Shivamogga: ಅಂಗನವಾಡಿ ನೌಕರರಿಗೆ ಸಂಬಳ ಕೊಡದ ಸರ್ಕಾರ?!

By Govindaraj SFirst Published Nov 12, 2022, 1:34 PM IST
Highlights

ಮಕ್ಕಳನ್ನು ಪಾಲನೆ, ಮಾತೃವಂದನಾ ಯೋಜನೆಯ ಆಹಾರ ತಯಾರಿಕೆ, ಭಾಗ್ಯಲಕ್ಷ್ಮೀ ಯೋಜನೆಯ ಪಟ್ಟಿ ಸಿದ್ಧಪಡಿಸುವಿಕೆ ಹೀಗೆ ಸಾಲುಸಾಲು ಕೆಲಸಗಳನ್ನು ನಿರ್ವಹಿಸುವ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಜಿಲ್ಲೆಯಲ್ಲಿ ಕಳೆದ ಮೂರು ತಿಂಗಳಿನಿಂದ ಸರ್ಕಾರ ಸಂಬಳವೇ ನೀಡಿಲ್ಲ. 

ಗಣೇಶ್‌ ತಮ್ಮಡಿಹಳ್ಳಿ

ಶಿವಮೊಗ್ಗ (ನ.12): ಮಕ್ಕಳನ್ನು ಪಾಲನೆ, ಮಾತೃವಂದನಾ ಯೋಜನೆಯ ಆಹಾರ ತಯಾರಿಕೆ, ಭಾಗ್ಯಲಕ್ಷ್ಮೀ ಯೋಜನೆಯ ಪಟ್ಟಿ ಸಿದ್ಧಪಡಿಸುವಿಕೆ ಹೀಗೆ ಸಾಲುಸಾಲು ಕೆಲಸಗಳನ್ನು ನಿರ್ವಹಿಸುವ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಜಿಲ್ಲೆಯಲ್ಲಿ ಕಳೆದ ಮೂರು ತಿಂಗಳಿನಿಂದ ಸರ್ಕಾರ ಸಂಬಳವೇ ನೀಡಿಲ್ಲ. ಸಕಾಲದಲ್ಲಿ ಸಂಬಳ ಸಿಗದೇ ಜಿಲ್ಲೆಯ 2,458 ಮಂದಿ ಅಂಗನವಾಡಿ ನೌಕರರು ಸಂಕಷ್ಟದಲ್ಲಿದ್ದಾರೆ. ಎಲ್ಲ ಕೆಲಸಗಳನ್ನು ತಮ್ಮಿಂದ ಮಾಡಿಸಿಕೊಂಡರೂ, ಸರಿಯಾಗಿ ವೇತನ ನೀಡದೇ ಸತಾಯಿಸುತ್ತಿದ್ದಾರೆ ಎನ್ನುವುದು ಅಂಗನವಾಡಿ ನೌಕರರ ಆರೋಪ.

ರಾಜ್ಯಾದ್ಯಂತ ಸಮಸ್ಯೆ: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಎರಡು ತಿಂಗಳ ವೇತನ ಬಾಕಿ ಇದ್ದರೆ, ಉಳಿದ ಜಿಲ್ಲೆಗಳಲ್ಲಿ ಕಳೆದ 3 ತಿಂಗಳಿನಿಂದ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ವೇತನವೇ ಆಗಿಲ್ಲ. ಬಾಕಿಯಿರುವ ವೇತನವನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಸಂಬಂಧಿಸಿದ ಅಧಿಕಾರಿಗಳಿಗೆ ಅಂಗನವಾಡಿ ಕಾರ್ಯಕರ್ತೆಯರು ಮನವಿ ಸಲ್ಲಿಸಿದರೂ ಆಡಳಿತ ವರ್ಗ ಮನ್ನಣೆಯೇ ನೀಡಿಲ್ಲ.

ಶಿಕಾರಿಪುರ, ಶಿರಾಳಕೊಪ್ಪ ಅಭಿವೃದ್ಧಿಗೆ ಬಿಎಸ್‌ವೈ ಕೊಡುಗೆ ಅಪಾರ: ಸಂಸದ ರಾಘವೇಂದ್ರ

ಸರ್ಕಾರ ಅಂಗನವಾಡಿ ಕಾರ್ಯಕರ್ತೆರಿಗೆ 11 ಸಾವಿರ ಹಾಗೂ ಸಹಾಯಕಿಯರಿಗೆ 5500 ವೇತನ ನೀಡುತ್ತಿದೆ. ಮೂರು ತಿಂಗಳಿಂದ ಸಂಬಳ ಇಲ್ಲದ ಕಾರಣ ಸರ್ಕಾರ ಕೊಡುವ ವೇತನವನ್ನೇ ನೆಚ್ಚಿಕೊಂಡು ಜೀವನ ಸಾಗಸುವ ಅಂಗನವಾಡಿ ಕಾರ್ಯಕರ್ತೆಯರು ನಿತ್ಯ ಸಂಕಷ್ಟದಲ್ಲಿಯೇ ದಿನಗಳನ್ನು ದೂಡಬೇಕಾದ ಪರಿಸ್ಥಿತಿ ಎದುರಾಗಿದೆ.

ಕಡಿಮೆ ವೇತನಕ್ಕೆ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ಪ್ರತಿ ತಿಂಗಳು ಸರಿಯಾಗಿ ಸಂಬಳ ಬಂದರೂ ಜೀವನ ಸಾಗಿಸುವುದು ಕಷ್ಟವಿದೆ. ಅಂಥದ್ದರಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಮೂರು ತಿಂಗಳಾದರೂ ವೇತನ ಬಾರದ ಕಾರಣ ಬದುಕಿನ ಬಂಡಿ ಸಾಗಿಸುವುದು ದುಸ್ತರವಾಗಿದೆ. ಕೆಲವು ಕಡೆ ಬಾಡಿಗೆ ಕಟ್ಟಡಗಳಲ್ಲಿ ಅಂಗನವಾಡಿ ಕೇಂದ್ರಗಳು ನಡೆಯುತ್ತಿವೆ. ಇಂಥ ಕಟ್ಟಡಗಳಲ್ಲಿ ಮಾಲೀಕರಿಗೆ ಪ್ರತಿ ತಿಂಗಳು ಬಾಡಿಗೆ ಕೊಡಬೇಕಾಗಿದೆ. ಸಂಬಳವೇ ಬಾರದಿದ್ದರೆ ಬಾಡಿಗೆ ಕಟ್ಟುವುದಾದರೂ ಹೇಗೆ? ಎಂಬುದು ಸಿಬ್ಬಂದಿ ಗೋಳು.

ನಮ್ಮ ಬವಣೆ ಕೇಳೋರೇ ಇಲ್ಲ: ಶಿವಮೊಗ್ಗ ಜಿಲ್ಲೆಯಲ್ಲಿ ಅಂಗನವಾಡಿ ನೌಕರರಿಗೆ ಸರಿಯಾದ ಸಮಯದಲ್ಲಿ ಸಂಬಳ ಸಿಗುತ್ತಿಲ್ಲ. ತಡವಾಗಿ ಸಂಬಳ ಆಗುತ್ತಿದೆ. ಅಧಿಕಾರಿಗಳ ಬಳಿ ಕೇಳಿದರೆ ಏನೇನೋ ಸಬೂಬು ಕೊಡುತ್ತಾರೆ. ನಮ್ಮನ್ನು ಚೆನ್ನಾಗಿ ದುಡಿಸಿಕೊಳ್ಳುತ್ತಾರೆ. ಆದರೆ, ನಮ್ಮ ಬವಣೆಯನ್ನು ಮಾತ್ರ ಯಾರೂ ಕೇಳುವುದಿಲ್ಲ. ನಿಯಮಿತವಾಗಿ ಸಂಬಳ ಬಾರದ ಕಾರಣ ಅನೇಕ ಕಾರ್ತಕರ್ತೆಯರು ಮನೆ ನಿರ್ವಹಣೆಗಾಗಿ ಆಭರಣ ಒತ್ತೆ ಇಟ್ಟಿದ್ದಾರೆ. ಸಂಬಳ ಬರುವುದು ಸ್ಪಲ್ಪ ವ್ಯತ್ಯಾಸವಾದರೂ ಅನೇಕ ಮನೆಗಳಲ್ಲಿ ಒಲೆ ಹಚ್ಚುವುದು ಕೂಡ ಕಷ್ಟವಾಗುತ್ತದೆ ಎಂದು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಸ್ವಾತಂತ್ರ್ಯ ಸಂಘಟನೆ ರಾಜ್ಯಾಧ್ಯಕ್ಷೆ ಬಿ.ಪ್ರೇಮ ಅಳಲು ತೋಡಿಕೊಂಡರು.

ಶಿವಮೊಗ್ಗ: ತುಳಸಿ ಪೂಜೆ ಮಾಡಿ, ಅರಿಸಿನ ಕುಂಕುಮ ಸ್ವೀಕರಿಸಿ ನವವಿವಾಹಿತೆ ಆತ್ಮಹತ್ಯೆ

ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ವೇತನ ಸಮಸ್ಯೆ ಇಡೀ ರಾಜ್ಯದಲ್ಲಿ ಇದೆ. ಜಿಲ್ಲೆಯಲ್ಲಿ 2 ತಿಂಗಳ ವೇತನ ಬಾಕಿ ಇದೆ. ಶೀಘ್ರದಲ್ಲೇ ಬಾಕಿ ವೇತನ ಬಿಡುಗಡೆಯಾಗಲಿದೆ
- ಜಿ.ಜಿ.ಸುರೇಶ್‌, ಉಪನಿರ್ದೇಶಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

click me!