ಗೋಕರ್ಣದಲ್ಲಿ ಕಳೆದ ಕೆಲವು ದಿನಗಳಿಂದ ಬಿಡಾಡಿ ದನಗಳು ನಾಪತ್ತೆಯಾಗುತ್ತಿದ್ದು, ಸಾರ್ವಜನಿಕರು ದನ ಕಳ್ಳತನದ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ಪೊಲೀಸರು ಹೆಚ್ಚಿನ ನಿಗಾ ವಹಿಸಬೇಕು ಮತ್ತು ಚೆಕ್ ಪೋಸ್ಟ್ನಲ್ಲಿ ತಪಾಸಣಾ ಕಾರ್ಯವನ್ನು ತೀವ್ರಗೊಳಿಸಬೇಕು ಎಂದು ಒತ್ತಾಯಿಸಲಾಗಿದೆ.
ಗೋಕರ್ಣ (ಮಾ.21) : ಕಳೆದ ಹಲವು ದಿನಗಳಿಂದ ಬಿಡಾಡಿ ದನಗಳು ನಾಪತ್ತೆಯಾಗುತ್ತಿದ್ದು, ದನಕಳ್ಳರ ಚಟುವಟಿಕೆ ನಡೆಯುತ್ತಿದೆಯೇ ಎಂದು ಸಾರ್ವಜನಿಕರು ಸಂದೇಹ ವ್ಯಕ್ತಪಡಿಸುತ್ತಿದ್ದಾರೆ.
ಪ್ರತಿದಿನ ಇಲ್ಲಿನ ಮನೆ, ಅಂಗಡಿಗಳಿಗೆ ಮುಂಜಾನೆ ಭೇಟಿ ನೀಡಿ ಅವರು ಕೊಟ್ಟ ತಿಂಡಿ ತಿಂದು ದನಗಳು ಬೀದಿಯಲ್ಲಿ ಅಲೆದಾಡುತ್ತಿದ್ದವು. ರಾತ್ರಿ ರಸ್ತೆ ಅಕ್ಕಪಕ್ಕದಲೇ ಮಲಗುತ್ತಿದ್ದವು. ಆದರೆ ಶಿವರಾತ್ರಿಯ ಸಮಯದಲ್ಲಿ ರಸ್ತೆ ಅಂಚಿನ ಅಂಗಡಿಗಳ ಸಾಲು ಹಾಕಿರುವುದರಿಂದ ಮೇಲಿನಕೇರಿ ಬಳಿ ದನಗಳು ರಾತ್ರಿ ಮಲಗುತ್ತಿದ್ದವು. ಅಲ್ಲಿಂದ ಕಳ್ಳತನ ಮಾಡಲಾಗುತ್ತಿರುವ ಅನುಮಾನ ವ್ಯಕ್ತವಾಗಿದೆ. ನಿತ್ಯ ಭೇಟಿ ನೀಡುತ್ತಿದ್ದ ಹಸುಗಳು ಕಾಣಿಸುತ್ತಿಲ್ಲ ಎಂದು ಅಂಗಡಿಯವರು ಹೇಳುತ್ತಿದ್ದು, ಚಿಕ್ಕ ಕರುಗಳು ಮಾತ್ರ ಓಡಾಡುತ್ತಿವೆ.
ಬೇಕಿದೆ ನಿಗಾ: ಮಧ್ಯರಾತ್ರಿಯಿಂದ ಬೆಳಗಿನಜಾವದಲ್ಲಿ ನಡೆಯುವ ಈ ಕಳ್ಳರ ಕಾರ್ಯಾಚರಣೆಯನ್ನು ತಡೆಗಟ್ಟಬೇಕಿದೆ. ಪೊಲೀಸರಿಗೆ ಆಧುನಿಕ ಸೌಲಭ್ಯ ಕಲ್ಪಿಸಿ ನಿಗಾ ಇಡುವ ಕಾರ್ಯವಾಗಬೇಕಿದೆ. ಈ ಹಿಂದೆ ಇಲ್ಲಿ ಕರ್ತವ್ಯ ನಿರ್ವಹಿಸಿದ ಪಿಎಸ್ಐ ಓರ್ವರಿಗೆ ದನಗಳ್ಳರ ಹಿಡಿಯಲು ಹೋದ ಸಂದರ್ಭದಲ್ಲಿ ಅವರ ಮೇಲೆ ವಾಹನ ಹಾಯಿಸಲು ಪ್ರಯತ್ನಿಸಿದ್ದರು. ಅದೃಷ್ಟವಶಾತ್ ಅಧಿಕಾರಿ ಸ್ವಲ್ಪದರಲ್ಲೇ ಪಾರಾಗಿದ್ದರು. ಈ ಬಗ್ಗೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಾ ಜನಸ್ನೇಹಿಯಾಗಿರುವ ಎಸ್ಪಿ ಗಮನ ಹರಿಸಬೇಕಿದೆ.
ಇದನ್ನೂ ಓದಿ: ಜಾನುವಾರಿಗೆ ಕಂಟಕವಾಗ್ತಿರೊ ಪ್ಲಾಸ್ಟಿಕ್: ವರ್ಷದಿಂದ ವರ್ಷಕ್ಕೆ ಸಾವಿನ ಪ್ರಮಾಣ ಹೆಚ್ಚಳ
ಬೇಕಿದೆ ಚೆಕ್ ಪೋಸ್ಟ್, ಸಿಸಿಟಿವಿ ಕ್ಯಾಮೆರಾ: ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸುವುದರ ಜೊತೆ ಈಗಾಗಲೇ ಕ್ಯಾಮೆರಾ ಇರುವ ಕಡೆ ಅವು ಸುಸ್ಥಿತಿಯಲ್ಲಿವೆಯೇ ಎಂಬುದನ್ನು ಪರೀಕ್ಷಿಸಿ ಸರಿಪಡಿಸಬೇಕಿದೆ. ಇಲ್ಲಿ ಹಿತ್ತಲಮಕ್ಕಿ ಪೊಲೀಸ್ ಚೆಕ್ ಪೋಸ್ಟ್ ಮತ್ತೆ ಪ್ರಾರಂಭಿಸಿ, ಸಿಬ್ಬಂದಿ ನಿಯೋಜಿಸಲು ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕಿದೆ.
ಸ್ಥಳೀಯ ಆಡಳಿತದ ನಿರ್ಲಕ್ಷ್ಯ: ಈ ಹಿಂದೆ ಭೂಮಿಯ ಉಳುಮೆಗೆ ಎತ್ತುಗಳನ್ನು ಬಳಸಿಕೊಂಡು ನಂತರ ಅವುಗಳನ್ನು ಹೊರಗೆ ನೀಡುವ ಪರಿಪಾಠವಿತ್ತು. ಬಳಿಕ ಉಳುಮೆಗೆ ಯಂತ್ರ ಬಂದ ನಂತರ ಎತ್ತುಗಳು ಬೀದಿಪಾಲಾಗುವುದರ ಜತೆ ಇತ್ತೀಚೆಗೆ ಆಕಳು ಸಹ ಬೀದಿಯಲ್ಲೇ ಕಾಲ ಕಳೆಯುತ್ತಿವೆ. ಅಲ್ಲಲ್ಲಿ ಕರು ಹಾಕಿಕೊಂಡು ನರಳಾಡುತ್ತಿರುತ್ತವೆ. ಇಂತಹ ಸಂಕಷ್ಟದಲ್ಲಿರುವ ಪುಣ್ಯಕೋಟಿಯನ್ನು ಒಮ್ಮೆಯೂ ತಿರುಗಿ ನೋಡಿ ಸಾಕುವವರಿಗಾದರೂ ನೀಡುವ ಕನಿಷ್ಠ ಔದಾರ್ಯತೆಯನ್ನು ಮಾಲಕರು ತೋರುತ್ತಿಲ್ಲ.
ಇದನ್ನೂ ಓದಿ: ಬೈಕ್, ಕಾರ್ ರೀತಿ ರೈಲಿನಲ್ಲಿ ಗೋವುಗಳನ್ನು ಟ್ರಾನ್ಸ್ಪೋರ್ಟ್ ಮಾಡಬಹುದಾ?
ದನಗಳ ಕಿವಿಗೆ ಅಳವಡಿಸಿರುವ ವಿಶೇಷ ಗುರುತಿನ ಟ್ಯಾಗ್ ಮೂಲಕ ಮಾಲಕರ ಪತ್ತೆ ಹಚ್ಚಿ ದನ ತೆಗೆದುಕೊಂಡು ಹೋಗುವಂತೆ ಖಡಕ್ ಎಚ್ಚರಿಕೆ ನೀಡಬೇಕು. ಯಾರೂ ತೆಗೆದುಕೊಂಡು ಹೋಗದಿದ್ದಲ್ಲಿ ಗೋಶಾಲೆಗೆ ಕಳುಹಿಸುವ ಕನಿಷ್ಠ ವ್ಯವಸ್ಥೆಯನ್ನು ಸ್ಥಳೀಯ ಆಡಳಿತ ಮಾಡದಿರುವುದರಿಂದ ಅವು ಇಂತಹ ದನಗಳ್ಳರ ಪಾಲಾಗುತ್ತಿವೆ.
ರಾತ್ರಿಯಲ್ಲಿ ಪೊಲೀಸ್ ಸಿಬ್ಬಂದಿಯೊಂದಿಗೆ ಸ್ವತಃ ಗಸ್ತು ಇದ್ದು ನಿಗಾ ಇಡಲಾಗುತ್ತಿದೆ. ಇದುವರೆಗೂ ಯಾವುದೇ ಘಟನೆ ಬೆಳಕಿಗೆ ಬಂದಿಲ್ಲ. ಆದರೂ ಹೆಚ್ಚಿನ ನಿಗಾ ಇಡುವುದರ ಜೊತೆ ಚೆಕ್ ಪೋಸ್ಟ್ನಲ್ಲಿ ತಪಾಸಣಾ ಕಾರ್ಯ ತೀವ್ರಗೊಳಿಸಿ ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗುವುದು ಎನ್ನುತ್ತಾರೆ ಗೋಕರ್ಣ ಪೊಲೀಸ್ ಠಾಣೆ ಪಿಐ ಶ್ರೀಧರ ಎಸ್.ಆರ್