
ಬೆಂಗಳೂರು(ಡಿ.10): ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ದಿ. ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಮೊಮ್ಮಗಳು ಹಾಗೂ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಜೀವನ ಕಾರ್ಯಾಲಯ ಟ್ರಸ್ಟ್ ನ ಧರ್ಮದರ್ಶಿಗಳೂ ಆಗಿದ್ದ ಡಾ.ವಿ.ವಸಂತಶ್ರೀ (87)ಅವರು ನಿನ್ನೆ(ಸೋಮವಾರ) ಅಲ್ಪಕಾಲದ ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಲಂಡನ್ನಿನ ಇಂಪೀರಿಯಲ್ ಕಾಲೇಜಿನಲ್ಲಿ ಲೋಹಶಾಸ್ತ್ರದ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸಿದ್ದ ಡಾ.ವಿ.ವಸಂತಶ್ರೀ ಅವರು ಲಂಡನ್ನಿನ ಭಾರತೀಯ ವಿದ್ಯಾಭವನ ಹಾಗೂ ಯು.ಕೆ. ಕನ್ನಡ ಬಳಗಗಳ ಸಕ್ರಿಯ ಸದಸ್ಯರಾಗಿದ್ದರು.
ವೃತ್ತಿಯಿಂದ ನಿವೃತ್ತರಾದ ನಂತರ ತಮ್ಮ ಅಜ್ಜನ ಪುಸ್ತಕ ಪ್ರಕಟಣೆಯ ಜವಾಬ್ದಾರಿಯನ್ನು ನಿರ್ವಹಿಸುವ ಸಲುವಾಗಿ ಬೆಂಗಳೂರಿಗೆ ಮರಳಿದ ವಸಂತಶ್ರೀ ಅವರು 'ಮಾಸ್ತಿ ಅಧ್ಯಯನ ಪೀಠ' ದ ಮೂಲಕ ಹಲವಾರು ರಚನಾತ್ಮಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು.
ಆಧುನಿಕ ತಂತ್ರಜ್ಞಾನವನ್ನು ಬಳಸಿ ಮಾಸ್ತಿಯವರ ಕೃತಿಗಳ ಸಚಿತ್ರ ಗಣಕೀಕೃತ ವಿಸ್ತೃತ ಆವೃತ್ತಿಗಳನ್ನು ಹೊರತಂದಿದ್ದರು. ಅಪರೂಪದ ದಾಖಲೆಗಳು, ಛಾಯಾಚಿತ್ರಗಳು, ಚಾರಿತ್ರಿಕ ದಾಖಲೆಗಳಿಂದ ಅವುಗಳನ್ನು ಉತ್ತಮಗೊಳಿಸಿದ್ದರು.
ಹಲವಾರು ಮಂದಿ ಸಾಹಿತಿಗಳು ಹಾಗೂ ಸಂಶೋಧಕರ ವಿದೇಶ ಪ್ರವಾಸಗಳಿಗೆ ಆರ್ಥಿಕ ನೆರವನ್ನು ನೀಡಿ ಬೆಂಬಲಿಸಿದ್ದರು. ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯ ಸಹಯೋಗದಲ್ಲಿ ಡಾ.ವಿ.ವಸಂತಶ್ರೀ ಅವರು ಆಯೋಜಿಸುತ್ತಿದ್ದ ವಿಶೇಷ ಉಪನ್ಯಾಸಗಳು ಬಹಳ ಜನಪ್ರಿಯವಾಗಿದ್ದವು.
ಡಾ. ವಸಂತಶ್ರೀ ಅವರ ನಿಧನಕ್ಕೆ ನಾಡೋಜ ಎಸ್. ಆರ್. ರಾಮಸ್ವಾಮಿ, ಶತಾವಧಾನಿ ಆರ್. ಗಣೇಶ್, ಕೆ ಸತ್ಯನಾರಾಯಣ ಮುಂತಾದ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ