ಆಜಾನ್‌ ನಿಯಮಕ್ಕೆ ಕಾಂಗ್ರೆಸ್‌ ಮುಸ್ಲಿಮರ ಆಗ್ರಹ: ಅಲ್ಪಸಂಖ್ಯಾತರ ನಿಯೋಗದಿಂದ ಸಿಎಂ ಭೇಟಿ

By Govindaraj SFirst Published May 10, 2022, 3:20 AM IST
Highlights

ಆಜಾನ್‌ ಹಾಗೂ ಭಜನೆ ಸಂಘರ್ಷದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಉಪ ನಾಯಕ ಯು.ಟಿ. ಖಾದರ್‌ ನೇತೃತ್ವದಲ್ಲಿ ಕಾಂಗ್ರೆಸ್‌ ಅಲ್ಪಸಂಖ್ಯಾತ ನಾಯಕರ ನಿಯೋಗವು ಸೋಮವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಸೌಹಾರ್ದಯುತವಾಗಿ ವಿವಾದವನ್ನು ಬಗೆಹರಿಸುವಂತೆ ಮನವಿ ಸಲ್ಲಿಸಿದೆ.

ಬೆಂಗಳೂರು (ಮೇ.10): ಆಜಾನ್‌ (Azaan) ಹಾಗೂ ಭಜನೆ (Bhajane) ಸಂಘರ್ಷದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ (Congress) ಶಾಸಕಾಂಗ ಪಕ್ಷದ ಉಪ ನಾಯಕ ಯು.ಟಿ. ಖಾದರ್‌ (UT Khader) ನೇತೃತ್ವದಲ್ಲಿ ಕಾಂಗ್ರೆಸ್‌ ಅಲ್ಪಸಂಖ್ಯಾತ ನಾಯಕರ ನಿಯೋಗವು ಸೋಮವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರನ್ನು ಭೇಟಿ ಮಾಡಿ ಸೌಹಾರ್ದಯುತವಾಗಿ ವಿವಾದವನ್ನು ಬಗೆಹರಿಸುವಂತೆ ಮನವಿ ಸಲ್ಲಿಸಿದೆ. ಸೋಮವಾರ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಚರ್ಚಿಸಿದ ನಿಯೋಗದ ಸದಸ್ಯರು, ಆಜಾನ್‌ ವಿಚಾರದಲ್ಲಿ ಅನಗತ್ಯ ವಿವಾದ ಹುಟ್ಟುಹಾಕುವ ಸಂಘಟನೆಗಳನ್ನು ನಿಗ್ರಹಿಸಬೇಕು. ಆಜಾನ್‌ ಧ್ವನಿವರ್ಧಕ ಬಳಕೆ ಕುರಿತು ಈಗಾಗಲೇ ಸುಪ್ರೀಂ ಕೋರ್ಚ್‌ ಆದೇಶ ನೀಡಿದೆ. 

ಸರ್ಕಾರವು ಶಾಂತಿ ಹಾಗೂ ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ಆಜಾನ್‌ ಕುರಿತು ಅಗತ್ಯ ನಿಯಮ ರೂಪಿಸಬೇಕು. ಸರ್ಕಾರ ಕೈಗೊಳ್ಳುವ ತೀರ್ಮಾನಕ್ಕೆ ನಾವು ಬದ್ಧವಾಗಿರುತ್ತೇವೆ ಎಂದು ತಿಳಿಸಿದರು ಎಂದು ತಿಳಿದು ಬಂದಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪೂರಕವಾಗಿ ಸ್ಪಂದಿಸಿದ್ದು, ಸದ್ಯದಲ್ಲೇ ಈ ಕುರಿತು ಮಾರ್ಗಸೂಚಿ ಪ್ರಕಟಿಸಲಾಗುವುದು. ರಾಜ್ಯದಲ್ಲಿ ಶಾಂತಿ, ಸುವ್ಯವಸ್ಥೆ ಹಾಳು ಮಾಡಲು ಯತ್ನಿಸುವವರು ಹಾಗೂ ಕಾನೂನು ಕೈಗೆತ್ತಿಕೊಳ್ಳುವವರಿಗೆ ಅವಕಾಶ ನೀಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಉಳ್ಳಾಲ 'ಹಿಂದೂ ಶಾಸಕ' ಅಭಿಯಾನ: ಫೀಲ್ಡಿಗಿಳಿದ VHPಗೆ ಖಾದರ್ ತಿರುಗೇಟು!

ಸರ್ಕಾರ ಮೌನ ವಹಿಸುವುದು ಸರಿಯಲ್ಲ: ಮುಖ್ಯಮಂತ್ರಿಯವರ ಭೇಟಿ ಬಳಿಕ ಮಾತನಾಡಿದ ಯು.ಟಿ. ಖಾದರ್‌, ರಾಜ್ಯದಲ್ಲಿ ಶೇ. 99ರಷ್ಟುಜನ ಶಾಂತಿ ಹಾಗೂ ಸೌಹಾರ್ದತೆಯಿಂದ ಇದ್ದಾರೆ. ಕೆಲವೇ ಕೆಲವು ಮಂದಿ ಉದ್ದೇಶಪೂರ್ವಕವಾಗಿ ಅಶಾಂತಿ ಸೃಷ್ಟಿಸಲು ಯತ್ನಿಸುತ್ತಿದ್ದಾರೆ. ಈ ಬಗ್ಗೆ ಗಮನಹರಿಸಿ ಸರ್ಕಾರವು ಶಾಂತಿಯುತ ಹಾಗೂ ಸಾಮರಸ್ಯ ಸಮಾಜವನ್ನು ಸೃಷ್ಟಿಸಬೇಕು. ಸಮಾಜಘಾತುಕರನ್ನು ಹದ್ದು ಬಸ್ತಿನಲ್ಲಿಡಬೇಕು. ಈ ವಿಚಾರದಲ್ಲಿ ಸರ್ಕಾರ ಮೌನ ವಹಿಸುವುದು ಸರಿಯಲ್ಲ ಎಂದು ಮನವಿ ಮಾಡಿದ್ದೇವೆ ಎಂದರು.

ಆದೇಶ ಪಾಲನೆಗೆ ಸಿದ್ಧ: ನಾವು ಯಾವುದೇ ಹೋರಾಟ ಮಾಡುತ್ತಿಲ್ಲ. ಶ್ರೀರಾಮಸೇನೆ ವಿರುದ್ಧ ಹೋರಾಟ ಮಾಡಲ್ಲ, ಕಾನೂನು ಹೋರಾಟವೂ ಇಲ್ಲ. ಸದ್ಯದ ಬೆಳವಣಿಗೆಗಳನ್ನು ಸರ್ಕಾರದ ಗಮನಕ್ಕೆ ತಂದಿದ್ದೇವೆ. ಸರ್ಕಾರ ಕ್ರಮ ಕೈಗೊಳ್ಳಲಿದ್ದು, ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ಶಬ್ದ ಮಾಲಿನ್ಯಗಳ ಕುರಿತು ಸರ್ಕಾರ ನ್ಯಾಯಾಲಯದ ಆದೇಶದಂತೆ ನಿಯಮ ಮಾಡಲಿ. ಅಂತಿಮವಾಗಿ ಸರ್ಕಾರದ ಆದೇಶವನ್ನು ಪಾಲಿಸಲು ಎಲ್ಲರೂ ಸಿದ್ಧವಿದ್ದೇವೆ ಎಂದು ಹೇಳಿದರು.

ಆಜಾನ್‌ ವಿವಾದದ ಬಗ್ಗೆ ಕಾಂಗ್ರೆಸ್‌ ಮುಸ್ಲಿಂ ಶಾಸಕರನ್ನು ಹೊರತು ಪಡಿಸಿ ಉಳಿದವರು ಮಾತನಾಡುತ್ತಿಲ್ಲ ಎಂಬ ಬಗ್ಗೆ ಮಾತನಾಡಿದ ಅವರು, ಇದರಲ್ಲಿ ಜಾತಿ, ಧರ್ಮವಿಲ್ಲ. ನಾವು ಆತಂಕದಲ್ಲಿದ್ದೇವೆ, ನಮ್ಮ ಮಕ್ಕಳಾದರೂ ನೆಮ್ಮದಿಯಿಂದ ಇರಲಿ ಎಂದು ಎಲ್ಲ ಜಾತಿ, ಧರ್ಮದವರೂ ಶಾಂತಿ ಸುವ್ಯವಸ್ಥೆ ಬಯಸುತ್ತಿದ್ದಾರೆ. ರಾಜ್ಯದ ಅಭಿವೃದ್ಧಿ ಹಾಗೂ ದೇಶದ ಏಕತೆ ಮುಖ್ಯ. ಬೇರೆ ದೇಶದ ಮುಂದೆ ನಮ್ಮ ದೇಶವನ್ನು ಸ್ವಾಭಿಮಾನದಿಂದ ನೋಡುವುದು ನಮ್ಮ ಉದ್ದೇಶ. ಸಮಾಜದಲ್ಲಿ ಸಾಮರಸ್ಯ ಕಾಪಾಡುವ ಹೊಣೆ ಮಾಧ್ಯಮಗಳ ಮೇಲೆಯೂ ಇದೆ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.

ಬಿಜೆಪಿ ಶಾಸಕರ ಗುತ್ತಿಗೆದಾರರೆಲ್ಲಾ ಮುಸ್ಲಿಮರೇ, ಖಾದರ್ ಹೇಳಿಕೆಗೆ ಕಾಮತ್ ತಿರುಗೇಟು

ಈ ವಿಚಾರದಲ್ಲಿ ರಾಜಕೀಯ ತರುವುದು ತರವಲ್ಲ. ಡಿ.ಕೆ. ಶಿವಕುಮಾರ್‌, ಸಿದ್ದರಾಮಯ್ಯ, ಕಾಂಗ್ರೆಸ್‌ ಕಾರ್ಯಕರ್ತರು ಎಲ್ಲರೂ ಶಾಂತಿ, ಸುವ್ಯವಸ್ಥೆಗೆ ಒತ್ತು ನೀಡುತ್ತಿದ್ದಾರೆ ಎಂದರು. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆಯೇ ಎಂಬ ಪ್ರಶ್ನೆಗೆ, ಇದನ್ನು ನೀವು ಮುಖ್ಯಮಂತ್ರಿ ಹಾಗೂ ಸರ್ಕಾರವನ್ನು ಕೇಳಬೇಕು. ಎಲ್ಲಾ ವಿಷಯಗಳಲ್ಲಿ ಮಾಧ್ಯಮಗಳು ಒಂದು ಅಭಿಪ್ರಾಯ ನೀಡುತ್ತವೆ. ಈ ವಿಷಯದಲ್ಲೂ ಒಂದು ಅಭಿಪ್ರಾಯ ಕೊಡಿ ಎಂದರು. ನಿಯೋಗದಲ್ಲಿ ಶಾಸಕ ಎನ್‌.ಎ. ಹ್ಯಾರಿಸ್‌, ಪರಿಷತ್‌ ಸದಸ್ಯ ನಜೀರ್‌ ಅಹಮದ್‌ ಇದ್ದರು.

click me!