Covid-19 Crisis: ರಾಜ್ಯದಲ್ಲಿ ಕೊರೋನಾ ಮಹಾಸ್ಫೋಟ, 41457 ಕೇಸ್‌

By Kannadaprabha NewsFirst Published Jan 19, 2022, 3:50 AM IST
Highlights

ರಾಜ್ಯದಲ್ಲಿ ಕೊರೋನಾ ಸೋಂಕು ಹೊಸ ಪ್ರಕರಣಗಳು ಬರೋಬ್ಬರಿ 41 ಸಾವಿರಕ್ಕೆ ಏರಿಕೆಯಾಗಿದ್ದು, 20 ಜನರು ಸಾವಿಗೀಡಾಗಿದ್ದಾರೆ. ಇನ್ನೊಂದೆಡೆ ಪಾಸಿಟಿವಿಟಿ ದರ ಶೇ.22ರಷ್ಟು ವರದಿಯಾಗಿದ್ದು, ಸಕ್ರಿಯ ಸೋಂಕಿತರ ಸಂಖ್ಯೆ ಎರಡೂವರೆ ಲಕ್ಷಕ್ಕೆ ತಲುಪಿದೆ.

ಬೆಂಗಳೂರು (ಜ.19): ರಾಜ್ಯದಲ್ಲಿ ಕೊರೋನಾ ಸೋಂಕು (Covid Cases)) ಹೊಸ ಪ್ರಕರಣಗಳು ಬರೋಬ್ಬರಿ 41 ಸಾವಿರಕ್ಕೆ ಏರಿಕೆಯಾಗಿದ್ದು, 20 ಜನರು ಸಾವಿಗೀಡಾಗಿದ್ದಾರೆ. ಇನ್ನೊಂದೆಡೆ ಪಾಸಿಟಿವಿಟಿ ದರ ಶೇ.22ರಷ್ಟು ವರದಿಯಾಗಿದ್ದು, ಸಕ್ರಿಯ ಸೋಂಕಿತರ ಸಂಖ್ಯೆ ಎರಡೂವರೆ ಲಕ್ಷಕ್ಕೆ ತಲುಪಿದೆ.

ರಾಜ್ಯದಲ್ಲಿ ಮಂಗಳವಾರ 41,457 ಮಂದಿ ಸೋಂಕಿತರಾಗಿದ್ದು, 20 ಸೋಂಕಿತರು ಸಾವಿಗೀಡಾಗಿದ್ದಾರೆ. 8,353 ಮಂದಿ ಗುಣಮುಖರಾಗಿದ್ದು, 2,50,381 ಸೋಂಕಿತರು ಆಸ್ಪತ್ರೆ/ಮನೆಯಲ್ಲಿ ಚಿಕಿತ್ಸೆ, ಆರೈಕೆಯಲ್ಲಿದ್ದಾರೆ. ಸೋಮವಾರ 2.17 ಲಕ್ಷ ಇದ್ದ ಸೋಂಕು ಪರೀಕ್ಷೆಗಳು ಮಂಗಳವಾರ 1.85 ಲಕ್ಷಕ್ಕೆ ಇಳಿಕೆಯಾಗಿದೆ. ಆದರೂ, ಸೋಂಕಿತರ ಸಂಖ್ಯೆ ಬರೋಬ್ಬರಿ 14,301 (ಸೋಮವಾರ 27,156 ಕೇಸ್‌) ಹೆಚ್ಚಳವಾಗಿವೆ. ಇನ್ನು ರಾಜಧಾನಿ ಬೆಂಗಳೂರಿನಲ್ಲಿ 25,595 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಒಂದೇ ದಿನಕ್ಕೆ 10 ಸಾವಿರಕ್ಕೂ ಅಧಿಕ ಮಂದಿಯಲ್ಲಿ (ಸೋಮವಾರ 15,947) ಸೋಂಕು ಹೆಚ್ಚಳವಾಗಿದೆ.

215 ದಿನಗಳ ಗರಿಷ್ಠ: 215 ದಿನಗಳಲ್ಲಿಯೇ (ಜೂ.4ನಂತರ) ಅತಿ ಹೆಚ್ಚು ಮಂದಿಗೆ ಸೋಂಕು ತಗುಲಿದೆ. ಒಂದೇ ದಿನಕ್ಕೆ ರಾಜ್ಯದಲ್ಲಿ ಶೇ.53 ರಷ್ಟು, ಬೆಂಗಳೂರಿನಲ್ಲಿ ಶೇ.64ರಷ್ಟು ಹೊಸ ಪ್ರಕರಣಗಳು ಹೆಚ್ಚಳವಾಗಿವೆ. ಸೋಂಕು ಪರೀಕ್ಷೆಗಳ ಪಾಸಿಟಿವಿಟಿ ದರ ಹೆಚ್ಚಳವಾಗುತ್ತಾ ಸಾಗಿದ್ದು, ಶೇ.22.3ರಷ್ಟುದಾಖಲಾಗಿದೆ. ಅಂದರೆ, ಸೋಂಕು ಪರೀಕ್ಷೆಗೊಳಪಟ್ಟ ಪ್ರತಿ 100 ಮಂದಿಯಲ್ಲಿ 22 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಮೊದಲ ಎರಡು ಅಲೆ ಸೇರಿ ಒಟ್ಟಾರೆ ಕೊರೋನಾ ಪ್ರಕರಣಗಳ ಸಂಖ್ಯೆ 32.9 ಲಕ್ಷಕ್ಕೆ, ಗುಣಮುಖರ ಸಂಖ್ಯೆ 29.99 ಲಕ್ಷಕ್ಕೆ, ಸಾವಿಗೀಡಾದವರ ಸಂಖ್ಯೆ 38,456 ಕ್ಕೆ ತಲುಪಿದೆ.

Covid-19 Crisis: ರಾಜ್ಯದಲ್ಲಿ ಕೋವಿಡ್‌ ಸೋಂಕು, ಪಾಸಿಟಿವಿಟಿ ಎರಡೂ ಕುಸಿತ

4 ಜಿಲ್ಲೆಗಳಲ್ಲಿ 1000ಕ್ಕೂ ಅಧಿಕ: ಮಂಗಳವಾರ ಬೆಂಗಳೂರು ಹೊರತು ಪಡಿಸಿದರೆ ಮೈಸೂರು 1,848, ಹಾಸನ 1,739, ತುಮಕೂರು 1,731, ಬೆಂಗಳೂರು ಗ್ರಾಮಾಂತರ 1,116, ದಕ್ಷಿಣ ಕನ್ನಡ 1058, ಬಳ್ಳಾರಿ, ಧಾರವಾಡ, ಕಲಬುರಗಿ, ಮಂಡ್ಯ, ಉತ್ತರ ಕನ್ನಡದಲ್ಲಿ 500ಕ್ಕೂ ಅಧಿಕ ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಬಾಗಲಕೋಟೆ, ಹಾವೇರಿ, ಕೊಡಗು, ವಿಜಯಪುರ, ಯಾದಗಿರಿ ಹಾಗೂ ಕೊಪ್ಪಳದಲ್ಲಿ 100ಕ್ಕಿಂತ ಕಡಿಮೆ ಮಂದಿಗೆ ಸೋಂಕು ತಗುಲಿದೆ. ಬೆಂಗಳೂರಿನಲ್ಲಿ ಏಳು ಮಂದಿ, ಮೈಸೂರು ಮೂವರು ಮಂದಿ ಸೇರಿ 20 ಮಂದಿ ಸಾವಿಗೀಡಾಗಿದ್ದಾರೆ. ಈ ಪೈಕಿ ಚಿತ್ರದುರ್ಗದ 13 ವರ್ಷದ, ಮೈಸೂರಿನ 16 ವರ್ಷದ ಬಾಲಕಿ ಸೇರಿದ್ದಾರೆ ಎಂದು ಆರೋಗ್ಯ ಇಲಾಖೆ ವರದಿ ತಿಳಿಸಿದೆ.

ಸೋಂಕಿಗೆ ಇಬ್ಬರು ಮಕ್ಕಳು ಬಲಿ: ರಾಜ್ಯದಲ್ಲಿ ಮಂಗಳವಾರ ಕೊರೋನಾ ಸೋಂಕಿಗೆ 13 ಮತ್ತು 16 ವರ್ಷದ ಇಬ್ಬರು ಬಾಲಕಿಯರು ಬಲಿಯಾಗಿದ್ದಾರೆ. 3ನೇ ಅಲೆಯು ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಎಂಬ ಹೇಳಿಕೆಗಳ ಬೆನ್ನಲ್ಲೇ ಈ ಸಾವು ಸಂಭವಿಸಿರುವುದು ಆತಂಕ ಮೂಡಿಸಿದೆ. ಚಿತ್ರದುರ್ಗದಲ್ಲಿ ಜ್ವರ ಮತ್ತು ಕೆಮ್ಮಿನ ಲಕ್ಷಣ ಹೊಂದಿದ್ದ ವರ್ಷದ ಬಾಲಕಿ ಜ.12 ರಂದು ಆಸ್ಪತ್ರೆಗೆ ದಾಖಲಾಗಿದ್ದು, ಜ.17 ರಂದು ಸಾವಿಗೀಡಾಗಿದ್ದಾಳೆ. ಮೈಸೂರಿನಲ್ಲಿ 16 ವರ್ಷದ ಬಾಲಕಿ ಕೆಮ್ಮು ಮತ್ತು ಶೀತ ಲಕ್ಷಣದೊಂದಿಗೆ ಜ.13 ರಂದು ಆಸ್ಪತ್ರೆ ದಾಖಲಾಗಿ ಜ.15ರಂದು ಮೃತಪಟ್ಟಿದ್ದಾಳೆ. 

Covid-19 Crisis: ಭಾರತದಲ್ಲೀಗ ಕೋವಿಡ್‌ ಕೇಸ್‌ ಇಳಿಕೆ, ಪಾಸಿಟಿವಿಟಿ ದರ ಏರಿಕೆ

ಮಂಗಳವಾರದ ಆರೋಗ್ಯ ಇಲಾಖೆಯ ಕೊರೋನಾ ಬುಲೆಟಿನ್‌ನಲ್ಲಿ ಈ ಇಬ್ಬರು ಕೊರೋನಾದಿಂದಲೇ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಕೊರೋನಾ ವಾರ್‌ ರೂಂ ಮಾಹಿತಿ ಪ್ರಕಾರ, ಕೊರೋನಾ ಎರಡನೇ ಅಲೆಗೆ ಹೋಲಿಸಿದರೆ ಮಕ್ಕಳಲ್ಲಿ ಸೋಂಕಿನ ಪ್ರಮಾಣ ಕಡಿಮೆ ಇದೆ. ಎರಡನೇ ಅಲೆಯ ಏಪ್ರಿಲ್‌ನಲ್ಲಿ ಮಕ್ಕಳಲ್ಲಿ ಕೊರೋನಾ ಸೋಂಕು ಪರೀಕ್ಷೆಗಳ ಪಾಸಿಟಿವಿಟಿ ದರ ಶೇ.8.8 ರಷ್ಟಿತ್ತು. ಸದ್ಯ ಜನವರಿಯಲ್ಲಿ ಶೇ.5.7ರಷ್ಟಿದೆ. ಸದ್ಯ ವಯಸ್ಕರಲ್ಲಿ ಪಾಸಿಟಿವಿಟಿ ದರ ಶೇ.13ರಷ್ಟಿದೆ. ಇನ್ನು ಎರಡನೇ ಅಲೆಯ ಉಚ್ಛ್ರಯಾ ಸ್ಥಿತಿ ಇದ್ದ ಮೇನಲ್ಲಿ ಮಕ್ಕಳಲ್ಲಿ ಪಾಸಿಟಿವಿಟಿ ದರ ಶೇ.24ಕ್ಕೆ ಹೆಚ್ಚಿತ್ತು ಎಂದು ವಾರ್‌ ರೂಂ ತಿಳಿಸಿದೆ.

click me!