ಬಳ್ಳಾರಿ ಗಣಿಯಲ್ಲಿ ಅವೈಜ್ಞಾನಿಕ ಸ್ಫೋಟ; ಹಳೆಕೋಟೆ ಗ್ರಾಮದ ಮನೆಗಳು ಬಿರುಕು!

By Ravi JanekalFirst Published Jul 31, 2023, 10:56 AM IST
Highlights

ಜಿಲ್ಲೆಯ ಅಕ್ರಮ ಗಣಿಗಾರಿಕೆ ಕ್ವಾರಿಯಲ್ಲಿ ಅವೈಜ್ಞಾನಿಕವಾಗಿ ಸ್ಫೋಟಿಸಿದ್ದರಿಂದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮನೆಗಳು ಅಲುಗಾಡಿ ಬಿರುಬಿಟ್ಟ ಘಟನೆ ನಡೆದಿದೆ.

ಬಳ್ಳಾರಿ (ಜು.31) : ಜಿಲ್ಲೆಯ ಅಕ್ರಮ ಗಣಿಗಾರಿಕೆ ಕ್ವಾರಿಯಲ್ಲಿ ಅವೈಜ್ಞಾನಿಕವಾಗಿ ಸ್ಫೋಟಿಸಿದ್ದರಿಂದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮನೆಗಳು ಅಲುಗಾಡಿ ಬಿರುಬಿಟ್ಟ ಘಟನೆ ನಡೆದಿದೆ.

ಸಿರಗುಪ್ಪ ತಾಲೂಕಿನ ತಾಲೂಕಿನ ಹಳೆಕೋಟೆ ಗ್ರಾಮದ ಬಳಿ ಘಟನೆ. ಗುಡ್ಡದಿಂದ ಕಲ್ಲುಗಳನ್ನು ತೆಗೆಯಲು ಬಂಡೆಗಳಲ್ಲಿ ಬ್ಲಾಸ್ಟ್ ಮಾಡೋದು ಸಾಮಾನ್ಯ. ಆದರೆ ನಿನ್ನೆ ಸಂಜೆ ಕೊಳವೆಬಾವಿ ರೀತಿಯಲ್ಲಿ ದೊಡ್ಡ ಮಟ್ಟದಲ್ಲಿ ಬೋರ್ ಹಾಕಿ. ಅದರೊಳಗೆ ಅವೈಜ್ಞಾನಿಕವಾಗಿ ಬ್ಲಾಸ್ಟಿಂಗ್ ಪೌಡರ್ ಸೇರಿದಂತೆ ನಿಯಮ ಬಾಹಿರ ರಸಾಯನಿಕ ತುಂಬಿ ಬಂಡೆಗಳನ್ನು ಸ್ಫೋಟಿಸಲಾಗಿದೆ. ಇದರಿಂದ ದೊಡ್ಡಮಟ್ಟದ ಸ್ಫೋಟ ಉಂಟಾಗಿದ್ದು, ಸ್ಫೋಟಗೊಂಡಾಗ ಮನೆಗಳು ನಡುಗಿವೆ. ಪಾತ್ರೆಗಳು ಚೆಲ್ಲಾಪಿಲ್ಲಿ ಬಿದ್ದಿವೆ. ಮಕ್ಕಳು ಹೆದರಿಕೊಂಡು ಕುಳಿತಿವೆ. ಕಲ್ಲುಪುಡಿಯ ಹೊಗೆ ಮತ್ತು ಧೂಳು ಹಳೇಕೋಟೆ ಗ್ರಾಮವನ್ನೆಲ್ಲ ತುಂಬಿಕೊಂಡಿದೆ. ಈ ಸ್ಫೋಟದಿಂದಾಗಿ ಹಲವು ಮನೆಗಳು ಬಿರುಕುಬಿಟ್ಟಿವೆ. ಸಿಡಿದ ಕಲ್ಲುಗಳು  ದೂರದೂರಕ್ಕೆ ಚಿಮ್ಮಿವೆ. ಅದರಿಂದ ಆಗಸದಲ್ಲಿ ದಟ್ಟ ಹೊಗೆ ಮಂಜಿನ ರೀತಿ ತುಂಬಿಕೊಂಡಿದ್ದನ್ನು ನೋಡಿ ಗ್ರಾಮಸ್ಥರು ಕಕ್ಕಾಬಿಕ್ಕಿಯಾಗಿದ್ದಾರೆ. 

 

ಕ್ವಾರಿಗಳಿಂದ ದಂಡ ವಸೂಲಿಗೆ ಒಂದು ಬಾರಿ ಪರಿಹಾರ ಸ್ಕೀಂ: ಸಚಿವ ಎಚ್‌.ಕೆ.ಪಾಟೀಲ್‌

ಕಲ್ಲು ಗಣಿಗಾರಿಕೆ ಸ್ಥಳಕ್ಕೆ ಗ್ರಾಮಸ್ಥರು ಮುತ್ತಿಗೆ:

ಅಪಾಯಕಾರಿ ಸ್ಫೋಟದಿಂದ ಗ್ರಾಮಸ್ಥರು ಬೆಚ್ಚಿಬಿದ್ದಿದ್ದು ಕಲ್ಲು ಗಣಿಗಾರಿಕೆ ಸ್ಥಳಕ್ಕೆ ತೆರಳಿ ಮುತ್ತಿಗೆ ಹಾಕಿ ಗ್ರಾಮಸ್ಥರು ಮಾತಿನ ಚಕಮಕಿ ನಡೆಸಿದ್ದಾರೆ. ಹಳೆಕೋಟೆ ಗ್ರಾಮದ ಸುತ್ತ ಮುತ್ತಲಿನ ಪ್ರದೇಶದಲ್ಲಿ ಬಹಳಷ್ಟು ಕಲ್ಲು ಗಣಿಗಾರಿಕೆ‌ ಕ್ರಷರ್ ಗಳಿವೆ. ಸ್ಫೋಟಗಳಿಂದಾಗಿ ಗ್ರಾಮಸ್ಥರಿಗೆ ನೆಮ್ಮದಿಯಿಲ್ಲದಂತಾಗಿದೆ. ಜಮೀನುಗಳಿಗೆ ಹೋಗಲು ಹೆದರುವಂತಾಗಿದೆ. ಯಾವಾಗ ಸ್ಫೋಟಿಸುತ್ತಾರೋ, ಕಲ್ಲುಗಳು ಸಿಡಿಬರುತ್ತವೋ ಎಂಬ ಆತಂಕದಲ್ಲೇ ಗ್ರಾಮಸ್ಥರು ದಿನದೂಡುತ್ತಿದ್ದಾರೆ. ಈ ಘಟನೆ ಸಂಬಂಧ ತೆಕ್ಕಲಕೋಟೆ  ಪೊಲೀಸರು ಸ್ಥಳಕ್ಕೆ ಭೇಟಿ‌ ನೀಡಿ ಪರಿಶೀಲನೆ ನಡೆಸಿದ್ದಾರೆ. 

ಮರಳು ಸಮಸ್ಯೆ ಪರಿಹಾರಕ್ಕೆ ಪ್ರತಿ ಜಿಲ್ಲಾ ಮಟ್ಟದಲ್ಲಿ ಸಭೆ: ಸಚಿವ ಕೃಷ್ಣ ಬೈರೇಗೌಡ

click me!