ಕಾಲೇಜು ದಿನಗಳಲ್ಲಿ ಬೇಜವಾಬ್ದಾರಿ ವ್ಯಕ್ತಿ ಆಗಿದ್ದೆ, ಸ್ಟಂಟ್‌ ಮಾಡ್ಕೊಂಡಿದ್ದೆ: ಯಶ್‌

By Govindaraj SFirst Published Aug 12, 2022, 3:15 AM IST
Highlights

ಏನನ್ನಾದರೂ ಸಾಧಿಸಬೇಕಾದರೆ ತಪಸ್ಸು ಮಾಡಬೇಕು ಎಂದುಕೊಳ್ಳುತ್ತೇವೆ. ಆದರೆ ಸಣ್ಣ ಸಣ್ಣ ವಿಷಯಗಳೂ ಮನುಷ್ಯನನ್ನು ಬದಲಾಯಿಸಿಬಿಡುತ್ತವೆ. ಮುಖ್ಯವಾಗಿ ಆತ್ಮವಿಶ್ವಾಸ ಇರಬೇಕಷ್ಟೆಎಂದು ನಟ ರಾಕಿಂಗ್‌ ಸ್ಟಾರ್‌ ಯಶ್‌ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. 

ಮೈಸೂರು (ಆ.12): ಏನನ್ನಾದರೂ ಸಾಧಿಸಬೇಕಾದರೆ ತಪಸ್ಸು ಮಾಡಬೇಕು ಎಂದುಕೊಳ್ಳುತ್ತೇವೆ. ಆದರೆ ಸಣ್ಣ ಸಣ್ಣ ವಿಷಯಗಳೂ ಮನುಷ್ಯನನ್ನು ಬದಲಾಯಿಸಿಬಿಡುತ್ತವೆ. ಮುಖ್ಯವಾಗಿ ಆತ್ಮವಿಶ್ವಾಸ ಇರಬೇಕಷ್ಟೆಎಂದು ನಟ ರಾಕಿಂಗ್‌ ಸ್ಟಾರ್‌ ಯಶ್‌ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಕರ್ನಾಟಕ ಸರ್ಕಾರ ಮತ್ತು ಮೈಸೂರು ವಿವಿ ಸ್ವಾತಂತ್ರ್ಯ ಅಮೃತಮಹೋತ್ಸವ ಅಂಗವಾಗಿ ಆಯೋಜಿಸಿದ್ದ ಯುವಜನ ಮಹೋತ್ಸವದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಯಾಗಿದ್ದಾಗ ಒಂಟಿಕೊಪ್ಪಲು, ಪಡುವಾರಹಳ್ಳಿ, ಗಂಗೋತ್ರಿ, ಕಾಳಿದಾಸ ರಸ್ತೆಯಲ್ಲಿ ಬೀಟ್‌ ಹೊಡೆದುಕೊಂಡಿದ್ದ ನಾನು ಈ ಮಟ್ಟಕ್ಕೆ ಬೆಳೆಯಲು ಅಂಥದ್ದೇನೂ ಬಹಳ ಬದಲಾವಣೆ ಮಾಡಿಕೊಂಡಿಲ್ಲ. ಸಣ್ಣ ಬದಲಾವಣೆಗಳು ಮನುಷ್ಯನನ್ನು ಬದಲಾಯಿಸಿಬಿಡುತ್ತವೆ. 

ವಿದ್ಯಾರ್ಥಿ ಜೀವನದಲ್ಲಿ ಖಂಡಿತವಾಗಿಯೂ ತಂದೆ-ತಾಯಿ ಖುಷಿಯಾಗುವಷ್ಟುಒಳ್ಳೆಯ ರೀತಿಯಲ್ಲಿ ನಾನು ಇರಲಿಲ್ಲ. ಬಹಳ ಬೇಜವಾಬ್ದಾರಿಯಿಂದ, ಏನೇನೋ ಸ್ಟಂಟ್‌ ಮಾಡಿಕೊಂಡಿದ್ದೆ. ಈಗ ಅದೇ ಊರಲ್ಲಿ ಇಷ್ಟೊಂದು ಪ್ರೀತಿ ತೋರಿಸುತ್ತಿರುವುದು ಖುಷಿಯ ವಿಚಾರ ಎಂದು ಅವರು ಹೇಳಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಯಶ್‌ ನಿಮ್ಮಂತೆಯೇ ಮೈಸೂರಿನಲ್ಲಿ ಓದಿ, ಆಟವಾಡಿಕೊಂಡಿದ್ದವರು. ಈಗ ಜವಾಬ್ದಾರಿಯುತ ವ್ಯಕ್ತಿ. ಅದು ಸಾಧ್ಯವಾಗಿದ್ದು ಅವರ ಕ್ರಿಯಾತ್ಮಕ ಶಕ್ತಿ ಮತ್ತು ಆತ್ಮವಿಶ್ವಾಸದಿಂದ ಎಂದರು. ಕಾರ್ಯಕ್ರಮದಲ್ಲಿ ಸಂಸದ ಪ್ರತಾಪ್‌ ಸಿಂಹ, ಶಾಸಕರಾದ ಜಿ.ಟಿ. ದೇವೇಗೌಡ, ಎಸ್‌.ಎ.ರಾಮದಾಸ್‌, ಎಲ್.ನಾಗೇಂದ್ರ ಮುಂತಾದವರಿದ್ದರು. 

ಟಿವಿಯಲ್ಲಿ ಬರ್ತಿದೆ ಯಶ್ ನಟನೆಯ ಬ್ಲಾಕ್ ಬಸ್ಟರ್ ಕೆಜಿಎಫ್ ಚಾಪ್ಟರ್-2; ಯಾವಾಗ?

ಈಗ ಅದೇ ಊರಲ್ಲಿ ಇಷ್ಟೊಂದು ಪ್ರೀತಿ ತೋರಿಸುತ್ತಿರುವುದು ಖುಷಿಯ ವಿಚಾರ ಎಂದು ಅವರು ಹೇಳಿದರು. ಕನ್ನಡ ಸಿನಿಮಾಕ್ಕೆ ಇಡೀ ಭಾರತ ಇಷ್ಟುಬೇಗ ದೊಡ್ಡ ಗೌರವ ಕೊಡುತ್ತದೆ ಎಂದು ನಂಬಿದ್ರಾ? ಅದು ಆಗಿದೆ. ಸತ್ಯ ತಾನೆ? ನನಗೇನೂ ಅದರಲ್ಲಿ ಸಂಕೋಚವಿಲ್ಲ. ಮುಕ್ತವಾಗಿಯೇ ಮಾತನಾಡುತ್ತೇನೆ. ಏಕೆಂದರೆ, ಪಾಸಿಟಿವ್‌ ಎನರ್ಜಿ ಯಾವಾಗಲೂ ಹರಡಬೇಕು ಎಂದರು. ನಾವು ಆತ್ಮವಿಶ್ವಾಸದಿಂದ ಮಾತನಾಡುವಾಗ ಕೆಲವರು ಏನಿವನು ಬಹಳ ಎಗರಾಡುತ್ತಿದ್ದಾನೆ ಎಂದುಕೊಂಡಿದ್ದರು. ಒಳ್ಳೆಯದು ಮಾತನಾಡಿದರೆ, ಯೋಚಿಸಿದರೆ ಮಿಕ್ಕಿದ್ದೆಲ್ಲವೂ ತಾನಾಗಿಯೇ ಬರುತ್ತಿರುತ್ತದೆ. ಯಾರೋ ಒಂದಷ್ಟುಜನ ಒಳ್ಳೆಯವರು ಸೇರಿಕೊಳ್ಳುತ್ತಾರೆ. ಒಬ್ಬರಿಂದಲೇ ಎಲ್ಲವೂ ಆಗುವುದಿಲ್ಲ. ಆ ವಿಷಯದ ಕಡೆಗೆ ಗಮನ ಕೊಡಬೇಕು ಎಂದು ಅವರು ಸಲಹೆ ನೀಡಿದರು. 

ಸ್ವಾತಂತ್ರ್ಯಕ್ಕಾಗಿ ಹೋರಾಡಿದವರನ್ನು ಸ್ಮರಿಸೋಣ. ಈಗ ಆಡಳಿತ ಮಾಡುತ್ತಿರುವವರು ಹಾಗೂ ಅವರ ಯೋಜನೆಗಳನ್ನು ಸ್ಮರಿಸೋಣ. ಅದನ್ನು ನಂಬೋಣ. ಆದರೆ, ನಮ್ಮೊಳಗೇ ಒಂದು ಸರ್ಕಾರ ಹುಟ್ಟಬೇಕು. ಅದು ಎಲ್ಲಾ ಇಲಾಖೆಯ ಕೆಲಸವನ್ನು ತಾನೇ ಮಾಡಬೇಕು. ನಮ್ಮೊಳಗೆ ನಾವೇ ಯೋಜನೆ ಹಾಕಿಕೊಳ್ಳಬೇಕು. ಕಾರ್ಯರೂಪಕ್ಕೆ ತರಬೇಕು. ಅವರವರ ಕ್ಷೇತ್ರದಲ್ಲಿ ಇರುವ ಕಷ್ಟಗಳನ್ನು ದಾಟಿ ಮುಂದೆ ಬರುವಂತಾದರೆ ದೇಶ ತಾನಾಗಿಯೇ ಮುಂದೆ ಹೋಗುತ್ತದೆ. ಇನ್ನೇನೂ ಬೇಕಾಗುವುದಿಲ್ಲ ಎಂದು ಅವರು ತಿಳಿಸಿದರು. ಯಾರು ಏನು ಬೇಕಾದರೂ ಸಾಧಿಸಬಹುದು. ಕುಳಿತಲ್ಲೇ, ಚಿಕ್ಕ ಹಳ್ಳಿಯಿಂದ ಇಂಟರ್ನೆಟ್‌ ಸಂಪರ್ಕವಿದ್ದರೆ ಸಮಸ್ಯೆ ಪರಿಹರಿಸಬಹುದು. ಸರ್ಕಾರದ ಯೋಜನೆಗಳನ್ನು ತಿಳಿದು ಸದ್ಬಳಕೆ ಮಾಡಿಕೊಳ್ಳಿ. ಯಾರೂ ಮನೆ ಬಾಗಿಲಿಗೆ ತಂದು ಕೊಡಲಾಗುವುದಿಲ್ಲ. 

ರಕ್ಷಾ ಬಂಧನ 2022; ರಾಕಿ ಭಾಯ್‌ಗೆ ರಾಖಿ ಕಟ್ಟಿದ ಸಹೋದರಿ, ಫೋಟೋ ಶೇರ್ ಮಾಡಿ ವಿಶ್ ಮಾಡಿದ ಯಶ್

ಹಸಿವಿದ್ದರೆ ಊಟ ಸಿಗುತ್ತದೆ. ಸಾಧಿಸಬೇಕು ಎನ್ನುವುದಿದ್ದರೆ ದಾರಿಗಳು ಸಿಗುತ್ತವೆ. ಆ ಕಡೆಗೆ ಗಮನ ಕೊಡಬೇಕು. ಮಜಾ ಮಾಡುವುದನ್ನೂ ಬಿಡಬೇಡಿ. ಸಣ್ಣ ಸಣ್ಣ ಖುಷಿಗಳನ್ನೂ ಅನುಭವಿಸಿ. ಸ್ನೇಹಿತರೊಂದಿಗೆ ಕಾಲ ಕಳೆಯಿರಿ. ತುಂಬಾ ಗಂಭೀರವಾಗಿ ಇರಬೇಡಿ ಎಂದು ಜೀವನಾನುಭವದ ಟಿಫ್ಸ್‌ ನೀಡಿದರು. ಯಾವುದೇ ನಿರ್ಧಾರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಟ್‌ ಎಂದು ತೆಗೆದುಕೊಳ್ಳುತ್ತಾರೆ. ಅವರ ಯೋಜನೆಗಳನ್ನೆಲ್ಲ ಅನುಷ್ಠಾನಕ್ಕೆ ತರುವ ಶಕ್ತಿಯನ್ನು ದೇವರು ನೀಡಲಿ. ಹೊರಗಡೆ ಸಾವಿರ ನಡೆಯಬಹುದು. ಆ ಬಗ್ಗೆ ತಲೆಕೆಡಿಸಿಕೊಳ್ಳದೆ ಕೆಲಸ ಮಾಡುವವರಿಗೆ ರಾಜಕೀಯ ಶಕ್ತಿಯನ್ನು ಜನರೇ ಕೊಡುತ್ತಾರೆ ಎಂದರು.

click me!