
ಬೆಂಗಳೂರು (ಮಾ.25): ರಾಜ್ಯದಲ್ಲಿ ಪ್ರಸ್ತುತ ಸಾಮಾಜಿಕ ಹಿಂದುಳಿದ ವರ್ಗದ '2ಬಿ' ಯಲ್ಲಿರುವ ಮುಸ್ಲಿಂ ಸಮುದಾಯದ ಶೇ.4 ಮೀಸಲಾತಿ ಕಿತ್ತುಕೊಂಡು ಆರ್ಥಿಕ ಹಿಂದುಳಿದ ವರ್ಗದ (EWS) ಮೀಸಲಾತಿ ನೀಡಲಾಗುತ್ತಿದೆ. ಈಗಾಗಲೇ ಆರ್ಥಿಕ ಹಿಂದುಳಿದ ವರ್ಗದ ಬ್ರಾಹ್ಮಣ ಮತ್ತು ಜೈನ ಸಮುದಾಯದವರೊಂದಿಗೆ ಪೈಪೋಟಿ ಮಾಡಲು ಸಾಧ್ಯವಿಲ್ಲ. ಇದರಿಂದ ಮುಸ್ಲಿಮರಿಗೆ ಅನ್ಯಾಯವಾಗುತ್ತದೆ ಎಂದು ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಶಾಫೀ ಸಾಅದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮುಸ್ಲಿಂ ಸಮುದಾಯದ ಮೀಸಲಾತಿ ಕಿತ್ತುಕೊಂಡಿರುವ ಬಗ್ಗೆ ದೊಡ್ಡ ಚರ್ಚೆಯಾಗುತ್ತಿದೆ. ನಿನ್ನೆ ನಾನು ಕಾನೂನು ಸಚಿವ ಮಾಧುಸ್ವಾಮಿ ಜೊತೆ ಮಾತಾನಾಡಿದ್ದೇನೆ. ಆಗ ಅವರು ಇದರಿಂದ ನಿಮಗೆ ಸಮಸ್ಯೆಯಾಗಲ್ಲ, ಆರ್ಥಿಕ ಹಿಂದುಳಿದ ಪ್ರವರ್ಗದಡಿ ಮೀಸಲಾತಿ ಸಿಗಲಿದೆ ಎಂದು ಹೇಳಿದ್ದರು. ಆದರೆ, ಕಾನೂನಿನ ಪ್ರಕಾರ ಆರ್ಥಿಕ ಹಿಂದುಳಿದ ವರ್ಗದಡಿ (Economically Weaker Sections-EWS) ನಮಗೆ ಅವಕಾಶ ಸಿಗಲ್ಲ. ಯಾಕೆಂದರೆ ಅಲ್ಲಿ ಬಲಾಢ್ಯ ಕಮ್ಯುನಿಟಿ ಇದೆ. ಹೀಗಾಗಿ ಅಲ್ಲಿ ಶೇ. 10 ಮೀಸಲು ಸಿಗುವುದಿಲ್ಲ ಎಂದು ಹೇಳಿದರು.
ನನ್ನ ಖಡ್ಗ ಕಾಫಿಗರ ರಕ್ತಕ್ಕಾಗಿ ತಹತಹಿಸುತ್ತಿದೆ: ಟಿಪ್ಪು ಖಡ್ಗದ ಮೇಲಿನ ಬರಹ ರಿವೀಲ್
EWS ಮೀಸಲಾತಿಯಿಂದ ಪಾತಾಳಕ್ಕೆ ಹೋಗುತ್ತೇವೆ: ರಾಜ್ಯದಲ್ಲಿ ಈವರೆಗೆ ಮುಸ್ಲಿಂ ಸಮುದಾಯಕ್ಕೆ ಸಾಮಾಜಿಕವಾಗಿ ಹಿಂದುಳಿದ ಮೀಸಲಾತಿ ಸಿಗುತ್ತಿತ್ತು. ಆದರೆ ಈಗ ಮುಸ್ಲಿಂರಿಗೆ ಅನ್ಯಾಯವಾಗುತ್ತೆದೆ. ನಮ್ಮಲ್ಲಿ ಜಾತಿ ಪದ್ಧತಿಯಿಲ್ಲ. ಮುಸ್ಲಿಂರು ಸಾಮಾಜಿಕವಾಗಿ ಹಿಂದುಳಿದವರು ಆಗಿದ್ದಾರೆ. ವೀರಪ್ಪ ಮೊಯ್ಲಿ ಹಾಗೂ ಮಾಜಿ ಪ್ರಧಾನಿ ದೇವೇಗೌಡರ ಅವಧಿಯಲ್ಲಿ ನಮಗೆ ಮೀಸಲಾತಿ ಕಾಯ್ದೆ ಜಾರಿಗೆ ತರಲಾಗಿದೆ. ಆದ್ದರಿಂದ ಈಗ ನಮಗೆ EWSನಲ್ಲಿ ಹೋಗೋಕೆ ಆಗಲ್ಲ. ನಾಳೆ ಯಾವ ಸಮುದಾಯದವರನ್ನು ಬೇಕಾದರೂ ಆರ್ಥಿಕ ಹಿಂದುಳಿದ ವಿಭಾಗ ವರ್ಗದಡಿ ತರಬಹುದು. ಹೀಗಾಗಿ ನಾವು ಇದನ್ನು ಒಪ್ಪಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ಸಮುದಾಯ ಪಾತಾಳಕ್ಕೆ ಹೋಗಲಿದೆ: ಮುಸ್ಲಿಂರಿಗೆ ಶೇ.4 ಪ್ರತ್ಯೇಕ ಮೀಸಲಾತಿ ಇತ್ತು, ಅದೇ ನಮಗೆ ಬೇಕಾಗಿದೆ. ಈ ಬಗ್ಗೆ ಸರ್ಕಾರಕ್ಕೆ ಮನವಿಯನ್ನೂ ಸಲ್ಲಿಕೆ ಮಾಡಲಾಗಿದೆ. ನಮ್ಮನ್ನು ಈಗ ಇಡಬ್ಲ್ಯೂಎಸ್ಗೆ ಸೇರ್ಪಡೆ ಮಾಡಿದರೂ ಶೇ.10 ಮೀಸಲಾತಿ ಸಿಗುವುದಿಲ್ಲ. ಈ ಮೀಸಲಾತಿಯಲ್ಲಿ ಬ್ರಾಹ್ಮಣರಿಗೆ ಜೈನರಿಗೆ ಹಂಚಿಕೆಯಾಗಬೇಕು. ಹೀಗಾಗಿ, ಮುಸ್ಲಿಂ ಸಮುದಾಯವನ್ನು ಆರ್ಥಿಕ ಹಿಂದುಳಿದ ವರ್ಗದ ಮೀಸಲಿಗೆ ನೋಟಿಫಿಕೇಶನ್ ಮಾಡದಂತೆ ಮನವಿ ಮಾಡಿದ್ದೇವೆ. ಸರ್ಕಾರದ ಮೀಸಲಾತಿ ಆದೇಶ ನಮ್ಮ ಸಮುದಾಯಕ್ಕೆ ಶಾಕ್ ಉಂಟು ಮಾಡಿದೆ. ಈಗ ರಾಜ್ಯದಲ್ಲಿ ಮೊದಲೇ ನಮ್ಮ ಸಮುದಾಯ ಹಿಂದುಳಿದಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಪಾತಾಳಕ್ಕೆ ಹೋಗುತ್ತೇವೆ ಎಂದು ಹೇಳಿದರು.
ಪಂಚಮಸಾಲಿಗೆ 2ಡಿ ಮೀಸಲಾತಿ: ಹೋರಾಟ ಸಮಿತಿ ಇಬ್ಭಾಗದಿಂದ ಕಣ್ಣೀರಿಟ್ಟ ಸ್ವಾಮೀಜಿ
ಸರ್ಕಾರಕ್ಕೆ ಡೆಡ್ ಲೈನ್ ಕೊಡಲು ನಿರ್ಧಾರ: ಸರ್ಕಾರದಿಂದ ಮುಸ್ಲಿಂರಿಗೆ ಇದ್ದ ಮೀಸಲಾತಿ ರದ್ದುಗೊಳಿಸಿದ ಹಿನ್ನೆಲೆಯಲ್ಲಿ ಮುಸ್ಲಿಂ ಸಮುದಾಯ ಸ್ಫೋಟಗೊಂಡಿದೆ. ಮುಸ್ಲಿಂ ಸಮುದಾಯದ ವಿರುದ್ಧ ಬೊಮ್ಮಾಯಿ ಸರ್ಕಾರ ಟಾರ್ಗೆಟ್ ಮಾಡಿದೆ ಎಂಬ ಆರೋಪವೂ ಕೇಳಿಬಂದಿದೆ. ಪಂಚಮಸಾಲಿ ಸಮುದಾಯ ಓಲೈಕೆ ಮಾಡುವ ನಿಟ್ಟಿನಲ್ಲಿ ಮುಸ್ಲಿಂ ಸಮುದಾಯದ ಮೀಸಲಾತಿ ಕಸಿಯುತ್ತಿರುವ ಕಾರಣ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದಾರೆ. ಹಿಂದುಳಿದ ಮೀಸಲಾತಿ ವರ್ಗದಡಿ '2ಬಿ'ನಲ್ಲಿ ಇದ್ದ ಮುಸ್ಲಿಂರಿಗೆ ಶೇ.4 ರದ್ದು ಮಾಡದಂತೆ ಆಕ್ರೋಶ ವ್ಯಕ್ತವಾಗುತ್ತಿದೆ. ಇದು ಬೇರೆ ಸಮುದಾಯದವರ ಒಲೈಕೆಗಾಗಿ ನಮ್ಮ ಸಮುದಾಯಕ್ಕೆ ಅನ್ಯಾಯ ಮಾಡಲಾಗುತ್ತಿದೆ. ಈಗಿರುವ ರೀತಿಯಲ್ಲಿಯೇ ಯಥಾಸ್ಥಿತಿ ಕಾಯ್ದುಕೊಳ್ಳಲು ಮನವಿ ಸಲ್ಲಿಕೆ ಮಾಡುತ್ತೇವೆ. ಸರ್ಕಾರ ಕ್ಕೆ ಡೆಡ್ ಲೈನ್ ಕೊಡ್ತೀವಿ. ಸಾಯಂಕಾಲ ಕಾನೂನು ಹೋರಾಟದ ಬಗ್ಗೆ ತಜ್ಞರ ಜೊತೆ ಸಭೆ ನಡೆಸುತ್ತೇವೆ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ