ತಿರುಪತಿ ಲಡ್ಡು ತಯಾರಿಕೆಗೆ ನಂದಿನಿ ತುಪ್ಪ ಪೂರೈಕೆ ಸ್ಥಗಿತ: ಕಾರಣ ಬಿಚ್ಚಿಟ್ಟ ಕೆಎಂಎಫ್‌

By Sathish Kumar KHFirst Published Jul 31, 2023, 10:59 AM IST
Highlights

ದೇಶದ ಅತ್ಯಂತ ಶ್ರೀಮಂತ ದೇವಾಲಯಗಳಲ್ಲಿ ಒಂದಾಗಿರುವ ತಿರುಪತಿ ತಿಮ್ಮಪ್ಪನ ದೇವಸ್ಥಾನದ ಲಡ್ಡು ತಯಾರಿಕೆಗೆ ನೀಡುತ್ತಿದ್ದ ಕರ್ನಾಟಕದ ನಂದಿನಿ ತುಪ್ಪ ಸರಬರಾಜು ಸ್ಥಗಿತಗೊಳಿಸಲಾಗಿದೆ.

ಬೆಂಗಳೂರು (ಜು.31): ದೇಶದ ಅತ್ಯಂತ ಶ್ರೀಮಂತ ದೇವಾಲಯಗಳಲ್ಲಿ ಒಂದಾಗಿರುವ ತಿರುಪತಿ ತಿಮ್ಮಪ್ಪನ ದೇವಸ್ಥಾನದಲ್ಲಿ ಲಡ್ಡು ತಯಾರಿಕೆಗೆ ಕಳೆದ 20 ವರ್ಷಗಳಿಂದ ಸರಬರಾಜು ಮಾಡುತ್ತಿದ್ದ ಕರ್ನಾಟಕ ಹಾಲು ಒಕ್ಕೂಟದ ಬಳ್ಳಾರಿ ವಿಭಾಗದಿಂದ ನಂದಿನಿ ತುಪ್ಪವನ್ನು ಸರಬರಾಜು ಮಾಡಲಾಗುತ್ತಿತ್ತು. ಆದರೆ, ಅತ್ಯಂತ ಕಡಿಮೆ ಬೆಲೆಗೆ ತುಪ್ಪ ಕೇಳುತ್ತಿರುವ ಹಿನ್ನೆಲೆಯಲ್ಲಿ ತುಪ್ಪ ಸರಬರಾಜು ಮಾಡುವುದನ್ನು ಕೆಎಂಎಪ್‌ ವಾಪಸ್‌ ಪಡೆದುಕೊಂಡಿದೆ ಎಂದು ಕರ್ನಾಟಕ ಹಾಲು ಮಹಾಮಂಡಳ ಅಧ್ಯಕ್ಷ ಎಸ್. ಭೀಮಾನಾಯ್ಕ ತಿಳಿಸಿದ್ದಾರೆ.

ಈ ಕರಿತು ಬಳ್ಳಾರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಭೀಮಾನಾಯ್ಕ ಅವರು, ಕಳೆದ ಒಂದು ವರ್ಷದಿಂದ ತಿರುಪತಿ ದೇವಸ್ಥಾನಕ್ಕೆ ತುಪ್ಪ ನೀಡುತ್ತಿಲ್ಲ. ಬಹಳ ವರ್ಷಗಳಿಂದ ತಿರುಪತಿಗೆ ಕೆಎಂಎಫ್‌ನ ತುಪ್ಪ ನೀಡುತ್ತಿದ್ದೆವು. ಕಳೆದ ವರ್ಷ ಟೆಂಡರ್‌ ಕರೆದಿದ್ದರೂ ನಾವು ಹಾಕಲಿಲ್ಲ. ಪೈಪೋಟಿಯ ದರದಲ್ಲಿ ನಾವು ಗುಣಮಟ್ಟದ ತುಪ್ಪ ನೀಡಲು ಸಾಧ್ಯವಾಗುವುದಿಲ್ಲ. ಹೀಗಾಗಿಯೇ ಟೆಂಡರ್‌ನಿಂದ ದೂರ ಉಳಿದಿದ್ದೇವೆ. ಕೆಎಂಎಫ್‌ ತುಪ್ಪ (KMF Ghees)ಕ್ಕೆ ಭಾರೀ ಬೇಡಿಕೆಯಿದೆ. ಬೇಡಿಕೆಯ ಶೇ. 60ರಷ್ಟು ಮಾತ್ರ ಪೂರೈಕೆ ಮಾಡಲು ಸಾಧ್ಯವಾಗಿದೆ. ಈ ಕಾರಣಕ್ಕಾಗಿಯೇ ಹಾಲು ಉತ್ಪಾದನೆ ಹೆಚ್ಚಳಕ್ಕೆ ರೈತರಿಗೆ ಹೆಚ್ಚುವರಿಯಾಗಿ 3 ರೂಪಾಯಿಉ ನೀಡಲು ನಿರ್ಧರಿಸಿದ್ದೇವೆ ಎಂದು ತಿಳಿಸಿದರು.

ನಾಳೆಯಿಂದ ಹಾಲಿನ ದರ ಹೆಚ್ಚಳಕ್ಕೆ ಸರ್ಕಾರ ನಿರ್ಧಾರ ; ಕಾಫಿ ಟೀ ಬೆಲೆಯೂ ಹೆಚ್ಚಳ!

ಬಳ್ಳಾರಿಯಲ್ಲಿ ಮೆಗಾ ಡೈರಿ ಸ್ಥಾಪನೆಗೆ ಜಾಗ ಹುಡುಕಾಟ: ಹೆಚ್ಚಿನ ಕಮೀಷನ್‌ ಆಸೆಗೆ ನಂದಿನಿ ಹಾಲು ಇದ್ದಾಗ್ಯೂ ಖಾಸಗಿ ಹಾಲು ಮಾರಾಟ ಮಾಡುವ ಡೀಲರ್‌ಗಳ ಪರವಾನಗಿ ರದ್ದು ಮಾಡಲು ಕ್ರಮ ಕೈಗೊಳ್ಳಲಾಗುವುದು. ಮಾರುಕಟ್ಟೆ ವಿಸ್ತರಣೆ ಹಾಗೂ ಗುಣಮಟ್ಟ ಪರಿಶೀಲನೆಗೆ ವಿಶೇಷ ತಂಡ ರಚಿಸಲಾಗುವುದು. ರಾಜ್ಯದಲ್ಲಿಯೇ ಮಾದರಿಯಾಗುವಂತಹ ಮೆಗಾ ಡೈರಿಯನ್ನು ಬಳ್ಳಾರಿಯಲ್ಲಿ ಸ್ಥಾಪಿಸುವ ಚಿಂತನೆ ಇದೆ. ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರಿಗೆ ಜಾಗ ನೀಡುವಂತೆ ಕೋರಲಾಗಿದೆ. ನಾನು ಬಳ್ಳಾರಿಯ ಒಕ್ಕೂಟದ ಅಧ್ಯಕ್ಷನಾದ ಮೊದಲ ವರ್ಷದಲ್ಲಿಯೇ 7 ಕೋಟಿ ರೂ. ಲಾಭ ಮಾಡಿದೆ. ಎರಡನೇ ವರ್ಷ 8 ರಿಂದ 9 ಕೋಟಿ ರೂ. ಲಾಭವಾಯಿತು. ಈ ಅವಧಿಯಲ್ಲಿ ಹಾಲು ಉತ್ಪಾದಕರಿಗೆ ಬೋನಸ್‌ ನೀಡಿದ್ದೇನೆ. ಕಳೆದ 30 ವರ್ಷಗಳಲ್ಲಾಗದ ಕೆಲಸವನ್ನು ನಾನು ಮಾಡಿದ್ದೇನೆ ಎಂದು ತಿಳಿಸಿದರು.

ವಿದೇಶದಲ್ಲೂ ನಂದಿನಿ ಹಾಲು, ತುಪ್ಪಕ್ಕೆ ಭಾರಿ ಬೇಡಿಕೆ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೆಎಂಎಫ್‌ ಹಾಲಿಗೆ ವಿದೇಶದಲ್ಲೂ ಬೇಡಿಕೆಯಿದೆ. ದುಬೈನಲ್ಲಿ ಕೆಎಂಎಫ್‌ ಮಳಿಗೆ ಉದ್ಘಾಟಿಸಲಾಗುತ್ತಿದ್ದು, ಮುಖ್ಯಮಂತ್ರಿಗಳಿಗೂ ಆಗಮಿಸುವಂತೆ ಕೋರಲಾಗಿದೆ. ತೆಲಂಗಾಣ, ಆಂಧ್ರಪ್ರದೇಶ ಸೇರಿದಂತೆ ದೇಶದ ವಿವಿಧ ರಾಜ್ಯಗಳಿಂದ ಹಾಲಿನ ಬೇಡಿಕೆಯಿದೆ. ಆದರೆ, ಮಾರುಕಟ್ಟೆ ಬೆಲೆಗಿಂತ ಅತೀ ಕಡಿಮೆ ದರಕ್ಕೆ ತುಪ್ಪ ಹಾಗೂ ಹಾಲಿನ ಉಪ ಉತ್ಪನ್ನಗಳನ್ನು ಮಾರಾಟ ಮಾಡಿದರೆ ನಿಗಮಕ್ಕೆ ನಷ್ಟವಾಗಲಿದೆ ಎಂದು ಕರ್ನಾಟಕ ಹಾಲು ಮಹಾಮಂಡಳ ಅಧ್ಯಕ್ಷ ಎಸ್. ಭೀಮಾನಾಯ್ಕ ಮಾಹಿತಿ ನೀಡಿದರು. 

ನಾಳೆಯಿಂದ ಹಾಲು ದರ 3 ರೂ. ಹೆಚ್ಚಳ: ಜುಲೈ 21 ರಂದು ನಡೆದ ಸಭೆಯಲ್ಲಿ ಪ್ರತಿ ಲೀ. ಗೆ 3 ರೂಪಾಯಿ ಹೆಚ್ಚಿಸುವಂತೆ ನಿರ್ಧಾರಿಸಿದ್ದ ಸರ್ಕಾರ ಇದೀಗ ಹೆಚ್ಚಳ ಮಾಡಲು ನಿರ್ಧರಿಸಲಾಗಿತ್ತು ಮತ್ತು ಆಗಸ್ಟ್ 1 ರಿಂದ ಅಧಿಕೃತವಾಗಿ ಜಾರಿಗೆ ಬರುವಂತೆ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದರು. ಅದರಂತೆಯೇ ನಾಳೆಯಿಂದ ಪ್ರತಿ ಲೀಟರ್‌ನ ಹಾಲಿನ ದರ ಹೆಚ್ಚಳವಾಗಲಿದೆ.ಅದ್ಯಾಗೂ ದೇಶದ ಇತರೆ ಪ್ರಮುಖ ರಾಜ್ಯಗಳಲ್ಲಿನ ಸಹಕಾರಿ ಹಾಗೂ ಇತರೆ ಹಾಲಿನ ಬ್ರ್ಯಾಂಡ್‌ಗಳ ಮಾರಾಟ ದರಕ್ಕೆ ಹೋಲಿಸಿದಾಗ ನಂದಿನಿ ಟೋನ್ಡ್ ಹಾಲಿನ ಮಾರಾಟ ದರ ಕಡಿಮೆಯಾಗಿದೆ.

ಮುಸ್ಲಿಂ ದರ್ಗಾದಲ್ಲಿ ಕೇಸರಿ ವಸ್ತ್ರವೇ ಗೆಲ್ಲುವುದಾಗಿ ಭವಿಷ್ಯ ನುಡಿದ ಲಾಲಸಾಬ್‌ ಅಜ್ಜ

ಯಾವ ಯಾವ ಪ್ಯಾಕೇಜ್ ಹಾಲು ಎಷ್ಟಿದೆ ಈಗ ಎಷ್ಟಾಗಲಿದೆ?
ಹಾಲು                 ಬೆಲೆ ಎಷ್ಟು (ರೂಪಾಯಿ)

ಸಮೃದ್ದಿ ಹಾಲು      48 ರಿಂದ 51
ಸ್ಪೆಷಲ್ ಹಾಲು       43 ರಿಂದ 46
ಸಂತೃಪ್ತಿ ಹಾಲು        50  ರಿಂದ 53
ಶುಭಂ ಹಾಲು          43 ರಿಂದ 46
ಟೋನ್ಡ್ ಹಾಲು         37 ರಿಂದ 40
ಡಬಲ್ಟೋನ್ಡ್ ಹಾಲು 36 ರಿಂದ 39  
ಹೊಮೋಜಿನೈಸ್ಡ್      38 ರಿಂದ 41
ಹೊಮೋಜಿನೈಸ್ಡ್      42 ರಿಂದ 45 
( ಹಸುವಿನ ಹಾಲು) 

click me!