
ರಾಯಚೂರು (ನ.20): ರಾಜ್ಯದಲ್ಲಿ ಈಗಾಗಲೇ ವಕ್ಫ್ ವಿವಾದ ತಾರಕಕ್ಕೇರಿ ತಣ್ಣಗಾಗುತ್ತಿರುವ ಬೆನ್ನಲ್ಲಿಯೇ ರಾಯಚೂರಿನಲ್ಲಿ ಅನಧಿಕೃತ ಕಟ್ಟಡಗಳ ತೆರವು ಹೆಸರಿನಲ್ಲಿ ಸ್ಥಳೀಯ ಆಡಳಿತ ಸಂಸ್ಥೆಯು ರಾತ್ರೋ ರಾತ್ರಿ ಶಿವ ಮತ್ತು ಗಣೇಶ ದೇವಾಲಯಗಳನ್ನು ತೆರವುಗೊಳಿಸಿ ನೆಲಸಮ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ರಾಜ್ಯದಲ್ಲಿ ಮುಸ್ಲಿಂ ಸಮುದಾಯದ ವಕ್ಫ್ ಮಂಡಳಿಗೆ ಲಕ್ಷಾಂತರ ಎಕರೆ ರೈತರ ಭೂಮಿ, ದೇವಾಲಯಗಳು, ಮಂದಿರಗಳು, ಕೋಟೆಗಳು ಹಾಗೂ ಸಾರ್ವಜನಿಕ ಸ್ಥಳಗಳ ಜಾಗಗಳು ಸೇರಿವೆ ಎಂದು ಆಸ್ತಿ ದಾಖಲೆಗಳಲ್ಲಿ ತಿದ್ದುಪಡಿ ಮಾಡಿರುವುದಕ್ಕೆ ಸರ್ಕಾರದ ವಿರುದ್ಧ ಜನರು ಆಕ್ರೋಶ ಹೊರಹಾಕುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಇದೀಗ ರಾಯಚೂರಿನ ಸಂತೋಷ ನಗರ ಬಡಾವಣೆಯಲ್ಲಿ ಶಿವ ಮತ್ತು ಗಣೇಶ ದೇವಸ್ಥಾನಗಳನ್ನು ರಾತ್ರೊರಾತ್ರಿ ಜೆಸಿಬಿಯಿಂದ ತೆರವುಗೊಳಿಸಿ ನೆಲಸಮ ಮಾಡಲಾಗಿದೆ. ಈ ಘಟನೆ ಕುರಿತು ಹಲವು ಹಿಂದೂಪರ ಸಂಘಟನೆಗಳ ನಾಯಕರು ಸ್ಥಳೀಯ ನಗರಸಭೆ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಸುಭಾಷ್ ನಗರದಲ್ಲಿ ಸರ್ಕಾರಿ ಪ್ರೌಢಶಾಲೆ ನಿರ್ಮಾಣ ಮಾಡಲು ಮಂಜುರಾಗಿದ್ದ ಸಿಎ ಸೈಟ್ ನಲ್ಲಿ ಕೆಲವರು ಜಾಗ ಕಬಳಿಸಿ, ಶಿವ ಮತ್ತು ಗಣೇಶ ದೇವಸ್ಥಾನ ನಿರ್ಮಾಣ ಮಾಡಿದ್ದರು. ಆದರೆ, ಸರ್ಕಾರದಿಂದ ದೇವಾಲಯ ತೆರವುಗೊಳಿಸಲು ನೋಟೀಸ್ ಅಂಟಿಸಿದಾಗ ಸ್ಥಳೀಯ ಜನರು ಹಾಗೂ ವಿವಿಧ ಸಂಘಟನೆಗಳಿಂದ ಪ್ರತಿಭಟನೆಗಳನ್ನು ಮಾಡಲಾಗಿತ್ತು. ಆದರೆ, ಇದನ್ನು ಲೆಕ್ಕಿಸದೇ ಜೆಸಿಬಿಯಿಂದ ದೇವಾಲಯ ತೆರವು ಕಾರ್ಯಾಚರಣೆಗೆ ಬಂದಾಗಲೂ ಜನರು ಅಡ್ಡಿಪಡಿಸಿದ್ದರು. ಹೀಗಾಗಿ, ಸ್ಥಳೀಯ ನಗರಸಭೆಅಧಿಕಾರಿಗಳಿಗೆ ಇದೊಂದು ಸವಾಲಿನ ಕೆಲಸವಾಗಿ ಪರಿಣಮಿಸಿತ್ತು.
ಇದನ್ನೂ ಓದಿ: ಬಿಪಿಎಲ್ ಕಾರ್ಡ್ ರದ್ದಾಗಿದೆಯೇ? ಚಿಂತೆ ಬೇಡ: ಡಿಸಿಎಂ ಡಿ.ಕೆ. ಶಿವಕುಮಾರ್
ಇದರ ಬೆನ್ನಲ್ಲಿಯೇ ನಗರಸಭೆ ಸಹಾಯಕ ಆಯುಕ್ತ ಗಜಾನನ ಬಾಲೆ ನೇತೃತ್ವದಲ್ಲಿ ಪೊಲೀಸರ ರಕ್ಷಣೆಯೊಂದಿಗೆ ನಗರಸಭೆ ಸಿಬ್ಬಂದಿ ಅನಧಿಕೃತ ದೇವಸ್ಥಾನ ಹಾಗೂ ಕೆಲವು ಶೆಡ್ಗಳನ್ನು ತೆರವು ಗೊಳಿಸಿದ್ದಾರೆ. ನಗರದ ಎಲ್ ಬಿಎಸ್ ನಗರ ಪ್ರೌಢಶಾಲೆಯ ಹೆಸರಿಗೆ ಜಾಗ ಮಂಜೂರಾಗಿದ್ದು, ನಾಲ್ಕು ಕೊಠಡಿ ನಿರ್ಮಾಣಕ್ಕೆ ಅನುದಾನ ಸಹ ಬಿಡುಗಡೆಯಾಗಿತ್ತು. ಸ್ಥಳೀಯರು ದೇಗುಲ ತೆರವಿಗೆ ವಿರೋಧದ ನಡುವೆಯೂ ಪೊಲೀಸ್ ಭದ್ರತೆಯಲ್ಲಿ ದೇಗುಲ ತೆರವು ಮಾಡಲಾಗಿದೆ.
ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ : ರಾಯಚೂರು ನಗರದಲ್ಲಿ ನಿರ್ಮಾಣ ಮಾಡಲಾಗಿದ್ದ ಹಿಂದೂ ದೇವಾಲಯ ತೆರವು ಕಾರ್ಯ ಖಂಡಿಸಿ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ದೇವಾಲಯದ ನಿರ್ಮಾಣ ಮಾಡಿದ ಜಾಗವನ್ನು ಬುಟ್ಟು ಪಕ್ಕದಲ್ಲಿ ಶಾಲೆ ನಿರ್ಮಾಣಕ್ಕೆ ಹೆಚ್ಚುವರಿ ಜಾಗವನ್ನು ನೀಡಬಹುದಿತ್ತು. ಆದರೆ, ಹಿಂದೂಗಳು ಕಟ್ಟಿದ ದೇವಾಲಯವನ್ನು ನೆಲಸಮ ಮಾಡಿ ಧಾರ್ಮಿಕ ಭಾವನೆಗೆ ಧಕ್ಕೆ ತರಲಾಗಿದೆ. ರಾಜ್ಯ ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ನೀತಿ ಅನುಸರಿಸಿದೆ ಎಂದು ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದಾರೆ. ಜೊತೆಗೆ, ನಗರದಲ್ಲಿ ಎಲ್ಲ ಸಮುದಾಯದವರ ಅಕ್ರಮ ಕಟ್ಟಡ, ಅತಿಕ್ರಮಣವನ್ನು ತೆರವು ಮಾಡಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ: ನಾಳೆಯಿಂದ ದೆಹಲಿಯಲ್ಲಿ ನಂದಿನಿ ಹಾಲು ಮಾರಾಟ ಆರಂಭ; ಅಮುಲ್, ಮದರ್ ಡೈರಿಗೆ ನಡುಕ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ