. ಈವರೆಗೂ ರಾಜ್ಯದಲ್ಲಿ ಟೊಮೆಟೋ ಜ್ವರದ ಯಾವುದೇ ಪ್ರಕರಣಗಳು ದಾಖಲಾಗಿಲ್ಲ. ಶಂಕಿತ ಪ್ರಕರಣಗಳು ವರದಿಯಾಗಿಲ್ಲ. ಅನಗತ್ಯ ಗಾಬರಿಯಾಗುವುದು ಬೇಡ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್‌ ತಿಳಿಸಿದ್ದಾರೆ.

ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಹಲವು ವರ್ಷಗಳ ಹಿಂದೆಯೇ ಈ ರೋಗ ಪತ್ತೆಯಾಗಿದ್ದು, ಕೇರಳದ ಕೆಲ ಭಾಗಗಳಿಗೆ ಮಾತ್ರ ಸೀಮಿತವಾಗಿದೆ. ಟೊಮೆಟೋ ಫä್ಲ ಹೊಸದಾಗಿ ಬಂದಿರುವ ಜ್ವರ ಅಲ್ಲ. ಕೊರೋನಾ ವೈರಸ್‌ ವಿಧ ಅಥವಾ ರೂಪಾಂತರ ಅಲ್ಲ. ಇದಕ್ಕೂ ಕೊರೋನಾ ವೈರಸ್‌ ಸೋಂಕಿಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.

6 ತಿಂಗಳ ಬಳಿಕ ತೆರೆಯಿತು ಬಾಬಾ ಕೇದಾರನಾಥನ ದ್ವಾರ, 10 ಕ್ವಿಂಟಾಲ್ ಹೂವಿನಿಂದ ಮಂದಿರ ಅಲಂಕಾರ!

5 ವರ್ಷಕ್ಕಿಂತ ಕೆಳಗಿನ ಮಕ್ಕಳಲ್ಲಿ ಜ್ವರ ಹಾಗೂ ಚರ್ಮದ ಮೇಲೆ ಗುಳ್ಳೆಗಳು ಕಾಣಿಸಿಕೊಳ್ಳುತ್ತಿವೆ. ಕೇರಳದ ಆರೋಗ್ಯ ಇಲಾಖೆ ಇದಕ್ಕೆ ಚಿಕಿತ್ಸೆಗಳನ್ನು ನೀಡುತ್ತಿದೆ. ಕೇರಳ ಆರೋಗ್ಯ ಇಲಾಖೆಯ ಜೊತೆ ರಾಜ್ಯದ ಆರೋಗ್ಯ ಇಲಾಖೆ ಸಂಪರ್ಕದಲ್ಲಿದೆ. ಕೇರಳದಿಂದ ಕರ್ನಾಟಕಕ್ಕೆ ಬರುವ ಪ್ರಯಾಣಿಕರು, ವಿಶೇಷವಾಗಿ ಮಕ್ಕಳ ಬಗ್ಗೆ ನಿಗಾ ಇಡಲು ಈಗಾಗಲೇ ಗಡಿ ಭಾಗದ ಜಿಲ್ಲಾ ವೈದ್ಯಾಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಜತೆಗೆ ಗಡಿ ಭಾಗದ ಐದಾರು ಜಿಲ್ಲೆಗಳಲ್ಲಿರುವ ಮಕ್ಕಳ ಮೇಲೂ ನಿಗಾ ಇಡಲಾಗಿದೆ. ಮಕ್ಕಳಿಗೆ ಜ್ವರ ಅಥವಾ ಚರ್ಮದ ಮೇಲೆ ಗುಳ್ಳೆಗಳು ಕಂಡು ಬಂದರೆ ಸೂಕ್ತ ತಪಾಸಣೆ ಹಾಗೂ ಚಿಕಿತ್ಸೆ ನೀಡುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಜಾಲತಾಣ ನಂಬಬೇಡಿ:
ಟೊಮೆಟೋ ಜ್ವರದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟುತಪ್ಪು ಮಾಹಿತಿ ಹರಡುತ್ತಿದ್ದು, ಸಾರ್ವಜನಿಕರು ನಂಬಬಾರದು ಎಂದು ಸಚಿವರು ಇದೇ ಸಂದರ್ಭದಲ್ಲಿ ಮನವಿ ಮಾಡಿದರು.

ನಾಲ್ಕನೇ ಅಲೆ ಗಂಭೀರವಾಗಿಲ್ಲ
ಈ ಹಿಂದಿನ ಕೊರೋನಾ ಅಲೆಗಳಿಗೆ ಹೋಲಿಸಿದರೆ 4ನೇ ಅಲೆಯ ಗಂಭೀರತೆ ಕಡಿಮೆ ಇದೆ. ರಾಜ್ಯದಲ್ಲಿ 150 ಆಸುಪಾಸಿನಲ್ಲಿ ಕೊರೋನಾ ಹೊಸ ಪ್ರಕರಣಗಳು ಪತ್ತೆಯಾಗುತ್ತಿವೆ. ಸಾವು- ನೋವು ಹೆಚ್ಚಿಲ್ಲ. ಆದರೆ, ಎಲ್ಲರೂ ಕೊರೋನಾ ಲಸಿಕೆಯ ಮೂರನೇ ಡೋಸ್‌ ಪಡೆದುಕೊಳ್ಳಬೇಕು ಎಂದು ಸಚಿವರು ಹೇಳಿದರು.

WHO ಸುಧಾರಿಸುವ, ಬಲಪಡಿಸುವ ಅಗತ್ಯವಿದೆ, ಪ್ರಮುಖ ಪಾತ್ರವಹಿಸಲು ಭಾರತ ಸಿದ್ಧ, ಪ್ರಧಾನಿ ಮೋದಿ!

ಗಾಳಿಯಲ್ಲಿ ಹರಡುವ ಸೋಂಕು
ಟೊಮೆಟೋ ಫä್ಲ ತಪಾಸಣೆಗೆ ರಾಜ್ಯದಲ್ಲಿ ವ್ಯವಸ್ಥೆ ಇದೆ. ರಕ್ತ ಮಾದರಿಯನ್ನು ಪಡೆದು ಜಿಲ್ಲಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಬಹುದು. ಈ ರೋಗ ಗಾಳಿಯಲ್ಲಿ ಹರಡುವುದರಿಂದ ಒಂದು ವೇಳೆ ಸೋಂಕು ಪತ್ತೆಯಾದರೆ ಆ ಸೋಂಕಿತರನ್ನು ಕೊರೋನಾ ಮಾದರಿಯಲ್ಲಿಯೇ ಕಡ್ಡಾಯವಾಗಿ ಪ್ರತ್ಯೇಕವಾಗಿಟ್ಟು (ಐಸೋಲೇಷನ್‌) ಚಿಕಿತ್ಸೆ ನೀಡಲಾಗುತ್ತದೆ. ಈಗಾಗಲೇ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಸೋಂಕಿನ ತಪಾಸಣೆ, ಚಿಕಿತ್ಸೆ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ಆರೋಗ್ಯ ಇಲಾಖೆ ಆಯುಕ್ತ ಡಿ.ರಂದೀಪ್‌ ತಿಳಿಸಿದರು.

ಕೇರಳ ಗಡಿಯಲ್ಲಿ ತೀವ್ರ ಕಟ್ಟೆಚ್ಚರ
ಕೇರಳದಲ್ಲಿ ಮಕ್ಕಳಲ್ಲಿ ಟೊಮೆಟೋ ಜ್ವರ ಪತ್ತೆಯಾದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಗಡಿ ಭಾಗದಲ್ಲಿ ಕಟ್ಟೆಚ್ಚರ ವಹಿಸುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.

ಗಡಿಭಾಗದಿಂದ ಆಗಮಿಸುವ ಪ್ರಯಾಣಿಕರಲ್ಲಿ ಅದರಲ್ಲೂ ಅಸೌಖ್ಯದಿಂದ ಮಕ್ಕಳನ್ನು ಆಸ್ಪತ್ರೆಗೆ ಕರೆತರುವ ಪ್ರಕರಣಗಳ ಬಗ್ಗೆ ತೀವ್ರ ನಿಗಾ ಇರಿಸುವಂತೆ ಸೂಚಿಸಲಾಗಿದೆ. ಮೈಸೂರು ಜಿಲ್ಲೆಯ ಗಡಿಭಾಗವಾದ ಬಾವಲಿ ಚೆಕ್‌ಪೋಸ್ಟ್‌, ಚಾಮರಾಜನಗರ ಜಿಲ್ಲೆಯ ಮೂಲೆಹೊಳೆ, ಮಂಗಳೂರಿನ ತಲಪಾಡಿ ಚೆಕ್‌ಪೋಸ್ಟ್‌ ಸೇರಿ ಕಟ್ಟೆಚ್ಚರ ವಹಿಸಲಾಗಿದೆ. ಪ್ರಯಾಣಿಕರಲ್ಲಿ 5 ವರ್ಷದ ಮಕ್ಕಳಲ್ಲಿ ಟೊಮೆಟೋ ಜ್ವರದ ಲಕ್ಷಣಗಳು ಕಂಡು ಬಂದರೆ ತಪಾಸಣೆಗೆ ಆರೋಗ್ಯ ಸಿಬ್ಬಂದಿ ನೇಮಿಸಲಾಗಿದೆ.

click me!