ಕಲಬುರಗಿಯ ದೇವಸ್ಥಾನದಲ್ಲಿ ಇಬ್ಬರು ಮಂಗಳಮುಖಿಯರು ಜಡೆ ಹಿಡಿದು ಹೊಡೆದಾಡಿಕೊಂಡಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಲಬುರಗಿ (ಮಾ.16): ಇತ್ತೀಚಿನ ದಿನಗಳಲ್ಲಿ ವಿವಿಧೆಡೆ ಮಂಗಳಮುಖಿಯರು ಹಲ್ಲೆಮಾಡುವುದು, ಸಾರ್ವಜನಿಕರಿಗೆ ಕಿರುಕುಳ ನೀಡುವ ಪ್ರಕರಣಗಳು ಹೆಚ್ಚಾಗಿ ವರದಿ ಆಗುತ್ತಿದ್ದವು. ಆದರೆ, ಇದೀಗ ದೇವಾಲಯದಲ್ಲಿ ಭಿಕ್ಷಾಟನೆ ಮಾಡಲು ತೆರಳಿದ್ದಾಗ ಪರಸ್ಪರ ಇಬ್ಬರು ಮಂಗಳಮುಖಿಯರು ಜಡೆ ಹಿಡಿದು ಜಗಳ ಮಾಡಿಕೊಂಡಿದ್ದು, ವಿಡಿಯೋ ವೈರಲ್ ಆಗಿದೆ.
ಶ್ರೀ ಗುರು ದತ್ತಾತ್ರೇಯನ ಸನ್ನಿಧಿಯಲ್ಲಿ ಮಂಗಳ ಮುಖಿಯರು ಪರಸ್ಪರ ಜಡೆ ಹಿಡಿದುಕೊಂಡು ತೆಕ್ಕಿಮರಿ ಬಿದ್ದು ಹೊಡೆದಾಡಿಕೊಂಡಿದ್ದಾರೆ. ಪರಸ್ಪರ ಜಡೆ ಹಿಡಿದುಕೊಂಡು ನೆಲಕ್ಕೆ ಉರುಳಾಡಿ ಹೊಡೆದಾಡುತ್ತಿದ್ದರೂ ಇವರನ್ನು ಬಿಡಿಸುವ ಧೈರ್ಯ ಜನಸಾಮಾನ್ಯರಿಗೆ ಇಲ್ಲ. ಕಾರಣ ಜಗಳ ಬಿಡಿಸಲು ಇವರನ್ನು ಮುಟ್ಟಿದರೆ ಅವರ ಮೈಮೇಲೆಯೇ ಬೀಳುತ್ತಾರೆ. ಇವರಿಗೆ ಸಂವಿಧಾನಬದ್ಧವಾಗಿ ಸಿಕ್ಕಿದ್ದ ಸ್ವಾತಂತ್ರ್ಯ ಸ್ವೇಚ್ಛಾಚಾರ ಆಗಿದೆಯೇ ಎಂಬ ಅನುಮಾನ ಎಲ್ಲರಿಗೂ ಕಾಡುತ್ತಿದೆ. ಆದರೆ, ಕೆಲವರು ಮಾತ್ರ ಇದಕ್ಕೆ ಅಪವಾದವೆಂಬಂತೆ ಜನ ಸಾಮಾನ್ಯರಂತೆ ಉತ್ತಮ ಜೀವನ ನಡೆಸುತ್ತಿದ್ದಾರೆ.
ಈ ಘಟನೆ ಕಲಬುರಗಿ ಜಿಲ್ಲೆ ಅಫಜಲಪುರ ತಾಲ್ಲೂಕಿನ ಗಾಣಗಾಪುರಲ್ಲಿರುವ ಶ್ರೀ ಗುರು ದತ್ತಾತ್ರೇಯ ದೇವಸ್ಥಾನದಲ್ಲಿ ನಡೆದಿದೆ. ಮಂಗಳಮುಖಿಯರ ಹೊಡೆದಾಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇನ್ನು ಈ ಘಟನೆ ಗಾಣಗಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆದರೆ, ಪೊಲೀಸರು ಕೂಡ ಇವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಸಿಂಧನೂರು ಮಂಗಳಮುಖಿಯರಿಂದ ಮಹತ್ಕಾರ್ಯ: ಭಿಕ್ಷಾಟನೆ ಹಣದಿಂದ ಬಡ ವಧು-ವರರಿಗೆ ಮದುವೆ!