
ಕೋಲಾರ (ಮಾ.24): ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವ ಭರದಲ್ಲಿ 'ಮೋದಿ' ಎನ್ನುವ ಸರ್ನೇಮ್ ಟೀಕೆ ಮಾಡುವ ಮೂಲಕ ಒಬಿಸಿ ಜಾತಿ ನಿಂದನೆ ಮಾಡಿದ್ದ ರಾಹುಲ್ ಗಾಂಧಿಗೆ ಸೂರತ್ ಕೋರ್ಟ್ ಎರಡು ವರ್ಷ ಜೈಲು ಶಿಕ್ಷೆ ಹಾಗೂ 15 ಸಾವಿರ ರೂಪಾಯಿಯ ದಂಡ ಶಿಕ್ಷೆ ವಿಧಿಸಿದೆ. ಈ ನಡುವೆ ರಾಹುಲ್ ಗಾಂಧಿ ಈ ಪ್ರಕರಣದಲ್ಲಿ ಸಿಕ್ಕಿಹಾಕಿಕೊಳ್ಳುವಂತೆ ಮಾಡಿದ್ದು ಮುಳಬಾಗಿಲಿನ ಬಿಜೆಪಿ ನಾಯಕ ಪಿಎಂ ರಘುನಾಥ್ ಎನ್ನುವ ವಿಚಾರ ಬಹಿರಂಗವಾಗಿದೆ. ರಾಹುಲ್ ಗಾಂಧಿ ಅವರಿಗೆ ಮುಳುವಾದ ಮುಳಬಾಗಿಲಿನ ಸಾಕ್ಷಿಯೇ ಹಿನ್ನಡೆಯಾಗಿ ಪರಿಣಮಿಸಿತು. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನಲ್ಲಿ 2019 ರ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಭಾಷಣ ಮಾಡುತ್ತಿದ್ದರು. ಕೋಲಾರದ ಜಿಲ್ಲಾ ಕ್ರೀಡಾಂಗಣದಲ್ಲಿ ಕೆ.ಎಚ್ ಮುನಿಯಪ್ಪ ಪರ ಮತಯಾಚನೆ ಮಾಡುವ ವೇಳೆ ರಾಹುಲ್ ಗಾಂಧಿ ನಿಂದನೆಯ ಮಾತು ಆಡಿದ್ದರು. ನೀರವ್ ಮೋದಿ, ಲಲಿತ್ ಮೋದಿ ಹಾಗೂ ನರೇಂದ್ರ ಮೋದಿ ಅವರೆಲ್ಲರ ಸರ್ನೇಮ್ ಒಂದೇ ಆಗಿದೆ. ಈ ಎಲ್ಲಾ ಕಳ್ಳರು ದೇಶವನ್ನು ಲೂಟಿ ಮಾಡುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಭಾಷಣ ಮಾಡಿದ್ದರು. ರಾಹುಲ್ ಗಾಂಧಿ ಹೇಳಿಕೆ ಆಧರಿಸಿ ಬಿಜೆಪಿ ಶಾಸಕ ಪೂರ್ಣೆಶ್ ಮೋದಿ ಕ್ರಿಮಿನಲ್ ಮಾನಹಾನಿ ಕೇಸ್ ದಾಖಲು ಮಾಡಿದ್ದರು. ಸೂರತ್ ನ ಚೀಫ್ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ ಕ್ರಿಮಿನಲ್ ಮಾನಹಾನಿ ದೂರು ದಾಖಲು ಮಾಡಿದ್ದರು.
ಶಾಸಕ ಪೂರ್ಣೇಶ್ ಕೇಸ್ ದಾಖಲು ಮಾಡಿದ್ದರೂ, ಅದರ ಸಹ ಸೂತ್ರಧಾರ ಮುಳಬಾಗಿಲು ತಾಲೂಕಿನ ಬಿಜೆಪಿ ಮುಖಂಡ ಪಿ.ಎಂ ರಘುನಾಥ್. ರಾಹುಲ್ ಗಾಂಧಿ ನೀಡಿದ್ದ ಹೇಳಿಕೆಯ ವಿಡಿಯೋವನ್ನು ಶಾಸಕ ಪೂರ್ಣೇಶ್ ಮೋದಿಯನ್ನು ಸಂಪರ್ಕಿಸಿ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ರಘುನಾಥ್ ವ್ಯವಸ್ಥೆ ಮಾಡಿದ್ದರು. ಸೂರತ್ ಗೆ ತೆರಳಿ ರಾಹುಲ್ ಗಾಂಧಿ ವಿರುದ್ಧ ಪಿಎಂ ರಘುನಾಥ್ ಸಾಕ್ಷಿ ಕೂಡ ಹೇಳಿದ್ದರು.
ಮೋದಿ ನನಗೆ ಶೂರ್ಪನಖಿ ಅಂದಿದ್ರು, ನಾನೂ ಮಾನಹಾನಿ ಕೇಸ್ ಹಾಕ್ತೇನೆ: ರೇಣುಕಾ ಚೌಧರಿ!
ರಾಹುಲ್ ಗಾಂಧಿಯನ್ನು ಗುರುತಿಸಿ ಇವರೇ ಮಾನಹಾನಿ ಭಾಷಣ ಮಾಡಿದ್ದು ಎಂದು ರಘುನಾಥ್ ಸಾಕ್ಷಿ ಕೂಡ ಹೇಳಿದ್ದರು. ರಾಹುಲ್ ಭಾಷಣವನ್ನು ಚಿತ್ರೀಕರಿಸಿದ್ದ ಮುಳಬಾಗಿಲು ಬಿಜೆಪಿ ಮುಖಂಡ ಪಿ.ಎಂ ರಘುನಾಥ್ ಇದನ್ನು ಚುನಾವಣಾ ಆಯೋಗಕ್ಕೂ ನೀಡಿದ್ದರು.
Modi Surname Case: ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಕಾಂಗ್ರೆಸ್ ನಿರ್ಧಾರ, ಕೋರ್ಟ್ಗೆ ಗೌರವ ನೀಡಿ ಎಂದ ಬಿಜೆಪಿ!
ಡಿಸಿ, ಚುನಾವಣಾ ಅಧಿಕಾರಿಯಿಂದಲೂ ಸಾಕ್ಷಿ: ಇನ್ನು ರಾಹುಲ್ ಗಾಂಧಿಗೆ ಹಿನ್ನಡೆಯಾಗಿದ್ದು ರಘುನಾಥ್ ಮಾತ್ರವಲ್ಲ. ಸ್ವತಃ ಸೂರತ್ ಕೋರ್ಟ್ 2019ರಲ್ಲಿ ರಾಹುಲ್ ಗಾಂಧಿ ಭಾಷಣ ಮಾಡುವ ಸಮಯದಲ್ಲಿ ಇದ್ದ ಕೋಲಾರದ ಜಿಲ್ಲಾಧಿಕಾರಿ ಹಾಗೂ ಕೋಲಾರ ಜಿಲ್ಲಾ ಚುನಾವಣಾಧಿಕಾರಿಯನ್ನೂ ವಿಚಾರಣೆಗೆ ಕರೆದಿತ್ತು. ರಘುನಾಥ್ ಮಾಡಿದ್ದ ವಿಡಿಯೋ ಸತ್ಯಾಸತ್ಯತೆಗಳೇನು ಎನ್ನುವುದರ ಬಗ್ಗೆ ಪ್ರಶ್ನೆ ಮಾಡಿತ್ತು. ಈ ವೇಳೆ ಇವರಿಬ್ಬರೂ ಕೂಡ ರಾಹುಲ್ ಗಾಂದಿ ಈ ಮಾತು ಹೇಳಿದ್ದು ನಿಜ ಎಂದಿದ್ದರು. ಅದರ ಬೆನ್ನಲ್ಲಿಯೇ ರಾಹುಲ್ ಗಾಂಧಿ ದೋಷಿ ಎಂದು ತೀರ್ಮಾನವಾಗುವುದು ಖಚಿತವಾಗಿತ್ತು.
ಕಾಂಗ್ರೆಸ್ನಿಂದ ದೇಶವ್ಯಾಪಿ ಪ್ರತಿಭಟನೆ: ಕೋರ್ಟ್ ತೀರ್ಪಿನ ವಿರುದ್ಧ ಕಾಂಗ್ರೆಸ್, ದೆಹಲಿ, ಹೈದರಾಬಾದ್ ಸೇರಿದಂತೆ ಪ್ರಮುಖ ನಗರಗಳಲ್ಲಿ ಪ್ರತಿಭಟನೆ ನಡೆಸಲಿದೆ.ಉದ್ದೇಶ ಪೂರ್ವಕವಾಗಿ ಬಿಜೆಪಿ ಇಂತಹ ಕೃತ್ಯಗಳನ್ನ ಮಾಡುತ್ತಿದೆ. ರಾಹುಲ್ ಗಾಂಧಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿರೋದು ಸರಿಯಲ್ಲ. ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಕಾಂಗ್ರೆಸ್ ಅರೋಪಿಸಿದೆ. ಅದಾನಿ ವಿಷ್ಯದ ಬಗ್ಗೆ ಪ್ರಶ್ನೆ ಮಾಡೋಕು ಸಹ ಬಿಜೆಪಿ ಅವಕಾಶ ನೀಡುತ್ತಿಲ್ಲ. ವಿಪಕ್ಷಗಳ ಬಾಯಿ ಮುಚ್ಚಿಸೋಕೆ ಬಿಜೆಪಿ ಈ ರೀತಿಯ ತಂತ್ರಗಳನ್ನ ಅನುಸರಿಸುತ್ತಿದೆ ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ನಾಯಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ ಈ ತೀರ್ಪಿನ ಬಳಿಕ ರಾಹುಲ್ ಗಾಂಧಿಯನ್ನ ಅನರ್ಹ ಗೊಳಿಸಲು ಬಿಜೆಪಿ ಸಹ ಪಟ್ಟು ಹಿಡಿದಿದೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ