ಶಿವಮೊಗ್ಗ ದಂಪತಿ, ಗದಗ ಉದ್ಯಮಿಗೆ ಮೋದಿ ಪ್ರಶಂಸೆ

By Kannadaprabha NewsFirst Published Dec 26, 2022, 8:46 AM IST
Highlights
  • ಶಿವಮೊಗ್ಗ ದಂಪತಿ, ಗದಗ ಉದ್ಯಮಿಗೆ ಮೋದಿ ಪ್ರಶಂಸೆ
  • ಅಡಿಕೆ ಹಾಳೆಯಿಂದ ವಿಶಿಷ್ಟಉತ್ಪನ್ನ ತಯಾರಿಸುವ ದಂಪತಿ
  • 25 ವರ್ಷದಿಂದ ಕಲಾ ಸೇವೆ ಮಾಡುತ್ತಿರುವ ಉದ್ಯಮಿ

ನವದೆಹಲಿ (ಡಿ.26): ಪ್ರಧಾನಿ ನರೇಂದ್ರ ಮೋದಿ ಅವರು ವಿವಿಧ ಕ್ಷೇತ್ರಗಳಲ್ಲಿ ಕೊಡುಗೆ ನೀಡಿದ ಇಬ್ಬರು ಕನ್ನಡಿಗರ ಬಗ್ಗೆ ತಮ್ಮ ಮಾಸಿಕ ‘ಮನ್‌ ಕೀ ಬಾತ್‌’ ರೇಡಿಯೋ ಭಾಷಣದಲ್ಲಿ ಶ್ಲಾಘಿಸಿದ್ದಾರೆ. ಕಲಾ ಕ್ಷೇತ್ರದಲ್ಲಿ ಕೊಡುಗೆ ನೀಡಿರುವ ಗದಗ ನಗರದ ‘ಕಾವೆಂಶ್ರೀ’ ಹಾಗೂ ಅಡಿಕೆ ಹಾಳೆಯಿಂದ ವಿಶಿಷ್ಟಉತ್ಪನ್ನ ತಯಾರಿಸುವ ಶಿವಮೊಗ್ಗದ ಸುರೇಶ್‌-ಮೈಥಿಲಿ ದಂಪತಿಯ ಕೊಡುಗೆಯನ್ನು ಪ್ರಶಂಸಿಸಿದ್ದಾರೆ.

ಮೂಲತಃ ಸಾಗರದವರಾಗಿದ್ದು, ಗದಗನಲ್ಲಿ ಹೋಟೆಲ್‌ ಉದ್ಯಮ ನಡೆಸುತ್ತಿರುವ ‘ಕಾವೆಂಶ್ರೀ’ ಅವರ ಕೊಡುಗೆಯ ಬಗ್ಗೆ ಮನ್‌ ಕೀ ಬಾತ್‌ನಲ್ಲಿ ಮಾತನಾಡಿದ ಮೋದಿ, ‘ಕರ್ನಾಟಕದ ಕಲೆ-ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಧ್ಯೇಯದಲ್ಲಿ ಕಾವೆಂಶ್ರೀ (ಕಾಳಮಂಜಿ ವೆಂಕಟಗಿರಿಯಪ್ಪ ಶ್ರೀನಿವಾಸ) ಕಳೆದ 25 ವರ್ಷಗಳಿಂದ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ಅವರ ತಪಸ್ಸು ಎಷ್ಟುಶ್ರೇಷ್ಠ ಎಂದು ನೀವು ಊಹಿಸಬಹುದು. ಮೊದಲು ಅವರು ಹೋಟೆಲ…ಮ್ಯಾನೇಜ್‌ಮೆಂಟ್‌ ವೃತ್ತಿಯೊಂದಿಗೆ ಸಂಬಂಧ ಹೊಂದಿದ್ದರು. ಆದರೆ, ಅವರ ಸಂಸ್ಕೃತಿ ಮತ್ತು ಸಂಪ್ರದಾಯಕ್ಕೆ ಅವರ ಬಾಂಧವ್ಯ ಎಷ್ಟುಆಳವಾಗಿದೆಯೆಂದರೆ ಅದನ್ನು ಅವರು ತಮ್ಮ ಧ್ಯೇಯವನ್ನಾಗಿ ಮಾಡಿಕೊಂಡರು. ‘ಕಲಾ ಚೇತನ’ ಎಂಬ ಹೆಸರಿನಲ್ಲಿ ವೇದಿಕೆ ಸೃಷ್ಟಿಸಿದರು. ಈ ವೇದಿಕೆಯು ಇಂದು ಕರ್ನಾಟಕ ಮತ್ತು ಭಾರತ ಮತ್ತು ವಿದೇಶಗಳ ಕಲಾವಿದರ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ. ಇದರಲ್ಲಿ, ಸ್ಥಳೀಯ ಕಲೆ ಮತ್ತು ಸಂಸ್ಕೃತಿಯನ್ನು ಉತ್ತೇಜಿಸಲು ಅನೇಕ ನವೀನ ಪ್ರಯತ್ನಗಳನ್ನು ಸಹ ಕೈಗೊಳ್ಳಲಾಗುತ್ತದೆ’ ಎಂದು ಕೊಂಡಾಡಿದರು.

ನಾಮ ಇಟ್ಟರೆ ಹಿಂದು​ವಲ್ಲ, ನಡ​ವ​ಳಿಕೆ ಹಿಂದು ಆಗ​ಬೇ​ಕು: ರಘು​ನಂದ​ನ್‌

ಶಿವಮೊಗ್ಗ ದಂಪತಿ ಬಗ್ಗೆ ಶ್ಲಾಘನೆ:

ಇನ್ನು ಕರ್ನಾಟಕದ ಶಿವಮೊಗ್ಗದ ದಂಪತಿ ಸುರೇಶ್‌ ಮತ್ತು ಮೈಥಿಲಿ ಅವರ ಕೌಶಲ್ಯವನ್ನೂ ಮೋದಿ ‘ಮನ್‌ ಕೀ ಬಾತ್‌’ನಲ್ಲಿ ಪ್ರಸ್ತಾಪಿಸಿದರು. ‘ಕರ್ನಾಟಕದ ಶಿವಮೊಗ್ಗದ ದಂಪತಿ ಸುರೇಶ್‌ ಮತ್ತು ಮೈಥಿಲಿ ಅವರು ಅಡಿಕೆ ಹಾಳೆಯಿಂದ ಮಾಡಿದ ಅನೇಕ ವಿಶಿಷ್ಟಉತ್ಪನ್ನಗಳನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಕಳುಹಿಸುತ್ತಿದ್ದಾರೆ. ಇವರು ಅಡಿಕೆ ಹಾಳೆಯಿಂದ ತಟ್ಟೆ, ಕೈಚೀಲಗಳಿಂದ ಹಿಡಿದು ಅನೇಕ ಅಲಂಕಾರಿಕ ವಸ್ತುಗಳನ್ನು ತಯಾರಿಸುತ್ತಿದ್ದಾರೆ. ಈ ನಾರಿನಿಂದಲೇ ತಯಾರಿಸಿದ ಚಪ್ಪಲಿಗಳೂ ಇಂದು ಹೆಚ್ಚು ಇಷ್ಟವಾಗುತ್ತಿವೆ. ಇಂದು ಅವರ ಉತ್ಪನ್ನಗಳನ್ನು ಲಂಡನ್‌ ಮತ್ತು ಯುರೋಪಿನ ಇತರ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಇದು ನಮ್ಮ ನೈಸರ್ಗಿಕ ಸಂಪನ್ಮೂಲಗಳು ಮತ್ತು ಸಾಂಪ್ರದಾಯಿಕ ಕೌಶಲ್ಯಗಳ ಗುಣಮಟ್ಟವಾಗಿದೆ. ಇದು ಎಲ್ಲರಿಗೂ ಇಷ್ಟವಾಗುತ್ತಿದೆ. ಭಾರತೀಯರು ಇಂತಹ ಸ್ವದೇಶಿ ಮತ್ತು ಸ್ಥಳೀಯ ಉತ್ಪನ್ನಗಳನ್ನು ಬಳಸಿ ಇತರರಿಗೂ ಉಡುಗೊರೆಯಾಗಿ ನೀಡಬೇಕು’ ಎಂದು ಕರೆ ನೀಡಿದರು.

ಸುರೇಶ್‌- ಮೈಥಿಲಿ

ಶಿವಮೊಗ್ಗದ ದಂಪತಿ. ಅಡಿಕೆ ಹಾಳೆಯಿಂದ ತಟ್ಟೆ, ಕೈಚೀಲ, ಅಲಂಕಾರಿಕ ವಸ್ತುಗಳನ್ನು ತಯಾರಿಸಿದ್ದಾರೆ. ನಾರಿನಿಂದಲೇ ಚಪ್ಪಲಿಗಳನ್ನೂ ಮಾಡಿದ್ದಾರೆ. ಅವರ ಉತ್ಪನ್ನಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ವ್ಯಾಪಾರವಾಗುತ್ತಿವೆ.

Shivamogga: ಕರ್ಕಶ ಶಬ್ದ ಮಾಡುವ ವಾಹನಗಳ ಸೈಲೆನ್ಸರ್‌ಗಳ ವಿರುದ್ಧ ಬುಲ್ಡೋಜರ್ ಕಾರ್ಯಾಚರಣೆ

ಕೋಟಿ ರು. ಲಾಟರಿ ಇದು

ಪ್ರಧಾನಿ ಮೋದಿಯವರು ನಮ್ಮ ಕಾರ್ಯವನ್ನು ಮೆಚ್ಚಿ, ಶ್ಲಾಘಿಸಿರುವುದು ಕೋಟಿ ರುಪಾಯಿ ಲಾಟರಿ ಹೊಡೆದಂಗೆ ಆಗಿದೆ. ಇದನ್ನು ಅವರಿಂದ ನಿರೀಕ್ಷೆ ಮಾಡಿರಲಿಲ್ಲ. ತುಂಬಾ ಖುಷಿಯಾಗಿದ್ದೇನೆ.

- ಸುರೇಶ್‌, ಉದ್ಯ​ಮಿ

ಹೊಟೇಲ್  ಕಾವೆಂಶ್ರೀ

ಕಾಳಮಂಜಿ ವೆಂಕಟಗಿರಿಯಪ್ಪ ಶ್ರೀನಿವಾಸ ಎಂಬುದು ಪೂರ್ಣ ಹೆಸರು. ಮೂಲತಃ ಸಾಗರದವರು. ಗದಗಿನಲ್ಲಿ ಹೋಟೆಲ್‌ ಉದ್ಯಮ ನಡೆಸುತ್ತಿದ್ದಾರೆ. ಕರ್ನಾಟಕದ ಕಲೆ- ಸಂಸ್ಕೃತಿ ಪುನರುಜ್ಜೀವನಕ್ಕಾಗಿ ಕಲಾಚೇತನ ಎಂಬ ಸಂಸ್ಥೆಯನ್ನು 25 ವರ್ಷದಿಂದ ನಡೆಸುತ್ತಿದ್ದಾರೆ.

ಇದು ನನ್ನ ಭಾಗ್ಯ

ಮೋದಿ ಅವರು ಗುರುತಿಸಿ, ಪ್ರಶಂಸಿಸಿದ್ದು ನನ್ನ ಭಾಗ್ಯ. ನಮ್ಮ ಕಲೆ ಮತ್ತು ಸಂಸ್ಕೃತಿಯನ್ನು ಇಡೀ ದೇಶವೇ ಗುರುತಿಸುವಂತೆ ಮಾಡಿದ್ದಾರೆ. ಸರ್ಕಾರ ಧನ ಸಹಾಯ ನೀಡಿದರೆ ಇನ್ನೂ ಅದ್ಭುತ ಕಾರ್ಯಕ್ರಮಗಳನ್ನು ಸಂಘಟಿಸಲು ಸಹಾಯವಾಗುತ್ತದೆ.

- ಡಾ.ಕಾವೆಂಶ್ರೀ, ಕಲಾಚೇತನ ಅಕಾಡೆಮಿ ಅಧ್ಯಕ್ಷ, ಗದಗ

click me!