
ಚಾಮರಾಜನಗರ (ನ.6): ಮುಖ್ಯಮಂತ್ರಿ ಬದಲಾವಣೆ ವಿಚಾರವನ್ನ ನಾನು ಹೇಳುತ್ತಿಲ್ಲ. ಕಾಂಗ್ರೆಸ್ ನವರೇ ಪ್ರಸ್ತಾಪಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬದಲಾವಣೆ ವಿಚಾರದ ತಮ್ಮ ಹೇಳಿಕೆಗೆ ಗರಂ ಆಗಿದ್ದ ಸಿದ್ದರಾಮಯ್ಯನವರಿಗೆ ಈ ಮೂಲಕ ಯತ್ನಾಳ್ ತಿರುಗೇಟು ನೀಡಿದರು.
ಹೈಕಮಾಂಡ್ ಹೂಂ ಅಂದ್ರೆ ನಾನು ಮುಖ್ಯಮಂತ್ರಿ ಆಗ್ತೀನಿ ಎಂದು ಸಚಿವ ಪ್ರಿಯಾಂಕ ಖರ್ಗೆ ಒಂದು ಕಡೆ ಹೇಳಿದರೆ, ಸಿದ್ದರಾಮಯ್ಯರಿಗೆ ಮಾನಸಿಕವಾಗಿ ಚಿತ್ರ ಹಿಂಸೆ ಕೊಟ್ಟರೆ ನಾವು ಡಾ.ಪರಮೇಶ್ವರವರನ್ನು ಶಿಫಾರಸ್ಸು ಮಾಡುತ್ತೇವೆ ಎಂದು ಸಚಿವ ರಾಜಣ್ಣನವರೇ ಮತ್ತೊಂದು ಕಡೆ ಹೇಳಿದ್ದಾರೆ ಎಂದರು.
5 ವರ್ಷ ಸಿದ್ದರಾಮಯ್ಯರೇ ಮುಖ್ಯಮಂತ್ರಿ ಅಂತ ಹೇಳಿದವರು ಈಗ ಯಾಕೆ ಪರಮೇಶ್ವರ್ ಹೆಸರನ್ನ ತೆಗೆದು ಕೊಂಡರು? 2013 ರ ಚುನಾವಣೆಯಲ್ಲಿ ಪರಮೇಶ್ವರ್ ರನ್ನು ಸೋಲಿಸಿದವರು ಯಾರು? ಪರಮೇಶ್ವರ್ ಮನೆಗೆ ತೆರಳಿ ಮಾಡಿಕೊಂಡ ಒಳ ಒಪ್ಪಂದ ಏನಾಯ್ತು? ಹಾಗೇ ಉಪಾಹಾರ ಮಾಡಬೇಕಿದ್ರೆ ಎಲ್ಲಾ ಸಚಿವರನ್ನ ಕರೆಯಬೇಕಿತ್ತಲ್ವಾ? ನೀವು ಡಿಕೆಶಿ ಇಬ್ಬರೂ ಕೂಡ ಕರೆದು ಮುಖ್ಯಮಂತ್ರಿ ವಿಚಾರ ಕುರಿತು ಮಾತನಾಡಬಾರದು ಎಂದು ವಾರ್ನಿಂಗ್ ನೀಡಿದರೂ ಮದ್ದೂರು ಶಾಸಕ ಉದಯ್ ಡಿಕೆಶಿ ಮುಖ್ಯಮಂತ್ರಿ ಆಗ್ತಾರೆ ಅಂತ ಯಾಕೆ ಹೇಳಿದ್ರು? ಎಂದು ಸಿಎಂ ಸಿದ್ದರಾಮಯ್ಯನವರಿಗೆ ಯತ್ನಾಳ ತಿರುಗೇಟು ನೀಡಿದರು.
ರಾಜ್ಯೋತ್ಸವ ಪ್ರಶಸ್ತಿ ಸಲುವಾಗಿ ಹಿಂದೂ ವಿರೋಧಿ ಹೇಳಿಕೆ:
ರಾಜ್ಯೋತ್ಸವ ಪ್ರಶಸ್ತಿ ಸಲುವಾಗಿ ಕೆಲವು ಮಠಾಧೀಶರು ಹಿಂದೂ ವಿರೋಧಿ ಹೇಳಿಕೆ ನೀಡುತ್ತಿದ್ದಾರೆ ಎಂದು ಕೇಂದ್ರ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದರು.
ತಾಲೂಕಿನ ಸೀಗೇವಾಡಿ ಗ್ರಾಮದ ರೈತ ಮರಿದಾಸನಾಯಕ ಅವರ ಜಮೀನಿನಲ್ಲಿ ಬರ ವೀಕ್ಷಣೆ ಮಾಡಿದ ಸಂದರ್ಭದಲ್ಲಿ ಸಾಣೇಹಳ್ಳಿ ಶ್ರೀಗಳ ಹೇಳಿಕೆಯ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿಂದೂ ಧರ್ಮದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದವರಿಗೆ ಕಾಂಗ್ರೆಸ್ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡುತ್ತಿದೆ. ಪ್ರಶಸ್ತಿಯ ಸಲುವಾಗಿ ಕೆಲವು ಮಠಾಧೀಶರು ಹಿಂದೂ ವಿರೋಧಿ ಹೇಳಿಕೆ ನೀಡುತ್ತಿದ್ದಾರೆ. ಅವರ ಉದ್ದೇಶ ಮುಂದಿನ ಸಲ ರಾಜ್ಯೋತ್ಸವ ಪ್ರಶಸ್ತಿ ನೀಡಲಿ ಎಂಬುದಾಗಿದೆ ಎಂದು ವ್ಯಂಗ್ಯವಾಡಿದರು.
ಸನಾತನ ಧರ್ಮ ಉಳಿದರೆ ಮಾತ್ರ ಸಂವಿಧಾನ ಉಳಿಯುತ್ತದೆ: ಶಾಸಕ ಯತ್ನಾಳ್
ಹಿಂದೂ ಧರ್ಮದ ವಿರುದ್ದ ಮಾತನಾಡಲಿಕ್ಕೆ ಕೆಲವೊಂದು ಜನ ಪೇಯಿಡ್ ಸಾಹಿತಿಗಳಿದ್ದಾರೆ.ಇವರು ಸನಾತನ ಧರ್ಮದ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ಇದರಿಂದ ಅವರ ಮಠಕ್ಕೆ ಕೋಟ್ಯಾಂತರ ರು. ಅನುದಾನ ಸಿಗುತ್ತದೆ. ಪಾಪಾ ಆ ಸ್ವಾಮೀಜಿಯವರು ನಕ್ಸಲರಾಗಿರಬೇಕಿತ್ತು ಖಾವಿ ಹಾಕಿದ ಕಮ್ಯುನಿಸ್ಟ ಆಗಿದ್ದಾರೆ ಎಂದು ಸ್ವಾಮೀಜಜಿಯ ವಿರುದ್ಧ ಹರಿಹಾಯ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ