ಕೊಡಗಿನ ಚೊಟ್ಟೆಪಾರಿ ಗ್ರಾಮದಲ್ಲಿ ಕಸ ವಿಲೇವಾರಿ ಘಟಕವನ್ನು ಸ್ಥಾಪಿಸುವುದನ್ನು ವಿರೋಧಿಸಿ ಗ್ರಾಮಸ್ಥರು ಬಹುಜನ ಪಕ್ಷದ ನೇತೃತ್ವದಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಜನವಸತಿ ಪ್ರದೇಶದಲ್ಲಿ ಘಟಕ ಸ್ಥಾಪನೆಯಿಂದ ಪರಿಸರ ಮಾಲಿನ್ಯವಾಗಲಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವರದಿ : ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಮಾ.27) : ಹತ್ತಾರು ಕುಟುಂಬಗಳು ವಾಸಿಸುತ್ತಿರುವ ಮತ್ತು ಲಕ್ಷ್ಮಣ ತೀರ್ಥ ನದಿ ಹರಿಯುವ ಪಕ್ಕದಲ್ಲೇ ಪಂಚಾಯಿತಿಯಿಂದ ಅವೈಜ್ಞಾನಿಕವಾಗಿ ಕಸವಿಲೇವಾರಿ ಘಟಕವನ್ನು ಆರಂಭಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿ ಕೊಡಗಿನ ಚೊಟ್ಟೆಪಾರಿ ಸೇರಿದಂತೆ ವಿವಿಧ ಹಾಡಿಗಳ ಜನರು ಬಹುಜನ ಪಕ್ಷದ ನೇತೃತ್ವದಲ್ಲಿ ಅಹೋರಾತ್ರಿ ಧರಣಿ ನಡೆಯುತ್ತಿದೆ.
ವಿರಾಜಪೇಟೆ ತಾಲ್ಲೂಕಿನ ಮಾಲ್ದಾರ ಗ್ರಾಮ ಪಂಚಾಯಿತಿ ಎದುರು ಕಳೆದ ಮೂರು ದಿನಗಳಿಂದ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿರುವ ಪ್ರತಿಭಟನಾಕಾರರು ಪ್ರತೀ ದಿನವೂ ವಿವಿಧ ಸ್ವರೂಪಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಮೊನ್ನೆ ಸಮಾಧಾನದಿಂದ ಒಂದೆಡೆ ಕುಳಿತು ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರು ನಿನ್ನೆ ಮಾಲ್ದಾರೆ ಗ್ರಾಮ ಪಂಚಾಯಿತಿ ಎದುರೇ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು.
ಗುರುವಾರ ತಮಟೆ ಚಳುವಳಿ ನಡೆಸಿರುವ ಹೋರಾಟಗಾರರು ನಾಳೆಯಿಂದ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಮಾಲ್ದಾರೆ ಗ್ರಾಮ ಪಂಚಾಯಿತಿಯ ಚೊಟ್ಟೆಪಾರಿ ಅಥವಾ ಕಲ್ಲಳ್ಳ ಎನ್ನುವ ಜಾಗದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ನೂತನವಾಗಿ ಕಸವಿಲೇವಾರಿ ಕೇಂದ್ರ ನಿರ್ಮಿಸಲು ಹೊರಟಿರುವುದು ಸರಿಯಲ್ಲ ಎಂದು ಬಹುಜನ ಸಮಾಜ ಪಾರ್ಟಿ ನೇತ್ರತ್ವದಲ್ಲಿ ಮಾಲ್ದಾರೆ ಗ್ರಾಮ ಪಂಚಾಯತಿ ಎದುರು ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಕಸ ವಿಲೇವಾರಿಗೆ ಗುರುತಿಸಿರುವ ಸ್ಥಳದಿಂದ ಕೇವಲ 50 ಅಡಿ ದೂರದಲ್ಲಿ ದಲಿತ ಹಾಗೂ ಬುಡಕಟ್ಟು ಸಮುದಾಯ ಸೇರಿದಂತೆ ಹಲವು ಕುಟುಂಬಗಳು ವಾಸವಾಗಿವೆ. ಹೀಗಾಗಿ ಇದು ಸಂಪೂರ್ಣ ಜನ ವಸತಿ ಪ್ರದೇಶದಲ್ಲಿ ಕಸ ವಿಲೇವಾರಿ ಘಟಕ ಆರಂಭಿಸುತ್ತಿರುವುದರ ಹಿಂದೆ ಖಾಸಗೀ ತೋಟದ ಮಾಲೀಕರೊಬ್ಬರ ಲಾಭಿಗೆ ಅಧಿಕಾರಿಗಳು ಮಣಿದು ಇಲ್ಲಿ ಘಟಕ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಜೊತೆಗೆ ಸಮೀಪದಲ್ಲಿ ಅರಣ್ಯ ಪ್ರದೇಶವಿದ್ದು ತೋಡು ನೀರಿನ ಮೂಲಕ ಲಕ್ಷ್ಮಣತೀರ್ಥ ನದಿಗೆ ಈ ಕಸದ ತ್ಯಾಜ್ಯವೆಲ್ಲಾ ಸೇರುತ್ತದೆ. ಆದರೂ ಮಾಲಿನ್ಯ ನಿಯಂತ್ರಣ ಕಾನೂನು ಕ್ರಮಗಳನ್ನು ಗಾಳಿಗೆ ತೂರಿ ಕಸವಿಲೇವಾಡಿ ಘಟಕ ಆರಂಭಿಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ಪಂಚಾಯಿತಿ ಅಧಿಕಾರಿಗಳ ವಿರುದ್ಧ ಗಂಭೀರ ಆರೋಪ ಮಾಡುತ್ತಿದ್ದಾರೆ.
ಇದನ್ನೂ ಓದಿ: Kodagu News: ಆರೋಗ್ಯ ಸಚಿವರೇ ಇಲ್ನೋಡಿ, ಮದ್ಯಪಾನದಿಂದ ಕಿಡ್ನಿ ವೈಫಲ್ಯ ಹೆಚ್ಚಳ, ಒಬ್ಬೇ ಒಬ್ಬ ತಜ್ಞ ವೈದ್ಯರಿಲ್ಲ!
ಈ ಕುರಿತು ಮಾತನಾಡಿರುವ ಬಹುಜನ ಸಮಾಜ ಪಾರ್ಟಿ ಜಿಲ್ಲಾಧ್ಯಕ್ಷ ದಿವಿಲ್ ಕುಮಾರ್ ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು ನಡೆದಾಡುವ ರಸ್ತೆ ಇದಾಗಿದ್ದು, ತ್ಯಾಜ್ಯ ವಿಲೇವಾರಿ ಮಾಡಿದಲ್ಲಿ ಹತ್ತಾರು ಕುಟುಂಬಗಳಿಗೆ ಸಮಸ್ಯೆ ಎದುರಾಗಲಿದೆ. ಪರಿಸರ ಹಾಳಾಗಿ ಜನರು ಅನಾರೋಗ್ಯಕ್ಕೆ ತುತ್ತಾಗುವ ಆತಂಕವಿದೆ. ಜೊತೆಗೆ ಜಲ ಮೂಲಗಳು ಕಲುಷಿತಗೊಳ್ಳಲಿದೆ. ಸ್ಥಳೀಯ ನಿವಾಸಿಗಳು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗಬೇಕು. ಹೀಗಾಗಿ ಇಲ್ಲಿ ಕಸ ವಿಲೇವಾರಿ ಮಾಡುತ್ತೇವೆ ಎನ್ನುವ ಪಂಚಾಯಿತಿ ಅಧಿಕಾರಿಗಳು ಇದನ್ನು ಕೈಬಿಡಬೇಕು ಎಂದು ಒತ್ತಾಯಿಸಿದ್ದಾರೆ.
ಕಾಫಿ ಬೆಳೆಗಾರರಾದ ಮಿಟ್ಟು ನಂಜಪ್ಪ ಅವರು ಮಾತನಾಡಿ ಇಲ್ಲಿ ಕಸ ವಿಲೇವಾರಿ ಘಟಕ ಮಾಡಿದಲ್ಲಿ ಕಾಡು ಪ್ರಾಣಿ, ಪಕ್ಷಿಗಳು ಸಮಸ್ಯೆ ಎದುರಿಸಲಿವೆ. ಸುತ್ತಮುತ್ತಲ ಪ್ರದೇಶದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯದೆ ಕೊಳಚೆ ಪ್ರದೇಶವಾಗಿ ಮಾರ್ಪಾಡಾಗಲಿದೆ. ವಿಲೇವಾರಿ ಘಟಕ ಮಾಡುವುದಕ್ಕೆ ಮಾಲಿನ್ಯ ನಿಯಂತ್ರ ಮಂಡಳಿಯ ನಿಯಮಗಳನ್ನು ಪಾಲಿಸಬೇಕು. ಅದೆಲ್ಲವನ್ನೂ ಗಾಳಿಗೆ ತೂರಿ ಯಾರೋ ಒಬ್ಬರಿಗೆ ಅನುಕೂಲವಾಗುವಂತೆ ಇಲ್ಲಿಗೆ ಘಟಕ ಮಾಡುತ್ತಿರುವುದು ಸರಿಯಲ್ಲ. ಇದನ್ನು ಇಲ್ಲಿಗೆ ಕೈಬಿಟ್ಟರೆ ಒಳಿತು. ಇಲ್ಲದಿದ್ದರೆ ನಮ್ಮ ಹೋರಾಟ ತೀವ್ರಗೊಳ್ಳಲಿದ್ದು, ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಬರುವವರೆಗೆ ಪ್ರತಿಭಟನೆ ನಡೆಯಲಿದೆ ಎಂದು ಎಚ್ಚರಿಸಿದ್ದಾರೆ.