
ವಿದ್ಯಾ ಶಿವಮೊಗ್ಗ
ರಾಂಬುಟಾನ್, ಅವಕಾಡೋ, ಲೀಚಿ, ಎಗ್ಪ್ರೂಟ್, ಮ್ಯಾಂಗೋಸ್ಟೀನ್, ಕ್ಯಾಂಡಲ್ ಪ್ರೂಟ್, ಮಿಲ್್ಕ ಪ್ರೂಟ್, ಅಭಿಯೂ, ಪೆರ್ರಿ ಪೀ ನಟ್, ಡೆರೋಸ್ಟಾಮ್.. ಇವೆಲ್ಲಾ ನಮ್ಮ ದೇಶದ ಹಣ್ಣುಗಳಲ್ಲ. ವಿದೇಶಿ ಹಣ್ಣುಗಳು. ಆದರೆ ಈ ಹಣ್ಣುಗಳನ್ನು ಸವಿಯುವುದಕ್ಕಾಗಿ ವಿದೇಶಕ್ಕೆ ಹೋಗಬೇಕಿಲ್ಲ. ನಮ್ಮ ದೇಶದಲ್ಲೂ ವಿದೇಶಿಯ ಹಣ್ಣುಗಳನ್ನು ಬೆಳೆಯಬಹುದು ಎಂಬುದನ್ನು ತೋರಿಸಿಕೊಟ್ಟರೈತ ರಾಜೇಂದ್ರ ಹಿಡ್ಲೂಮನೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಿಂದ 15 ಕಿ.ಮೀ. ದೂರದಲ್ಲಿರುವ ಹೊಸಳ್ಳಿ ಗ್ರಾಮದ ಹಿಂಡೂಮನೆ ಫಾಮ್ರ್ ರಾಜೇಂದ್ರ ಅವರ ಕರ್ಮಭೂಮಿ. ಇಲ್ಲಿ 15 ಎಕರೆ ಜಮೀನಿನಲ್ಲಿ ಅಡಕೆ, ತೆಂಗು, ಮಾವು, ಗೇರು, ಕಾಫಿ, ಕೋಕೋ, ಜಾಯಿಕಾಯಿ, ಲವಂಗ, ಕಾಳುಮೆಣಸು, ಕೋಕಂ, ಬಾಳೆ, ವೆನಿಲ್ಲಾ, ತರಕಾರಿಗಳು ಸೇರಿದಂತೆ 600 ಕ್ಕೂ ಹೆಚ್ಚು ವಿವಿಧ ವಿದೇಶಿ ತಳಿಯ ಹಣ್ಣುಗಳನ್ನು ಬೆಳೆಯುತ್ತಿದ್ದಾರೆ. ಮಲೆನಾಡಿನ ವಾತಾವರಣದಲ್ಲೂ ವಿದೇಶಿ ತಳಿಯ ಹಣ್ಣುಗಳನ್ನು ಬೆಳೆಯಲು ಸ್ಫೂರ್ತಿಯಾಗಿದ್ದಾರೆ. ಇದರೊಂದಿಗೆ ಔಷಧೀಯ ಗುಣಗಳುಳ್ಳ ಸಸ್ಯಗಳನ್ನು ಇಲ್ಲಿ ಪೋಷಿಸಿದ್ದಾರೆ ಹಾಗೂ ಅಳಿವಿನಂಚಿನಲ್ಲಿರುವ ಕೆಲವು ತಳಿಗಳನ್ನು ಸಂರಕ್ಷಿಸುವ ಮೂಲಕ ಮಾದರಿ ರೈತರಾಗಿದ್ದಾರೆ.
ಸುವರ್ಣನ್ಯೂಸ್ ಮತ್ತು ಕನ್ನಡಪ್ರಭ ರೈತರಿಗಾಗಿ ವಿಶೇಷ ಪ್ರಶಸ್ತಿ ನೀಡುತ್ತಿರುವುದು ಉತ್ತಮ ಕಾರ್ಯ. ರೈತರ ಸಾಧನೆಯನ್ನು ಗುರುತಿಸಿ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ನೀಡುತ್ತಿರುವುದರಿಂದ ರೈತರನ್ನು ಮತ್ತಷ್ಟುಸಾಧನೆ ಮಾಡಲು ಪ್ರೋತ್ಸಾಹಿಸಿದಂತಾಗುತ್ತದೆ. - ರಾಜೇಂದ್ರ ಹಿಡ್ಲುಮನೆ
150 ಮಾದರಿಯ ಹಲಸಿನ ಹಣ್ಣುಗಳು 20 ಜಾತಿಯ ಚಕ್ಕೋತ, ಸೀತಾಫಲ, ಲಿಂಬು, ಸೀಬೆ, ಕಾಳಿ ಹಾಗೂ ಮೂಸುಂಬಿ, ಕಿತ್ತಳೆ ಸೇರಿದಂತೆ 80 ಕ್ಕೂ ಹೆಚ್ಚು ಜಾತಿಯ ಮಾವು ಸೇರಿದಂತೆ ವಿವಿಧ ಬಗೆಯ ಹಣ್ಣುಗಳನ್ನು ಬೆಳೆದಿದ್ದಾರೆ. ಜೊತೆಗೆ ಇವರ ತೋಟದಲ್ಲಿ ಬೆಳೆಯುವ ವಿವಿಧ ಬಗೆಯ ಹಣ್ಣುಗಳ ರಸವನ್ನು ಇಲ್ಲಿ ಮಾರಾಟ ಮಾಡಲಾಗುತ್ತದೆ. ಸರ್ಕಾರದಿಂದ ಏರ್ಪಡಿಸುವ ಕೃಷಿ ಪ್ರವಾಸದಲ್ಲಿ ಅನೇಕ ರೈತರು ಇವರ ತೋಟಕ್ಕೆ ಭೇಟಿ ನೀಡುತ್ತಾರೆ. ವಿವಿಧ ಕೃಷಿ, ತೋಟಗಾರಿಕೆ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಮತ್ತು ಸಂಶೋಧನಾಸಕ್ತÜರು ನಿರಂತರವಾಗಿ ಇವರ ತೋಟಕ್ಕೆ ಭೇಟಿ ನೀಡುತ್ತಾರೆ. ಇವರ ಬಳಿ ಮಾಹಿತಿ ಪಡೆಯುತ್ತಾರೆ. ಕಾಡುಪ್ರಾಣಿಗಳಿಂದ ತೋಟವನ್ನು ಸಂರಕ್ಷಿಸಿಕೊಳ್ಳಲು ಸೋಲಾರ್ ಫೆನ್ಸಿಂಗ್, ವಿಶಿಷ್ಟಮೈಕ್ ವ್ಯವಸ್ಥೆ ಅಳವಡಿಸಿಕೊಂಡಿದ್ದಾರೆ. ಹುಳು, ಕೀಟಗಳನ್ನು ಹಿಡಿಯಲು ಟ್ರಾಪರ್, ಹಣ್ಣು ನೆಲಕ್ಕೆ ಬೀಳದಂತೆ ಹಣ್ಣು ಕೊಯ್ಯುವ ಸಾಧನ, ಕಾಯಿ ಸುಲಿಯುವ ಯಂತ್ರ ಮತ್ತಿತರೆ ಸಾಧನಗಳನ್ನು ನಿರ್ಮಿಸಿಕೊಂಡಿದ್ದಾರೆ.
ರಾಜೇಂದ್ರ ಹಿಡ್ಲೂಮನೆ ಅವರದ್ದು ಕೂಡು ಕುಟುಂಬ ಎಲ್ಲರೂ ಸೇರಿಕೊಂಡು ಕೃಷಿ ಕಾರ್ಯದಲ್ಲಿ ತೊಡಗಿಕೊಳ್ಳುತ್ತಾರೆ. ರಾಜೇಂದ್ರ ಹಿಡ್ಲುಮನೆ ಅವರಿಗೆ ತಮ್ಮ ತಾತ ಹಾಗೂ ತಂದೆಯಿಂದ ಕೃಷಿ ಬಳುವಳಿಯಾಗಿ ಬಂದಿದೆ. ಇದೀಗ ಇವರ ಮಕ್ಕಳಾದ ಮೇಘನಾ ಹಾಗೂ ಗಗನಾ ಇಂಜಿನಿಯರಿಂಗ್ ಪದವಿ ಪಡೆದಿದ್ದರೂ ಉದ್ಯೋಗ ಅರಸಿ ನಗರಕ್ಕೆ ವಲಸೆ ಹೋಗದೆ ಕೃಷಿಯಲ್ಲೇ ತೊಡಗಿಸಿಕೊಂಡಿದ್ದಾರೆ. ಕೆರೆಗಳ ಮಧ್ಯೆ ಅರಳುವ ಕಮಲವನ್ನು ಮನೆಯಂಗಳದಲ್ಲಿ ಅರಳಿಸುವ ಮೂಲಕ ಕಮಲ ಕೃಷಿಯಲ್ಲಿ ಕಮಾಲ್ ಮಾಡಿದ್ದಾರೆ. ಕಮಲ, ನೈದಿಲ್, ಕೋಮಳೆ(ಲಿಲ್ಲಿ) ಜೊತೆಗೆ ನೂಪುರ್ ಎಂಬ ಯೂರೋಪ್ ಖಂಡದ ಕಮಲವನ್ನು ಬೆಳೆಸಿದ್ದಾರೆ. ಗಾರ್ಡ್ನ್ ಪ್ರಿಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದರಿಂದ ಉತ್ತಮ ಆದಾಯವನ್ನು ಗಳಿಸುತ್ತಿದ್ದಾರೆ.
ನೇರ ಮಾರುಕಟ್ಟೆವ್ಯವಸ್ಥೆ
ತಮ್ಮ ತೋಟದಲ್ಲಿ ಬೆಳೆಯುವ ದೇಶಿ ವಿದೇಶಿ ಹಣ್ಣು, ಹೂವು, ಮಸಾಲೆ ಪದಾರ್ಥ, ವಿವಿಧ ಜಾತಿಯ ಜೇನು ತುಪ್ಪ ಮಾರಾಟಕ್ಕೆ ನೇರ ಮಾರುಕಟ್ಟೆವ್ಯವಸ್ಥೆಯನ್ನು ಕಲ್ಪಿಸಿದ್ದಾರೆ. ಜೊತೆಗೆ ಸಾಗರದಲ್ಲಿ ಒಂದು ಅಂಗಡಿ ತೆರೆದಿದ್ದಾರೆ. ತಾವು ಬೆಳೆಯುವ ಉತ್ಪನ್ನಗಳಿಂದ ಬಗೆಬಗೆಯ ಪದಾರ್ಥಗಳನ್ನು ಸಿದ್ಧಪಡಿಸಿ ವಿವಿಧ ನಗರಗಳ ಗ್ರಾಹಕರಿಗೆ ತಲುಪಿಸುತ್ತಾರೆ. ಆಸಕ್ತ ಗ್ರಾಹಕರಿಗೆ ತೋಟಕ್ಕೆ ಆಹ್ವಾನಿಸುತ್ತಾರೆ. ಗ್ರಾಹಕರಿಗೆ ತೋಟವನ್ನು ವೀಕ್ಷಿಸುವ ಅವಕಾಶ ನೀಡಿದ್ದಾರೆ. ಗ್ರಾಹಕರಿಗೂ ತಮ್ಮ ತೋಟವನ್ನು ಪರಿಚಯಿಸುತ್ತಾರೆ. ಅಗತ್ಯವಿರುವವರು ತಮಗೆ ಬೇಕಾದ ಹಣ್ಣು, ಇತರ ಉತ್ಪನ್ನಗಳನ್ನು ಸ್ಥಳದಲ್ಲೇ ಖರೀದಿಸಬಹುದಾಗಿದೆ.
ಇಲ್ಲಿ ರುದ್ರಾಕ್ಷಿ ಮರವಿದೆ. ಆರು, ಐದು, ನಾಲ್ಕು ಮತ್ತು ಒಂದು ಮುಖದ ರುದ್ರಾಕ್ಷಿಗಳಿದ್ದು ಇದರಿಂದ ಜಪಮಾಲೆ, ಸರ, ಓಲೆ, ಕೀ ಚೈನ್ಗಳನ್ನು ಮಾಡುತ್ತಾರೆ. ಕೋಕಂನಿಂದ ಜಾಮ್, ಜ್ಯೂಸ್, ಒಣ ಸಿಪ್ಪೆ, ಬೀಜದಿಂದ ಎಣ್ಣೆ, ಹಲಸಿನಿಂದ ಹಪ್ಪಳ, ಚಿಫ್ಸ್ ಹಲಸಿನ ಹಣ್ಣಿನ ಡ್ರೈಪ್ರೂಟ್, ಜಾಮ್ ಹಾಗೂ ಗೇರು ಹಣ್ಣಿನಿಂದ ಜಾಮ್, ಜ್ಯೂಸನ್ನು ತಯಾರಿಸುತ್ತಾರೆ.
"
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ