ನೀರಾವರಿ ಯೋಜನೆ ನಂಬಿ ಕೋಟೆನಾಡು ಅಡಿಕೆ ಬೆಳೆಗಾರರ ಬದುಕು ಮೂರಾಬಟ್ಟೆ!

By Ravi JanekalFirst Published Oct 1, 2023, 4:32 PM IST
Highlights

: ಅಡಿಕೆಯಲ್ಲಿ ಹೋದ ಮಾನ ಆನೆ ಕೊಟ್ರು ಬರಲ್ಲ ಎಂಬ ಗಾದೆ ಮಾತಿದೆ. ನೀರಾವರಿ ಯೋಜನೆಯೊಂದನ್ನು ನಂಬಿ ಅಡಿಕೆ ಬೆಳೆಯಲು ಮುಂದಾಗಿದ್ದ ರೈತರ ಬಾಳು ಹಾಗೇ ಆಗಿದೆ. ಅಷ್ಟಕ್ಕೂ ಆ ಯೋಜನೆ ಯಾವುದು? ಸಮಸ್ಯೆಯಾದ್ರು ಏನು ಅಂತೀರ? ಮುಂದೆ ಓದಿ,

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ (ಅ.1): ಅಡಿಕೆಯಲ್ಲಿ ಹೋದ ಮಾನ ಆನೆ ಕೊಟ್ರು ಬರಲ್ಲ ಎಂಬ ಗಾದೆ ಮಾತಿದೆ. ನೀರಾವರಿ ಯೋಜನೆಯೊಂದನ್ನು ನಂಬಿ ಅಡಿಕೆ ಬೆಳೆಯಲು ಮುಂದಾಗಿದ್ದ ರೈತರ ಬಾಳು ಹಾಗೇ ಆಗಿದೆ. ಅಷ್ಟಕ್ಕೂ ಆ ಯೋಜನೆ ಯಾವುದು? ಸಮಸ್ಯೆಯಾದ್ರು ಏನು ಅಂತೀರ? ಮುಂದೆ ಓದಿ,

ಮಧ್ಯ ಕರ್ನಾಟಕದ ಪ್ರಮುಖ ಜಿಲ್ಲೆಗಳಲ್ಲಿ ಚಿತ್ರದುರ್ಗ ಒಂದಾಗಿದೆ. ಇಲ್ಲಿ ಯಾವುದೇ ನೀರಾವರಿ‌ ಮೂಲವಿಲ್ಲ. ಹೀಗಾಗಿ  2008  ರಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಮಧ್ಯಕರ್ನಾಟಕದ ನೀರಿನ ಬವಣೆ ನೀಗಿಸಲು ಭದ್ರಾ‌ ಮೇಲ್ದಂಡೆ ಯೋಜನೆ ಕಾಮಗಾರಿಯನ್ನು ಜಾರಿಗೊಳಿಸಿದ್ರು. ಆಗ  ಭದ್ರಾ ನೀರನ್ನು ನಂಬಿಕೊಂಡ ಚಿತ್ರದುರ್ಗ ಜಿಲ್ಲೆಯ ರೈತರು ಅಲ್ಲಿನ ಸಾಂಪ್ರಾದಾಯಿಕ‌ ಬೆಳೆಗಳಾದ‌ ಶೇಂಗಾ, ಈರುಳ್ಳಿ ಮತ್ತು ಮೆಕ್ಕೆಜೋಳವನ್ನು ತ್ಯಜಿಸಿ ಅತಿ ಲಾಭಧಾಯಕ ಎನಿಸಿರುವ ಅಡಿಕೆ ಬೆಳೆಯಲು ಮುಂದಾಗಿದ್ದರು. ಆದ್ರೆ ನಿರಂತರವಾಗಿ ಮಳೆ ಕೈಕೊಟ್ಟ ಪರಿಣಾಮ, ಕೋಟೆನಾಡಿನ  ಕೊಳವೆಬಾವಿಗಳು‌ ಬತ್ತಿ‌ಬರಿದಾಗಿವೆ. ಅಂತರ್ಜಲ ಮಟ್ಟ ತಳಪಾಯಕ್ಕೆ‌ ಕುಸಿದಿದೆ. ಹೀಗಾಗಿ ಫಸಲಿಗೆ ಬಂದಿರುವ ಅಡಿಕೆ ಸಸಿಗಳು ನಾಶವಾಗ್ತಿವೆ‌. ಇದರಿಂದಾಗಿ ಅಪಾರ‌ ಲಾಭದ ನಿರೀಕ್ಷೆಯಲ್ಲಿ ಲಕ್ಷಾಂತರ‌ ರೂಪಾಯಿ ಸಾಲ‌‌ ಸೂಲ‌ ಮಾಡಿ ಅಡಿಕೆ ಬೆಳೆದ‌ ರೈತರು  ಕಂಗಾಲಾಗಿದ್ದಾನೆ. 

 

ಮಲೆನಾಡಲ್ಲಿ ಮಳೆ ಕೊರತೆ: ತಾಪಮಾನದಿಂದ ಕಾಫಿ , ಕಾಳು ಮೆಣಸು ನಾಶ!

ಅಡಿಕೆ ಬೆಳೆ ಕೈಕೊಟ್ಟ‌ ಪರಿಣಾಮ‌ ಸಾಲದ‌ ಸುಳಿಗೆ ಸಿಲುಕಿ ಒದ್ದಾಡ್ತಿದ್ದೂ, ರಾಜ್ಯದಲ್ಲೇ ಅತಿದೊಡ್ಡ ಅಡಿಕೆ ಮಾರುಕಟ್ಟೆ ಹೊಂದಿರುವ ಚಿತ್ರದುರ್ಗದ ಭೀಮಸಮುದ್ರ ಗ್ರಾಮ‌ದಲ್ಲಿ ಅಡಿಕೆ ಮಾರುವವರಿಲ್ಲದೇ ಮಾರ್ಕೆಟ್  ಬಿಕೋ ಎನ್ನುತ್ತಿದೆ. ಆದ್ದರಿಂದ‌ ಮಲ್ನಾಡು ಸೇರಿದಂತೆ ವಿವಿಧೆಡೆಗಳಲ್ಲಿ ಸರ್ಕಾರ ವಿತರಿಸುವ ಮಾದರಿಯಲ್ಲಿ ಪರಿಹಾರ ನೀಡುವಂತೆ‌ ಅಡಿಕೆ‌ ಬೆಳೆಗಾರರು ಒತ್ತಾಯಿಸಿದ್ದಾರೆ.

ಇನ್ನು ಸರ್ಕಾರದಿಂದ  ಮನರೇಗಾ ಯೋಜನೆಯಡಿ ಅಡಿಕೆ ಬೆಳೆ ಪ್ರೋತ್ಸಾಹಕ್ಕಾಗಿ ನೀಡ್ತಿದ್ದ ಹನಿ ನೀರಾವರಿ ಸಹಾಯಧನಕ್ಕೂ ಬ್ರೇಕ್ ಬಿದ್ದಿದೆ. ಹೀಗಾಗಿ, ಅಡಿಕೆ ಧಣಿಯಾಗುವ ಬರದನಾಡಿನ  ರೈತರ ಕನಸು ಭಗ್ನವಾಗಿದೆ‌. ಆದ್ದರಿಂದ‌ ಸೂಕ್ತ ಪರಿಹಾರ  ಹಾಗು ಸಂಕಷ್ಟದಲ್ಲಿರುವ ರೈತರಿಗೆ ಅನುಕೂಲವಾಗುವಂತೆ ವಿಶೇಷ ಪ್ಯಾಕೇಜ್ ಘೋಷಿಸುವಂತೆ ರೈತರು ಆಗ್ರಹಿಸಿದ್ದಾರೆ.

 

ಉತ್ತರಕನ್ನಡ: ಅಡಿಕೆ ಬೆಳೆಗೆ ಕಂಟಕವಾದ ಮಳೆ, ಕಂಗಾಲಾದ ರೈತ..!

ಒಟ್ಟಾರೆ ಭದ್ರಾ ಮೇಲ್ದಂಡೆ ಯೋಜನೆ‌ ನಂಬಿ ಅಡಿಕೆ ಬೆಳೆಯಲು ಮುಂದಾಗಿದ್ದ ರೈತರ ಕನಸು ಕನಸಾಗಿಯೇ ಉಳಿದಿದೆ. ಅತ್ತ ನೀರಾವರಿಯೂ ಇಲ್ಲ, ಇತ್ತ‌ ಅಡಿಕೆ ಬೆಳೆಯೂ ಕೈಹಿಡಿದಿಲ್ಲ. ಹೀಗಾಗಿ ತೀವ್ರ ನಷ್ಟ ಅನುಭವಿಸಿರುವ ಅಡಿಕೆ ಬೆಳೆಗಾರರು, ಸಾಲದ ಸುಳಿಗೆ‌ ಸಿಲುಕಿದ್ದಾರೆ. ಸರ್ಕಾರ ವಿಶೇಷ ಪ್ಯಾಕೇಜ್ ನೀಡಬೇಕೆಂಬುದು ಮಧ್ಯ ಕರ್ನಾಟಕದ ರೈತರು ಆಗ್ರಹಿಸುತ್ತಿದ್ದಾರೆ.

click me!