
ಚಾಮರಾಜನಗರ (ಜು.24): ಕೊಳ್ಳೇಗಾಲದ ಸರ್ಕಾರಿ ಆಸ್ಪತ್ರೆಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಭೇಟಿಯ ಸಂದರ್ಭದಲ್ಲಿ ಗೌಜು-ಗದ್ದಲ ವಾತಾವರಣ ಸೃಷ್ಟಿಯಾಗಿ ರೋಗಿಗಳು ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೇ ಪರದಾಡಿದ ಆರೋಪ ಕೇಳಿಬಂದಿದೆ.
ನಾಗಲಕ್ಷ್ಮೀ ಚೌಧರಿ ಆಗಮನದ ವೇಳೆ ನೂರಾರು ಅಭಿಮಾನಿಗಳು ಮತ್ತು ಕಾರ್ಯಕರ್ತರು ಆಸ್ಪತ್ರೆಯ ಒಳಗೆ ನುಗ್ಗಿದ್ದು, ವೈದ್ಯ, ಸಿಬ್ಬಂದಿಯೆಲ್ಲ ಸ್ವಾಗತಿಸಲು ಮುಂದಾಗಿದ್ದು ಅಭಿಮಾನಿಗಳು, ಕಾರ್ಯಕರ್ತರ ಒಳನುಗ್ಗಿದ್ದರಿಂದ ಈ ಗದ್ದಲದಿಂದಾಗಿ ಆಸ್ಪತ್ರೆಯ ವಾತಾವರಣ ಮೀನು ಮಾರುಕಟ್ಟೆಯಂತಾಗಿದೆ ಎಂದು ರೋಗಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೋಗಿಗಳ ಕಷ್ಟ ಕೇಳಲು ಬಂದಿದ್ದಾರೋ, ಪ್ರಚಾರಕ್ಕೆ ಬಂದಿದ್ದರೋ?
ಒಂದು ಗಂಟೆಯಿಂದ ವೈದ್ಯರು ರೋಗಿಗಳಿಗೆ ಚಿಕಿತ್ಸೆ ನೀಡದೆ, ಆಯೋಗದ ಅಧ್ಯಕ್ಷೆಯನ್ನು ಸ್ವಾಗತಿಸಲು ನಿರತರಾಗಿದ್ದಾರೆ. ಇದರಿಂದ ಚಿಕಿತ್ಸೆಗಾಗಿ ಕಾಯುತ್ತಿರುವ ರೋಗಿಗಳು ಪರಿತಪಿಸುವಂತಾಗಿದೆ. ವಿಶೇಷವಾಗಿ, ಹೆರಿಗೆ ವಾರ್ಡ್ಗೆ ಅನಧಿಕೃತವಾಗಿ ಕಾರ್ಯಕರ್ತರು ನುಗ್ಗಿದ್ದು, ಒಳರೋಗಿಗಳಿಗೆ ಕಿರಿಕಿರಿಯನ್ನುಂಟುಮಾಡಿದೆ. ಇವರು ರೋಗಿಗಳ ಕಷ್ಟ ಕೇಳಲು ಬಂದಿದ್ದಾರೋ ಇಲ್ಲ ಬರೀ ಪ್ರಚಾರಕ್ಕೆ ಬಂದಿದ್ದಾರೋ?' ಎಂದು ರೋಗಿಗಳು ಮತ್ತು ಅವರ ಕುಟುಂಬಸ್ಥರು ಅಸಮಾಧಾನಗೊಂಡರು.
ಈ ಘಟನೆಯಿಂದ ಆಸ್ಪತ್ರೆಯ ಆಡಳಿತದ ಮೇಲೆಯೂ ಟೀಕೆ ವ್ಯಕ್ತವಾಗಿದೆ. ಸರಿಯಾದ ಭದ್ರತಾ ವ್ಯವಸ್ಥೆ ಇಲ್ಲದಿರುವುದು ಮತ್ತು ವೈದ್ಯಕೀಯ ಸಿಬ್ಬಂದಿಯ ನಿರ್ಲಕ್ಷ್ಯದಿಂದ ರೋಗಿಗಳ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ನಾಗಲಕ್ಷ್ಮೀ ಚೌಧರಿಯವರ ಈ ಭೇಟಿಯು ರೋಗಿಗಳ ದೂರುಗಳನ್ನು ಆಲಿಸಲು ಉದ್ದೇಶಿಸಿದ್ದರೂ, ಗೌಜು-ಗದ್ದಲದಿಂದ ಆಗಮಿಸಿದ ಉದ್ದೇಶ ಈಡೇರಿತಾ ಎಂದು ರೋಗಿಗಳು ಪ್ರಶ್ನಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ