ಬೆಂಗಳೂರು (ಡಿ.10): ಕರ್ನಾಟಕ ಕಂಡ ಶ್ರೇಷ್ಠ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ಹಾಗೂ ನವ ಬೆಂಗಳೂರು, ಬ್ರ್ಯಾಂಡ್ ಬೆಂಗಳೂರಿನ ನಿರ್ಮಾತೃ ಎಸ್ಎಂ ಕೃಷ್ಣ ತಮ್ಮ 93ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ನಾಳೆ ಅವರ ಹುಟ್ಟೂರಿನಲ್ಲಿ ಅಂತ್ಯಸಂಸ್ಕಾರ ನಡೆಯಲಿದ್ದು, ರಾಜ್ಯ ಸರ್ಕಾರ ನಾಳೆ ಒಂದು ದಿನದ ರಜೆ ಘೋಷಣೆ ಮಾಡಿದೆ. ಎಸ್ಎಂ ಕೃಷ್ಣ ನಿಧನದ ಬೆನ್ನಲ್ಲಿಯೇ ಅವರ ಬದುಕಿನ ಬಗ್ಗೆ ಎಲ್ಲೂ ಸುದ್ದಿಯಾಗದ ಹಲವು ವಿಚಾರಗಳು ಮುನ್ನೆಲೆಗೆ ಬಂದಿವೆ. ಬಹುಶಃ ಈ ವಿಚಾರ ಹೆಚ್ಚಿನವರಿಗೆ ಗೊತ್ತಿರಲಿಕ್ಕಿಲ್ಲ. ಎಚ್.ವಿಶ್ವನಾಥ್ ಅವರ ಆತ್ಮಕಥನ ಹಳ್ಳಿ ಹಕ್ಕಿಯ ಹಾಡು ಪುಸ್ತಕ ಬಿಡುಗಡೆ ಆದಾಗ ಅದರಲ್ಲಿದ್ದ ಎಸ್ಎಂ ಕೃಷ್ಣ ಹಾಗೂ ಬಿ ಸರೋಜಾ ದೇವಿ ಅವರ ಪ್ರಣಯ ಪ್ರಸಂಗ ಸಾಕಷ್ಟು ಚರ್ಚೆಯಾಗಿತ್ತು. ಈ ಬಗ್ಗೆ ಸ್ವತಃ ಎಚ್.ವಿಶ್ವನಾಥ್ ಕೂಡ ಮಾಧ್ಯಮದವರೊಂದಿಗೆ ಮಾತನಾಡಿದ್ದಾರೆ.
ಹಳ್ಳಿ ಹಕ್ಕಿಯ ಹಾಡು ಎಚ್.ವಿಶ್ವನಾಥ್ ಅವರ ಆತ್ಮ ಕಥನ. ಇದರಲ್ಲಿ ತಮ್ಮ ರಾಜಕೀಯ ಜೀವನದ ಸಂಪೂರ್ಣ ವಿವರ ನೀಡಿದ್ದಾರೆ. ಇದರಲ್ಲಿ ಎಸ್ಎಂ ಕೃಷ್ಣ ಅವರ ಒಡನಾಟದ ಬಗ್ಗೆ ಹೇಳಿಕೊಳ್ಳುವ ಹಂತದಲ್ಲಿ ಅವರು ಹಾಗೂ ಕನ್ನಡದ ಪ್ರಖ್ಯಾತ ನಟಿ ಬಿ.ಸರೋಜಾ ದೇವಿ ಅವರ ಪ್ರಣಯ ಪ್ರಸಂಗವನ್ನೂ ಬರೆದುಕೊಂಡಿದ್ದರು. ಇದು ಸಾಕಷ್ಟು ಅಲ್ಲೋಲ ಕಲ್ಲೋಲವನ್ನೂ ಸೃಷ್ಟಿ ಮಾಡಿತ್ತು. 2004ರಲ್ಲಿ ಎಸ್ಎಂ ಕೃಷ್ಣ, ಅವರ ಪತ್ನಿ ಪ್ರೇಮಾ ಹಾಗೂ ಸಹೋದರ ಎಸ್.ಎಂ ಶಂಕರ್ ಅವರೊಂದಿಗೆ ಮಾತನಾಡಿದ್ದನ್ನು ಎಚ್.ವಿಶ್ವನಾಥ್ ತಿಳಿಸಿದ್ದರು. 55 ವರ್ಷಗಳ ಹಿಂದೆ ಎಸ್ಎಂ ಕೃಷ್ಣ ಹಾಗೂ ಬಿ.ಸರೋಜಾ ದೇವಿ ಅವರ ನಡುವೆ ಮದುವೆ ಪ್ರಸ್ತಾಪವಿತ್ತು ಅನ್ನೋದನ್ನ ಇವರಿಬ್ಬರೂ ಖಚಿತಪಡಿಸಿದ್ದರು. ಸ್ವತಃ ಸರೋಜಾ ದೇವಿ ಕೂಡ ಈ ಅಫೇರ್ಅನ್ನು ನಿರಾಕರಿಸಿರಲಿಲ್ಲ. ಕೆಲವೊಂದು ಕಾರಣಗಳಿಗಾಗಿ ಇದು ಮುಂದುವರಿದು ಸಂಬಂಧವಾಗಿ ಬದಲಾಗಲಿಲ್ಲ. ಈ ಬಗ್ಗೆ ಬರೆದಿದ್ದ ಮುಂಬೈನ ಪತ್ರಿಕೆಯ ಮೇಲೆ ಎಸ್ಎಂ ಕೃಷ್ಣ ಕೇಸ್ ಕೂಡ ಹಾಕಿದ್ದರು. ಈ ಸಂಬಂಧದ ಬಗ್ಗೆ ಬರೆದಿದ್ದ ಪತ್ರಿಕೆ ಅದಕ್ಕಾಗಿ ಮಾರ್ಫ್ ಮಾಡಲಾದ ಫೋಟೋವನ್ನು ಬಳಸಿತ್ತು. ಈ ವಿಚಾರವಾಗಿ ಎಸ್ಎಂಕೆ ಕೇಸ್ ಹಾಕಿದ್ದರು ಎನ್ನಲಾಗಿತ್ತು.
ಈ ಬಗ್ಗೆ ಮಂಗಳವಾರ ಮಾತನಾಡಿದ ಎಸ್.ವಿಶ್ವನಾಥ್, 'ಹಳ್ಳಿ ಹಕ್ಕಿಯ ಹಾಡು ಪುಸ್ತಕದಲ್ಲಿ ಚತುರ್ಭಾಷಾ ನಟಿ, ಕನ್ನಡತಿ ಬಿ.ಸರೋಜಾ ದೇವಿ ಹಾಗೂ ಎಸ್ಎಂ ಕೃಷ್ಣ ಅವರಿಗೂ ಇದ್ದಂಥ ಪ್ರಣಯ ಪ್ರಸಂಗದ ಬಗ್ಗೆ ಬರೆದಿದ್ದೆ. ಅದು ಅಲ್ಲೋಲ ಕಲ್ಲೋಲ ಸೃಷ್ಟಿಸಿತ್ತು. ಪುಸ್ತಕ ಬಿಡುಗಡೆ ಆದಾಗ ಅವರು ಮಹಾರಾಷ್ಟ್ರದ ರಾಜ್ಯಪಾಲರಾಗಿದ್ದರು. ಅಲ್ಲಿಗೆ ಪುಸ್ತಕಗಳನ್ನು ಕಳಿಸಿಕೊಟ್ಟು, ಫೋನ್ ಮಾಡಿದೆ. 'ಸರ್ ನಿಮಗೇನಾದರೂ ಬೇಜಾರಾಯಿತಾ?' ಎಂದು ಕೇಳಿದೆ. ಅದಕ್ಕೆ ಅವರು, 'ಯಾಕೆ ಬೇಜಾರು. ಇರೋ ವಿಚಾರ ಬರೆದಿದ್ದೀಯಾ. ಮತ್ತೇನಿದೆ ಅದರಲ್ಲಿ' ಎಂದಿದ್ದರು. ಈ ರೀತಿ ಇದ್ದ ಮನುಷ್ಯ ಅವರು ಎಂದು ನೆನಪಿಸಿಕೊಂಡಿದ್ದಾರೆ.
ಮಂಡ್ಯದ ಗಂಡುಗಳು ಎಸ್ಎಂಕೆ ನಾಜೂಕುತನ ಒಪ್ಪಿಕೊಳ್ಳಲಿಲ್ಲ: ಕಾವೇರಿ ನದಿ ಸಮಸ್ಯೆ ವಿಚಾರದಲ್ಲಿ ಬೆಂಗಳೂರು-ಕೆಆರ್ಎಸ್ ಪಾದಯಾತ್ರೆ ನಡೆಯಿತು. ಆದರೆ, ಅದು ಮಂಡ್ಯದಲ್ಲಿಯೇ ಕೊನೆಯಾಯಿತು.ಮಂಡ್ಯದ ಜನ ಇವರನ್ನು ಸ್ವೀಕಾರ ಮಾಡೋಕೆ ಸಿದ್ದ ಇರಲಿಲ್ಲ. ಮಂಡ್ಯದ ಗಂಡುಗಳು ಎಸ್ಎಂಕೆ ನಾಜೂಕುತನವನ್ನ ಒಪ್ಪಿರಲಿಲ್ಲ. ಯಾರೇ ಒಪ್ಪಲಿ, ಬಿಡಲಿ. ಅವರು ಮಂಡ್ಯದಲ್ಲಿ ಹುಟ್ಟಿದವರು. ಸಕ್ಕರೆಯ ನಾಡಿನ ಅಕ್ಕರೆಯ ನಾಯಕ. ಮಂಡ್ಯಕ್ಕೂ ಕೂಡ ಹಲವಾರು ಕೆಲಸಗಳನ್ನು ಮಾಡಿಕೊಟ್ಟ ನಾಯಕೆ ಎಂದಿದ್ದಾರೆ.
ಉದ್ಘಾಟನೆ ಆದ ಬೆನ್ನಲ್ಲೇ ಎದುರಾಯ್ತು ಲೀಲಾವತಿ ದೇಗುಲಕ್ಕೆ ಕುತ್ತು!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ